ಅನಿಷ್ಟ ಪದ್ಧತಿ ಜೀವಂತ: ದೇವಸ್ಥಾನದ ಕಟ್ಟೆ ಮೇಲೆ ಕೂತಿದ್ದಕ್ಕೆ ಡಿ ದರ್ಜೆ ನೌಕರ ಸೇರಿ ಮರ್ತೋವನ ಮೇಲೆ ಹಲ್ಲೆ

ಯಾದಗಿರಿ ಜಿಲ್ಲೆಯಲ್ಲಿ ದಲಿತರ ಮೇಲೆ ಹಲ್ಲೆ ಸೇರಿದಂತೆ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿದೆ. ಸಮಾಜದ ಮುಖಂಡರಿಗೆ ಪ್ರಶ್ನೆ ಮಾಡಿದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಇದೀಗ ದೇವಸ್ಥಾನದ ಕಟ್ಟೆಯ ಮೇಲೆ ಕೂತಿದ್ದಕ್ಕೆ ದಲಿತ ಯುವಕರ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ.

ಅನಿಷ್ಟ ಪದ್ಧತಿ ಜೀವಂತ: ದೇವಸ್ಥಾನದ ಕಟ್ಟೆ ಮೇಲೆ ಕೂತಿದ್ದಕ್ಕೆ ಡಿ ದರ್ಜೆ ನೌಕರ ಸೇರಿ ಮರ್ತೋವನ ಮೇಲೆ ಹಲ್ಲೆ
ಅನಿಷ್ಟ ಪದ್ಧತಿ ಇನ್ನೂ ಜೀವಂತ
Image Credit source: tv9 kannada
Edited By:

Updated on: Mar 22, 2026 | 3:20 PM

ಯಾದಗಿರಿ, ಮಾರ್ಚ್​ 22: ಎಐ ತಂತ್ರಜ್ಞಾನದ ಜಮಾನಾದಲ್ಲಿ ಸಮಾಜದಲ್ಲಿ ಇನ್ನೂ ಅನಿಷ್ಟ ಪದ್ದತಿ ಜೀವಂತವಾಗಿದೆ. ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ಸ್ವಸಮಾಜದವರೇ ತಮ್ಮದೇ ಸಮಾಜದ 12 ಕುಟುಂಬಗಳನ್ನ ಬಹಿಷ್ಕಾರ ಹಾಕಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದೆ. ದೇವಸ್ಥಾನದ ಕಟ್ಟೆಯ ಮೇಲೆ ಕೂತಿದ್ದಕ್ಕೆ ಇಬ್ಬರು ದಲಿತ (Dalits) ಯುವಕರ ಮೇಲೆ ಸವರ್ಣೀಯರ ಗುಂಪಿನಿಂದ ಹಲ್ಲೆ ಮಾಡಿರುವಂತಹ ಘಟನೆ ಗುರುಮಠಕಲ್ ತಾಲೂಕಿನ ಯಂಪಾಡ ಗ್ರಾಮದಲ್ಲಿ ನಡೆದಿದೆ.

ನಡೆದಿದ್ದೇನು?

ಅನೀಲ್​ ಕುಮಾರ್ ಹಾಗೂ ಸಿದ್ದಲಿಂಗಪ್ಪ ಎನ್ನುವವರು ಸಂಬಂಧಿಕರ ಮಗನ ಜವಳ ಕಾರ್ಯಕ್ರಮಕ್ಕೆ ತೆರಳಿದ್ದರು. ಬಿಸಿಲು ಹಿನ್ನೆಲೆ ನೆರಳಿನ ಆಶ್ರಯಕ್ಕಾಗಿ ಗುರುಮಠಕಲ್ ತಾಲೂಕಿನ ಯಂಪಾಡ ಗ್ರಾಮದಲ್ಲಿರುವ ಆಂಜನೇಯ ದೇಗುಲ ಮುಂಭಾಗದ ಕಟ್ಟೆಯ ಮೇಲೆ ಕೂತಿದ್ದರು.

ಇದನ್ನೂ ಓದಿ: ಯಾದಗಿರಿಯಲ್ಲಿ ಅನಿಷ್ಟ ಪದ್ಧತಿ ಇನ್ನೂ ಜೀವಂತ: ಮಾತು ಕೇಳಲಿಲ್ಲವೆಂದು ದಲಿತರಿಗೆ ಬಹಿಷ್ಕಾರ ಹಾಕಿದ ಸವರ್ಣೀಯರು

ಈ ವೇಳೆ ದೇವಸ್ಥಾನದ ಅರ್ಚಕ ಅನಂತಪ್ಪನಿಂದ ಹಲ್ಲೆ ಹಾಗೂ ನಿಂದಿಸಿದ್ದಾರೆ. ಅಷ್ಟೇ ಅಲ್ಲದೆ ಅರ್ಚಕ ಅನಂತಪ್ಪನ ಜೊತೆ ಸವರ್ಣೀಯರ ಗುಂಪು ಕೂಡ ಕೈಜೋಡಿಸಿದೆ. ಘಟನೆಯಲ್ಲಿ ಯುವಕರಿಗೆ ಗಾಯಗಳಾಗಿದ್ದು, ಯಾದಗಿರಿಯ ಯಿಮ್ಸ್ ಆಸ್ಪತ್ರೆಗೆ ದಾಖಲಿಸಿ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ. ಹಲ್ಲೆಗೊಳಾದ ಅನೀಲ್​ ಕುಮಾರ್​​ ಸಮಾಜ ಕಲ್ಯಾಣ ಇಲಾಖೆ ಡಿ ದರ್ಜೆ ನೌಕರ. ಸದ್ಯ ದೇವಸ್ಥಾನದ ಅರ್ಚಕ ಅನಂತಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

12 ಕುಟುಂಬಗಳಿಗೆ ಬಹಿಷ್ಕಾರದ ಶಿಕ್ಷೆ

ಇನ್ನು ಇತ್ತೀಚೆಗೆ ಶಹಾಪುರ ನಗರದ ಸ್ವಕುಳಿಸಾಳಿ ಸಮುದಾಯದ 12 ಕುಟುಂಬಗಳು ತಮ್ಮದೇ ಸಮುದಾಯದ ಮುಖಂಡರಿಂದ ಕಳೆದ 8 ವರ್ಷಗಳಿಂದ ಸಾಮಾಜಿಕ ಬಹಿಷ್ಕಾರದ ಶಿಕ್ಷೆಯನ್ನ ಅನುಭವಿಸುತ್ತಿದ್ದರು. ಎಂಟು ವರ್ಷಗಳ ಹಿಂದೆ ಒಟ್ಟು 20 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿತ್ತು. ಆದರೆ ಸಮುದಾಯದ ಮುಖಂಡರಿಗೆ ಹೆದರಿಕೊಂಡು 8 ಕುಟುಂಬಗಳು ದಂಡ ಕಟ್ಟುವ ಮೂಲಕ ತಪ್ಪಾಗಿದೆ ಅಂತ ಸಮುದಾಯಕ್ಕೆ ವಾಪಸ್ ಆಗಿದ್ದರು. ಆದರೆ ಇನ್ನು 12 ಕುಟುಂಬಗಳು ಯಾವುದೇ ತಪ್ಪು ಮಾಡದಿದ್ದರು ದಂಡ ಏಕೆ ಕಟ್ಟಬೇಕು ಅಂತ ಹೋರಾಟ ನಡೆಸಿದ್ದರು. ಬಹಿಷ್ಕಾರಕ್ಕೆ ಒಳಗಾದ 12 ಕುಟುಂಬದಲ್ಲಿ ಮದುವೆಯಾಗಬೇಕು ಅಂದರೆ ಹೆಣ್ಣು ಸಿಗ್ತಾಯಿಲ್ಲ. ಹೆಣ್ಣು ಕೊಡಲು ಬಂದವರಿಗೆ ಬಹಿಷ್ಕಾರಗೊಂಡಿದ್ದಾರೆ ಹೆಣ್ಣು ಕೊಡಬೇಡಿ ಅಂತ ಹೇಳಿ ವಾಪಸ್ ಕಳುಹಿಸುತ್ತಿದ್ದಾರಂತೆ.

ಇದನ್ನೂ ಓದಿ: ಕನಸ್ಸಿನಲ್ಲಿ ಕಾಡಿದ ಆಂಜನೇಯ್ಯ: ಕ್ರಿಶ್ಚಿಯನ್ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಘರ್ ವಾಪಸಿ ಮಾಡಿದ ಕುಟುಂಬ

ಜೀಹ್ವಶ್ವರ ದೇವರ ಹೆಸರಲ್ಲಿ ಕಲ್ಯಾಣ ಮಂಟಪ ಹಾಗೂ ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡು 18 ವಾಣಿಜ್ಯ ಮಳಿಗೆಗಳಿವೆ. ಈ ಕಲ್ಯಾಣ ಮಂಟಪ ಹಾಗೂ ಮಳಿಗೆಗಳಿಂದ ವಾರ್ಷಿಕ ಲಕ್ಷಾಂತರ ರೂ. ಆದಾಯ ಬರುತ್ತದೆ. ಈ ಬಗ್ಗೆ ಸಮುದಾಯದ ಮುಖಂಡರಿಗೆ ಲೆಕ್ಕ ಕೇಳಿದ್ದಾರೆ. ಆ ಕಾರಣಕ್ಕೆ ಬಹಿಷ್ಕಾರ ಹಾಕಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us