ಮಳೆ ಕೊರತೆಯಿಂದ ತರಕಾರಿ ದರ ಏರಿಕೆ: ಗ್ರಾಹಕರು, ವ್ಯಾಪಾರಿಗಳು ಇಬ್ಬರು ಕಂಗಾಲು
ಆಷಾಢ ಕಳೆದು ಶ್ರಾವಣ ಆಗಮಿಸುತ್ತಿದ್ದಂತೆ ಹಬ್ಬ, ಉತ್ಸವಗಳು ಒಂದರ ಹಿಂದೆ ಒಂದರಂತೆ ಆಗಮಿಸುತ್ತಿವೆ. ಆದರೆ ಈ ಬಾರಿ ರಾಜ್ಯಾದ್ಯಂತ ಮಳೆ ಕೈಕೊಟ್ಟ (ಎಲ್ ನಿನೋ) ಕಾರಣ ಬೆಳೆಗಳ ಪ್ರಮಾಣ ಶೇ.50ರಷ್ಟು ಇಳಿಕೆಯಾಗಿದೆ. ಇದು ಹಬ್ಬದ ಉತ್ಸವದ ಮೇಲೆ ಕರಿಛಾಯೆ ಮೂಡಿಸಿದ್ದು, ಅಕ್ಕಿ, ಸಕ್ಕರೆ, ಬೆಲ್ಲ ಸೇರಿದಂತೆ ಅಗತ್ಯ ವಸ್ತುಗಳ ದರ ನಾಗಾಲೋಟದಲ್ಲಿ ಸಾಗುತ್ತಿದೆ. ಇದಕ್ಕೆ ತರಕಾರಿಯೂ ಹೊರತಾಗಿಲ್ಲ.

ಬೆಂಗಳೂರು, (ಆಗಸ್ಟ್ 26): ಎಲ್ ನೀನೋ ಎಫೆಕ್ಟ್ ನಿಂದ ರಾಜ್ಯದಲ್ಲಿ ಈಗಾಗಲೇ ಮುಂಗಾರು (Monsoon Rain) ಕೈಕೊಟ್ಟಿದೆ. ಇದರಿಂದ ಸರಿಯಾಗಿ ಬೆಳೆ ಇಲ್ಲದೆ ರೈತರು ಕಣ್ಣೀರು ಹಾಕುವಂತಾಗಿದೆ. ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗ್ತಿದ್ರೆ ಇತ್ತ ತರಕಾರಿ ಬೆಲೆ ಕೂಡ ನಿಧಾನವಾಗಿ ಏರಿಕೆ ಕಾಣುತ್ತಿದ್ದು, 30-40 ಇದ್ದ ತರಕಾರಿ ದರ ಇದೀಗ 60 ರಿಂದ 80 ರುಪಾಯಿಗೆ ಏರಿಕೆಯಾಗಿದೆ. ಹೌದು..ಯಾವ ತರಕಾರಿ (vegetable) ಮುಟ್ಟಂಗಿಲ್ಲ ಕೈ ಮತ್ತು ಜೇಬು ಸುಡುತ್ತಿದೆ. ಇದರಿಂದ ಯಾರು ತರಕಾರಿ ಕೊಳ್ಳಲು ಬರ್ತಿಲ್ಲ ತುಂಬಾ ಕಷ್ಟ ಆಗುತ್ತಿದೆ ಎಂದು ವ್ಯಾಪಾರಿಗಳ ಅಳಲು.
ಬೆಂಗಳೂರಿನಲ್ಲಿ ಹೋಲ್ ಸೇಲ್ ಮತ್ತು ರಿಟೇಲ್ನಲ್ಲಿ ತರಕಾರಿ ಬೆಲೆ
- ಶುಂಠಿ – 120 ರಿಂದ 130 ರುಪಾಯಿ.
- ಬೆಳ್ಳುಳ್ಳಿ-230 ರಿಂದ 250 ರುಪಾಯಿ.
- ಬೀನ್ಸ್- 100 ರಿಂದ 110 ರುಪಾಯಿ.
- ಹಸಿಬಟಾಣಿ -80 ರಿಂದ 90 ರುಪಾಯಿ.
- ಹಸಿಮೆಣಸಿನಕಾಯಿ – 80 ರಿಂದ 90 ರುಪಾಯಿ.
- ಈರುಳ್ಳಿ-50 ರಿಂದ 70 ರುಪಾಯಿ.
- ನುಗ್ಗೆಕಾಯಿ- 90 ರುಪಾಯಿ 100 ರುಪಾಯಿ.
- ಟೊಮೇಟೊ – 25 ರಿಂದ 30 ರುಪಾಯಿ.
- ಕ್ಯಾರೆಟ್ – 60 ರಿಂದ 70 ರುಪಾಯಿ.
- ಬೀಟ್ರೂಟ್ – 60 ರಿಂದ 70 ರುಪಾಯಿ.
- ಕ್ಯಾಪ್ಸಿಕಂ – 70 ರಿಂದ 80 ರುಪಾಯಿ.
- ಹೀರೆಕಾಯಿ – 60 ರಿಂದ 80 ರುಪಾಯಿ.
- ಬೆಂಡೆಕಾಯಿ- 50 ರಿಂದ 60 ರುಪಾಯಿ.
- ಬದನೆಕಾಯಿ – 50 ರಿಂದ 60 ರುಪಾಯಿ.
- ಹಾಗಲಕಾಯಿ – 40 ರಿಂದ 50 ರುಪಾಯಿ.
- ಹೂಕೋಸು – 40 ರಿಂದ 50 ರುಪಾಯಿ.
- ಎಲೆಕೋಸು – 50 ರಿಂದ 60 ರುಪಾಯಿ.
- ಮೂಲಂಗಿ -40 ರಿಂದ 50 ರುಪಾಯಿ
ಇನ್ನೂ ತರಕಾರಿ ಬೆಲೆ ಕೇಳಿ ಗ್ರಾಹಕರು ಒಂದು ಕೆಜಿ ಕೊಂಡುಕೊಳ್ಳುವವರು ಅರ್ಧ-ಕಾಲು ಕೆಜಿ ಕೊಳ್ಳಲು ಮುಂದಾಗ್ತಿದ್ದಾರೆ.ಅಡುಗೆಗೆ ತರಕಾರಿಗಳನ್ನು ಹಾಕಿಲ್ಲ ಅಂದರೆ ಅಡುಗೆ ಚೆನ್ನಾಗಿರಲ್ಲ. ಇನ್ನು ತರಕಾರಿ ಹಾಕೋಣ ಅಂದರೆ ಕೊಳ್ಳಲು ಅಗ್ತಿಲ್ಲ. ಮನೆ ಹತ್ತಿರಕ್ಕೂ ಕೆ.ಆರ್ ಮಾರ್ಕೆಟ್ ಗೂ 30 ರಿಂದ 40 ರುಪಾಯಿ ವ್ಯತ್ಯಾಸ ಇದೆ . ಕೆ.ಆರ್ ಮಾರ್ಕೆಟ್ ನಲ್ಲಿ ಕಡಿಮೆ ಬೆಲೆಗೆ ಹೋಲ್ ಸೇಲ್ ನಲ್ಲಿ ಫ್ರೆಶ್ ಆಗಿರುವ ತರಕಾರಿ ಸಿಗುತ್ತದೆ ಹಾಗಾಗಿ ಇಲ್ಲಿಗೆ ಬಂದಿದ್ದೇನೆ ಅಂತಾರೇ ಗ್ರಾಹಕರು .
ಒಟ್ನಲ್ಲಿ ಈ ಬಾರಿ ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು ಇದರಿಂದ ಬೆಳೆ ಸರಿಯಾಗಿ ಆಗಿಲ್ಲ ಹಾಗಾಗಿ ನಿಧಾನವಾಗಿ ಎಲ್ಲಾ ತರಕಾರಿ ಬೆಲೆಗಳು ಸೆಂಚುರಿ ಹತ್ತಿರ ಬರ್ತಿದ್ದು, ಗ್ರಾಹಕರು ಮಾತ್ರ ಕಂಗಲಾಗಿದ್ದಾರೆ.




