Chanakya Niti : ನಿಮ್ಮಲ್ಲಿ ಈ ಗುಣಗಳಿದ್ದರೆ ಕುಟುಂಬದಲ್ಲಿ ದುಃಖಕ್ಕೆ ಜಾಗನೇ ಇಲ್ಲ ಬಿಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 18, 2024 | 10:22 AM

ಪ್ರತಿಯೊಬ್ಬರು ಜೀವನದಲ್ಲಿ ಕುಟುಂಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ಕೆಲವು ಕುಟುಂಬದಲ್ಲಿ ಸಂತೋಷ ಎನ್ನುವುದೇ ದೂರದ ಮಾತಾಗಿರುತ್ತದೆ. ಕೆಲವರ ಕುಟುಂಬದಲ್ಲಿ ಯಾವಾಗ ನೋಡಿದರೂ,ಕಷ್ಟ ನೋವುಗಳಿಂದ ನೆಮ್ಮದಿ ಅನ್ನೋದೇ ಇರುವುದಿಲ್ಲ. ಹೀಗಾಗಿ ಮಹಾನ್ ಆಚಾರ್ಯ ಚಾಣಕ್ಯ ಕುಟುಂಬದಲ್ಲಿ ಸದಾ ಸಂತೋಷ ನೆಲೆಸಲು ಈ ಕೆಲವು ಸಲಹೆಗಳನ್ನು ತಿಳಿಸಿದ್ದಾರೆ. ಅದಲ್ಲದೇ, ಇಂತಹ ಗುಣವಿರುವ ವ್ಯಕ್ತಿಗಳು ಕುಟುಂಬದಲ್ಲಿದ್ದರೆ ಖುಷಿಯೇ ನೆಲೆಸಿರುತ್ತದೆ.

Chanakya Niti : ನಿಮ್ಮಲ್ಲಿ ಈ ಗುಣಗಳಿದ್ದರೆ ಕುಟುಂಬದಲ್ಲಿ ದುಃಖಕ್ಕೆ ಜಾಗನೇ ಇಲ್ಲ ಬಿಡಿ
ಚಾಣಕ್ಯ
Follow us on

ಸಂತೋಷವೆನ್ನುವುದು ಯಾರಿಗೆ ತಾನೇ ಬೇಡ ಹೇಳಿ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಖುಷಿಯಾಗಿರಬೇಕೆಂದು ಬಯಸುತ್ತಾರೆ. ಆದರೆ ಕೆಲವರ ಸಂಸಾರದಲ್ಲಿ ಯಾವಾಗಲೂ ಜಗಳವೇ ತುಂಬಿರುತ್ತದೆ. ಕೆಲವರಂತೂ ನೋವು ಕಷ್ಟಗಳ ಜೊತೆಯಲ್ಲೇ ಕೈ ತೊಳೆಯುತ್ತಿರುತ್ತಾರೆ. ಅಂತಹ ವ್ಯಕ್ತಿಗಳು ತಮ್ಮ ಜೀವನದಲ್ಲಿ ಖುಷಿಯನ್ನು ಕಾಣಬೇಕಾದರೆ ಚಾಣಕ್ಯ ಹೇಳುವ ಕೆಲವು ಸಲಹೆಗಳನ್ನು ಪಾಲಿಸಿದರೆ ಬದುಕಿನಲ್ಲಿ ಒಂದಷ್ಟು ಬದಲಾವಣೆಗಳು ಆಗುವುದು ಖಂಡಿತ.

* ಬುದ್ಧಿವಂತ ಮಕ್ಕಳು ಹಾಗೂ ಮೃದು ಸ್ವಭಾವದ ಪತ್ನಿ : ಈ ಗುಣವನ್ನು ಹೊಂದಿರುವವರು ಕುಟುಂಬದಲ್ಲಿ ಇದ್ದು ಬಿಟ್ಟರೆ ಕಷ್ಟಗಳು ಬಂದಾಗ ಅದನ್ನು ಮೆಟ್ಟಿ ನಿಲ್ಲಬಹುದು. ಹೀಗಾಗಿ ಮಕ್ಕಳು ಯಾವಾಗಲೂ ಬುದ್ಧಿವಂತರಾಗಿರಬೇಕು. ಹೀಗಿದ್ದಾಗ ಕುಟುಂಬದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಬುದ್ಧಿವಂತ ಮಕ್ಕಳು ಕೂಡ ಸಹಾಯ ಮಾಡುತ್ತಾರೆ. ಮನೆಯ ಹಿರಿಯ ಸದಸ್ಯರೊಂದಿಗೆ ಸೇರಿ ಎಲ್ಲಾ ಕೆಲಸಗಳನ್ನು ಜವಾಬ್ದಾರಿಯಿಂದ ಮಾಡಿ ಮುಗಿಸುತ್ತಾರೆ. ಮೃದು ಸ್ವಭಾವದ ಪತ್ನಿಯಿದ್ದರೆ ಸನ್ನಿವೇಶವನ್ನು ಬಹಳ ಜಾಗರೂಕತೆಯಿಂದ ನಿಭಾಯಿಸಿಕೊಂಡು ಹೋಗುವ ಮೂಲಕ ಕುಟುಂಬದಲ್ಲಿ ಸಂತೋಷವು ತುಂಬಿರುವಂತೆ ನೋಡಿಕೊಳ್ಳುತ್ತಾಳೆ.

* ಅತಿಥಿ ಸತ್ಕಾರವಿರಲಿ : ಅತಿಥಿ ಸತ್ಕಾರದ ದುರಾಸೆಯಿಂದ ಮಾಡದೆ ಗೌರವ ಮತ್ತು ಪ್ರೀತಿಯಿಂದ ಮಾಡುವುದನ್ನು ಮೊದಲು ಕಲಿಯಬೇಕು ಹೀಗೆ ಮಾಡಿದರೆ ದೇವರ ಆಶೀರ್ವಾದ ಸದಾ ನಮ್ಮ ಮೇಲೆ ಇರುತ್ತದೆ. ಇದು ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುವುದಲ್ಲದೆ, ಕುಟುಂಬದ ಇನ್ನಿತ್ತರ ಸದಸ್ಯರೊಂದದಿಗೆ ಒಳ್ಳೆಯ ಬಾಂಧವ್ಯ ಹೊಂದಲು ಸಾಧ್ಯ ಎಂದಿದ್ದಾನೆ ಚಾಣಕ್ಯ.

* ಕಷ್ಟ ಪಟ್ಟು ದುಡಿ, ಹಣವನ್ನು ಉಳಿಸಿ : ಚಾಣಕ್ಯನ ಪ್ರಕಾರ ನಾವು ಯಾವಾಗ ಕಷ್ಟ ಪಟ್ಟು ಕೆಲಸ ಮಾಡುತ್ತೇವೆಯೋ, ಆಗ ಮನೆಯಲ್ಲಿ ಸಂಪತ್ತು ಹಾಗೂ ಸಮೃದ್ಧಿ ವೃದ್ಧಿಯಾಗಲು ಸಾಧ್ಯ. ಆರ್ಥಿಕ ಸಮಸ್ಯೆ ಇಲ್ಲದ ಮನೆಯಲ್ಲಿ ಸಹಜವಾಗಿ ಸಂತೋಷ ತುಂಬಿರುತ್ತದೆ. ಅದಲ್ಲದೇ ಕುಟುಂಬದಲ್ಲಿ ಕಷ್ಟ ಪಟ್ಟು ದುಡಿಯುವುದರೊಂದಿಗೆ ಹಣವನ್ನು ಉಳಿತಾಯ ಮಾಡುವ ಗುಣವುಳ್ಳ ವ್ಯಕ್ತಿಗಳು ಇರಬೇಕು. ಹೀಗಿದ್ದಾಗ ಮಾತ್ರ ಕುಟುಂಬ ನಿರ್ವಹಣೆಯೊಂದಿಗೆ ಒಳ್ಳೆಯ ಜೀವನವನ್ನು ನಡೆಸೋದಕ್ಕೆ ಸಾಧ್ಯ.

* ಮಾನವೀಯತೆ ಇರಲಿ : ಜೀವನದಲ್ಲಿ ಮಾನವೀಯತೆ ಬಹಳ ಮುಖ್ಯವಾಗಿದ್ದು, ಇತರರ ಬಗ್ಗೆ ದಯೆ ಮತ್ತು ಮಾನವೀಯತೆಯನ್ನು ತೋರಿಸುವವನು ಜೀವನದಲ್ಲಿ ಸಂತೋಷ ವಾಗಿರಲು ಸಾಧ್ಯ. ಅದಲ್ಲದೇ, ನಮ್ಮ ಹಿರಿಯರು, ತಂದೆ-ತಾಯಿ, ಗುರುಗಳನ್ನು ಗೌರವಿಸುವ ಗುಣ ನಮ್ಮಲ್ಲಿದ್ದರೆ ಜೀವನದುದ್ದಕ್ಕೂ ಸಂತೋಷ ನೆಮ್ಮದಿಯು ಸಿಗುತ್ತದೆ.

* ಋಣಾತ್ಮಕತೆ ಭಾವನೆ ಇರದಿರಲಿ : ಚಾಣಕ್ಯನ ಪ್ರಕಾರ ಯಾವ ವ್ಯಕ್ತಿಯು ನಿರ್ಗತಿಕರಿಗೆ ದಾನ ಮಾಡುವುದಿಲ್ಲವೋ, ಒಳ್ಳೆಯ ಜನರ ಸಹವಾಸ ಮಾಡುವುದಿಲ್ಲವೋ ಆತನ ಯೋಚನೆಗಳು ಕೆಟ್ಟದಾಗಿಯೇ ಇರುತ್ತದೆ. ಈ ಋಣಾತ್ಮಕ ಅಂಶವು ಹೆಚ್ಚಾಗುತ್ತಾ ಹೋದರೆ ಕೋಪ, ಜಗಳ ದುಪ್ಪಟ್ಟಾಗಿ ಇದರಿಂದ ಕುಟುಂಬದ ಸಂತೋಷವೇ ಹಾಳಾಗುತ್ತದೆ.

* ದಾನ ಮಾಡುವ ಪ್ರವೃತ್ತಿಯಿರಲಿ : ಮನುಷ್ಯನಿಗೆ ಇರಬೇಕಾದ ಗುಣಗಳಲ್ಲಿ ದಾನ ಮಾಡುವ ಗುಣವು ಕೂಡ ಒಂದು. ಕೇವಲ ಹಣ ಸಂಪಾದನೆ ಮಾಡಿ ರಾಶಿ ರಾಶಿ ಹಣ ಕೂಡಿಟ್ಟರೆ ಯಾವುದೇ ಪ್ರಯೋಜನವಿಲ್ಲ. ಇದರಿಂದ ಚಿಂತೆಯೇ ಹೆಚ್ಚು. ಹೀಗಾಗಿ ಅವಶ್ಯಕತೆ ಇರುವವರಿಗೆ ಕೈಲಾಗದವರಿಗೆ ನೀಡಿದರೆ ಇದರಿಂದ ಖುಷಿ ದೊರೆಯುತ್ತದೆ ಎನ್ನುತ್ತಾನೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ