ಭಾರತ್ ಜೊಡೋ ಯಾತ್ರೆ ನೆನಪಿನಲ್ಲಿ ಸೆ 7ರಂದು ಪಾದಯಾತ್ರೆ ಮಾಡಲಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್​

ಭಾರತ್​ ಜೋಡೋ ಯಾತ್ರೆಗೆ ಇದೇ ಸೆಪ್ಟೆಂಬರ್​​ 7ಕ್ಕೆ ಒಂದು ವರ್ಷ ಆಗುತ್ತಿದ್ದು, ಯಾತ್ರೆ ನೆನಪಿನಲ್ಲಿ ಪಾದಯಾತ್ರೆ ಮಾಡಲಿದ್ದೇವೆ. ರಾಜ್ಯ ಸಚಿವ ಸಂಪುಟ ಸಭೆ ಬಳಿಕ ಸಚಿವರಿಂದ ಆಯಾ ಜಿಲ್ಲೆಗಳಲ್ಲಿ ಸಂಜೆ 5 ಗಂಟೆಗೆ ಪಾದಯಾತ್ರೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

ಭಾರತ್ ಜೊಡೋ ಯಾತ್ರೆ ನೆನಪಿನಲ್ಲಿ ಸೆ 7ರಂದು ಪಾದಯಾತ್ರೆ ಮಾಡಲಿದ್ದೇವೆ: ಡಿಸಿಎಂ ಡಿಕೆ ಶಿವಕುಮಾರ್​
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​
Edited By:

Updated on: Sep 04, 2023 | 7:54 PM

ಬೆಂಗಳೂರು, ಸೆಪ್ಟೆಂಬರ್​ 4: ಸೆಪ್ಟೆಂಬರ್​​ 7ಕ್ಕೆ ಭಾರತ್​ ಜೋಡೋ ಯಾತ್ರೆಗೆ (Bharat Jodo Yatra) ಒಂದು ವರ್ಷ ಆಗುತ್ತಿದ್ದು, ಯಾತ್ರೆ ನೆನಪಿನಲ್ಲಿ ಪಾದಯಾತ್ರೆ ಮಾಡಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಮನಗರ ಜಿಲ್ಲೆ ಆಯ್ಕೆ ಮಾಡಿಕೊಂಡಿದ್ದಾರೆ. ಸೆಪ್ಟೆಂಬರ್​ 7ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಸಂಪುಟ ಸಭೆ ಬಳಿಕ ಸಚಿವರಿಂದ ಆಯಾ ಜಿಲ್ಲೆಗಳಲ್ಲಿ ಸಂಜೆ 5 ಗಂಟೆಗೆ ಪಾದಯಾತ್ರೆ ನಡೆಯಲಿದೆ. ಜನರಿಗೆ ಸಮಸ್ಯೆ ಆಗಬಾರದೆಂದು ಬೆಂಗಳೂರಿನಲ್ಲಿ ಪಾದಯಾತ್ರೆ ಇಲ್ಲ. ಉಳಿದಂತೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಯುತ್ತೆ. ಒಂದು ಗಂಟೆಗಳ ಕಾಲ ಪಾದಯಾತ್ರೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಆರೋಪ ಮಾಡುತ್ತಾರೆ. ಅವರು ಇರುವುದೇ ಆರೋಪ ಮಾಡುವುದಕ್ಕೆ. ನಮ್ಮಗೆ ಬೆಂಗಳೂರು ಒಂದೇ ಅಂತಾಲ್ಲ. ಎಲ್ಲೇ ಆದರೂ ನೀರು ಒದಗಿಸುವುದು ನಮ್ಮ ಕರ್ತವ್ಯ. ಅದನ್ನ ನಾವು ಮಾಡುತ್ತೇವೆ ಎಂದರು.

ಇದನ್ನೂ ಓದಿ: ತೇಜಸ್ವಿನಿ ಅನಂತಕುಮಾರ್‌ ಜತೆ ರಾಜಕೀಯ ಚರ್ಚೆ ಮಾಡಿಲ್ಲ; ಟ್ವೀಟ್​​ಗಾಗಿ ಕ್ಷಮೆ ಕೇಳಿದ ಡಿಸಿಎಂ ಡಿಕೆ ಶಿವಕುಮಾರ್

ಗುತ್ತಿಗೆದಾರರಿಗೆ ಬಿಬಿಎಂಪಿ ಕಸದ ಬಾಕಿ ಬಿಲ್‌ ಬಿಡುಗಡೆಗೆ ತೀರ್ಮಾನ ಮಾಡಿದ್ದೇವೆ. ಸೀನಿಯಾರಿಟಿ ಮೇಲೆ ಶೇ.50ರಷ್ಟು ಬಾಕಿ ಬಿಲ್‌ ಬಿಡುಗಡೆ ಮಾಡುತ್ತೇವೆ. ತನಿಖೆಯ ಬಳಿಕ ಬಾಕಿ ಹಣ ಸಂಪೂರ್ಣ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.

ಮೇಕೆದಾಟು ಪಾದಯಾತ್ರೆ ವೇಳೆ ಈ ಸಂಘಟನೆಗಳು ಎಲ್ಲಿದ್ದವು?

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ರೈತರ ವಿರೋಧ ವಿಚಾರವಾಗಿ ಮಾತನಾಡಿದ ಅವರು, ವಿವಿಧ ಸಂಘಟನೆಗಳು ಹೋರಾಟ ಮಾಡುತ್ತಿರುವುದಕ್ಕೆ ಧನ್ಯವಾದ. ಆದರೆ ಮೇಕೆದಾಟು ಪಾದಯಾತ್ರೆ ವೇಳೆ ಈ ಸಂಘಟನೆಗಳು ಎಲ್ಲಿದ್ದವು? ಆಗ ಯಾಕೆ ಯೋಜನೆಗೆ ಅನುಮತಿ ನೀಡಿ ಅಂತಾ ಕೇಂದ್ರಕ್ಕೆ ಕೇಳಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ವಕ್ಫ್​​ ಕಾಯ್ದೆ ರದ್ದು ಕೋರಿ ಪ್ರಧಾನಿ ಮೋದಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ

ಬಿಜೆಪಿ, ಜೆಡಿಎಸ್​​​​ ಕೂಡ ಕೇಂದ್ರದ ಬಳಿ ಯೋಜನೆಗೆ ಅನುಮತಿ ಕೇಳುತ್ತಿಲ್ಲ. ಕೇಂದ್ರಕ್ಕೆ ಅನುಮತಿ ಕೊಡಿ ಅಂತ ಹೋರಾಟಗಾರರು ಕೇಳಲಿ. ನಮ್ಮ ಸರ್ಕಾರ ರೈತರ ಹಿತ ಕಾಪಾಡಲು ಬದ್ಧವಾಗಿದೆ. ತಮಿಳುನಾಡು 20 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರಿಗೆ ಆಗ್ರಹಿಸಿತ್ತು. ‘ಸುಪ್ರೀಂ’ ಆದೇಶದ ಮೇರೆಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಿದ್ದೇವೆ. ಸುಪ್ರೀಂಕೋರ್ಟ್​ನಲ್ಲಿ ನಮ್ಮ ವಕೀಲರು ಉತ್ತಮ ವಾದ ಮಂಡಿಸಿದ್ದಾರೆ. ನಾನು ಕೂಡ ನವದೆಹಲಿಗೆ ಹೋಗಿ ವಕೀಲರ ಜೊತೆ ಮಾತನಾಡಿದ್ದೇನೆ. ರಾಜ್ಯದ ವಸ್ತುಸ್ಥಿತಿ ಅಧ್ಯಯನ ನಡೆಸುವಂತೆ CWMAಗೆ ಮನವಿ ಮಾಡಿದ್ದೇವೆ. ಸುಪ್ರೀಂಕೋರ್ಟ್​ಗೂ ಮೇಲ್ಮನವಿ ಸಲ್ಲಿಸಿ ವಸ್ತುಸ್ಥಿತಿ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:49 pm, Mon, 4 September 23

Loading...
Unable to load recommendations.
Follow Us