ಜಮೀರ್ ಹಣಿಯಲು ‘ಸೈಲೆಂಟ್’ ಅಸ್ತ್ರ: ಸೈಲೆಂಟ್ ಸುನೀಲ್ ಮೂಲಕ ಸೋಲಿಸಲು ರಣತಂತ್ರ…!

| Updated By: ರಮೇಶ್ ಬಿ. ಜವಳಗೇರಾ

Updated on: Nov 30, 2022 | 9:01 PM

ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಸುನೀಲ ಹಾಗೂ ಇಮ್ರಾನ್ ಪಾಷಾ ಸೈಲೆಂಟ್ ಆಗಿಯೇ ಈ ಬಾರಿ ಚಾಮರಾಜಪೇಟೆಯಲ್ಲಿ ಜಮೀರ್ ಅಹಮ್ಮದ್ ಖಾನ್ ಹಣಿಯಲು ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಗುಲ್ ಎದ್ದಿದೆ.

ಜಮೀರ್ ಹಣಿಯಲು ‘ಸೈಲೆಂಟ್’ ಅಸ್ತ್ರ: ಸೈಲೆಂಟ್ ಸುನೀಲ್ ಮೂಲಕ ಸೋಲಿಸಲು ರಣತಂತ್ರ...!
silent sunil And zameer ahmed Khan
Follow us on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ(Karnataka Politics)  ಈಗ ರೌಡಿಶೀಟರ್​ ಪಾಲಿಟಿಕ್ಸ್ ಶುರುವಾದಂತಿದೆ. ಒಂದು ಕಾಲದಲ್ಲಿ ರೌಡಿಸಂ ಜಗತ್ತಲ್ಲಿ ಸದ್ದು ಮಾಡಿದ್ದವರು ಇದೀಗ ಏಕಾಏಕಿ ಸಮಾಜ ಸೇವೆ ಮಂತ್ರ ಜಪಿಸಿ ರಾಜಕೀಯ ಪ್ರವೇಶಕ್ಕೆ ಮುಂದಾಗಿದ್ದಾರೆ. ಅದರಲ್ಲೂ ಬೆಂಗಳೂರಿನ ರೌಡಿ ಶೀಟರ್ ಸೈಲೆಂಟ್ ಸುನೀಲ (Silent Sunil) ಸೈಲೆಂಟ್ ಆಗಿಯೇ ಪಾಲಿಟಿಕ್ಸ್​ಗೆ ಪ್ರವೇಶ ಮಾಡಲು ತಯಾರಿ ನಡೆಸಿದ್ದಾರೆ. ಅದರಲ್ಲೂ ಚಾಮರಾಜಪೇಟೆ ಕ್ಷೇತ್ರದಲ್ಲಿ(Chamrajpet constituency).

ಜಮೀರ್ ಹಣಿಯಲು ನಡೀತಿದ್ಯಾ ‘ಸೈಲೆಂಟ್’ ಪ್ಲ್ಯಾನ್?

ಹೌದು… ಬೆಂಗಳೂರಿನ ಚಾಮರಾಜಪೇಟೆ ಅಕ್ಷರಶಃ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಕೋಟೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಜಮೀರ್ ಮತಗಳಿಗೆ ಗಾಳ ಹಾಕುವುದು ಅಷ್ಟು ಸುಲಭದ ಮಾತಲ್ಲ. ಆದ್ರೆ, ಇದೇ ಏರಿಯಾದಲ್ಲಿ ಹವಾ ಇಟ್ಟಿರೋ ಸೈಲೆಂಟ್ ಸುನೀಲ, ಚಾಮರಾಜಪೇಟೆಯಲ್ಲಿ ಕಣಕ್ಕಿಳಿಯಲು ಸ್ಕೆಚ್ ಹಾಕಿದ್ದಾನೆ ಎನ್ನಲಾಗ್ತಿದೆ. ಇದಕ್ಕೆ ರಾಜಕೀಯ ಪಕ್ಷಗಳು, ಜಮೀರ್ ಎದುರಾಳಿಗಳ ಕೃಪಾಕಟಾಕ್ಷ ಸುನೀಲನ ಮೇಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿಯೇ ಚಾಮರಾಜಪೇಟೆಯಲ್ಲೇ ಹೆಚ್ಚು ಓಡಾಡಿಕೊಂಡಿರುವ ಸುನೀಲ, ರಕ್ತದಾನ ಶಿಬಿರದಂತ ಸಾಮಾಜಿಕ ಕಾರ್ಯಕ್ರಮಗಳನ್ನ ಮಾಡುತ್ತಿದ್ದಾನೆ, ಹೀಗೆ ಚಾಮರಾಜಪೇಟೆಯಲ್ಲಿ ಹವಾ ಇಟ್ಟಿರೋ ಸುನೀಲನನ್ನ ಮುಂದಿಟ್ಟುಕೊಂಡು ರಾಜಕೀಯ ಕಲಿಗಳು ಜಮೀರ್ ಹಣಿಯಲು ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ರಾಜಕೀಯ ಪ್ರವೇಶಕ್ಕೆ ಸಜ್ಜಾದ ಕುಖ್ಯಾತ ರೌಡಿ ಸೈಲೆಂಟ್ ಸುನೀಲ: ಪಾತಕ ಲೋಕದಲ್ಲಿ ಹೀಗಿದೆ ಇವನ ಹೆಜ್ಜೆಗುರುತು

ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಜಮೀರ್‌ನ ರಾಜಕೀಯ ವೈರಿ ಮಾಜಿ ಕಾರ್ಪೋರೇಟರ್, ಜೆಡಿಎಸ್‌ ಮುಖಂಡ ಇಮ್ರಾನ್ ಪಾಷಾ ಜೊತೆ ಸೈಲೆಂಟ್ ಸುನೀಲ ಉತ್ತಮ ಸಂಬಂಧ ಹೊಂದಿದ್ದಾನೆ. ಹೀಗಾಗಿಯೇ ಈ ಸೈಲೆಂಟ್ ಸುನೀಲನ ಮೂಲಕವೇ ಜಮೀರ್ ಹಣಿಯಲು ರಾಜಕೀಯ ಪಟುಗಳು ಪ್ಲ್ಯಾನ್ ಮಾಡಿದ್ದಾರೆ ಎನ್ನುವ ಚರ್ಚೆ ಚಾಮರಾಜಪೇಟೆಯಲ್ಲಿ ಗುಲ್ ಎದ್ದಿದೆ.

ಅಂದಹಾಗೆ ಹೆಚ್ಚು ಸ್ಲಮ್‌ಗಳಿರೋ ಕ್ಷೇತ್ರವೆಂದ್ರೆ, ಅದು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ. ಇಲ್ಲಿನ ಸ್ಲಮ್‌ಗಳಲ್ಲಿ ಪ್ರಚಾರ ಮಾಡಲು ಕಷ್ಟ ಎನ್ನುವುದು ಹಲವರ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ, ಮುಸ್ಲಿಂ ಸಮುದಾಯ ಹೆಚ್ಚಿರುವ ಏರಿಯಾಗಳಲ್ಲಿ ಪ್ರಚಾರ ಕಷ್ಟ ಎನ್ನುವುದು ಗೊತ್ತೇ ಇದೆ. ಆದ್ರೆ, ರಾಜಕೀಯ ಎಂಟ್ರಿಗೆ ಆಸೆ ಇಟ್ಕೊಂಡಿರುವ ಸೈಲೆಂಟ್ ಸುನೀಲನಿಗೆ, ತಮಿಳು, ತೆಲುಗು ಭಾಷಿಕ ಸ್ಲಮ್‌ಗಳಲ್ಲಿ ಪ್ರಭಾವ ಹೆಚ್ಚಾಗಿದೆ..K.R ಮಾರ್ಕೆಟ್, ಕಲಾಸಿಪಾಳ್ಯದಲ್ಲಿ ಸುನೀಲ್ ಹವಾ ಇಟ್ಟಿದ್ದು, ಹಫ್ತಾ ವಸೂಲಿ ಸೇರಿದಂತೆ ಬಡ್ಡಿ ವ್ಯವಹಾರ ಸೇರಿ ಸ್ಲಮ್ ಏರಿಯಾಗಳಲ್ಲಿ ಸುನೀಲ್ ಹೆಚ್ಚಿನ ಕಂಟ್ರೋಲ್ ಇದೆ. ಹೀಗಾಗಿ ಚಾಮರಾಜಪೇಟೆ ಮೇಲೆ ಕಣ್ಣಿಟ್ಟಿರುವ ಸೈಲೆಂಟ್ ಸುನೀಲ್, ತನ್ನ ಹವಾನ ರಾಜಕೀಯ ಶಕ್ತಿ ಮಾಡಿಕೊಳ್ಳುವ ತಂತ್ರ ಮಾಡಿದ್ದಾನೆ ಎನ್ನಲಾಗಿದೆ. ಇದೇ ಸುನೀಲನ ರಾಜಕೀಯ ಆಸೆಗೆ, ನೀರೆರೆದು ಜಮೀರ್ ಹಣಿಯಲು ರಾಜಕೀಯ ಕಲಿಗಳು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿಯೇ ಸೈಲೆಂಟ್ ಸುನೀಲ ಇಮ್ರಾನ್ ಪಾಷಾ ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಹೇಳಿ, ಕೇಳಿ ಇಮ್ರಾನ್- ಜಮೀರ್ ರಾಜಕೀಯ ವೈರಿಗಳಾಗಿದ್ದು, ಜಮೀರ್‌ ಸೋಲಿಗೆ ಸ್ಕೆಚ್ ಹಾಕಿದ್ದಾರೆ ಎನ್ನಲಾಗ್ತಿದೆ. ಇಮ್ರಾನ್, ಸುನೀಲ್ ಮೂಲಕ ರಾಜಕೀಯ ಕಟ್ಟಾಳುಗಳು ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Rowdy Sheeters Politics : ಸಮಾಜ ಸೇವೆ ಮಂತ್ರ ಜಪಿಸಿದ ಕುಖ್ಯಾತ ರೌಡಿ ಬೆತ್ತನಗೆರೆ ಶಂಕರ ಬಿಜೆಪಿ ಬಾಗಿಲಲ್ಲಿ…!

ಜಮೀರ್ ವಿರುದ್ಧ ತೊಡೆ ತಟ್ತಾರಾ ಇಮ್ರಾನ್-ಸುನೀಲ್?

ಜಮೀರ್ ಹಣಿಯಲು ಇಮ್ರಾನ್ ಸುನೀಲ್ ಜೋಡಿ ತೊಡೆ ತಟ್ಟಲು ಒಂದಾಗಿದ್ದಾರೆ ಎನ್ನಲಾಗ್ತಿದೆ. ಯಾಕಂದ್ರೆ, ಇಲ್ಲಿ ಸುನೀಲನಿಗೂ ರಾಜಕೀಯ ಬೇಕಿದೆ, ಇಮ್ರಾನ್ ಪಾಷಾಗೆ ಸುನಿಲ್‌ ಮೇಲೆ ಋಣವಿದೆ. ಆ ಋಣ ಏನಂದ್ರೆ, ಇದೇ ಸೈಲೆಂಟ್ ಸುನೀಲ, ಇಮ್ರಾನ್‌ಗಾಗಿ ಡಬಲ್ ಮರ್ಡರ್ ಮಾಡಿದ್ದ ಅನ್ನೋ ಆರೋಪವಿದೆ. ಹೀಗಾಗಿ, ಸುನೀಲನನ್ನ ಕಣಕ್ಕಿಳಿಸಿ ಋಣ ತೀರಿಸಲು ಇಮ್ರಾನ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಸುನೀಲ್‌ಗೆ ಬೆಂಬಲ ನೀಡಲು ಇಮ್ರಾನ್ ರೆಡಿ ಅಂತಾನೂ ಹೇಳಿದ್ದಾರಂತೆ. ಈ ಮೂಲಕ ಸುನೀಲ್ ಬಳಸಿಕೊಂಡು ಜಮೀರ್ ಸೋಲಿಸಲು ರಣತಂತ್ರ ರೂಪಿಸಿದ್ದಾರೆ ಎನ್ನಲಾಗ್ತಿದೆ.

ಜಮೀರ್ ಹಣಿಯಲು ಸುನೀಲನೇ ಗಾಳ ಆಗಿರೋದು ಯಾಕಂದ್ರೆ, ಚಾಮರಾಜಪೇಟೆಯಲ್ಲಿ ಅಲ್ತಾಫ್-ಆರಿಫ್ ಪ್ರಭಾವವಿದೆ. ಅಲ್ತಾಫ್-ಆರಿಫ್ ಗಲಾಟೆಯ ಲಾಭವನ್ನ ಜಮೀರ್ ಪಡೀತಿದ್ದಾರಂತೆ. ಆರಿಫ್ ಪುತ್ರ ಇಮ್ರಾನ್ ಪಾಷಾಗೆ ಚಾಮರಾಜಪೇಟೆಯಲ್ಲಿ ಬೆಳೆಯೋ ಆಸೆ ಇದೆ. ಆದ್ರೆ, ಅಲ್ತಾಫ್ ಈಗ ಜಮೀರ್ ಅಹ್ಮದ್ ಪಾಳಯದಲ್ಲಿ ಇರೋದ್ರಿಂದ ಇಮ್ರಾನ್ ಆಸೆ ಕೈಗೂಡ್ತಿಲ್ಲ ಎನ್ನಲಾಗ್ತಿದೆ. ಇದೀಗ ಸುನೀಲ್ ಎಂಟ್ರಿಯಾದ್ರೆ ಅಲ್ತಾಫ್, ಜಮೀರ್‌ರನ್ನ ಬಿಟ್ಟು ಬಿಡಬಹುದು? ಆಗ ಜಮೀರ್ ಒಬ್ಬಂಟಿಯಾಗಿ ಚಾಮರಾಜಪೇಟೆಯಲ್ಲಿ ಸೋಲ್ತಾರೆ ಅನ್ನೋ ಲೆಕ್ಕಾಚಾರ ಅಡಗಿದೆಯಂತೆ.

ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೋ ಇಲ್ವೋ, ಆದ್ರೆ, ಸುನೀಲನ ಚಾಮರಾಜಪೇಟೆ ಸಂಚಾರದ ಹಿಂದೆ, ಜಮೀರ್ ಹಣಿಯುವ ಮಸಲತ್ತಿನ ಹಿಂದೆ, ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರ ಸ್ಕೆಚ್‌ ಕೂಡ ಅಡಗಿದೆ ಅಂತಾ ಹೇಳಾಲಾಗ್ತಿದೆ. ಆದ್ರೆ, ಸೈಲೆಂಟ್‌ ಸುನೀಲನನ್ನ ಬಿಜೆಪಿಗೆ ಸೇರಿಸಿಕೊಳ್ಳಲ್ಲ ಅಂತಾ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಡ್ಡಿ ಮುರಿದಂತೆ ಹೇಳಿದ್ದಾರೆ. ಹೀಗಾಗಿ ಸುನೀಲ ಪಕ್ಷೇತರನಾಗಿ ಕಣಕ್ಕಿಳಿತಾನಾ ಅನ್ನೋದು ಕುತೂಹಲ ಮೂಡಿಸಿದೆ. ಅದೇನೇ ಇದ್ರೂ, ಇದೆಲ್ಲವನ್ನ ಸೈಲೆಂಟ್‌ ಆಗಿ ನೋಡ್ತಿರೋ ಚಾಮರಾಜಪೇಟೆ ಮತದಾರ, ಅದ್ಯಾರಿಗೆ ಮತ ಹಾಕ್ತಾನೆ ಅನ್ನೋದು ಯಕ್ಷಪ್ರಶ್ನೆಯಾಗಿದೆ.

ವರದಿ: – ರಾಚಪ್ಪ ಟಿವಿ9 ಬೆಂಗಳೂರು  

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ