ಬಿಹಾರ: ಸಹೋದರನ ಕುಟುಂಬದ ನಾಲ್ವರನ್ನು ಕೊಂದು, ಶವಗಳ ಕತ್ತರಿಸಿ ಸೂಟ್ಕೇಸ್ಗಳಲ್ಲಿ ತುಂಬಿ ಎಸೆದ ವ್ಯಕ್ತಿ
ಹಣದ ವ್ಯಾಮೋಹ ಮತ್ತು ಕೌಟುಂಬಿಕ ಕಲಹಕ್ಕೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಿರಿಯ ಸಹೋದರನೇ ತನ್ನ ಅಣ್ಣ, ಅತ್ತಿಗೆ ಹಾಗೂ ಅವರ ಇಬ್ಬರು ಮುಗ್ಧ ಮಕ್ಕಳನ್ನು ಉಸಿರುಗಟ್ಟಿಸಿ, ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ಸಾಕ್ಷ್ಯ ನಾಶಪಡಿಸಲು ನಾಲ್ವರ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್ಕೇಸ್ ಹಾಗೂ ಚೀಲಗಳಲ್ಲಿ ತುಂಬಿ ವಿವಿಧ ನದಿ, ಕಾಲುವೆಗಳಿಗೆ ಎಸೆದಿದ್ದಾನೆ.

ಪಾಟ್ನಾ, ಮೇ 18: ಹಣದ ವ್ಯಾಮೋಹ ಮತ್ತು ಕೌಟುಂಬಿಕ ಕಲಹಕ್ಕೆ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಅತ್ಯಂತ ಅಮಾನುಷವಾಗಿ ಹತ್ಯೆ(Murder) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕಿರಿಯ ಸಹೋದರನೇ ತನ್ನ ಅಣ್ಣ, ಅತ್ತಿಗೆ ಹಾಗೂ ಅವರ ಇಬ್ಬರು ಮುಗ್ಧ ಮಕ್ಕಳನ್ನು ಉಸಿರುಗಟ್ಟಿಸಿ, ಚಾಕುವಿನಿಂದ ಇರಿದು ಕೊಂದಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ಕ್ರೌರ್ಯ, ಸಾಕ್ಷ್ಯ ನಾಶಪಡಿಸಲು ನಾಲ್ವರ ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ಸೂಟ್ಕೇಸ್ ಹಾಗೂ ಚೀಲಗಳಲ್ಲಿ ತುಂಬಿ ವಿವಿಧ ನದಿ, ಕಾಲುವೆಗಳಿಗೆ ಎಸೆದಿದ್ದಾನೆ.
ರಹಸ್ಯ ಬಯಲಾಗಿದ್ದು ಹೇಗೆ? ಮೇ 10 ರಂದು ಕೈಮೂರ್ ಜಿಲ್ಲೆಯ ನದಿಯೊಂದರ ಕೆಳಗೆ ಎರಡು ಶಂಕಾಸ್ಪದ ಸೂಟ್ಕೇಸ್ಗಳು ತೇಲುತ್ತಿದ್ದವು. ಪೊಲೀಸರು ಇವುಗಳನ್ನು ವಶಕ್ಕೆ ಪಡೆದು ತೆರೆದಾಗ, ಅದರಲ್ಲಿ ಕತ್ತರಿಸಿದ ಮಾನವ ದೇಹದ ಭಾಗಗಳು ಪತ್ತೆಯಾಗಿದ್ದವು. ಆರಂಭದಲ್ಲಿ ಇವು 3 ರಿಂದ 4 ಜನರ ಶವದ ಅವಶೇಷಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ನಂತರ ಮೇ 12 ರಂದು ರಾಮಗಢದ ಕಾಲುವೆಯ ಬಳಿ ಇನ್ನು ಎರಡು ಚೀಲಗಳಲ್ಲಿ ಹೆಚ್ಚಿನ ಭಾಗಗಳು ಪತ್ತೆಯಾಗಿದ್ದವು. ತನಿಖೆ ಆರಂಭಿಸಿದ ವಿಶೇಷ ತನಿಖಾ ತಂಡ (SIT), ಇವು ದಹರಕ್ ಗ್ರಾಮದ ಕೃಷ್ಣ ಮುರಾರಿ ಗುಪ್ತಾ ಅವರ ಕುಟುಂಬದ ಅವಶೇಷಗಳು ಎಂಬುದನ್ನು ಪತ್ತೆಹಚ್ಚಿತ್ತು.
ಪೊಲೀಸರು ಕೃಷ್ಣ ಮುರಾರಿ ಅವರ ಮನೆಗೆ ಹೋದಾಗ ಮನೆಗೆ ಬೀಗ ಹಾಕಲಾಗಿತ್ತು. ತಾಂತ್ರಿಕ ಸಾಕ್ಷ್ಯ ಹಾಗೂ ಮೊಬೈಲ್ ಲೊಕೇಶನ್ ಆಧಾರದ ಮೇಲೆ ಕೃಷ್ಣ ಮುರಾರಿ ಅವರ ಕಿರಿಯ ಸಹೋದರ ವಿಕಾಸ್ ಗುಪ್ತಾ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ. ವಿಕಾಸ್ ತನ್ನ ಇನ್ನೊಬ್ಬ ತಮ್ಮ ರಾಹುಲ್ ಮತ್ತು ಮಹಾರಾಷ್ಟ್ರದ ಗೆಳೆಯ ದೀಪಕ್ ಕುಮಾರ್ ರಜಪೂತ್ ಜೊತೆ ಸೇರಿ ಈ ಭೀಕರ ಹತ್ಯೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ.
ಷೇರು ಮಾರುಕಟ್ಟೆ ಹೂಡಿಕೆ ಹಾಗೂ ಕೌಟುಂಬಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಕಾಸ್ ಈ ಕೊಲೆಗೆ ಸಂಚು ರೂಪಿಸಿದ್ದ. ಮೇ 7 ರಂದು ಪ್ಲಾನ್ ಮುಂಚಿತವಾಗಿಯೇ ಸಿದ್ಧವಾಗಿತ್ತು. ಅಂದು ಬೆಳಗ್ಗೆ ಕೋಣೆಯೊಂದರಲ್ಲಿ ಷೇರು ಮಾರುಕಟ್ಟೆಯ ಚರ್ಚೆ ನೆಪದಲ್ಲಿ ಅಣ್ಣ ಕೃಷ್ಣ ಮುರಾರಿಯನ್ನು ಕರೆಸಿಕೊಂಡ ವಿಕಾಸ್ ಮತ್ತು ಆತನ ಸಹಚರರು, ಏಕಾಏಕಿ ಆತನ ಮೇಲೆ ಮುಗಿಬಿದ್ದು ಚಾಕುವಿನಿಂದ ಇರಿದು ಕೊಂದರು. ಗದ್ದಲ ಕೇಳಿ ಓಡಿಬಂದ ಅತ್ತಿಗೆ ದುರ್ಗೇಶ್ ಕುಮಾರಿ ಪ್ರಾಣಭಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆಕೆಯನ್ನೂ ಹಿಡಿದು ಉಸಿರುಗಟ್ಟಿಸಿ ಕೊಲ್ಲಲಾಯಿತು.
ಮತ್ತಷ್ಟು ಓದಿ: ಅತಾವುಲ್ಲಾ ಹತ್ಯೆ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಚನ್ನಗಿರಿ ಪೊಲೀಸರು
ಮಧ್ಯಾಹ್ನ ಶಾಲೆಯಿಂದ ಮನೆಗೆ ಮರಳಿದ ದಂಪತಿಯ ಇಬ್ಬರು ಮುಗ್ಧ ಮಕ್ಕಳಿಗೆ ಹೆತ್ತವರ ಹೆಣ ಕಾಣಿಸಬಾರದೆಂದು, ಆ ಕಟುಕರು ಮಕ್ಕಳನ್ನೂ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ.ಹತ್ಯೆಯ ನಂತರ ಕೋಣೆಯೊಳಗೆ ಶವಗಳನ್ನು ಕೈ, ಕಾಲು, ತಲೆ ಎಂದು ಪ್ರತ್ಯೇಕವಾಗಿ ಕತ್ತರಿಸಲಾಯಿತು.
ಬಂಧಿತ ವಿಕಾಸ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಹತ್ಯೆಗೆ ಬಳಸಿದ ಚಾಕು, ಪಿಸ್ತೂಲ್, ಜೀವಂತ ಗುಂಡುಗಳು, ಕಬ್ಬಿಣದ ರಾಡ್ ಮತ್ತು ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ನದಿಗೆ ಎಸೆಯಲಾಗಿರುವ ಎರಡು ಕತ್ತರಿಸಿದ ತಲೆಗಳನ್ನು ಪತ್ತೆಹಚ್ಚಲು ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕೊಲೆಗೆ ಒಂದು ದಿನ ಮುಂಚಿತವಾಗಿಯೇ ಮನೆಯ ಇತರ ಮಹಿಳೆಯರನ್ನು ತಾಯಿಯ ಮನೆಗೆ ಕಳುಹಿಸಿ ಈ ಪ್ಲಾನ್ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಮರೆಸಿಕೊಂಡಿರುವ ಉಳಿದ ಹಂತಕರ ಬಂಧನಕ್ಕೆ ತೀವ್ರ ಜಾಲ ಬೀಸಲಾಗಿದ್ದು, ಈ ಕೃತ್ಯ ಎಸಗಿದ ಆರೋಪಿಗಳಿಗೆ ನ್ಯಾಯಾಲಯದ ಮೂಲಕ ಕಠಿಣಾತಿ ಕಠಿಣ ಮರಣದಂಡನೆ ಶಿಕ್ಷೆ ಕೊಡಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೊರೆ ಹೋಗುವುದಾಗಿ ಕೈಮೂರ್ ಎಸ್ಪಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

