ಭದ್ರಾವತಿ ಕಬಡ್ಡಿ ಗಲಾಟೆ ಪ್ರಕರಣ: ಗಲಾಟೆ ಮಾಡಿದ 15 ಜನರ ಬಂಧನ
ಭದ್ರಾವತಿಯಲ್ಲಿ ನಡೆದ ಸಣ್ಣ ಹೊಡೆದಾಟದ ಪ್ರಕರಣ ಈಗ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದೆ. ಈ ಕೇಸಿನಲ್ಲಿ ಇನ್ನು 15 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಮೊನ್ನೆ ಪ್ರಾರಂಭವಾದ ವಿಧಾನಸಭಾ ಅಧಿವೇಶನದಲ್ಲಿ ತಮ್ಮ ಅಂಗಿ ಬಿಚ್ಚಿ ಬಿಜೆಪಿ ವಿರುದ್ಧ ಹೋರಾಟಕ್ಕೆ ತಯಾರಾದ ಭದ್ರಾವತಿ ಎಮ್ಎಲ್ಎ, ಬಿ.ಕೆ. ಸಂಗಮೇಶ್ ಅವರ ಸಿಟ್ಟು ಇನ್ನು ಇಳಿದಿಲ್ಲ. ಇಂದು ಪತ್ರಿಕಾ ಗೋಷ್ಠಿ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಶಿವಮೊಗ್ಗ ಜಿಲ್ಲಾ ಸಚಿವ, ಕೆ.ಎಸ್. ಈಶ್ವರಪ್ಪ ಅವರನ್ನು ಬೀದಿಗೆ ತಂದು ನಿಲ್ಲಿಸದೇ ಬಿಡೋಲ್ಲ ಎಂದು ಹೇಳಿದರು. ಭದ್ರಾವತಿಯಲ್ಲಿ ನಡೆದ ಒಂದು ಕಬಡ್ಡಿ ಟೂರ್ನಮೆಂಟ್ ಮತ್ತು ಮರುದಿನ ಆಸ್ಪತ್ರೆಯಲ್ಲಿ ನಡೆದ ಹೊಡೆದಾಟದ ಘಟನೆ ಇಡೀ ಬೆಳವಣಿಗೆ ಮೇಲೆ ಹೊಸ ಬೆಳಕು ಚೆಲ್ಲುತ್ತದೆ.
ಏನು ನಡೆದಿತ್ತು ಆ ದಿನ
ಫೆ. 28 ರ ರಾತ್ರಿ ಭದ್ರಾವತಿ ನಗರದ ಕನಕ ಮಂಟಪದಲ್ಲಿ ಮೈದಾನದಲ್ಲಿ ಹೊನಲು ಬೆಳಕಿನ ಕಬಡ್ಡಿ ಟೂರ್ನಮೆಂಟ್ನ ಫೈನಲ್ ಪಂದ್ಯವಿತ್ತು. ಈ ಹೊನಳು ಬೆಳಕಿನ ಟೂರ್ನಿಯನ್ನು ಬಿವೈಕೆ ಸ್ಪೋಟ್ಸ್ ಕ್ಲಬ್ (ರಿ) ಆಯೋಜನೆ ಮಾಡಿತ್ತು. ಈ ಕ್ಲಬ್ನ ಅಧ್ಯಕ್ಷರು ಭದ್ರಾವತಿಯ ಶಾಸಕ ಬಿ.ಕೆ. ಸಂಗಮೇಶ್ವರ್ ಆಗಿದ್ದರು. ಒಟ್ಟು ಎಂಟು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದವು. ಕಾಂಗ್ರೆಸ್ ಬೆಂಬಲಿತ ತಂಡವು ಟೂರ್ನಿಯಲ್ಲಿ ಸೋತು ಹೊರಗೆ ಬಿದ್ದಿತ್ತು. ಫೈನಲ್ ಪಂದ್ಯದಲ್ಲಿ ಭದ್ರಾವತಿಯ ಬಿಜೆಪಿ ಮುಖಂಡ ಧರ್ಮಪ್ರಸಾದ್ ಅವರ ಬೆಂಬಲಿಗರ ತಂಡವು ರನ್ನರ್ ಅಪ್ ಆಗಿದ್ದರು. ಇನ್ನೂ ಮಲ್ನಾಡ್ ತಂಡವು ವಿನ್ನರ್ ಆಗಿತ್ತು. ಪಂದ್ಯ ಮುಗಿದು ಶಾಸಕರು ಬಹುಮಾನ ವಿತರಣೆ ಮಾಡುತ್ತಿದ್ದರು. ಈ ವೇಳೆ ಅಲ್ಲಿ ಜೈ ಶ್ರೀರಾಮ ಘೋಷಗಳು ಮೊಳಗಿವೆ. ಮೊದಲೇ ಟೂರ್ನಿಯಿಂದ ಹೊರಗೆ ಬಿದ್ದು ಸಂಕಟದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರ ಮೇಲೆ ಅಟ್ಯಾಕ್ ಮಾಡಿದರು.
ಆ ದಿನ ಬೆಳಿಗ್ಗೆ ಶಿವಮೊಗ್ಗ ಹಳೇ ಜೈಲು ಆವರಣದಲ್ಲಿ ಸಿಎಂ ಹುಟ್ಟುಹಬ್ಬದ ಪ್ರಯುಕ್ತ ನಮ್ಮೊಲುಮೆ ಕಾರ್ಯಕ್ರಮ ಇತ್ತು. ಅದೇ ದಿನ ರಾತ್ರಿ ಭದ್ರಾವತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಬಿಗ್ ಫೈಟಿಂಗ್ ಆಗಿತ್ತು. ಪಂದ್ಯಾವಳಿ ಬಳಿಕ ಗಲಾಟೆ ವೇಳೆ ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದರು. ಘಟನೆಯಲ್ಲಿ ನಾಲ್ಕು ಬಿಜೆಪಿ ಕಾರ್ಯಕರ್ತರು ಗಾಯಗೊಂಡಿದ್ದರು. ಈ ಪ್ರಕರಣ ಇಷ್ಟಕ್ಕೆ ಮುಗಿದಿದ್ದರೆ ಸದ್ಯ ಯಾವುದೇ ದೊಡ್ಡ ಸಮಸ್ಯೆಯು ಆಗುತ್ತಿರಲಿಲ್ಲ. ಇದರ ಮುಂದುವರೆದ ಭಾಗವಾಗಿ ಭದ್ರಾವತಿಯ ಕಾಂಗ್ರೆಸ್ ಶಾಸಕರು ಗಾಯಾಳು ಭೇಟಿಗೆಂದು ಭದ್ರಾವತಿಯ ತಾಲೂಕು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆಯಲ್ಲಿ ಮತ್ತೆ ಅಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭದ್ರಾವತಿಯ ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್ ಮತ್ತು ಪ್ರಭಾಕರ್ ಮೇಲೆ ಹಲ್ಲೆ ಮಾಡಿದರು . ಸ್ವತಃ ಶಾಸಕರ ಎದುರೇ ಅವರ ಪುತ್ರ ಬಸವೇಶ್ ಮತ್ತು ಅವರ ಅಣ್ಣನ ಮಗ ರವಿ ಕುಮಾರ್ ಸೇರಿದಂತೆ ಬೆಂಬಲಿಗರು ಹಲ್ಲೆ ಮಾಡಿದರು ಎಂದು ಹೇಳಲಾಗಿದೆ.
ಆಮೇಲೆ ಏನಾಯ್ತು?
ಯಾವಾಗ ಆಸ್ಪತ್ರೆಯಲ್ಲಿ ಬಿಜೆಪಿ ಮುಖಂಡರ ಮೇಲೆ ಅಟ್ಯಾಕ್ ಆಯ್ತೋ, ಆಗ ಪ್ರಕರಣವು ವಿಕೋಪಕ್ಕೆ ತಿರುಗಿತ್ತು. ಘಟನೆಯಲ್ಲಿ ಶಾಸಕರ ಸಂಗಮೇಶ್ವರ್ ಅವರ ಪುತ್ರ ಬಸವೇಶ್ ಮತ್ತು ಅವರ ಅಣ್ಣ ಮೋಹನ್ ಅವರು ಇಬ್ಬರು ಪುತ್ರರ ಮೇಲೆ ಕೇಸ್ ದಾಖಲು ಆಯ್ತು. ಶಾಸಕರ ಮತ್ತು ಅವರ ಕುಟುಂಬಸ್ಥರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಭದ್ರಾವತಿಯ ಓಲ್ಡ್ ಟೌನ್ ನಲ್ಲಿ ಮೂರು ಕೇಸ್ ದಾಖಲು ಆಗಿವೆ. ಇನ್ನೂ ಕಾಂಗ್ರೆಸ್ ಬಿಜೆಪಿ ಮುಖಂಡರ ಎರಡು ಕೇಸ್ ಎಫ್ ಐಆರ್ ದಾಖಲು ಮಾಡಿದ್ದಾರೆ. ಆದ್ರೆ ಘಟನೆಯಲ್ಲಿ ಶಾಸಕ ಪುತ್ರ ಬಸವೇಶ್ ಸೇರಿ 15 ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕಣದಲ್ಲಿ ಇಂದು ಸಂಗಮೇಶ್ವರ ಅವರ ಪುತ್ರ ಬಸವೇಶ್ ನನ್ನು ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ರು ಬಂಧಿಸಿದ್ದಾರೆ. ಈ ಮೂಲಕ ಶಾಸಕರಿಗೆ ಬಿಜೆಪಿ ಪಕ್ಷವು ಸರಿಯಾದ ಪೆಟ್ಟು ಕೊಟ್ಟಿದೆ. ಇನ್ನೂ ಸಂಗಮೇಶ್ ಮತ್ತು ಅವರ ಪುತ್ರ ಮತ್ತು ಅವರ ಸಹೋದರ ಮೋಹನ್ ಅವರ ಇಬ್ಬರು ಮಕ್ಕಳ ಮೇಲೆ ಮೂರು ಎಫ್ ಐಆರ್ ದಾಖಲು ಅಗಿವೆ. ಸಂಗಮೇಶ್ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು ಆದ್ರೆ, ಅವರ ಮಗ ಮತ್ತು ಸಹೋದರ ಹಾಗೂ ಅವರ ಇಬ್ಬರು ಮಕ್ಕಳ ಮೇಲೆ 307 ಕೊಲೆಗೆ ಯತ್ನ ಪ್ರಕರಣವು ದಾಖಲು ಆಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಶಾಸಕ ಪುತ್ರ ಸೇರಿ ಒಟ್ಟು 15 ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನೂ ತಲೆಮರೆಸಿಕೊಂಡಿರುವ ಇತರೆ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆಸಿದ್ದಾರೆ. ಶಾಸಕರ ಸಹೋದರ ಮತ್ತು ಅವರ ಇಬ್ಬರು ಮಕ್ಕಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಇದನ್ನೂ ಓದಿ:
ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಒಂದು ವಾರಗಳ ಕಾಲ ಅಮಾನತು
ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಪುತ್ರ ಬಸವೇಶ್ ಬಂಧನ
Published On - 7:26 pm, Sat, 6 March 21