Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ ಐಐಟಿಎಫ್ ಮೇಳ: ಮನ ಸೆಳೆಯುತ್ತಿರುವ ವಿಜಯಪುರದ ಬಂಜಾರ ಕಸೂತಿ

ವಿಜಯಪುರದ ಬಂಜಾರ ಕಸೂತಿ ಆರ್ಗನೈಸೇಷನ್‌ನ ಮಳಿಗೆಯು ನವದೆಹಲಿಯ ಭಾರತೀಯ ಅಂತರರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ (ಐಐಟಿಎಫ್) 2 ಲಕ್ಷ ರೂಪಾಯಿಗಳ ವಹಿವಾಟು ಮಾಡಿದೆ. ಸಚಿವ ಎಂಬಿ ಪಾಟೀಲ್​ ಪತ್ನಿ ಆಶಾ ಪಾಟೀಲ್ ನೇತೃತ್ವದಲ್ಲಿ ಮಳಿಗೆ ಹಾಕಲಾಗಿದೆ. ಸಾಂಪ್ರದಾಯಿಕ ಕಸೂತಿಯನ್ನು ಆಧುನಿಕ ವಿನ್ಯಾಸಗಳೊಂದಿಗೆ ಸಂಯೋಜಿಸಿ, ಉತ್ತರ ಭಾರತದ ಗ್ರಾಹಕರನ್ನು ಆಕರ್ಷಿಸಲಾಗಿದೆ.

ದೆಹಲಿಯಲ್ಲಿ ಐಐಟಿಎಫ್ ಮೇಳ: ಮನ ಸೆಳೆಯುತ್ತಿರುವ ವಿಜಯಪುರದ ಬಂಜಾರ ಕಸೂತಿ
ಬಂಜಾರ ಕಸೂತಿ ಮಳಿಗೆ
Follow us
H P
| Updated By: ವಿವೇಕ ಬಿರಾದಾರ

Updated on:Nov 19, 2024 | 1:06 PM

ನವದೆಹಲಿ, ನವೆಂಬರ್​ 19: ಇಲ್ಲಿನ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯನ್ ಇಂಟರ್ನ್ಯಾಷನಲ್ ಟ್ರೇಡ್ ಫೇರ್’ (ಐಐಟಿಎಫ್)ನ ಕರ್ನಾಟಕ ಪೆವಿಲಿಯನ್​ನಲ್ಲಿ ಉಪಸ್ಥಿತವಿರುವ ವಿಜಯಪುರ (Vijayapura) ಜಿಲ್ಲೆಯ ಬಂಜಾರ ಕಸೂತಿ ಆರ್ಗನೈಸೇಷನ್ ಮಳಿಗೆಯು ವೀಕ್ಷಕರ ಗಮನ ಸೆಳೆಯುತ್ತಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ (MB Patil)​ ಅವರ ಪತ್ನಿ ಆಶಾ ಪಾಟೀಲ್​ ಇದರ ನೇತೃತ್ವ ವಹಿಸಿದ್ದಾರೆ.

ನವೆಂಬರ್​ 14ರಂದು ಆರಂಭವಾಗಿರುವ ಐಐಟಿಎಫ್ ಮೇಳವು ನ.27ರವರೆಗೆ ನಡೆಯಲಿದ್ದು, ಬಂಜಾರ ಕಸೂತಿ ಮಳಿಗೆಯು ಈಗಾಗಲೇ 2 ಲಕ್ಷ ರೂ.ಗಳಷ್ಟು ವಹಿವಾಟು ನಡೆಸಿದೆ. ಉಳಿದ ಒಂಬತ್ತು ದಿನಗಳಲ್ಲಿ ರಾಷ್ಟ್ರ ರಾಜಧಾನಿಯ ಇನ್ನೂ ಹೆಚ್ಚಿನ ಜನರನ್ನು ಮಳಿಗೆಯು ಆಕರ್ಷಿಸಲಿದೆ. ಲಂಬಾಣಿ ಕರಕುಶಲ ಮತ್ತು ಕೈಮಗ್ಗದ ವಸ್ತುಗಳೆಂದರೆ ಕೇವಲ ರಾಜಾಸ್ಥಾನ ಮತ್ತು ಉತ್ತರ ಭಾರತದ್ದು ಎನ್ನುವ ನಂಬಿಕೆಯನ್ನು ಮೀರಿ, ಈ ಮಳಿಗೆ ಗ್ರಾಹಕರನ್ನು ಸೆಳೆದಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಆಶಾ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕಗಳಲ್ಲಿ ಲಂಬಾಣಿಗಳು ಯಥೇಚ್ಛ ಸಂಖ್ಯೆಯಲ್ಲಿದ್ದಾರೆ. ವಿಜಯಪುರ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಈ ಸಮುದಾಯದವರು ಹೆಚ್ಚಾಗಿದ್ದು, ಇವರ ಸಾಂಪ್ರದಾಯಿಕ ಕಸೂತಿ ಮತ್ತು ಕರಕುಶಲ ಪ್ರತಿಭೆಯನ್ನು ಪ್ರೋತ್ಸಾಹಿಸಿ, ಸಬಲೀಕರಣಗೊಳಿಸಬೇಕಾಗಿದೆ. ಈ ಉದ್ದೇಶದಿಂದ ಬಂಜಾರ ಕಸೂತಿ ಆರ್ಗನೈಸೇಷನ್ ಅನ್ನು ಸ್ಥಾಪಿಸಿ, ಉತ್ತೇಜಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಬಂಜಾರ ಸಮುದಾಯದಲ್ಲಿ ಆಷಾಢ ಮಾಸದಲ್ಲಿ ನಡೆಯುತ್ತೆ ‘ಸಿತಲಾ ಹಬ್ಬ’; ಏನಿದರ ವಿಶೇಷತೆ?

ಹಿಂದಿನ ವರ್ಷಗಳಲ್ಲಿ ವಿಜಯಪುರ, ಮಂಗಳೂರು, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ನಾವು ಮಳಿಗೆ ಹಾಕುತ್ತಿದ್ದೇವು. ಈ ಬಾರಿ ನಮ್ಮ ಗುಣಮಟ್ಟದ ಉತ್ಪನ್ನಗಳನ್ನು ಉತ್ತರ ಭಾರತದವರಿಗೆ ಪರಿಚಯಿಸಲೆಂದೇ ನವದೆಹಲಿಗೆ ಬಂದಿದ್ದೇವೆ. ಸಾಂಪ್ರದಾಯಿಕ ಕಸೂತಿಯ ಮೂಲಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು, ಆಧುನಿಕತೆಯ ಸ್ಪರ್ಶವನ್ನು ಕೊಡಲಾಗಿದೆ. ಈ ಉಪಕ್ರಮದಡಿ ವಿಜಯಪುರ ಜಿಲ್ಲೆಯಲ್ಲಿ 120 ಬಂಜಾರ ಮಹಿಳೆಯರಿಗೆ ತರಬೇತಿ ನೀಡಲಾಗಿದ್ದು, ಇದು ಒಳ್ಳೆಯ ಫಲ ನೀಡುತ್ತಿದೆ ಎಂದು ಅವರು ನುಡಿದಿದ್ದಾರೆ.

ಆದಿವಾಸಿ ಅಥವಾ ಬುಡಕಟ್ಟು ಸಮುದಾಯಗಳಲ್ಲಿ ಇರುವ ಪ್ರತಿಭೆಯನ್ನು ನಶಿಸಿ ಹೋಗಲು ಬಿಡಬಾರದು. ಇದನ್ನು ಸಮಕಾಲೀನ ಜಗತ್ತಿನ ನಿರೀಕ್ಷೆಗೆ ತಕ್ಕಂತೆ ಸಾಣೆ ಹಿಡಿದು, ಮುಂದುವರಿಸಿಕೊಂಡು ಹೋಗಬೇಕು. ಈಗಿನ ಕಾರ್ಪೊರೇಟ್ ಜಗತ್ತಿನಲ್ಲಿ ಕಸೂತಿ ಮತ್ತು ಕೈಮಗ್ಗದ ಸೀರೆ, ಕುಪ್ಪಸ, ಚೂಡಿದಾರ್ ಮುಂತಾದ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದೆ ಎಂದು ಆಶಾ ಅವರು ಹೇಳಿದ್ದಾರೆ.

ಅನೇಕ ಸಂಸ್ಥೆಗಳು ನಮ್ಮ ಉತ್ಪನ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ವಾಣಿಜ್ಯ ವಹಿವಾಟು ನಡೆಸುವ ಬಗ್ಗೆ ಆಸಕ್ತಿ ತೋರಿದ್ದಾರೆ. ಕೆಲವು ವಿನ್ಯಾಸಕರರು ಕೂಡ ಬೇಡಿಕೆ ಸಲ್ಲಿಸಲು ಮುಂದೆ ಬಂದಿರುವುದು ಆಶಾದಾಯಕ ಬೆಳವಣಿಗೆ ಎಂದೂ ಅವರು ಹರ್ಷ ವ್ಯಕ್ತಪಡಿಸಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:49 pm, Tue, 19 November 24