ಸಹಾಯ ಈಗ ಬೇಕು, ಮುಂದೆಂದೋ ಅಲ್ಲ: ಮಕ್ಕಳಿಗೆ ಘೋಷಿಸಿರುವ ಸಹಾಯದ ವೈಖರಿಗೆ ಪ್ರಶಾಂತ್ ಕಿಶೋರ್ ಟೀಕೆ

ಅಸಹಾಯಕರಾಗಿರುವ ಮಕ್ಕಳಿಗೆ ಈಗ ನೆರವು ಬೇಕು. ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ಸಿಗಬೇಕು ಎಂಬುದು ನಮ್ಮ ದೇಶದಲ್ಲಿ ಸಂವಿಧಾನಾತ್ಮಕ ಹಕ್ಕಾಗಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಸಹಾಯ ಈಗ ಬೇಕು, ಮುಂದೆಂದೋ ಅಲ್ಲ: ಮಕ್ಕಳಿಗೆ ಘೋಷಿಸಿರುವ ಸಹಾಯದ ವೈಖರಿಗೆ ಪ್ರಶಾಂತ್ ಕಿಶೋರ್ ಟೀಕೆ
ಪ್ರಶಾಂತ್​ ಕಿಶೋರ್​

Updated on: May 30, 2021 | 7:27 PM

ದೆಹಲಿ: ಕೊರೊನಾ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ನೆರವಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಪ್ಯಾಕೇಜ್​ನ ಕೆಲ ವಿವರಗಳನ್ನು ರಾಜಕೀಯ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ ಟೀಕಿಸಿದ್ದಾರೆ. ಮಹಾಪಿಡುಗು ನಿರ್ವಹಣೆಯಲ್ಲಿ ಸರ್ಕಾರ ಸತತ ತಪ್ಪುಗಳನ್ನು ಮಾಡಿದೆ ಎಂದು ಹೇಳಿದ್ದಾರೆ.

ಅನಾಥರಾದ ಮಕ್ಕಳಿಗೆ 18 ವರ್ಷ ತುಂಬಿದ ನಂತರ ಉಚಿತ ಶಿಕ್ಷಣ ಮತ್ತು ಶಿಷ್ಯವೇತನ (ಸ್ಟೇಫಂಡ್) ನೀಡುವ ಸರ್ಕಾರದ ಘೋಷಣೆಗೆ ಪ್ರಶಾಂತ್ ಆಕ್ಷೇಪಿಸಿದ್ದಾರೆ. ಅಸಹಾಯಕರಾಗಿರುವ ಮಕ್ಕಳಿಗೆ ಈಗ ನೆರವು ಬೇಕು. ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ಸಿಗಬೇಕು ಎಂಬುದು ನಮ್ಮ ದೇಶದಲ್ಲಿ ಸಂವಿಧಾನಾತ್ಮಕ ಹಕ್ಕಾಗಿದೆ ಎಂದು ಅವರು ಹೇಳಿದ್ದಾರೆ.

‘ಇದು ಮೋದಿ ಸರ್ಕಾರದ ಮತ್ತೊಂದು ಮುಖ್ಯನಡೆ (ಮಾಸ್ಟರ್​ಸ್ಟ್ರೋಕ್). ಸತತ ತಪ್ಪುಗಳಿಂದ ಕೋವಿಡ್​ ಪಿಡುಗು ಬಿಗಡಾಯಿಸುವಂತೆ ಮಾಡಿದ ಸರ್ಕಾರವು ಇದೀಗ ಸಹಾನುಭೂತಿ ಮತ್ತು ಕಾಳಜಿಗೆ ಹೊಸ ವ್ಯಾಖ್ಯಾನ ನೀಡಿದೆ’ ಎಂಬ ಒಕ್ಕಣೆಯೊಂದಿಗೆ ಪ್ರಶಾಂತ್​ ಕಿಶೋರ್​ ನರೇಂದ್ರ ಮೋದಿ ಅವರು ಅನಾಥ ಮಕ್ಕಳಿಗೆ ಸರ್ಕಾರದ ನೆರವು ಘೋಷಿಸಿ ಮಾಡಿರುವ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ.

ಕೊವಿಡ್ ಪಿಡುಗಿನಿಂದ ಅನಾಥರಾದ ಮಕ್ಕಳ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಈ ಸಂಬಂಧ ಟ್ವೀಟ್ ಮಾಡಿದ್ದರು. ‘ಕೊರೊನಾ ಪಿಡುಗಿನಿಂದ ಅನೇಕ ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ. ಸರ್ಕಾರವು ಇಂಥ ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತದೆ. ಘನತೆಯ ಬದುಕು ಮತ್ತು ಎಲ್ಲ ಬಗೆಯ ಅವಕಾಶಗಳು ಅವರಿಗೆ ಸಿಗುವಂತೆ ಖಾತ್ರಿಪಡಿಸುತ್ತದೆ. ಮಕ್ಕಳಿಗಾಗಿ PM-CARES ಯೋಜನೆಯ ಮೂಲಕ ಶಿಕ್ಷಣ ಮತ್ತು ಇತರ ನೆರವು ಒದಗಿಸಲಾಗುವುದು’ ಎಂದು ಮೋದಿ ಹೇಳಿದ್ದರು.

(Need Support Now Not Later Criticized Prashant Kishor on government support to children who lost parents due to Covid dmg)

ಇದನ್ನೂ ಓದಿ: ಕೊವಿಡ್​ನಿಂದ ಅನಾಥರಾದ ಮಕ್ಕಳಿಗೆ ಪಿಎಂ ಕೇರ್ ಫಂಡ್​ನಿಂದ ಪ್ರತಿ ತಿಂಗಳು ಸ್ಟೈಫಂಡ್, ಉಚಿತ ಶಿಕ್ಷಣ ನೀಡಲು ನಿರ್ಧರಿಸಿದ ಕೇಂದ್ರ ಸರ್ಕಾರ

ಇದನ್ನೂ ಓದಿ: CM Yediyurappa PC: ಕೊರೊನಾದಿಂದ ತಂದೆ ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸಿಎಂ ಬಾಲಸೇವಾ ಯೋಜನೆ ಘೋಷಣೆ