
ಯಾದಗಿರಿ, ಆ.27: ರಾಜ್ಯಾದ್ಯಂತ ಈರುಳ್ಳಿ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಶೀಘ್ರವೇ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ದರ 100 ರೂಪಾಯಿ ಗಡಿ ದಾಟುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿಗೆ ಗ್ರಾಹಕರು ಕಂಗಾಲಾಗಿದ್ದರೆ, ಇನ್ನೊಂದೆಡೆ ದರ ಏರಿಕೆಯಾಗಿದ್ದರೂ ಅದರ ನೇರ ಲಾಭ ಸಿಗದೆ ಅನ್ನದಾತರು ಕಣ್ಣೀರಿಡುತ್ತಿದ್ದಾರೆ.
ಯಾದಗಿರಿ ತಾಲೂಕಿನ ಗುಲಗುಂಜಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಬಾರಿಯ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ಕುಸಿತ ಕಂಡಿದೆ. ಮಳೆ ಕೊರತೆಯಿಂದಾಗಿ ಹೊಲಗಳಲ್ಲಿ ಬೆಳೆಯೇ ಇಲ್ಲದಿರುವಾಗ ದರ ಹೆಚ್ಚಾಗಿರುವುದು ರೈತರ ದುರದೃಷ್ಟಕ್ಕೆ ಹಿಡಿದ ಕನ್ನಡಿಯಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಗೆ 1 ಕೆಜಿ ಈರುಳ್ಳಿ ಖರೀದಿಸಲು ಬರುವ ಗ್ರಾಹಕರು ಅರ್ಧ ಕೆಜಿ ಖರೀದಿಸಿ ಮನೆಗೆ ಮರಳುವಂತಾಗಿದೆ. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಕೆಲವೇ ಕೆಲವು ರೈತರು ಬೋರ್ವೆಲ್ ನೀರನ್ನು ಬಳಸಿಕೊಂಡು ಅಲ್ಪಸ್ವಲ್ಪ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲು ಯತ್ನಿಸುತ್ತಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಯಾದಗಿರಿ ಭಾಗದ ರೈತರು ಎಕರೆಗೆ ಸುಮಾರು 100 ಕ್ವಿಂಟಲ್ವರೆಗೆ ಭರ್ಜರಿ ಈರುಳ್ಳಿ ಇಳುವರಿ ತೆಗೆದಿದ್ದರು. ಆದರೆ ಗಲ್ಫ್ ರಾಷ್ಟ್ರಗಳ ಯುದ್ಧದ ಪರಿಣಾಮ ಮಾರುಕಟ್ಟೆ ಕುಸಿದು, ಕ್ವಿಂಟಲ್ಗೆ ಕೇವಲ 500 ರೂ. ರಿಂದ 600 ರೂ. ಸಿಕ್ಕಿತ್ತು. ಶೇಖರಣಾ ಗೋದಾಮುಗಳ ವ್ಯವಸ್ಥೆ ಇಲ್ಲದ ಕಾರಣ ರೈತರು ಸಿಕ್ಕ ಸಣ್ಣ ಮೊತ್ತಕ್ಕೇ ಈರುಳ್ಳಿ ಮಾರಾಟ ಮಾಡಿ ನಷ್ಟ ಅನುಭವಿಸಿದ್ದರು.
ಇದನ್ನೂ ಓದಿ: ಮಳೆ ಕೊರತೆಯಿಂದ ತರಕಾರಿ ದರ ಏರಿಕೆ: ಗ್ರಾಹಕರು, ವ್ಯಾಪಾರಿಗಳು ಇಬ್ಬರು ಕಂಗಾಲು
ಈಗ ರೈತರ ಕೈಯಲ್ಲಿ ಬೆಳೆಯೇ ಇಲ್ಲದಿದ್ದಾಗ ದರ ಭಾರಿ ಏರಿಕೆಯಾಗಿದೆ. ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ರೈತರಿಂದ ಕನಿಷ್ಠ ದರಕ್ಕೆ ಖರೀದಿಸಿದ್ದ ಈರುಳ್ಳಿಯನ್ನು ದಾಸ್ತಾನು ಮಾಡಿ, ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ತೀವ್ರ ಆರೋಪ ಮಾಡಿದ್ದಾರೆ. ಬೆಳೆ ಕೈಯಲ್ಲಿದ್ದಾಗ ದರ ಇರುವುದಿಲ್ಲ, ದರ ಏರಿಕೆಯಾದಾಗ ಹೊಲದಲ್ಲಿ ಬೆಳೆಯೇ ಇರುವುದಿಲ್ಲ ಎಂಬುದು ರೈತರ ನಿರಂತರ ಅಳಲಾಗಿದೆ. ಈಗ ರೈತರ ಬಳಿ ಬೆಳೆಯಿದ್ದಿದ್ದರೆ ಕ್ವಿಂಟಲ್ಗೆ 5,000 ರೂ. ದಿಂದ 6,000 ರೂ. ದರ ಸಿಗುತ್ತಿತ್ತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:13 am, Thu, 27 August 26