AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್​: ‘ಕೈ’ನಲ್ಲಿ ಕಿಡಿ ಹೊತ್ತಿಸಿದ ಯತೀಂದ್ರ ಹೇಳಿಕೆ

ಸಿಎಂ ಸಿದ್ದರಾಮಯ್ಯ ಪುತ್ರ, ವಿಧಾನ ಪರಿಷತ್​ ಸದಸ್ಯ ಯತೀಂದ್ರ ನೀಡಿರುವ ಒಂದೇ ಒಂದು ಹೇಳಿಕೆಯೀಗ ರಾಜ್ಯ ಕಾಂಗ್ರೆಸ್​ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಸಚಿವ ಸತೀಶ್​ ಜಾರಕಿಹೊಳಿ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಎಂಬ ಹೇಳಿಕೆ, 'ಕೈ' ಪಾಳಯದಲ್ಲಿ ಪರ ವಿರೋಧ ಚರ್ಚೆಗಳಿಗೆ ನಾಂದಿ ಹಾಡಿದೆ. ಕೆಲ ನಾಯಕರು ಯತೀಂದ್ರರನ್ನು ಬೆಂಬಲಿಸಿದ್ದರೆ, ಇನ್ನು ಕೆಲವರು ಅವರ ಹೇಳಿಕೆ ವಿರುದ್ಧ ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್​: 'ಕೈ'ನಲ್ಲಿ ಕಿಡಿ ಹೊತ್ತಿಸಿದ ಯತೀಂದ್ರ ಹೇಳಿಕೆ
'ಕೈ'ನಲ್ಲಿ ಕಿಡಿ ಹೊತ್ತಿಸಿದ ಯತೀಂದ್ರ ಹೇಳಿಕೆ
ಪ್ರಸನ್ನ ಹೆಗಡೆ
|

Updated on:Oct 23, 2025 | 4:12 PM

Share

ಬೆಂಗಳೂರು, ಅಕ್ಟೋಬರ್​ 23: ರಾಜ್ಯದಲ್ಲಿ ನವೆಂಬರ್​ ಕ್ರಾಂತಿಯ ವಿಚಾರ ಭಾರಿ ಚರ್ಚೆಯಲ್ಲಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ನೀಡಿರುವ ಉತ್ತರಾಧಿಕಾರಿ ಹೇಳಿಕೆ ರಾಜ್ಯ ರಾಜಕೀಯದಲ್ಲಿ, ಅದರಲ್ಲೂ ಆಡೆಳಿತಾರೂಢ ಕಾಂಗ್ರೆಸ್ (Congress)​ ಪಾಳಯದಲ್ಲಿ ಸಂಚಲನ ಮೂಡಿಸಡಿದೆ. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿಕೆಶಿ ಒಂದೆಡೆ ಟೆಂಪಲ್​ ರನ್ ನಡೆಸುತ್ತಿದ್ದರೆ, ಇತ್ತ ಸಿದ್ದರಾಮಯ್ಯ ಬಣ ಬೇರೆಯದ್ದೇ ತಂತ್ರ ಹೆಣೆಯುತ್ತಿದೆಯಾ ಎಂಬ ಅನುಮಾನ ಮೂಡಿಸಿದೆ. ಈ ಬಗ್ಗೆ ಪರ ವಿರೋಧ ಚರ್ಚೆಗಳು ‘ಕೈ’ ಪಾಳಯದಲ್ಲೇ ಆರಂಭಗೊಂಡಿವೆ.

ಕುತೂಹಲ ಮೂಡಿಸಿದ ಜಾರಕಿಹೊಳಿ ಹೇಳಿಕೆ

ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರೋ ಸಚಿವ ಸತೀಶ್​ ಜಾರಕಿಹೊಳಿ, ನಾನು ಸಿದ್ದರಾಮಯ್ಯನವರ ಉತ್ತರಾಧಿಕಾರಿ ಅಂತಾ ಹೇಳಲ್ಲ. ಅದನ್ನು ಜನರು ಹಾಗೂ ಪಕ್ಷ ಹೇಳಬೇಕು ಎಂದಿದ್ದಾರೆ. ಸಿದ್ದರಾಮಯ್ಯ ಪುತ್ರ ಯತೀಂದ್ರ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಕಾಂಗ್ರೆಸ್​ನಲ್ಲಿ ಅರಸು ನಂತರ ಬಂಗಾರಪ್ಪ ಬಳಿಕ ಸಿದ್ದರಾಮಯ್ಯ ಇದ್ದಾರೆ. ಅವರ ಬಳಿಕ ಯಾರೆಂದು ಮುಂದೆ ಉತ್ತರ ಸಿಗುತ್ತದೆ. ಆದರೆ 2028ಕ್ಕೆ ಕ್ಲೈಮ್ ಮಾಡೋದ್ರಲ್ಲಿ ನಾನೂ ಇದೀನಿ ಎಂದು ಸತೀಶ್​ ಹೇಳಿರೋದು ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ನಾಯಕತ್ವ ವಿಚಾರದಲ್ಲಿ ಯತೀಂದ್ರ ಹೇಳಿದ್ದರಲ್ಲಿ ತಪ್ಪೇನಿದೆ: ಪರಮೇಶ್ವರ್ ಪ್ರಶ್ನೆ, ಅಚ್ಚರಿಯ ಹೇಳಿಕೆ

ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನ ಗೃಹ ಸಚಿವ ಪರಮೇಶ್ವರ್​ ಸೇರಿ ಹಲವು ಕಾಂಗ್ರೆಸ್​ ನಾಯಕರು ಬೆಂಬಲಿಸಿದ್ದಾರೆ. ಸಿದ್ದರಾಮಯ್ಯರು ಅಹಿಂದ ಪ್ರಾರಂಭಿಸಿದಾಗ ಸತೀಶ್​ ಜಾರಕಿಹೊಳಿಯವರು ಪ್ರಮುಖ ಪಾತ್ರ ವಹಿಸಿದ್ದರು. ಆ ಹಿನ್ನೆಲೆಯಲ್ಲಿ ಅವರ ಹೆಸರು ಹೇಳಿದರೆ ತಪ್ಪೇನಿದೆ? ಎಂದು ಪರಮೇಶ್ವರ್​ ಪ್ರಶ್ನಿಸಿದ್ದಾರೆ. ಯತೀಂದ್ರ ಹೇಳಿರುವ ನಾಯಕತ್ವ ಸತೀಶ್​ ಜಾರಕಿಹೊಳಿ ಅವರಲ್ಲಿದ್ದು, ಒಂದಲ್ಲ ಒಂದು ದಿನ ಅವರು ಸಿಎಂ ಆಗ್ತಾರೆ. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು, ಸಿಎಂ ಸಿದ್ದರಾಮಯ್ಯನವರ ದಾರಿಯಲ್ಲೇ ಸತೀಶ್​ ಸಾಗುತ್ತಿದ್ದಾರೆ ಎಂದು ಅಬಕಾರಿ ಸಚಿವ R.B. ತಿಮ್ಮಾಪುರ ಹೇಳಿದ್ದಾರೆ.

‘ನಮ್ಮದು ಬಲಾತ್ಕಾರ, ಅವರದ್ದು ಚಮತ್ಕಾರ’

ಇತ್ತ ಡಿಸಿಎಂ ಡಿಕೆಶಿ ಬಣದ ಶಾಸಕರು ಮಾತ್ರ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿ ಕಾರಿದ್ದಾರೆ. ಯತೀಂದ್ರ ಹೇಳಿಕೆ ಒಂದು ರೀತಿ ಎಳಸು ಸ್ಟೇಟ್​ಮೆಂಟ್​ ಅಂತಾ ರಾಮನಗರದಲ್ಲಿ ಶಾಸಕ ಇಕ್ಬಾಲ್ ಹುಸೇನ್ ತಿರುಗೇಟು ನೀಡಿದ್ದು, ಈ ರೀತಿಯ ಹೇಳಿಕೆಗಳನ್ನು ಕೊಡಬಾರದು ಎಂದಿದ್ದಾರೆ. ದೊಡ್ಡ ಮನೆತನ, ದೊಡ್ಡ ಸ್ಥಾನದಲ್ಲಿ ಇರುವ ನೀವು ತಾವಾಗಿ ಕೆಳಗೆ ಬೀಳೋದು ನಮಗೆ ಇಷ್ಟವಿಲ್ಲ. ನೀವು ಗೌರವಯುತವಾಗಿ ಹೇಳಿಕೆಗಳನ್ನ ಕೊಡಬೇಕು. ನಿಮ್ಮ ಮಾತಿನಲ್ಲಿ ಶಕ್ತಿ ಇಲ್ಲ ಎಂದು ಆರೋಪಿಸಿದ್ದಾರೆ. ಇನ್ನು ಈ ವಿಚಾರವಾಗಿ ಕೆಪಿಸಿಸಿಯಿಂದ ಯತೀಂದ್ರಗೆ ನೊಟೀಸ್​​ ನೀಡದ ಬಗ್ಗೆಯೂ ಆಕ್ರೋಶ ಹೊರ ಹಾಕಿರುವ ಇಕ್ಬಾಲ್​, ನಾವು ಮಾಡಿದ್ರೆ ಬಲಾತ್ಕಾರ, ಬೇರೆಯವರು ಮಾಡಿದ್ರೆ ಚಮತ್ಕಾರ ಅನ್ನೋ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:09 pm, Thu, 23 October 25