ಯೋಗೀಶಗೌಡ ಕೊಲೆ ಕೇಸ್: ದಿಢೀರ್​ ಫೀಲ್ಡಿಗಿಳಿದ ಸಿಬಿಐ, ಹಲವರಿಗೆ ನಡುಕ ಶುರು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 08, 2024 | 8:00 PM

ಬಿಜೆಪಿ ಸದಸ್ಯನಾಗಿದ್ದ ಯೋಗೀಶಗೌಡ ಕೊಲೆಯಾಗಿ 8 ವರ್ಷ ಕಳೆದಿವೆ. ಈ ಕೇಸ್​ಗೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ಆಗಿದ್ದು, ಅದೇನೆಂದರೆ ಈಗ ಮತ್ತೆ ಸಿಬಿಐ ಫೀಲ್ಡ್​ಗೆ ಇಳಿದಿದೆ. ಸೋಮವಾರ ಬೆಳಿಗ್ಗೆ ಸಿಬಿಐ ತನಿಖಾಧಿಕಾರಿ ರಾಕೇಶ್ ರಂಜನ್ ನೇತೃತ್ವದ ತಂಡ 8 ವರ್ಷಗಳ ಹಿಂದೆ ಕೊಲೆಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿದೆ.

ಯೋಗೀಶಗೌಡ ಕೊಲೆ ಕೇಸ್: ದಿಢೀರ್​ ಫೀಲ್ಡಿಗಿಳಿದ ಸಿಬಿಐ, ಹಲವರಿಗೆ ನಡುಕ ಶುರು
ಯೋಗೀಶಗೌಡ ಕೊಲೆ ಕೇಸ್: ದಿಢೀರ್​ ಫೀಲ್ಡಿಗಿಳಿದ ಸಿಬಿಐ, ಹಲವರಿಗೆ ನಡುಕ ಶುರು
Follow us on

ಧಾರವಾಡ, ಜುಲೈ 08: ಧಾರವಾಡದ ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೀಶಗೌಡ ಕೊಲೆ ಕೇಸ್​ನ (Yogesh Gowda murder case) ಸಿಬಿಐ (CBI) ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈಗಾಗಲೇ ಈ ಕೇಸ್​ನ ವಿಚಾರಣೆ ನ್ಯಾಯಾಲಯದಲ್ಲಿದ್ದು, ಈಗ ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಹಾಜರುಪಡಿಸುವುದಕ್ಕೆ ಸಿಬಿಐ ಫೀಲ್ಡ್​ಗೆ ಇಳಿದಿದೆ. ಇದರಿಂದಾಗಿ ಆರೋಪಿಗಳ ಎದೆಯಲ್ಲಿ ಈಗ ಢವಢವ ಶುರುವಾಗಿದೆ. ಧಾರವಾಡ ಜಿಲ್ಲಾ ಪಂಚಾಯತಿ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯನಾಗಿದ್ದ ಯೋಗೀಶಗೌಡ ಗೌಡರ್ ಕೊಲೆಯಾಗಿ ಈಗ ಎಂಟು ವರ್ಷವಾಗಿದೆ.

ಯೋಗೀಶಗೌಡ ಬರ್ಬರ ಹತ್ಯೆ

2016 ಜೂನ್ 15ರಂದು ಸಪ್ತಾಪುರ ಬಡಾವಣೆಯ ತಮ್ಮದೇ ಮಾಲೀಕತ್ವದ ಉದಯ್ ಜಿಮ್​ನಲ್ಲಿ ಯೋಗೀಶಗೌಡರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಬಳಿಕ ಇದೊಂದು ಜಮೀನು ವಿವಾದದ ಕೇಸ್ ಅಂತ ಪೊಲೀಸ್ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿತ್ತು. ಆದರೆ ಸಿಬಿಐ ತನಿಖೆಯಿಂದ ನಿಜ ಆರೋಪಿಗಳು ಅಂದರ್ ಆಗಿ, ತನಿಖೆ ಮಾಡಿದ್ದ ಪೊಲೀಸ್ ಅಧಿಕಾರಿಗಳೇ ಸಿಬಿಐ ಡ್ರಿಲ್ ಎದುರಿಸಿದ್ದರು.

ಇದನ್ನೂ ಓದಿ: ಯೋಗೀಶ್​ ಗೌಡ ಕೊಲೆ ಕೇಸ್​: ನಾಳೆ ಮತದಾನದಲ್ಲಿ ಭಾಗವಹಿಸಲು ವಿನಯ್ ಕುಲಕರ್ಣಿಗಿಲ್ಲ ಅವಕಾಶ

ಇನ್ನು ಇದೇ ಪ್ರಕರಣದ ಸಾಕ್ಷಿನಾಶ ಆರೋಪದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲಿಗೆ ಹೋಗಿ ಬಂದಿರೋದು ಎಲ್ಲರಿಗೂ ಗೊತ್ತೆ ಇದೆ. ಈಗ ಆಗಿರೋ ಮಹತ್ವದ ಬೆಳವಣಿಗೆ ಏನೆಂದರೆ, ಮತ್ತೆ ಈಗ ಸಿಬಿಐ ಫೀಲ್ಡ್​ಗೆ ಇಳಿದಿದೆ. ಸೋಮವಾರ ಬೆಳಿಗ್ಗೆ ಸಿಬಿಐ ತನಿಖಾಧಿಕಾರಿ ರಾಕೇಶ್ ರಂಜನ್ ನೇತೃತ್ವದ ತಂಡ 8 ವರ್ಷಗಳ ಹಿಂದೆ ಕೊಲೆಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿದೆ. ಅದು ಕೂಡ ತಾವಷ್ಟೇ ಅಲ್ಲ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಂಗಾಧರ ಶೆಟ್ಟಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಶೆಟ್ಟಿಯವರಿಗೆ ಕ್ರೈಂ ಸ್ಪಾಟ್​ನಲ್ಲೇ ನಿಂತು ಅನೇಕ ಮಾಹಿತಿಗಳನ್ನು ನೀಡಿದೆ.

ಈಗಾಗಲೇ ತನ್ನ ತನಿಖೆಯನ್ನು ಪೂರ್ಣಗೊಳಿಸಿ, ಚಾರ್ಜ್ ಶೀಟ್ ಸಹ ಸಲ್ಲಿಸಿರುವ ಸಿಬಿಐ ತಂಡ, ಈಗ ಪುನಃ ಕ್ರೈಂ ಸ್ಪಾಟ್​ಗೆ ಭೇಟಿ ನೀಡಿದ್ದು, ಅನೇಕರಿಗೆ ಅಚ್ಚರಿ ಸಹ ಮೂಡಿಸಿದೆ. ಆದರೆ ಸಿಬಿಐ ನ್ಯಾಯಾಲಯದಲ್ಲಿ ಈಗ ತನ್ನ ಅಸಲಿ ಆಟ ಶುರು ಮಾಡಲಿದೆಯಂತೆ. ಸಾಕ್ಷನಾಶ ಕೇಸ್​ನ ಎಫ್​ಐಆರ್ ರದ್ಧತಿಯೂ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲಿ ಈ ಕೇಸ್​ನಿಂದ ಮುಕ್ತಿ ಪಡೆಯೋಕೆ ವಿನಯ ಕುಲಕರ್ಣಿ ಸುಪ್ರೀಂ ಕೋರ್ಟ್ ವರೆಗೂ ಹೋಗಿ ಬಂದರೂ ಏನೂ ಆಗಿಲ್ಲ. ಈಗ ಈ ಕೇಸ್​ನಲ್ಲಿನ ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಲಿದ್ದು, ಇದಕ್ಕೆ ಸಂಬಂಧಿಸಿದಂತೆಯೇ ಸಮನ್ಸ್ ಕೊಡೋಕೆ ಬಂದಿದ್ದ ಸಿಬಿಐ ತಮ್ಮೊಂದಿಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್​ರನ್ನು ಕರೆದುಕೊಂಡು ಬಂದಿರೋದು, ಈಗ ಈ ಕೇಸ್​ನ ಆರೋಪಿಗಳಲ್ಲಿ ಮೈ ನಡುಗುವಂತೆ ಮಾಡಿದೆ.

ಇದನ್ನೂ ಓದಿ: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಕೇಸ್: ಪ್ರಕರಣ ರದ್ದು ಕೋರಿ ಶಾಸಕ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಜಾ

ಸಿಬಿಐ ತನಿಖೆ ಬಳಿಕ ಗಂಭೀರತೆ ಪಡೆದುಕೊಂಡಿದ್ದ ಈ ಪ್ರಕರಣ, ನ್ಯಾಯಾಲಯದಲ್ಲಿರೋ ಕಾರಣಕ್ಕೆ ಇಷ್ಟು ದಿನ ಸಿಬಿಐ ಧಾರವಾಡದತ್ತ ಬಂದಿರಲೇ ಇಲ್ಲ. ಆದರೆ ಏಕಾಏಕಿ ಧಾರವಾಡಕ್ಕೆ ಬಂದಿರೋ ಸುದ್ದಿ ಕೇಳಿ ಅನೇಕರು ಢವಢವ ಶುರುವಾಗಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮಗಿಸಬೇಕಿದೆ. ಇದೇ ವೇಳೆ ಸಾಕ್ಷಿಗಳಿಗೆ ನ್ಯಾಯಾಲಯಕ್ಕೆ ಆಗಮಿಸಿ ಸಾಕ್ಷಿ ಹೇಳಲು ಇದೀಗ ಸಿಬಿಐ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಸಿಬಿಐ ಮುಂದಿನ ವಿಚಾರಣೆ ವೇಳೆಗೆ ಸಾಕ್ಷಿಗಳಿಗೆ ಹಾಜರಾಗುವಂತೆ ಹೇಳುತ್ತಿದ್ದು, ನ್ಯಾಯಾಲಯದಲ್ಲಿ ಮುಂದೇನಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.