Ganesh Chaturthi 2025: ಮನೆಯಲ್ಲಿ ಗಣೇಶ ಮೂರ್ತಿಯನ್ನು ತಯಾರಿಸುವ ವೇಳೆ ಪಾಲಿಸಬೇಕಾದ ನಿಯಮಗಳಿವು
ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ದೇಶಾದ್ಯಂತ ಈ ಹಬ್ಬವನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಮನೆ ಮನೆಗಳಲ್ಲೂ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ನೀವು ಕೂಡ ನಿಮ್ಮ ಮನೆಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಿದ್ದರೆ ಈ ಬಾರಿಯ ಗಣೇಶ ಚತುರ್ಥಿಗೆ POP ಯಿಂದ ತಯಾರಿಸಿದಂತ ಗಣೇಶನ ಮೂರ್ತಿಯ ಬದಲು ಮನೆಯಲ್ಲಿಯೇ ತಯಾರಿಸಿದಂತಹ ಪರಿಸರ ಸ್ನೇಹಿ ಗಣಪನನ್ನು ಕೂರಿಸಿ. ಮನೆಯಲ್ಲಿಯೇ ಸುಲಭವಾಗಿ ಪರಿಸರ ಸ್ನೇಹಿ ಗಣಪನನ್ನು ಮಾಡುವುದೇಗೆ? ಮೂರ್ತಿ ಮಾಡುವಾಗ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ನಾಡಿನೆಲ್ಲೆಡೆ ಗಣೇಶ ಚತುರ್ಥಿ (Ganesh Chaturthi) ಹಬ್ಬದ ಸಂಭ್ರಮ ಈಗಾಗಲೇ ಶುರುವಾಗಿದೆ. ಪ್ರತಿ ವರ್ಷ ಈ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನದಂದು ಆಚರಿಸಲಾಗುತ್ತದೆ. ಈ ಹಬ್ಬದಂದು ಮನೆ ಮನೆಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಪೂಜಿಸುತ್ತಾರೆ. ನೀವು ಕೂಡ ಮನೆಯಲ್ಲಿ ವಿಘ್ನ ವಿನಾಯಕನನ್ನು ಕೂರಿಸುತ್ತೀರಾ, ಹಾಗಿದ್ದರೆ ಈ ಬಾರಿ ಮಾರುಕಟ್ಟೆಯಲ್ಲಿ ಸಿಗುವಂತಹ POP ನಂತಹ ವಸ್ತುಗಳಿಂದ ಮಾಡಲ್ಪಟ್ಟ ಗಣೇಶ ಮೂರ್ತಿಯನ್ನು ತರುವ ಬದಲು ಮನೆಯಲ್ಲಿಯೇ ಪರಿಸರ ಸ್ನೇಹಿ ಗಣಪನ (eco-friendly Ganesh) ಮೂರ್ತಿಯನ್ನು ತಯಾರಿಸಿ. POP ಅಂದರೆ ಪ್ಲಾಸ್ಟರ್ ಆಫ್ ಪ್ಯಾರಿಸ್ನಂತಹ ವಸ್ತುವಿನಿಂದ ತಯಾರಿಸಿದ ಗಣಪತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಿದರೆ ನಂತರ ಅದು ಕರಗುವುದಿಲ್ಲ, ಇದರಿಂದ ಪರಿಸರಕ್ಕೂ ಹಾನಿ. ಆದರ ಕಾರಣ ಮನೆಯಲ್ಲಿಯೇ ಈ ರೀತಿ ಪರಿಸರ ಸ್ನೇಹಿ ಗಣೇಶನನ್ನು ತಯಾರಿಸಿ. ಜೊತೆಗೆ ಮೂರ್ತಿಯನ್ನು ತಯಾರಿಸುವಾಗ ನೀವು ಒಂದಷ್ಟು ನಿಯಮಗಳನ್ನು ಸಹ ಪಾಲಿಸಬೇಕು. ಅದೇನೆಂಬುದನ್ನು ನೋಡೋಣ.
ಮನೆಯಲ್ಲಿಯೇ ತಯಾರಿಸಿ ಪರಿಸರಸ್ನೇಹಿ ಗಣಪ:
ಮಾರುಕಟ್ಟೆಯಲ್ಲಿ ಸಿಗುವಂತಹ POP ಗಣಪನ ವಿಗ್ರಹ ಪರಿಸರಕ್ಕೆ ಅಷ್ಟೊಂದು ಒಳ್ಳೆಯದಲ್ಲ. ಆದ ಕಾರಣ ಮಣ್ಣಿನಿಂದ ಅರಶಿನದಿಂದ ಮನೆಯಲ್ಲಿಯೇ ನೀವು ಪರಿಸರಸ್ನೇಹಿ ಗಣೇಶನ ವಿಗ್ರಹವನ್ನು ತಯಾರಿಸಬಹುದು.
ಮಣ್ಣಿನಿಂದ ಗಣಪತಿಯನ್ನು ಮಾಡಿ: ನೀವು ಜೇಡಿಮಣ್ಣನ್ನು ಬಳಸಿ ಗಣೇಶನ ಮೂರ್ತಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಮೃದುವಾದ ಸ್ವಚ್ಛ ಜೇಡಿ ಮಣ್ಣಿಗೆ ಮರಳು ಇಲ್ಲವೇ ಅರಶಿನ, ತುಪ್ಪ, ಜೀನುತುಪ್ಪ, ಹಸುವಿನ ಸಗಣಿ ಮತ್ತು ನೀರನ್ನು ಬೆರೆಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಗಣೇಶ ಮೂರ್ತಿಯನ್ನು ತಯಾರಿಸಿ.
ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯ ವಿಡಿಯೋ:
View this post on Instagram
ಅರಿಶಿನದಿಂದ ಗಣಪತಿ ವಿಗ್ರಹವನ್ನು ಮಾಡಿ: ಮನೆಯಲ್ಲಿ ಸುಲಭವಾಗಿ ಲಭ್ಯವಿರುವಂತಹ ಅರಶಿನದಿಂದಲೂ ಗಣೇಶನ ವಿಗ್ರಹವನ್ನು ತಯಾರಿಸಬಹುದು. ಇದಕ್ಕಾಗಿ ಅರಶಿನ ಮತ್ತು ಮೈದಾ ಇಲ್ಲವೇ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ನೀರನ್ನು ಬೆರೆಸಿ ಉಂಡೆಯನ್ನು ತಯಾರಿಸಿಟ್ಟುಕೊಳ್ಳಿ, ನಂತರ ಇದರಿಂದ ಸುಂದರವಾದ ಮೂರ್ತಿಯನ್ನು ತಯಾರಿಸಬಹುದು.
ಅರಶಿನದ ಗಣೇಶ ಮೂರ್ತಿ ತಯಾರಿಕೆಯ ವಿಡಿಯೋ:
View this post on Instagram
ಇದನ್ನೂ ಓದಿ: ಗಣೇಶನಿಗೆ ಎಷ್ಟು ಗರಿಕೆ ಇಟ್ಟರೆ ಒಳ್ಳೆಯದು? ಬೆಸ ಸಂಖ್ಯೆಯಲ್ಲಿಯೇ ಏಕೆ ಅರ್ಪಿಸಬೇಕು?
ಮನೆಯಲ್ಲಿ ಗಣೇಶ ಮೂರ್ತಿ ತಯಾರಿಕೆಯ ವೇಳೆ ಮಾಡಬಾರದ ತಪ್ಪುಗಳು ಹಾಗೂ ಪಾಲಿಸಬೇಕಾದ ನಿಯಮಗಳು:
- ಮಣ್ಣಿನಿಂದ ಮೂರ್ತಿ ತಯಾರಿಸುತ್ತಿದ್ದೀರಿ ಎಂದಾದರೆ ಮೂರ್ತಿ ತಯಾರಿಕೆಗೆ ಶುದ್ಧ ಜೇಡಿ ಮಣ್ಣನ್ನು ಬಳಸಬೇಕು.
- ಓಂ ಗಂ ಗಣಪತಯೇ ನಮಃ ಎಂಬ ಮಂತ್ರವನ್ನು ಪಠಿಸಿದ ಬಳಿಕವೇ ಮೂರ್ತಿಯನ್ನು ತಯಾರಿಸಬೇಕು.
- ಮೂರ್ತಿ ತಯಾರಿಸುವಾಗ ಶುದ್ಧತೆಯನ್ನು ಪಾಲಿಸಬೇಕು. ಮಾಂಸ, ಮದ್ಯ ಸೇವನೆ ಮಾಡಬಾರದು.
- ಮೂರ್ತಿ ತಯಾರಿಸುವಾಗ ಸೊಂಡಿಲು ಎಡ ಭಾಗಕ್ಕೆ ಇರುವಂತೆ ನೋಡಿಕೊಳ್ಳಬೇಕು.
- ತಯಾರಿಸುವಂತಹ ಗಣೇಶನ ಮೂರ್ತಿಯ ಗಾತ್ರವು 9 ಇಂಚು ಅಥವಾ ಅದಕ್ಕಿಂತ ಹೆಚ್ಚಿರಬಾರದು.
- ಮಣ್ಣಿನ ಮುದ್ದೆಯನ್ನು ಐದು ಭಾಗಗಳನ್ನಾಗಿ ಮಾಡಿ, ಒಂದು ಭಾಗದಿಂದ ಎರಡು ಕಾಲು ಇನ್ನೊಂದು ಭಾಗದಿಂದ ಕೈಗಳನ್ನು ರಚಿಸಿ. ಇನ್ನೊಂದು ಭಾಗದಿಂದ ಹೊಟ್ಟೆ, ಮತ್ತೊಂದು ಭಾಗದಿಂದ ತಲೆ, ಮುಖ, ಸೊಂಡಿಲನ್ನು ರಚಿಸಿ. ಇನ್ನೂ ಐದನೇ ಭಾಗದಿಂದ ದಂತ ಮತ್ತು ಕಿರೀಟವನ್ನು ತಯಾರಿಸಿ.
- ಗಣೇಶ ಮೂರ್ತಿಯ ಜೊತೆಗೆ ಗಣಪ ವಾಹನವಾದ ಇಲಿಯ ಸಣ್ಣ ಮೂರ್ತಿಯನ್ನು ಕೂಡ ತಯಾರಿಸಬೇಕು.
- ಮೂರ್ತಿ ತಯಾರಿಸಿದ ನಂತರ ಅದನ್ನು ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಇಡಬೇಕು.
- ಮೂರ್ತಿ ತಯಾರಿಸುವಾಗ ಬಹಳ ಜೋಪಾನವಾಗಿ ತಯಾರಿಸಬೇಕು. ಮೂರ್ತಿಯ ಯಾವುದೇ ಭಾಗವು ತುಂಡು ಅಥವಾ ಹಾನಿಯಾಗಂತೆ ನೀವು ನೋಡಿಕೊಳ್ಳಬೇಕು.
ಹೀಗೆ ಮೂರ್ತಿ ತಯಾರಿಸುವ ವೇಳೆ ಒಂದಷ್ಟು ಶಿಸ್ತುಬದ್ಧ ನಿಯಮಗಳನ್ನು ಪಾಲಿಸಬೇಕು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








