Rowdy Sheeters Politics : ಸಮಾಜ ಸೇವೆ ಮಂತ್ರ ಜಪಿಸಿದ ಕುಖ್ಯಾತ ರೌಡಿ ಬೆತ್ತನಗೆರೆ ಶಂಕರ ಬಿಜೆಪಿ ಬಾಗಿಲಲ್ಲಿ…!

ಆತ ಒಂದು ಕಾಲದಲ್ಲಿ ಒಂದು ಊರಿನ ರಕ್ತ ಚರಿತ್ರೆಗೆ ಕಾರಣವಾಗಿದ್ದ, ಕಳೆದ ಐದಾರೂ ವರ್ಷಗಳಿಂದ ಸಾಮಾಜಿಕ ಮುನ್ನೆಲೆಗೆ ಬಂದಿರಲಿಲ್ಲ, ಆದರೆ ಇದೀಗ ತನಗಿದ್ದ ಹೆಸರನ್ನೇ ಬದಲಾಯಿಸಿಕೊಂಡು ಬಿಜೆಪಿ ಪಕ್ಷ ಸೇರಿಕೊಂಡು ಅಧಿಕೃತ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೆ ಪ್ಲಾನ್ ಮಾಡಿದ್ದಾನೆ‌. ಅಷ್ಟಕ್ಕೂ ಯಾರು ಈತ? ಆತನ ಬ್ಯಾಗ್ರೌಂಡ್ ಏನು? ಎನ್ನುವ ಕಂಪ್ಲೀಟ್ ಮಾಹಿತಿ ಇಲ್ಲಿದೆ.

Rowdy Sheeters Politics : ಸಮಾಜ ಸೇವೆ ಮಂತ್ರ ಜಪಿಸಿದ ಕುಖ್ಯಾತ ರೌಡಿ ಬೆತ್ತನಗೆರೆ ಶಂಕರ ಬಿಜೆಪಿ ಬಾಗಿಲಲ್ಲಿ...!
Rowdy Sheeters Bettangere Shankara
Follow us
| Updated By: ರಮೇಶ್ ಬಿ. ಜವಳಗೇರಾ

Updated on: Nov 29, 2022 | 11:13 PM

ಬೆಂಗಳೂರು: ಹಾಲು ಕುಡಿದ ಮಕ್ಕಳೇ ಬದುಕುವುದು ಕಷ್ಟ.. ಇನ್ನು ವಿಷ ಕುಡಿದವರು ಬದುಕ್ತಾರಾ ಎನ್ನುವ ಮಾತಿದೆ. ಹಾಲು ಕುಡಿದವರು ಬದುಕ್ತಾರೋ ಇಲ್ವೋ, ಆದ್ರೆ, ರಕ್ತ ಹರಿಸಿದವರು ಮಾತ್ರ ರಾಜರಂತೆ ಬದುಕುತ್ತಿದ್ದಾರೆ. ಯಾಕಂದ್ರೆ, ರೌಡಿಗಳೆಲ್ಲ ರಾಜಕೀಯ (Karnataka Politics) ಅಖಾಡಕ್ಕೆ ಧುಮುಕ್ತಿದ್ದಾರೆ. ಅಡಗಿ ಕೂತಿದ್ದವರು ದರ್ಬಾರ್ ಶುರುಮಾಡ್ತಿದ್ದಾರೆ. ಹೌದು.. ಇತ್ತೀಚೆಗೆ ನಟೋರಿಯಸ್ ರೌಡಿ ಸೈಲೆಂಟ್‌ ಸುನೀಲ ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದ ವಿಚಾರ ಸಾಕಷ್ಟು ಚರ್ಚೆಯಲ್ಲಿ ಇರುವಾಗಲೇ ನೆಲಮಂಗಲದ ನಟೋರಿಯಸ್ ರೌಡಿ ಶೀಟರ್ ಬೆತ್ತನಗೆರೆ ಶಂಕರ ಬಿಜೆಪಿ(BJP) ಪಕ್ಷ ಸೇರ್ಪಡೆಯಾಗುವ ಸುದ್ದಿ ರಾಜಕೀಯ ರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ರಾಜಕೀಯ ಪ್ರವೇಶಕ್ಕೆ ಸಜ್ಜಾದ ಕುಖ್ಯಾತ ರೌಡಿ ಸೈಲೆಂಟ್ ಸುನೀಲ: ಪಾತಕ ಲೋಕದಲ್ಲಿ ಹೀಗಿದೆ ಇವನ ಹೆಜ್ಜೆಗುರುತು

2005ರಲ್ಲಿ ರೌಡಿಸಂ‌ಗೆ ಇಳಿದಿದ್ದ ಶಂಕರ ಕಳೆದ ಐದು ವರ್ಷಗಳಿಂದ ಸದ್ದುಗದ್ದಲ್ಲದೇ ಸುಮ್ಮನಿದ್ದ. ನೆಲಮಂಗಲದಿಂದ ಪ್ರಕರಣವೊಂದರಲ್ಲಿ ಗಡಿಪಾರು ಆಗಿದ್ದ ಶಂಕರ ಸದ್ಯ ಮೈಸೂರಿನ ಹೆಚ್‌ ಡಿ ಕೋಟೆಯಲ್ಲಿ ಹದಿನೈದು ಎಕರೆ ಜಮೀನು ಖರೀದಿ ಮಾಡಿ ಕೃಷಿ ಕಾಯಕ ಮಾಡಿಕೊಂಡಿದ್ದಾನೆ. ಬೆತ್ತನಗೆರೆ ಶಂಕರ ಅಂತಿದ್ದ ತನ್ನ ಹೆಸರನ್ನು ನಲ್ಲೂರು ಶಂಕರ್‌ಗೌಡ ಎಂದು ಬದಲಾಯಿಸಿಕೊಂಡು ಸಮಾಜ ಸೇವೆ ಹೆಸರಿನಲ್ಲಿ ಬಿಜೆಪಿ ಪಕ್ಷ ಸೇರ್ಪಡೆಗೆ ಮುಂದಾಗಿದ್ದಾನೆ. ಅಲ್ಲದೆ ಬಿಜೆಪಿ ನಾಯಕರುಗಳಾದ ಬಿ‌ಎಸ್ ಯಡಿಯೂರಪ್ಪ, ವಿಜಯೇಂದ್ರ, ಎಸ್‌ಟಿ ಸೋಮಶೇಖರ್, ಬಿಸಿ ಪಾಟೀಲ್ ಸೇರಿದಂತೆ ಹಲವು ನಾಯಕರುಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದು, ಮುಂದಿನ ರಾಜಕೀಯ ಭವಿಷ್ಯವನ್ನ ಆರಂಭಿಸಿದ್ದಾರೆ ಎನ್ನಲಾಗಿದೆ.

ನೆಲಮಂಗಲ ರಕ್ತ ಚರಿತ್ರೆ ಆರಂಭಿಸಿದ್ದೇ ಬೆತ್ತನಗೆರೆ ಶಂಕರ

ಹೌದು… ಸದ್ಯ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಶಂಕರನ ಮೇಲೆ ಹಲವು ಪ್ರಕರಣಗಳಿರುವುದು ಬೆಳಕಿಗೆ ಬಂದಿದೆ. ಮಾದನಾಯಕನಹಳ್ಳಿ, ನೆಲಮಂಗಲ ಠಾಣೆಗಳಲ್ಲಿ ರೌಡಿ ಶೀಟರ್ ಆಗಿರುವ ಶಂಕರ ನೆಲಮಂಗಲದ ರಕ್ತಚರಿತ್ರೆಯನ್ನ ಆರಂಭಿಸಿದ್ದು ಎಂದರೇ ತಪ್ಪಾಗಲಾರದು. ತನ್ನ ಸ್ವಂತ ಊರು ಬೆತ್ತನಗೆರೆ ಹಾಲಿನ ಡೈರಿ ಚುನಾವಣೆಯಲ್ಲಿ ಶುರುವಾದ ರಾಜಕೀಯ ವೈಷಮ್ಯ ಚುನಾವಣೆಯಲ್ಲಿ ಗೆದ್ದಿದ್ದ ಬಾಳೆಕಾಯಿ ಬಸವರಾಜು ಅಲಿಯಾಸ್ ಬಸವಯ್ಯ ಕೊಲೆಯಲ್ಲಿ ಅಂತ್ಯವಾಗಿತ್ತು. ಬಸವಯ್ಯ ಕೊಲೆಯಿಂದ ಶುರುವಾದ ಶಂಕರನ‌ ರೌಡಿ ಆಕ್ಟಿವಿಟೀಸ್, ಈ ಕೊಲೆಯಲ್ಲಿ ಸಾಕ್ಷಿ ಹೇಳಬೇಕಿದ್ದ ವಕೀಲ ದೇವರಾಜು, ಕೃಷ್ಣಮೂರ್ತಿಯನ್ನ ಕೊಲೆಗೈದಿದ್ದ. ನಂತರ ಮೃತ ದೇವರಾಜು ತಂದೆ ಬೈಲಪ್ಪನನ್ನ‌ ಕೊಲೆ ಮಾಡಿದ್ದ.

ಇದನ್ನೂ ಓದಿ: ವಿವಾದದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿಯಿಂದ ಮಹತ್ವದ ನಿರ್ಧಾರ: ಸೈಲೆಂಟ್ ಸುನೀಲನ ರಾಜಕೀಯ ಕನಸಿಗೆ ಆರಂಭದಲ್ಲೇ ವಿಘ್ನ…!

ತದನಂತರ ಹಲವು ದರೋಡೆ, ಅಪಹರಣ, ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ಹ್ಯಾಡಾಳು ದೇವೆಂದ್ರಪ್ಪನನ್ನ ಸಹ ಭೀಕರವಾಗಿ ಕೊಲೆಗೈಯುತ್ತಾನೆ. ಇದೇ ದ್ವೇಷಕ್ಕೆ ಬೆಮೆಲ್‌ ಕೃಷ್ಣಪ್ಪನನ್ನ ಬೆತ್ತನಗೆರೆ ಸೀನಾ ಭೀಕರವಾಗಿ ಕೊಲೆಗೈಯುತ್ತಾನೆ. ಹೀಗೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದ್ದರು ಸಹ ಅನೇಕ‌ ಪ್ರಕರಣಗಳಲ್ಲಿ ಸರಿಯಾದ ಸಾಕ್ಷ ಆಧಾರಗಳಿಲ್ಲದೆ ಖುಲಾಸೆಯಾಗಿದ್ದು ಕೆಲವು ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿ ಬಾಕಿ ಇವೆ.

ಇನ್ನೂ ಈ ಹಿಂದೆ ವಂಶಿ ಕೃಷ್ಣ ಅವರು ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿದ್ದಾಗ ಶಂಕರನ ರೌಡಿ ಪರೇಡ್ ನಡೆಸಿ ವಾರ್ನಿಂಗ್ ನೀಡಿದ್ದರು. ಬೆತ್ತನಗೆರೆ ಶಂಕರನ‌ ರಾಜಕೀಯ ಎಂಟ್ರಿ ವಿಚಾರದಲ್ಲಿ ಸಚಿವ ಸುಧಾಕರ್ ಮಾತನಾಡಿ, ಆತ ಯಾರು ಎಂದೇ ನನಗೆ ಗೊತ್ತಿಲ್ಲ, ಪಕ್ಷದಲ್ಲಿ ಕ್ರಿಮಿನಲ್ ಬ್ಯಾಗ್ರೌಂಡ್ ಇರೋರಿಗೆ ಅವಕಾಶ ಇಲ್ಲ ಎಂದರು.

ಒಟ್ಟಾರೆ ರೌಡಿ ಶೀಟರ್‌ಗಳ ರಾಜಕೀಯ ಎಂಟ್ರಿ ವಿಚಾರ ಹಲವು ಚರ್ಚೆಗಳಿಗೆ ಕಾರಣವಾಗಿದ್ದು, ಕಾಂಗ್ರೆಸ್ಸಿಗರಿಗೆ ಇದೊಂದು ಚುನಾವಣಾ ಅಸ್ತ್ರವಾಗಿರುವು ಸತ್ಯ. ಇನ್ನೂ ಎಲೆಕ್ಷನ್​ ಸಂದರ್ಭದಲ್ಲಿ ಅದೆಷ್ಟು ಜನ ರೌಡಿ ಶೀಟರ್ಸ್ ರಾಜಕೀಯಕ್ಕೆ ಬರ್ತಾರೆ, ಅವರಿಗೆಲ್ಲ ಯಾವ್ಯಾವ ಪಕ್ಷದವರು ಮಣೆ ಹಾಕ್ತಾರೆ ಅಂತಾ ಕಾದು ನೋಡಬೇಕಿದೆ.

ವರದಿ: ವಿನಾಯಕ್ ಗುರವ್ ಟಿವಿ9 ನೆಲಮಂಗಲ

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ