ಯಾದಗಿರಿ: ತಾಪಮಾನ ಏರಿಕೆ ಪರಿಣಾಮ ನವಜಾತ ಶಿಶುಗಳಲ್ಲಿ ಕಿಡ್ನಿ ಬಾವು, ಆರೋಗ್ಯ ಸಮಸ್ಯೆ ಹೆಚ್ಚಳ
ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನೆತ್ತಿ ಸುಡುವ ಬಿಸಿಲಿನಿಂದ ಯಾದಗಿರಿ ಜಿಲ್ಲೆಯ ಜನ ಕಂಗೆಟ್ಟು ಹೋಗಿದ್ದಾರೆ. ಬಿಸಿಲಿನ ತಾಪ ಕಂದಮ್ಮಗಳಿಗೂ ತಟ್ಟಿದೆ. ಬಿಸಿಲಿನ ಝಳ ಹೆಚ್ಚಾಗಿದ್ದಕ್ಕೆ ನವಜಾತ ಶಿಶುಗಳ ಆರೋಗ್ಯದಲ್ಲಿ ಏರುಪೇರು ಹೆಚ್ಚಾಗಿದೆ. ಇದೇ ಕಾರಣಕ್ಕೆ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಭಾಗದಲ್ಲಿ ನವಜಾತ ಶಿಶುಗಳ ದಾಖಲಾತಿ ಹೆಚ್ಚಾಗುತ್ತಿದೆ.

ಯಾದಗಿರಿ, ಏಪ್ರಿಲ್ 14: ಕಲ್ಯಾಣ ಕರ್ನಾಟಕ (Kalyana Karnataka) ಪ್ರದೇಶ ಈಗ ಬಿಸಿಲ ಝಳದಿಂದ ಕಾದ ಕುಲುಮೆಯಂತಾಗಿದೆ. ಅದರಲ್ಲೂ ಯಾದಗಿರಿ (Yadgir) ಜಿಲ್ಲೆಯಲ್ಲಿ 41 ಡಿಗ್ರಿಯಷ್ಟು ತಾಪಮಾನ (Temperature) ದಾಖಲಾಗುತ್ತಿದೆ. ಮನೆಯಿಂದ ಹೊರ ಬರಲು ಜನ ಹೆದರುತ್ತಿದ್ದಾರೆ. ರಣ ಬಿಸಿಲು ವೃದ್ಧರು ಮತ್ತು ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲೂ ನವಜಾತ ಶಿಶುಗಳ ದಾಖಲಾತಿ ಹೆಚ್ಚಾಗಿದೆ. ಇದಕ್ಕೆ, ಬಿಸಿಲಿನಿಂದ ಮಕ್ಕಳಲ್ಲಿ ನಿರ್ಜಲೀಕರಣ, ಕಿಡ್ನಿ ಬಾವು ಉಂಟಾಗುತ್ತಿರುವುದೇ ಕಾರಣವಾಗಿದೆ.
ನವಜಾತ ಶಿಶುಗಳಲ್ಲಿ ಕಿಡ್ನಿ ಮೇಲೆ ಬಾವು, ಮೂತ್ರ ವಿಸರ್ಜನೆ ಸಮಸ್ಯೆ ಹೆಚ್ಚಾಗುತ್ತಿದೆ. ಸದ್ಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ನಿತ್ಯ ಮೂರ್ನಾಲ್ಕು ನವಜಾತ ಶಿಶುಗಳು ದಾಖಲಾಗುತ್ತಿವೆ. ತಾಯಂದಿರು ಸರಿಯಾದ ಸಮಯಕ್ಕೆ ಎದೆ ಹಾಲುಣಿಸುವ ಕೆಲಸವನ್ನು ಮಾಡಬೇಕು. ಮಕ್ಕಳಿಗೆ ತೆಳ್ಳನೆ ಬಟ್ಟೆಗಳನ್ನು ತೊಡಿಸಬೇಕೆಂದು ಮಕ್ಕಳ ತಜ್ಞ ವೈದ್ಯ ಡಾ. ಅಲ್ತಾಪ್ ಸಲಹೆ ನೀಡಿದ್ದಾರೆ.
ಯಾದಗಿರಿ ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ನವಜಾತ ಶಿಶುಗಳ ದಾಖಲಾತಿ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ವ್ಯವಸ್ಥೆಯನ್ನು ವೈದ್ಯರು ಮಾಡಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಸುಮಾರು 10 ಜನ ಮಕ್ಕಳನ್ನು ಬಿಸಿಲಿನ ಪರಿಣಾಮ ನಿರ್ಜಲೀಕರಣ ಉಂಟಾಗಿ ಆಸ್ಪತ್ರೆಗೆ ದಾಖಲಾಸಲಾಗಿದೆ. ಬಿಸಿಲಿನಿಂದ ಮಕ್ಕಳಲ್ಲಿ ನಿರ್ಜಲೀಕರಣ ಉಂಟಾಗಿತ್ತಿದೆ. ಇದರಿಂದ ನವಜಾತ ಶಿಶುಗಳಿಗೆ ಕಿಡ್ನಿ ಮೇಲೆ ಬಾವು ಬರೋದು, ಸರಿಯಾದ ರೀತಿಯಲ್ಲಿ ಮೂರ್ತ ವಿರ್ಜನೆ ಆಗದೆ ಇರೋದು ಸಮಸ್ಯೆ ಉಂಟಾಗುತ್ತಿದೆ. ತಾಪಮಾನ ಏರಿಕೆಯಿಂದಾಗಿ ಮಕ್ಕಳು ಹಾಗೂ ನವಜಾತ ಶಿಶುಗಳು ಬೇರೆ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯಗಳು ಹೆಚ್ಚಿವೆ ಎಂದು ವೈದ್ಯರು ಮುನ್ಸೂಚನೆ ನೀಡಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಯಾದಗಿರಿ: ಬುಲೆರೊ ಹಾಗೂ ಸಾರಿಗೆ ಬಸ್ ಮಧ್ಯೆ ಭೀಕರ ರಸ್ತೆ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು
ಒಟ್ಟಿನಲ್ಲಿ ಯಾದಗಿರಿ ಜಿಲ್ಲೆಯಲ್ಲಿ ಬಿಸಿಲ ತಾಪಕ್ಕೆ ದೊಡ್ಡವರೇ ಕಂಗೆಟ್ಟಿದ್ದು, ಇನ್ನು ನವಜಾತ ಶಿಶುಗಳು ಪಾಡೇನು ಎನ್ನುವಂತಾಗಿದೆ ಪರಿಸ್ಥತಿ. ಈ ಬೇಸಿಗೆಯಲ್ಲಿ ಪೋಷಕರು ಕಂದಮ್ಮಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕಾಗಿದೆ.