National Anti-Terrorism Day 2025: ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸುವುದ ಹಿಂದಿನ ಕಾರಣವೇನು?
ಪ್ರತಿವರ್ಷ ಮೇ 21 ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿಯ ದಿನ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಭಯೋತ್ಪಾದನೆ ಇಡೀ ಪ್ರಪಂಚಕ್ಕೆ ಮಾರಕವಾಗಿದ್ದು, ಈ ಸಮಾಜ ವಿರೋಧಿ ಕೃತ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಜನರಲ್ಲಿ ಶಾಂತಿ, ಮಾನವೀಯತೆ, ಏಕತೆ, ಸಾಮರಸ್ಯವನ್ನು ಉತ್ತೇಜಿಸುವುದು ಈ ದಿನದ ಆಚರಣೆಯ ಪ್ರಮುಖ ಉದ್ದೇಶವಾಗಿದೆ.

ಇತ್ತೀಚಿಗಷ್ಟೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಜಮ್ಮು ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣವಾದ ಪಹಲ್ಗಾಮ್ನಲ್ಲಿ ಉಗ್ರರು (terrorist) ದಾಳಿ ನಡೆಸಿದ್ದರು. ಈ ಉಗ್ರ ದಾಳಿಯಲ್ಲಿ 30 ಕ್ಕೂ ಹೆಚ್ಚು ಅಮಾಯಕ ಜೀವಗಳು ಬಲಿಯಾಗಿದ್ದವು. ಭಯೋತ್ಪಾದನೆ (terrorism) ಎನ್ನುವುದು ಇಡೀ ಪ್ರಪಂಚಕ್ಕೆ ಮಾರಕವಾಗಿದ್ದು, ಉಗ್ರರ ಅಟ್ಟಹಾಸಕ್ಕೆ ಅಮಾಯಕರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಯೋತ್ಪಾದನೆಯಂತಹ ಸಮಾಜ ವಿರೋಧಿ ಕೃತ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಈ ಚಟುವಟಿಕೆಯನ್ನು ನಿಗ್ರಹಿಸಲು ಮತ್ತು ಜನರಲ್ಲಿ ಶಾಂತಿ, ಮಾನವೀಯತೆ, ಏಕತೆ ಸಾಮರಸ್ಯವನ್ನು ಸಾಧಿಸಲು ಪ್ರತಿವರ್ಷ ಮೇ 21 ರಂದು ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ (National Anti-Terrorism Day) ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.
ಭಯೋತ್ಪಾದನಾ ವಿರೋಧಿ ದಿನದ ಇತಿಹಾಸ:
ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯತಿಥಿಯ ದಿನ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.
1991 ರ ಮೇ 21 ರಂದು ರಾತ್ರಿ 10.20 ರ ಸುಮಾರಿಗೆ ಚೆನ್ನೈನಿಂದ 50 ಕಿಮೀ ದೂರದಲ್ಲಿರುವ ಶ್ರೀಪೆರಂಬದೂರಿನಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಚುನಾವಣಾ ರ್ಯಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಎಲ್ಟಿಟಿಇ ಭಯೋತ್ಪಾದಕರು ರಾಜೀವ್ಗಾಂಧಿಯವರನ್ನು ಹತ್ಯೆ ಮಾಡಿದರು. ನಂತರ ಸರ್ಕಾರವು ರಾಜೀವ್ ಗಾಂಧಿಯವರ ಸ್ಮರಣೆಗಾಗಿ ಹಾಗೂ ಭಯೋತ್ಪಾದನೆ ಚಟುವಟಿಕೆಗಳ ಪರಿಣಾಮ ಮತ್ತು ಹಾನಿಯ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲು ಪ್ರಾರಂಭಿಸಿತು. ಈ ದಿನದಂದು, ವಿಶೇಷವಾಗಿ ಪ್ರತಿಯೊಂದು ಸರ್ಕಾರಿ ಕಚೇರಿ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ, ಜನರು ಭಯೋತ್ಪಾದನಾ ವಿರೋಧಿ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ.
ಇದನ್ನೂ ಓದಿ: ಸಂಸ್ಥೆಗಳ ಏಳಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಅಪಾರ; HR ದಿನ ಇತಿಹಾಸ ತಿಳಿಯಿರಿ
ರಾಷ್ಟ್ರೀಯ ಭಯೋತ್ಪಾದನಾ ದಿನದ ಮಹತ್ವ:
ರಾಷ್ಟ್ರೀಯ ಭಯೋತ್ಪಾದನಾ ದಿನವನ್ನು ಆಚರಿಸುವ ಮುಖ್ಯ ಉದ್ದೇಶ ಜನರಲ್ಲಿ ಮಾನವೀಯತೆಯನ್ನು ಜೀವಂತವಾಗಿಡುವುದು. ಭಯೋತ್ಪಾದಕ ಗುಂಪುಗಳ ಬಗ್ಗೆ ಜನರಿಗೆ ಸಕಾಲಿಕ ಮಾಹಿತಿಯನ್ನು ಒದಗಿಸುವುದು ಮತ್ತು ಭಯೋತ್ಪಾದನಾ ಚಟುವಟಿಕೆ ಬಗ್ಗೆ ಜಾಗೃತಿ ಮೂಡಿಸುವುದು. ವಿಶೇಷವಾಗಿ ಯುವಕರು ಯಾವುದೇ ದುರಾಸೆಗೆ ಬಲಿಯಾಗದೆ ವಿವಿಧ ಭಯೋತ್ಪಾದಕ ಗುಂಪುಗಳನ್ನು ಸೇರದಂತೆ ಅವರನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಈ ಜಾಗೃತಿ ಕಾರ್ಯಗಳನ್ನು ನಡೆಸಲಾಗುತ್ತದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಪುಣ್ಯ ತಿಥಿಯ ಈ ದಿನ ಅನೇಕ ಸ್ಥಳಗಳಲ್ಲಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅಲ್ಲದೆ ಈ ದಿನ ಭಯೋತ್ಪಾದನೆಯ ದುಷ್ಪರಿಣಾಮಗಳು ಮತ್ತು ಅದರ ಅಪಾಯದ ಬಗ್ಗೆ ಜನರಿಗೆ ಶಿಕ್ಷಣ ನೀಡಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








