ಗೋಲ್ಡ್ ಸ್ಮಗ್ಲಿಂಗ್ ಹಿಂದಿರೋ ಸಚಿವರು ಯಾರು? ಸದನದಲ್ಲೂ ಸದ್ದು ಮಾಡಿದ ರನ್ಯಾ ರಾವ್ ಕೇಸ್

ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣ ಕರ್ನಾಟಕ ವಿಧಾನಸಭೆಯಲ್ಲಿ ಭಾರಿ ಸದ್ದು ಮಾಡಿದೆ. ಬಿಜೆಪಿ ಶಾಸಕರು ಪ್ರಭಾವಿ ಸಚಿವರ ಹೆಸರು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ. ಗೃಹ ಸಚಿವರು ಈ ಬಗ್ಗೆ ಮಾಹಿತಿ ಇಲ್ಲ ಎಂದಿದ್ದು, ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಸದನದಲ್ಲಿ ಕಲಾಪದ ವೇಳೆ ತುಸು ಹೊತ್ತು ಕೋಲಾಹಲವೇ ನಡೆದಿದೆ.

ಗೋಲ್ಡ್ ಸ್ಮಗ್ಲಿಂಗ್ ಹಿಂದಿರೋ ಸಚಿವರು ಯಾರು? ಸದನದಲ್ಲೂ ಸದ್ದು ಮಾಡಿದ ರನ್ಯಾ ರಾವ್ ಕೇಸ್
ರನ್ಯಾ ರಾವ್
Updated By: Ganapathi Sharma

Updated on: Mar 10, 2025 | 3:07 PM

ಬೆಂಗಳೂರು, ಮಾರ್ಚ್ 10: ನಟಿ ರನ್ಯಾ ರಾವ್ (Ranya Rao) ಗೋಲ್ಡ್ ಸ್ಮಗ್ಲಿಂಗ್ (Gold Smuggling) ವಿಚಾರ ಸದನದಲ್ಲೂ ಸದ್ದು ಮಾಡಿದೆ. ರನ್ಯಾ ಚಿನ್ನ ಸಾಗಾಟದ ಹಿಂದಿರುವ ಸಚಿವರು ಯಾರು? ಏರ್‌ಪೋರ್ಟ್‌ಗೆ ಪೊಲೀಸ್ ಜೀಪ್ ಕಳುಹಿಸುತ್ತಿದ್ದುದು ಯಾರು ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರಶ್ನೆ ಮಾಡಿದರು. ಇದಕ್ಕೆ ಗೊತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಉತ್ತರಿಸಿದ್ದೇ ತಡ, ವಾಗ್ಯುದ್ಧವೇ ನಡೆಯಿತು. ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಅನೇಕ ಸ್ಫೋಟಕ ಸಂಗತಿಗಳು ಬಯಲಾಗುತ್ತಿವೆ. ಪ್ರಕರಣದ ಹಿಂದೆ ಪ್ರಭಾವಿ ಸಚಿವರೊಬ್ಬರು ಇದ್ದಾರೆ ಎಂದು ಬಿಜೆಪಿ ಭಾನುವಾರ ಗಂಭೀರ ಆರೋಪ ಮಾಡಿತ್ತು. ಇದೇ ವಿಚಾರ ಸೋಮವಾರ ಸದನದಲ್ಲೂ ಸದ್ದು ಮಾಡಿದ್ದು, ಕೆಲ ಕಾಲ ಕೋಲಾಹಲಕ್ಕೆ ಕಾರಣವಾಯಿತು.

ವಿಧಾನಸಭೆಯ ಶೂನ್ಯವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್, ಗೋಲ್ಡ್ ಸ್ಮಗ್ಲಿಂಗ್‌ಗೆ ಪೊಲೀಸರೇ ಪ್ರೋಟೋಕಾಲ್ ಕೊಟ್ಟಿರುವ ಅನುಮಾನ ಇದೆ. ಇದರ ಹಿಂದಿರುವ ಸಚಿವರು ಯಾರು, ಸರ್ಕಾರ ಬಹಿರಂಗಬಡಿಸಬೇಕು ಅಂತಾ ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ನಿಮಗೆಷ್ಟು ಗೊತ್ತೋ ನಮಗೂ ಅಷ್ಟೇ ಗೊತ್ತಿರೋದು. ಸಚಿವರು ಯಾರಿದ್ದಾರೆ ಅನ್ನೋದನ್ನ ಸಿಬಿಐನವರು ಕಂಡುಹಿಡಿಯಬೇಕು ಎಂದರು.

ಇದನ್ನೂ ಓದಿ
ನಟಿ ರನ್ಯಾ ರಾವ್ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಪ್ರಭಾವಿ ರಾಜಕಾರಣಿ
ರನ್ಯಾ ಹಿಂದಿದೆ ಸ್ಲಗ್ಲಿಂಗ್ ಸಿಂಡಿಕೇಟ್: ಬಗೆದಷ್ಟು ಹೊರಬರುತ್ತಿವೆ ರಹಸ್ಯ
ರನ್ಯಾ ಚಿನ್ನ ಕಳ್ಳಸಾಗಣೆ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಪ್ರೊಟೊಕಾಲ್ ಬಿಗಿ
ಹೇಗಿದ್ದ ರನ್ಯಾ ಹೇಗಾದ್ರು ನೋಡಿ: ಜೈಲು ಸೇರಿದ ಎರಡೇ ದಿನಕ್ಕೆ ಮಂಕಾದ ನಟಿ

ಸಚಿವರ ಉತ್ತರಕ್ಕೆ ತೃಪ್ತರಾಗದ ಸುನಿಲ್ ಕುಮಾರ್, ನೀವೇ ಸಿಬಿಐಗೆ ಕೊಡಿ. ಒಂದು ಪ್ರಕರಣದ ಬಗ್ಗೆ ಗೊತ್ತಿಲ್ಲ ಎನ್ನುತ್ತೀರಲ್ಲಾ ಎಂದು ಪ್ರಶ್ನಿಸಿದರು.

ಇದಕ್ಕೆ ಕೌಂಟರ್ ಕೊಟ್ಟ ಪರಮೇಶ್ವರ್, ನಮ್ಮ ಪೊಲೀಸರು ತನಿಖಾ ವ್ಯಾಪ್ತಿ ಏನಿದೆಯೋ ಅದನ್ನು ಮಾಡುತ್ತಿದ್ದಾರೆ ಎಂದರು.

ಪರಮೇಶ್ವರ್ ಗೊತ್ತಿಲ್ಲ ಅಂದಿದ್ದಕ್ಕೆ ಕಿಡಿಕಾರಿದ ಸುನಿಲ್ ಕುಮಾರ್, ಇಲ್ಲಿ ಯಾರನ್ನೋ ರಕ್ಷಣೆ ಮಾಡುವಂತ ಕೆಲಸವಾಗ್ತಿದೆ ಎಂದು ಆರೋಪಿಸಿದರು. ಆಗ, ತನಿಖೆ ಬಗ್ಗೆ ಡಿಆರ್‌ಐನವರು ನಮ್ಮ ಜೊತೆ ಮಾಹಿತಿ ಹಂಚಿಕೊಂಡಿಲ್ಲ ಎಂದು ಪರಮೇಶ್ವರ್ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್, ಈ ಬಗ್ಗೆ ತನಿಖೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಬೇಕು ಅಂದರೆ, ಅವರ ಕಚೇರಿಗೆ ಹೋಗಿ ಎಂದರು. ಆಗ ಮಧ್ಯಪ್ರವೇಶಿಸಿದ ಅಶೋಕ್, ಸಿಬಿಐ, ಡಿಆರ್‌ಐ ಬಿಡಿ. ಪೊಲೀಸರು ಜೀಪ್ ಕಳುಹಿಸಿ ಸೆಕ್ಯೂರಿಟ ಕೊಟ್ಟಿರುವ ಬಗ್ಗೆ ಉತ್ತರಿಸಿ ಎಂದರು.

ಇದನ್ನೂ ಓದಿ: ರನ್ಯಾ ರಾವ್ ಪ್ರಕರಣ: ಏರ್​ಪೋರ್ಟ್ ಸಿಬ್ಬಂದಿ, ಕಸ್ಟಮ್ಸ್ ಅಧಿಕಾರಿಗಳ ಮೇಲೂ ಶಂಕೆ

ಪೊಲೀಸ್ ಇಲಾಖೆಯಿಂದ ಏನಾದರೂ ತಪ್ಪಾಗಿದ್ದರೆ ತನಿಖೆ ಮಾಡುತ್ತೇವೆ ಎಂದು ಪರಮೇಶ್ವರ್ ಹೇಳಿದರು. ಮತ್ತೊಂದೆಡೆ, ನೀವು ಚಿನ್ನದ ಪ್ರಭಾವಕ್ಕೆ ಒಳಗಾಗದೇ ಕೆಲಸ ಮಾಡಿ ಎಂದು ಸುನಿಲ್ ಕುಮಾರ್ ಕಾಲೆಳೆದರು. ಒಟ್ಟಿನಲ್ಲಿ, ಪ್ರಭಾವಿ ಸಚಿವರೊಬ್ಬರ ಹೆಸರು ಕೇಳಿಬಂದಿರುವುದು ಬಿಜೆಪಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ