
ಭಾರಿ ಪ್ರತಿಭಾವಂತ ನಟನಾಗಿದ್ದ ಸುಶಾಂತ್ ಸಿಂಗ್ ರಜಪೂತ ಮರಣಹೊಂದಿ 5 ತಿಂಗಳು ಕಳೆದರೂ ಅವರು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ನಿಮಗೆ ಪ್ರತಿದಿನ, ಟಿವಿಗಳಲ್ಲಿ, ರೇಡಿಯೋಗಳಲ್ಲಿ ಪ್ರಸಾರವಾಗುವ ಮತ್ತು ಕೇಳಿಸಿಕೊಳ್ಳುವ ನೂರಾರು ಬ್ರ್ಯಾಂಡ್ಗಳ ಜಾಹಿರಾತುಗಳು ಗೊತ್ತಲ್ಲ? ಇತ್ತೀಚಿನ ದಿನಗಳಲ್ಲಿ ಜಾಹೀರಾತುಗಳ ಶೈಲಿ ಬದಲಾಗಿದೆ. ಫನ್, ವಿಡಂಬನೆ, ಸೆಲಿಬ್ರಿಟಿಗಳ ಕಾಲೆಳೆಯುವ ಅಂಶಗಳೇ ಈಗಿನ ಜಾಹಿರಾತುಗಳ ಪ್ರಮುಖ ಅಂಶ ಮತ್ತು ಸೊಬಗು ಕೂಡ ಆಗಿದೆ. ಆದರೆ, ಸೆಲಿಬ್ರಿಟಿ ನಟ-ನಟಿಯರು ಅಥವಾ ಮಾಡೆಲ್ಗಳನ್ನು ಬಳಸಿ ತಯಾರಾಗುವ ಈ ಜಾಹೀರಾತುಗಳು ಕೆಲವು ಬಾರಿ ವಿವಾದಗಳನ್ನೂ ಹುಟ್ಟಿಹಾಕುತ್ತವೆ. ಕೆಲವು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪಕ್ಕೆ ಗುರಿಯಾದರೆ ಮತ್ತೆ ಕೆಲವು ಯಾವುದೋ ಒಬ್ಬ ಸೆಲಿಬ್ರಿಟಿಯನ್ನು ಅಪಹಾಸ್ಯ ಮಾಡಿರುವ ಕಾರಣಕ್ಕೆ ಬೆಂಬಲಿಗರಿಂದ ಆಕ್ರೋಶಕ್ಕೊಳಗಾಗುತ್ತವೆ.
ಇತ್ತೀಚಿನ ಬಿಂಗೊ ಮ್ಯಾಡ್ ಌಂಗಲ್ ಚಿಪ್ಸ್ನ ಜಾಹೀರಾತು ನೀವು ನೋಡಿರಬಹುದು. ಇದರಲ್ಲಿ ಕೆಲವು ಹಿರಿಯರು ಒಂದು ಮನೆಯಲ್ಲಿ ಜೊತೆಯಾಗಿ ಹರಟುತ್ತಿರುವ ಅಥವಾ ಅವರೆಲ್ಲ ಭಾಗಿಯಾಗಿರುವ ಪಾರ್ಟಿಯಲ್ಲಿ ಪ್ರಸಿದ್ಧ ಬಾಲಿವುಡ್ ನಟ ರಣವೀರ್ ಸಿಂಗ್ ಪ್ರತ್ಯಕ್ಷರಾಗುತ್ತಾರೆ. ಅವರನ್ನು ಸುತ್ತುವರಿಯುವ ಕೆಲವು ಅಂಕಲ್ ಮತ್ತು ಆಂಟಿಗಳು, ‘ಬೇಟಾ, ಭವಿಷ್ಯದ ಬಗ್ಗೆ ಏನು ಯೋಚನೆ ಮಾಡಿರುವೆ,’ ಎಂದು ಕೇಳುತ್ತಾರೆ. ಆಗ ರಣವೀರ್ ಒಂದು ಬಿಂಗೋ ಚಿಪ್ಸ್ ಬಾಯಲ್ಲಿ ಹಾಕಿಕೊಂಡು, ಭೌತಶಾಸ್ರಕ್ಕೆ ಸಂಬಂಧಿಸಿದ ಫೊಟಾನ್, ಅಲ್ಗೊರಿದಮ್, ವೈ ಈಸ್ ಈಕ್ವಲ್ ಟು ಎಮ್ಸಿ ಸ್ಕೇರ್, ಪ್ಯಾರಾಡಾಕ್ಸ್ ಮೊದಲಾದ ಹತ್ತಾರು ಪದಗಳನ್ನು ಒಂದೇ ಉಸುರಿನಲ್ಲಿ ಹೇಳಿಬಿಡುತ್ತಾರೆ. ಅದನ್ನು ಕೇಳಿದವರಿಗೆ ಏನೊಂದೂ ಆರ್ಥವಾಗದೆ ಪೆಕುರು ಮುಖ ಮಾಡಿಕೊಂಡು ಅಲ್ಲಿಂದ ನಿರ್ಗಮಿಸುತ್ತಾರೆ.
ಆದರೆ, ರಣವೀರ್ ಅವರ ಈ ಜಾಹೀರಾತು ದಿವಂಗತ ಸುಶಾಂತ್ ಬೆಂಬಲಿಗರನ್ನು ಕೆರಳಿಸಿದೆ. ಫಿಸಿಕ್ಸ್ ಸುಶಾಂತ್ ಅವರ ನೆಚ್ಚಿನ ವಿಷಯವಾಗಿತ್ತು, ಅವರನ್ನು ಅಣಕಿಸಲೆಂದೇ ಈ ಜಾಹೀರಾತನ್ನು ತಯಾರಿಸಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದರಿ ಜಾಹೀರಾತು ಟಿವಿಗಳಲ್ಲಿ ಕಾಣಿಸಿಕೊಳ್ಳದಂತೆ ತಡೆಯಬೇಕು ಅಂತ ಸಂಬಂಧಪಟ್ಟವರನ್ನು ಅವರು ಆಗ್ರಹಿಸಿದ್ದಾರೆ.
Published On - 5:10 pm, Fri, 20 November 20