ಚಾಮರಾಜಪೇಟೆ ಬಂದ್​ಗೆ ವ್ಯಾಪಕ ಬೆಂಬಲ, ರಸ್ತೆಗಿಳಿದ ಬೆರಳಣಿಕೆಯಷ್ಟು ವಾಹನಗಳು, ಮುಸ್ಲಿಂ ಅಂಗಡಿಗಳು ಯಥಾಸ್ಥಿತಿ

ಚಾಮರಾಜಪೇಟೆ ಬಂದ್​ಗೆ ವ್ಯಾಪಕ ಬೆಂಬಲ, ಅಂಗಡಿ ಮುಂಗಟ್ಟುಗಳು ಬಂದ್, ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳು ಎಂದಿನಂತೆ ತೆರೆದುಕೊಂಡಿದ್ದು, ಖಾಸಗಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.

ಚಾಮರಾಜಪೇಟೆ ಬಂದ್​ಗೆ ವ್ಯಾಪಕ ಬೆಂಬಲ, ರಸ್ತೆಗಿಳಿದ ಬೆರಳಣಿಕೆಯಷ್ಟು ವಾಹನಗಳು, ಮುಸ್ಲಿಂ ಅಂಗಡಿಗಳು ಯಥಾಸ್ಥಿತಿ
ಚಾಮರಾಜಪೇಟೆಯ ಈದ್ಗಾ ಮೈದಾನ (ಸಂಗ್ರಹ ಚಿತ್ರ)
Edited By: Rakesh Nayak Manchi

Updated on: Jul 12, 2022 | 9:07 AM

ಬೆಂಗಳೂರು: ಈದ್ಗಾ ಮೈದಾನ ವಿವಾದ ಸಂಬಂಧ ಎರಡು ಕೋಮುಗಳ ನಡುವೆ ಕೋಲ್ಡ್ ವಾರ್ ನಡೆಯುತ್ತಿದ್ದು, ಮುಸ್ಲಿಮರು ಇದು ಈದ್ಗಾ ಮೈದಾನವೆಂದರೆ, ಹಿಂದೂಗಳು ಅದು ಆಟದ ಮೈದಾನ ಎಂದು ಹೇಳುತ್ತಿದ್ದಾರೆ. ಈ ನಡುವೆ ಚಾಮರಾಜಪೇಟೆ ನಾಗರಿಕರ ಒಕ್ಕೂಟವು ಮೈದಾನವನ್ನು ಆಟದ ಮೈದಾನವನ್ನಾಗಿ ಉಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲು ಚಾಮರಾಜಪೇಟೆ ಬಂದ್ (Chamarajpet Bundh)​ಗೆ ಕರೆ ನೀಡಿದ್ದು, ಈಗಾಗಲೇ ಬಂದ್ ಆರಂಭಗೊಂಡಿದೆ. ಆದರೆ ಮುಸ್ಲಿಮರು ತಮ್ಮ ಅಂಗಡಿಗಳನ್ನು ಯಥಾಸ್ಥಿತಿ ತೆರೆದುಕೊಂಡು ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಉಳಿದ ಅಂಗಡಿಗಳು ಸಂಪೂರ್ಣ ಬಂದ್ ಆಗಿವೆ.

ಚಾಮರಾಜಪೇಟೆ ಬಂದ್​ಗೆ ಕರೆ ಕೊಟ್ಟ ಹಿನ್ನೆಲೆ ಇಂದು ಬೆಳಗ್ಗೆಯಿಂದಲೇ ಜನ ಸಂಚಾರ ವಿರಳವಾಗಿದ್ದು, ಅಗತ್ಯ ಸಾಮಾಗ್ರಿಗಳ ಖರೀದಿಗಷ್ಟೇ ಜನರು ಹೊರಬರುತ್ತಿದ್ದಾರೆ. ಅಲ್ಲದೆ ಬೆರಳೆಣಿಕೆಯಷ್ಟು ವಾಹನಗಳು ಮಾತ್ರ ರಸ್ತೆಗಿಳಿದಿವೆ. ಈ ಹಿಂದೆ ಮುಸ್ಲಿಂ ವ್ಯಾಪಾರಿಗಳು ಹೇಳಿದಂತೆ ಬಂದ್​ಗೆ ಬೆಂಬಲವನ್ನು ಸೂಚಿಸಿಲ್ಲ, ಉಳಿದ ತಮ್ಮ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಬೆಂಬಲವನ್ನು ಸೂಚಿಸಿದ್ದಾರೆ.

ಇದನ್ನೂ ಓದಿ: Chamarajpet Bundh: ಬೆಳಗ್ಗೆ 8 ಗಂಟೆಯಿಂದ ಚಾಮರಾಜಪೇಟೆ ಬಂದ್, ಈದ್ಗಾ ಮೈದಾನ ವಿವಾದದ ಹಿನ್ನೆಲೆ ಇ​ಲ್ಲಿದೆ

ಅಲ್ಲೊಂದು, ಇಲ್ಲೊಂದು ಹೋಟೆಲ್​ಗಳು ಓಪನ್

ಮೈದಾನಕ್ಕಾಗಿ ಚಾಮರಾಜಪೇಟೆ ಕ್ಷೇತ್ರ ಬಂದ್​ಗೆ ಕರೆ ಕೊಟ್ಟ ಹಿನ್ನೆಲೆ ಮೈದಾನದಲ್ಲಿ ಆಟ ಆಡಲು ನಿರ್ಬಂಧ ವಿಧಿಸಲಾಗಿದೆ. ಈ ಹಿನ್ನೆಲೆ ಆಟದ ಮೈದಾನದತ್ತ ಮಕ್ಕಳು ಸುಳಿಯುತ್ತಿಲ್ಲ. ಮೈದಾನದ ಸುತ್ತುಲೂ ಖಾಕಿ ಪಡೆ ಕಾವಲು ಕಾಯುತ್ತಿದೆ. ಬಂದ್​ ನಡುವೆಯು 8 ಗಂಟೆಯ ಒಳಗೆ ಕೊಂಚ ವ್ಯಾಪಾರ ಮಾಡೋಣ ಎಂದು ಚಾಮರಾಜಪೇಟೆಯಲ್ಲಿ ಅಲ್ಲೊಂದು ಇಲ್ಲೊಂದು  ಹೊಟೇಲ್​ಗಳು ತೆರೆದುಕೊಂಡಿದ್ದು, 8 ಗಂಟೆ ನಂತರ ಹೊಟೇಲ್​ಗಳು ಕೂಡ ಬಂದ್ ಆಗಿವೆ. ಬಂದ್ ಮುಗಿದ ಬಳಿಕ ಸಂಜೆ 5ರ ನತರ ಹೋಟೆಲ್​ಗಳು ಎಂದಿನಂತೆ ತೆರೆದುಕೊಳ್ಳಲಿದೆ.

ಮೈದಾನ ಉಳಿವಿಗೆ ಕೈ ಜೋಡಿಸಿ

ಮೈದಾನವನ್ನು ಆಟದ ಮೈದಾನವನ್ನಾಗಿ ಉಳಿಕೊಳ್ಳುವ ನಿಟ್ಟಿನಲ್ಲಿ ಮಾಡಲಾಗತ್ತಿರುವ ಬಂದ್​ಗೆ ಕೆಲವು ಅಂಗಡಿಗಳ ಮಾಲೀಕರು ಬೆಂಬಲ ಸೂಚಿದೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಅಂತಹ ಅಂಗಡಿಗಳಿಗೆ ನಾಗರಿಕರ ಒಕ್ಕೂಟ ತೆರಳಿ ಮೈದಾನ ಉಳಿವಿಗೆ ಕೈ ಜೋಡಿಸಿ ಎಂದು ಮನವಿ ಮಾಡಿಕೊಂಡಿದೆ. ಮನವಿ ಹಿನ್ನೆಲೆ ಮಾಲೀಕರೊಬ್ಬರು ಹೊಟೇಲ್ ಬಂದ್ ಮಾಡಿದ್ದಾರೆ.

ಮೈದಾನದ ಸುತ್ತ ಖಾಕಿ ಪಡೆ ಕಣ್ಗಾವಲು

ಸೂಕ್ಷ್ಮ ಪ್ರದೇಶವಾಗಿರುವ ಈದ್ಗಾ ಮೈದಾನದ ಸುತ್ತಲೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ. 2 ಡಿಸಿಪಿ, 10 ಎಸಿಪಿ, 20 ಇನ್ಸ್ಪೆಕ್ಟರ್, 120 ಪಿಎಸ್ಐ, 6 ಕೆಎಸ್​ಆರ್​ಪಿ ತುಕಡಿಗಳು ಸೇರಿದಂತೆ 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಭದ್ರತೆಯಲ್ಲಿ ತಡಗಿಕೊಂಡಿದ್ದಾರೆ. ಮೈದಾನದೊಳಗೆ ನಿಂತಿರುವ ಜನರ ಹಾಗೂ ಮೈದಾನಕ್ಕೆ ಬರುವ ಜನರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

ಇದನ್ನೂ ಓದಿ: Chamarajpet Bandh : ಜುಲೈ 12ಕ್ಕೆ ಚಾಮರಾಜಪೇಟೆ ಬಂದ್: ಪೊಲೀಸರಿಂದ ಬಿಗಿ ಬಂದೋಬಸ್ತ್

ಭದ್ರತೆಗಾಗಿ ಚಾಮರಾಜಪೇಟೆಯನ್ನು ವಿಭಾಗಿಸಿದ ಪೊಲೀಸರು

ಚಾಮರಾಜಪೇಟೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರು, ಚಾಮರಾಜಪೇಟೆಯಾದ್ಯಂತ ಒಟ್ಟು 8 ಸೆಕ್ಟರ್ ಹಾಗೂ 15 ಜಂಕ್ಷನ್​ಗಳನ್ನಾಗಿ ವಿಂಗಡಿಸಿದ್ದಾರೆ. ಪ್ರತಿಯೊಂದು ಸೆಕ್ಟಾರ್​ಗೆ ಓರ್ವ ಇನ್ಸ್ಪೆಕ್ಟರ್ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಪ್ರತಿ ಜಂಕ್ಷನ್​ನಲ್ಲಿ ಪಿಎಸ್​ಐ ಸೇರಿ ಪೊಲೀಸ್ ಸಿಬ್ಬಂದಿಗಳನನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಖಾಸಗಿ ಶಾಲೆಗೆ ರಜೆ ಘೋಷಣೆ

ಈದ್ಗಾ ಮೈದಾನಕ್ಕಾಗಿ ಚಾಮರಾಜಪೇಟೆಯಲ್ಲಿ ಶಾಂತಿಯುತ ಬಂದ್​​ ನಡೆಯುತ್ತಿದ್ದು,  ಮೈದಾನದ ಸುತ್ತಮುತ್ತ ಇರುವ ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿಲ್ಲ. ಈ ನಡುವೆ  ಹೋಟೆಲ್​​ಗಳು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಚಾಮರಾಜಪೇಟೆಯ ಅಥೆನಾ ಪಬ್ಲಿಕ್ ಸ್ಕೂಲ್​ಗೆ ರಜೆ ಘೋಷಣೆ ಮಾಡಲಾಗಿದೆ.

ಬಿಕೋ ಎನ್ನುತ್ತಿರವ ಶಾಸಕ ಜಮೀರ್ ಕಚೇರಿ ಸುತ್ತಲಿನ ಪ್ರದೇಶ

ಶಾಸಕ ಜಮೀರ್ ಅಹಮದ್ ಖಾನ್ ಅವರ ಕಚೇರಿ ಸುತ್ತಮುತ್ತಲೂ ಹಾಗೂ ಕಚೇರಿಯ ಅಕ್ಕಪಕ್ಕದಲ್ಲಿರುವ ಹೊಟೇಲ್​ಗಳು, ಬೇಕರಿ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು, ಬಾಗಿಲುಗಳಿಗೆ ಬಂದ್ ಬೆಂಬಲದ ಪೋಸ್ಟರ್​ಗಳನ್ನು ಅಂಟಿಸಲಾಗಿದೆ. ಮೆಡಿಕಲ್ ಶಾಪ್​ಗಳನನ್ನು ಹೊರತುಪಡಿಸಿ ಇನ್ನುಳಿದಂತೆ ಎಲ್ಲವೂ ಬಂದ್ ಆಗಿವೆ.

ಅಭಿಷೇಕದ ನಂತರ ದೇವಾಲಯ ಬಂದ್

ಚಾಮರಾಜಪೇಟೆ ಬಂದ್​ಗೆ ದೇವಾಲಯಗಳು ಕೂಡ ಬೆಂಬಲ ಸೂಚಿಸಿವೆ. ಅಯ್ಯಪ್ಪ ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ ನಡೆಸಿದ ನಂತರ ದೇವಾಲಯದ ಬಾಗಿಲನ್ನು ಮುಚ್ಚಲಾಗಿದೆ. ಈ ಬಗ್ಗೆ ಮಾತನಾಡಿದ ಅಯ್ಯಪ್ಪ ದೇವಾಲಯದ ಅರ್ಚಕ ಪ್ರಭು ಹೀರೆಮಠ್, ಯಾವಾಗಲೂ ಬೆಳಿಗ್ಗೆ 5 ಗಂಟೆಯಿಂದ 11 ಗಂಟೆವರೆಗೆ ದೇವಾಲಯದ ಬಾಗಿಲು ತೆರೆದಿರುತ್ತದೆ. ಇಂದು ಬಂದ್​ ಹಿನ್ನೆಲೆ 8 ಗಂಟೆಗೆ ಬಾಗಿಲು ಮುಚ್ಚುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: Chamarajpet Bandh: ಚಾಮರಾಜಪೇಟೆ ಬಂದ್​ಗೆ ಹಿಂದುತ್ವವಾದಿ ಸಂಘಟನೆಗಳ ಬೆಂಬಲ; ಬಿಗಿ ಪೊಲೀಸ್ ಬಂದೋಬಸ್ತ್​

Published On - 9:07 am, Tue, 12 July 22

Web contact

TV9 Kannada

Read More
Follow Us