ಚಿತ್ರಹಿಂಸೆ ಕೊಟ್ಟು ಕೊಲೆ, ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಲವು ಮಾಹಿತಿಗಳು ದಿನಗಳೆದಂತೆ ಹೊರಬೀಳುತ್ತಿದೆ. ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷಾ ವರದಿಯ ಕೆಲ ವಿಷಯಗಳು ಇದೀಗ ಬಹಿರಂಗಗೊಂಡಿವೆ.

ಚಿತ್ರಹಿಂಸೆ ಕೊಟ್ಟು ಕೊಲೆ, ರೇಣುಕಾ ಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗ

Updated on: Jun 16, 2024 | 2:15 PM

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದ ಬಗ್ಗೆ ಹಲವು ಅಂಶಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕೆಲವು ಮೂಲಗಳ ಪ್ರಕಾರ ನಿನ್ನೆಯೇ ರೇಣುಕಾ ಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ಪೊಲೀಸರ ಕೈ ಸೇರಿದೆ. ನಿನ್ನೆ ನ್ಯಾಯಾಲಯದಲ್ಲಿ ವಾದಿಸಿದ್ದ ಪೊಲೀಸರ ಪರ ವಕೀಲರು, ರೇಣುಕಾ ಸ್ವಾಮಿಗೆ ಎಲೆಕ್ಟ್ರಿಕ್ ಶಾಕ್ ನೀಡಿರುವ ವಿಷಯವನ್ನು ಬಹಿರಂಗಪಡಿಸಿದ್ದರು. ಇದೀಗ ಅದು ಖಾತ್ರಿಯಾಗಿದೆ.

ರೇಣುಕಾ ಸ್ವಾಮಿಯ ಮರಣೋತ್ತರ ಪರೀಕ್ಷೆಯ ವರದಿಯ ಕೆಲ ಮಾಹಿತಿ ಬಹಿರಂಗವಾಗಿದೆ. ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ ರೇಣುಕಾ ಸ್ವಾಮಿ ಮೃತದೇಹದ ಮೇಲೆ ಬರೋಬ್ಬರಿ 34 ಕಡೆ ಗಾಯದ ಗುರುತುಗಳು ಪತ್ತೆಯಾಗಿವೆ. ಹಾಗೂ ಈ ಗಾಯದ ಗುರುತುಗಳು ರೇಣುಕಾ ಸ್ವಾಮಿ ಬದುಕಿದ್ದಾಗಲೇ ಆಗಿರುವುವು ಅಂದರೆ ಹಲ್ಲೆಯಿಂದಲೇ ಆಗಿರುವ ಗಾಯಗಳು ಎನ್ನಲಾಗುತ್ತಿವೆ. ದೇಹದ ಮೇಲೆ ಕೆಲವು ಸಿಗರೇಟಿನಿಂದ ಸುಟ್ಟ ಗುರುತುಗಳೂ ಸಹ ಇವೆ ಎನ್ನಲಾಗುತ್ತಿದೆ.

ರೇಣುಕಾ ಸ್ವಾಮಿಯ ಎದೆಗೆ ಜೋರಾಗಿ ಪೆಟ್ಟು ಬಿದ್ದಿದೆ, ಬೆನ್ನಿಗೆ ಪೆಟ್ಟು ಬಿದ್ದಿದೆ. ಪಕ್ಕೆಲುಬಿನ ಮೂಳೆ ಮುರಿದು ಅದು ಶ್ವಾಸಕೋಶಕ್ಕೆ ಚುಚ್ಚಿಕೊಂಡಿದೆ ಎಂದು ಮರಣೋತ್ತರ ವರದಿಯಿಂದ ತಿಳಿದು ಬಂದಿದೆ. ರೇಣುಕಾ ಸ್ವಾಮಿಯ ಮರ್ಮಾಂಗಕ್ಕೂ ಬಲವಾದ ಪೆಟ್ಟು ಬಿದ್ದಿರುವುದು ತಿಳಿದು ಬಂದಿದೆ. ಹೊಡೆದಿರುವ ಹೊಡೆತಗಳಿಗೆ ರೇಣುಕಾ ಸ್ವಾಮಿಯ ದೇಹದ ಹಲವು ಭಾಗಗಳಲ್ಲಿ ರಕ್ತ ಹೆಪ್ಪುಗಟ್ಟಿದೆಯಂತೆ. ಎಲ್ಲಕ್ಕಿಂತಲೂ ಮುಖ್ಯವಾಗಿ ರೇಣುಕಾ ಸ್ವಾಮಿಯ ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ಕೊಡಲಾಗಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಇದನ್ನೂ ಓದಿ:ರೇಣುಕಾ ಸ್ವಾಮಿ ಹತ್ಯೆ ಪ್ರಕರಣ: ಜೂನ್ 20ರವರೆಗೆ ದರ್ಶನ್ ಹಾಗೂ ಗ್ಯಾಂಗ್​ ಪೊಲೀಸ್ ಕಸ್ಟಡಿ ಮುಂದುವರಿಕೆ

ರೇಣುಕಾ ಸ್ವಾಮಿಯ ತಲೆಗೆ ಸಹ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗುತ್ತಿದೆ. ತಲೆ ಚಿಪ್ಪಿಗೆ ತೀವ್ರ ಹಾನಿ ಆಗಿದೆ ಎನ್ನಲಾಗುತ್ತಿದೆ. ರೇಣುಕಾ ಸ್ವಾಮಿಯ ಸಾವಿಗೆ ಮರ್ಮಾಂಗಕ್ಕೆ ಬಿದ್ದ ಪೆಟ್ಟು ಕಾರಣವೋ ಅಥವಾ ತಲೆಗೆ ಬಿದ್ದ ಪೆಟ್ಟು ಕಾರಣವೋ ಅಥವಾ ಎಲೆಕ್ಟ್ರಿಕ್ ಶಾಕ್​ನಿಂದಾಗಿ ಸತ್ತರೊ ಎಂಬುದು ಇನ್ನಷ್ಟೆ ಬಹಿರಂಗವಾಗಬೇಕಿದೆ.

ಜೂನ್ 08 ರಂದು ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ರಾಘು, ಅನು, ಜಗ್ಗು ಎಂಬುವರು ರವಿ ಎನ್ನುವರ ಕಾರಿನಲ್ಲಿ ಬೆಂಗಳೂರಿಗೆ ಕರೆತಂದಿದ್ದರು. ಅದೇ ದಿನ ರಾತ್ರಿ ಅಂದರೆ ಜೂನ್ 9ರ ರೇಣುಕಾ ಸ್ವಾಮಿಯ ಕೊಂದು ಸುಮನಹಳ್ಳಿ ಬಳಿಯ ಮೋರಿಗೆ ಎಸೆಯಲಾಗಿತ್ತು. ಜೂನ್ 9 ರಂದೇ ಪೊಲೀಸರಿಗೆ ಶವ ದೊರಕಿತು. ಜೂನ್ 10 ರಂದು ಮೂವರು ಪೊಲೀಸರಿಗೆ ಶರಣಾಗಿ ಕೊಲೆ ತಾವೇ ಮಾಡಿದ್ದು ಎಂದರು. ವಿಚಾರಣೆ ನಡೆಸಿದಾಗ ಕೊಲೆಯ ಹಿಂದೆ ದರ್ಶನ್ ಹಾಗೂ ಸಹಚರರ ಕೈವಾಡ ಇರುವುದು ಪತ್ತೆಯಾಗಿದೆ. ಅದೇ ದಿನ ರಾತ್ರಿ ಪೊಲೀಸರು ಮೈಸೂರಿಗೆ ತೆರಳಿದ್ದಾರೆ. ಜೂನ್ 11ರ ಮಂಗಳವಾರ ಬೆಳಿಗ್ಗೆ ಪೊಲೀಸರು ದರ್ಶನ್ ಅನ್ನು ಬಂಧಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us