ನೀವು ಆರೋಗ್ಯವಂತರಾಗಿರಬೇಕೇ, ನೀರು ಕುಡಿಯುವುದಕ್ಕೂ ಇರಲಿ ವೇಳಾಪಟ್ಟಿ
ಆರೋಗ್ಯವಂತರಾಗಿರಬೇಕಾದರೆ ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಸರಿಯಾದ ನಿದ್ದೆಯು ಬಹಳ ಮುಖ್ಯ. ದೇಹಕ್ಕೆ ನೀರು ಕೂಡ ಅಷ್ಟೇ ಮುಖ್ಯವಾಗುತ್ತದೆ. ನೀರು ಕುಡಿಯುವ ಪ್ರಮಾಣವು ಕಡಿಮೆಯಾದರೆ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಯೂ ಹೆಚ್ಚು. ಆದರೆ ದೇಹದ ಪ್ರತಿಯೊಂದು ಅಂಗವು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸಬೇಕು. ದೇಹಕ್ಕೆ ನೀರಿನ ಅಗತ್ಯವಿದ್ದರೂ ವಿಪರೀತ ನೀರಿನ ಸೇವನೆಯಿಂದ ಅಡ್ಡಪರಿಣಾಮಗಳಾಗಬಹುದು. ಹೀಗಾಗಿ ನೀರು ಕುಡಿಯುವುದಕ್ಕೂ ವೇಳಾಪಟ್ಟಿಯಿರುವುದು ಒಳ್ಳೆಯದು.
![ನೀವು ಆರೋಗ್ಯವಂತರಾಗಿರಬೇಕೇ, ನೀರು ಕುಡಿಯುವುದಕ್ಕೂ ಇರಲಿ ವೇಳಾಪಟ್ಟಿ](https://images.tv9kannada.com/wp-content/uploads/2024/02/national-lifestyle-health-world-viral-news-in-tv9-kannada-2024-02-29t142718.516.jpg?w=1280)
ಸಾಂದರ್ಭಿಕ ಚಿತ್ರ
ಬೇಸಿಗೆಯಲ್ಲಿ ವಿಪರೀತ ಬಾಯಾರಿಕೆಯಾಗುವುದು ಸಹಜ. ಈ ಸಮಯದಲ್ಲಿ ಎಷ್ಟು ನೀರು ಕುಡಿಯುವುದರೂ ದೇಹಕ್ಕೆ ಸಾಕಾಗುವುದಿಲ್ಲ. ಹೀಗಾಗಿ ಹೆಚ್ಚಿನವರು ದ್ರವ ರೂಪದ ಆಹಾರಗಳಾದ ಜ್ಯೂಸ್, ತಂಪು ಪಾನೀಯಗಳನ್ನು ಮೊರೆ ಹೋಗುತ್ತಾರೆ. ಆದರೆ ದಿನನಿತ್ಯ ಸರಿಸುಮಾರು ಎರಡರಿಂದ ಮೂರು ಲೀಟರ್ ಗಳಷ್ಟು ನೀರು ಕುಡಿದರೆ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ ಎನ್ನಲಾಗುತ್ತದೆ. ನಿಯಮಿತ ನೀರು ಸೇವಿಸಿದರೆ ಲವಲವಿಕೆಯೊಂದಿಗೆ ಆರೋಗ್ಯವಂತ ವ್ಯಕ್ತಿಗಳು ನೀವಾಗಬಹುದು.
- ಬಿಸಿಲು ಹೆಚ್ಚಿದ್ದಾಗ ಹೆಚ್ಚು ಕುಡಿಯಬೇಕು. ಬಿಸಿಲಿನ ಝಳವು ಕಡಿಮೆಯಿದ್ದಾಗ ಹಾಗೂ ರಾತ್ರಿಯ ಹೊತ್ತು ಕಡಿಮೆ ನೀರು ಕುಡಿಯುವ ಅಭ್ಯಾಸವಿರಲಿ.
- ಬೆಳಿಗ್ಗೆ ಎದ್ದ ತಕ್ಷಣ, ಕನಿಷ್ಠ ಒಂದರಿಂದ ಎರಡು ಲೋಟ ತಣ್ಣೀರನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
- ಹಲ್ಲುಜ್ಜಿದ ಬಳಿಕ ಕುದಿಸಿ ಆರಿಸಿದ ನೀರು ಕುಡಿಯಿರಿ.
- ಊಟಕ್ಕೂ ಮೊದಲು ಹಾಗೂ ನಂತರದಲ್ಲಿ ಒಂದು ಲೋಟ ನೀರು ಕುಡಿದರೆ ಜೀರ್ಣಕ್ರಿಯೆಯು ಸುಧಾರಿಸುತ್ತದೆ.
- ಸ್ನಾನದ ಮೊದಲು ಎರಡು ಲೋಟ ನೀರು ಕುಡಿಯುವುದರಿಂದ ರಕ್ತ ಪರಿಚಲನೆಯನ್ನು ಸರಿಯಾಗಿ ಆಗುತ್ತದೆ.
- ಮಲಗುವ ಮುನ್ನ ನೀರು ಕುಡಿಯುವುದರಿಂದ ಹೃದಯಾಘಾತವನ್ನು ತಡೆಯುವ ಸಾಧ್ಯತೆಯೂ ಅಧಿಕವಾಗಿದೆ.
- ತೂಕ ಇಳಿಕೆಯಾಗಬೇಕೆನ್ನುವವರು ಊಟವಾದ ಅರ್ಧ ಗಂಟೆಯ ಬಳಿಕ ದೊಡ್ಡ ಲೋಟ ನೀರು ಕುಡಿಯಬೇಕು. ಇದು ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ.
- ವ್ಯಾಯಾಮದ ಮೊದಲು ಹಾಗೂ ನಂತರದಲ್ಲಿಯೂ ಒಂದು ಲೋಟ ನೀರು ಕುಡಿಯಬೇಕು. ಇದರಿಂದಾಗಿ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ. ವ್ಯಾಯಾಮ ಮಾಡುವಾಗ ದೇಹದಲ್ಲಿನ ನೀರು ಬೆವರಿನ ರೂಪದಲ್ಲಿ ಹೊರಗೆ ಹೋಗುತ್ತದೆ. ನೀರು ಕುಡಿಯುವ ಮೂಲಕ ಮತ್ತೆ ದೇಹಕ್ಕೆ ನೀರನ್ನು ಮರಳಿ ಪಡೆಯಬಹುದು.
- ಉಪಹಾರಕ್ಕೂ ಮುನ್ನ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ ಸ್ವಲ್ಪ ಪ್ರಮಾಣದಲ್ಲಿ ಆಹಾರವು ಸಾಕಾಗುತ್ತದೆ.
- ಅನಾರೋಗ್ಯ ಸಮಸ್ಯೆಯಿದ್ದಾಗ ದೇಹಕ್ಕೆ ನೀರಿನ ಅಗತ್ಯವಿರುತ್ತದೆ. ಹೀಗಾಗಿ ನಿಯಮಿತವಾಗಿ ನೀರಿನ ಸೇವನೆ ಹಾಗೂ ಹಣ್ಣಿನ ಜ್ಯೂಸ್ ಕುಡಿಯುವ ಮೂಲಕ ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು.
- ದೈಹಿಕ ಕೆಲಸವನ್ನು ಮಾಡುವಾಗ ಒಂದು ಲೋಟ ತಣ್ಣೀರು ಕುಡಿಯುವುದರಿಂದ ಆಯಾಸವು ದೂರವಾಗಿ ದೈಹಿಕ ಶಕ್ತಿ ಹೆಚ್ಚುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:28 pm, Thu, 29 February 24
ತಾಜಾ ಸುದ್ದಿ