
ಎಲ್ಲರ ಅಡುಗೆ ಮನೆಯಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಕತ್ತರಿಸಲು ಕಟಿಂಗ್ ಬೋರ್ಡ್ ಗಳಿರುತ್ತದೆ. ಹೀಗಾಗಿ ಇದು ತರಕಾರಿಗಳನ್ನು ಸುಲಭವಾಗಿ, ಬೇಗ ಹೆಚ್ಚಲು ಮರ ಅಥವಾ ಪ್ಲಾಸ್ಟಿಕ್ ಬೋರ್ಡ್ಗಳನ್ನು ಬಳಸುತ್ತಾರೆ. ಆದರೆ ಪ್ಲಾಸ್ಟಿಕ್ ಬೋರ್ಡ್ ಗಳನ್ನು ಬಳಸುವುದು ಆರೋಗ್ಯಕ್ಕೆ ಅಪಾಯಕಾರಿ ಎನ್ನುವ ಕಾರಣಕ್ಕೆ ಮರದ ಹಲಗೆಗಳನ್ನು ಬಳಸುವವರು ಹೆಚ್ಚಾಗಿದ್ದಾರೆ. ಆದರೆ ಈ ಹಲಗೆ ಬಳಕೆಯಿಂದಲೂ ಆರೋಗ್ಯ ಸಮಸ್ಯೆಗಳು ಬರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ನವಿ ಮುಂಬೈನ ಅಪೋಲೋ ಆಸ್ಪತ್ರೆಯ ಹಿರಿಯ ಕ್ಲಿನಿಕಲ್ ಡಯೆಟಿಷಿಯನ್ ವರ್ಷಾ ಗೋರ್ ಖಾಸಗಿ ಸುದ್ದಿ.ಮಾಧ್ಯಮದೊಂದಿಗೆ ಮಾತನಾಡಿದ್ದು, ‘ನಾವು ಬಳಸುವ ಮರದ ಹಲಗೆ ಸುರಕ್ಷಿತವಾಗಿಲ್ಲ. ಈ ಮರದ ಹಲಗೆಯಲ್ಲಿ ರಂಧ್ರಗಳಿದ್ದು, ಕತ್ತರಿಸಿದ ಆಹಾರದಿಂದ ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಟೊಮೆಟೊ ರಸ, ಕಚ್ಚಾ ಕೋಳಿ ಪೀಸ್ಗಳು ಅಥವಾ ಶುಂಠಿ ಮತ್ತು ಬೆಳ್ಳುಳ್ಳಿ ರಸ ಮರದ ಹಲಗೆಯಿಂದ ಸುಲಭವಾಗಿ ಹೀರಲ್ಪಡುತ್ತವೆ. ಈ ತೇವಾಂಶವು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯಲು ಅವಕಾಶ ಮಾಡಿಕೊಡುತ್ತದೆ’ ಎಂದು ತಿಳಿಸಿದ್ದಾರೆ.
ದಿನ ಕಳೆಯುತ್ತ ಹೋದಂತೆ ತರಕಾರಿ ಕತ್ತರಿಸಲು ಬಳಸುವ ಮರದ ಹಲಗೆಗಳು ಸ್ಕ್ರಾಚ್ ಆಗುತ್ತದೆ. ಇದರಿಂದ ಉಂಟಾಗುವ ಸಣ್ಣ ಸಣ್ಣ ಬಿರುಕುಗಳನ್ನು ಸ್ವಚ್ಛಗೊಳಿಸುವುದು ಸ್ವಲ್ಪ ಕಷ್ಟಕರ. ಒಂದು ವೇಳೆ ಸರಿಯಾಗಿ ಸ್ವಚ್ಛಗೊಳಿಸದೇ ಹೋದಲ್ಲಿ ಸಾಲ್ಮೊನೆಲ್ಲಾ, ಇ.ಕೋಲಿ ಮತ್ತು ಲಿಸ್ಟೇರಿಯಾದಂತಹ ಹಾನಿಕಾರಕ ರೋಗಕಾರಕಗಳು ಈ ಮರದ ಹಲಗೆಯಲ್ಲಿನ ಬಿರುಕುಗಳಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ. ಈ ಬ್ಯಾಕ್ಟೀರಿಯಾಗಳು ಆಹಾರವನ್ನು ಕಲುಷಿತಗೊಳಿಸುವುದಲ್ಲದೇ ಆರೋಗ್ಯಕ್ಕೆ ಅಪಾಯವನ್ನು ಉಂಟು ಮಾಡುತ್ತದೆ. ಈ ಹಲಗೆಗಳ ಸಣ್ಣ ಮರದ ತುಂಡುಗಳು ಆಹಾರ ಪದಾರ್ಥಗಳೊಂದಿಗೆ ಬೆರೆಯುತ್ತವೆ. ಅವುಗಳನ್ನು ಸೇವಿಸುವುದರಿಂದ ಹೊಟ್ಟೆಯ ಆರೋಗ್ಯ ಹದಗೆಡಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಫೇವರಿಟ್ ಸಂಖ್ಯೆ ಯಾವುದು? ನೆಚ್ಚಿನ ಸಂಖ್ಯೆಯೇ ರಿವೀಲ್ ಮಾಡುತ್ತೆ ವ್ಯಕ್ತಿತ್ವ
* ಜ್ವರ: ಸರಿಯಾಗಿ ಸ್ವಚ್ಛಗೊಳಿಸಿದ ಮರದ ಕಟ್ಟಿಂಗ್ ಬೋರ್ಡ್ಗಳಲ್ಲಿ ಕೊಲಿ ಮತ್ತು ಸಾಲ್ಮೊನೆಲ್ಲಾಗಳಂತಹ ರೋಗಕಾರಕಗಳನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ. ಈ ರೋಗಕಾರಕಗಳು ಆಹಾರದಿಂದ ಹರಡುವ ರೋಗಗಳಿಗೆ ಕಾರಣವಾಗಬಹುದು. ಹೀಗಾಗಿ ಜ್ವರ, ಅತಿಸಾರ, ವಾಂತಿ, ನಿರ್ಜಲೀಕರಣ, ವಾಕರಿಕೆ ಜಠರ ಹಾಗೂ ಕರುಳಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆಯೇ ಹೆಚ್ಚಿರುತ್ತದೆ. ವಿಶೇಷವಾಗಿ ಚಿಕ್ಕ ಮಕ್ಕಳು ಮತ್ತು ವೃದ್ಧರು ಈ ಸೋಂಕುಗಳಿಗೆ ಒಳಗಾಗುತ್ತಾರೆ.
* ಕರುಳಿಗೆ ಹಾನಿ : ಚಿಕ್ಕ ಮರದ ಚೂರುಗಳು ಅಥವಾ ಹಳೆಯ ಹಲಗೆಗಳಿಂದ ಸಣ್ಣ ಮರದ ಕಣಗಳು ದೇಹವನ್ನು ಪ್ರವೇಶಿಸುತ್ತದೆ. ಇದು ಕರುಳಿನ ಅಪಾಯವನ್ನು ಉಂಟು ಮಾಡುತ್ತದೆ.
* ಮಾಲಿನ್ಯ: ನಮ್ಮಲ್ಲಿ ಹೆಚ್ಚಿನವರಿಗೆ ಮಾಂಸ, ಮೀನು, ತರಕಾರಿ, ಹಣ್ಣು ಎಲ್ಲವನ್ನೂ ಒಂದೇ ಹಲಗೆಯಲ್ಲಿ ಕತ್ತರಿಸುವ ಅಭ್ಯಾಸವಿದೆ. ಈ ಅಭ್ಯಾಸವು ಹಾನಿಕಾರಕ ಸೂಕ್ಷ್ಮಜೀವಿಗಳನ್ನು ಒಂದು ಆಹಾರದಿಂದ ಇನ್ನೊಂದು ಆಹಾರಕ್ಕೆ ವರ್ಗಾಯಿಸಿಸಿ ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತದೆ.
* ಬಿದಿರು: ಬಿದಿರು ಮರಕ್ಕೆ ಪರ್ಯಾಯವಾಗಿದ್ದು, ಇದು ಪರಿಸರ ಸ್ನೇಹಿಯಾಗಿದೆ. ಹಾಗೂ ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ. ಈ ಬಿದಿರು ಕಡಿಮೆ ರಂಧ್ರಗಳನ್ನು ಹೊಂದಿದ್ದು, ತೇವಾಂಶವನ್ನು ಹೀರಿಕೊಳ್ಳುವುದಿಲ್ಲ.
* ಗ್ಲಾಸ್ ಅಥವಾ ಅಕ್ರಿಲಿಕ್ ಬೋರ್ಡ್ಗಳು: ಗ್ಲಾಸ್ ಬೋರ್ಡ್ಗಳಲ್ಲಿ ರಂಧ್ರಗಳಿರುವುದಿಲ್ಲ. ಅದಲ್ಲದೇ ತರಕಾರಿ ಕತ್ತರಿಸಿದ ಬಳಿಕ ಈ ಬೋರ್ಡ್ ಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
* ಸ್ಟೀಲ್ ಹಲಗೆಗಳ ಬಳಕೆಯಿರಲಿ : ಇತ್ತೀಚಿನ ದಿನಗಳಲ್ಲಿ ಸ್ಟೇನ್ ಲೆಸ್ ಸ್ಟೀಲ್ ಹಲಗೆಗಳು ಜನಪ್ರಿಯವಾಗುತ್ತಿದೆ. ಇವು ದೀರ್ಘಕಾಲದವರೆಗೆ ಬಾಳಿಕೆ ಬರುತ್ತದೆ. ಇದರಲ್ಲಿ ಯಾವುದೇ ರಂಧ್ರಗಳಿಲ್ಲ, ಹೀಗಾಗಿ ಸುಲಭವಾಗಿ ಸ್ವಚ್ಛಗೊಳಿಸಬಹುದಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ