ಈ ದೇವಾಲಯದ ದೇವಿಗೆ ಒಂದೇ ಒಂದು ಹರಕೆ ನೀಡಿ, ಮದುವೆಗೆ ಯಾವುದೇ ಸಂಕಷ್ಟ ಬರಲ್ಲ
ಸುತ್ತಲೂ ಹಚ್ಚ ಹಸಿರ ಪರಿಸರದ ನಡುವೆ ಇರುವ ವಿಶಾಲವಾದ ಕೆರೆ, ಅದರ ಮಧ್ಯದಲ್ಲಿ ನಕ್ಷತ್ರಾಕಾರದಲ್ಲಿ ಕಾಣುವ ಸುಂದರ ಪ್ರದೇಶ. ಆಹಾ! ಈ ಸುಂದರ ತಾಣ ನೋಡುವುದೇ ಒಂದು ಅದೃಷ್ಟ. ಇದು ನೋಡಲು ಮಾತ್ರ ಸುಂದರವಾಗಿಲ್ಲ ಇಲ್ಲಿರುವ ದೇವರ ಶಕ್ತಿ ಕೂಡ ಪವಾಡ ಸದ್ರಶ್ಯವಾಗಿದೆ. ಕಷ್ಟ ಎಂದು ಹೋದವರು ಸೋತು ಬಂದಿರುವ ಉದಾಹರಣೆಯೇ ಇಲ್ಲ. ಅದು ಎಂತಹ ಸಮಸ್ಯೆಯೇ ಇರಲಿ ಅದನ್ನು ಪರಿಹರಿಸುವ ಶಕ್ತಿ ಆ ಬಸದಿಯಲ್ಲಿ ಕುಳಿತಿರುವ ಅಮ್ಮನಿಗಿದೆ. ಇದು ಪ್ರವಾಸಿ ತಾಣ ಮಾತ್ರವಲ್ಲ ಅದೆಷ್ಟೋ ಜನರ ಸಮಸ್ಯೆಗೆ ಪರಿಹಾರ ನೀಡುವ ಮಂದಿರವಾಗಿದೆ.

ನಮ್ಮ ಮಧ್ಯೆಯೇ ಇರುವ ಎಷ್ಟೋ ಜಾಗಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಅದರಲ್ಲಿಯೂ ನಮ್ಮ ಕರ್ನಾಟಕದಲ್ಲಿ ಜನರಿಗೆ ಅಪರಿಚಿತವಾಗಿರುವಂತಹ ಅದೆಷ್ಟೋ ದೇವಸ್ಥಾಗಳಿವೆ. ಒಂದೊಂದು ದೇವಸ್ಥಾನದಲ್ಲಿಯೂ ಒಂದೊಂದು ರೀತಿಯ ವಿಶೇಷತೆ, ಕುತೂಹಲಕಾರಿ ಸಂಗತಿಗಳಿರುತ್ತದೆ. ಈ ಸಾಲಿಗೆ ಕಾರ್ಕಳ (Karkala) ತಾಲೂಕಿನಲ್ಲಿರುವ ವರಂಗ (Varanga Lake Jain Temple) ಎಂಬ ಜೈನ ಯಾತ್ರಾ (Jain basadi) ಸ್ಥಳ ಕೂಡ ಸೇರಿಕೊಳ್ಳುತ್ತದೆ. ಇಡೀ ದಕ್ಷಿಣ ಭಾರತದಲ್ಲಿ ಮತ್ತೆಲ್ಲೂ ಸಿಗದಂಥ ಸೌಂದರ್ಯ ಮತ್ತು ದೈವಿಕ ಶಕ್ತಿಯ ಪರಮ ಕ್ಷೇತ್ರ ಇದಾಗಿದೆ. ಸುತ್ತಲೂ ತೋಟ ಗದ್ದೆಗಳ ನಡುವೆ ವಿಶಾಲ ಕೆರೆಯ ಮಧ್ಯೆ ಇರುವ ನಕ್ಷತ್ರಾಕಾರದ ಚತುರ್ಮುಖ ಬಸದಿ (Chaturmukha Jaina Basadi). ಇದರ ಬಗ್ಗೆ ಹುಡುಕಿದಷ್ಟು ಕುತೂಹಲಕಾರಿ ಸಂಗತಿಗಳು ಸಿಗುತ್ತಲೇ ಹೋಗುತ್ತದೆ. ಇನ್ನು ಈ ಸ್ಥಳಕ್ಕೆ ಮದುವೆಗಾಗಿ ಹರಕೆ ಹೇಳಿಕೊಳ್ಳಲು ಬರುವವರೇ ಹೆಚ್ಚಾಗಿದ್ದು, ಇಲ್ಲಿ ಬಂದು ಹೋದ ಬಳಿಕ ಅವರಿಗೆ ಮದುವೆ ಆಗದಿರುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗಾಗಿ ಹರಕೆ ಹೇಳಿ ಹೋದವರು ಮದುವೆಯಾದ ಬಳಿಕ ಇಲ್ಲಿಗೆ ಬಂದು ಹೋಗುತ್ತಾರೆ. ಹಾಗಾದರೆ ಇದರ ಇತಿಹಾಸವೇನು? ಯಾಕೆ ಈ ರೀತಿಯ ಹೆಸರು ಬಂತು? ಇಲ್ಲಿಗೆ ಹೋಗುವುದು ಹೇಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಬಸದಿಯ ಇತಿಹಾಸವೇ ಬಲು ಸೊಗಸು
ವರಂಗ ಹೆಚ್ಚು ಕಡಿಮೆ ಸಾವಿರ ವರ್ಷ ಇತಿಹಾಸ ಹೊಂದಿರುವ, ಜೈನ ಬಸದಿಯಾಗಿದ್ದು ಜೈನ ತೀರ್ಥಂಕರರಾದ ಪಾರ್ಶ್ವನಾಥ, ಅನಂತನಾಥ, ನೇಮಿನಾಥ, ಶಾಂತಿನಾಥ ವಿಗ್ರಹಗಳು ಖಡ್ಗಾಸನ ಭಂಗಿಯ ಕರಿ ಶಿಲೆಯಲ್ಲಿ ಕೆತ್ತಲ್ಪಟ್ಟವೆ. ಹೊಯ್ಸಳ ಮತ್ತು ಚಾಲುಕ್ಯ ಶೈಲಿಗಳ ಸಮ್ಮಿಶ್ರಣವಿದು. ಈ ವಿಗ್ರಹಗಳ ಎರಡೂ ಬದಿಗಳಲ್ಲಿ ಆಯಾ ತೀರ್ಥಂಕರರ ಯಕ್ಷ, ಯಕ್ಷಿಯರ ಬಿಂಬಗಳಿವೆ. ಪೂರ್ವದಲ್ಲಿರುವ ಪಾರ್ಶ್ವನಾಥ ವಿಗ್ರಹದ ಪಕ್ಕ ಪದ್ಮಾವತಿ ದೇವಿಯ ಬಿಂಬವಿದೆ. ಅವಳೇ ಇಲ್ಲಿನ ಪ್ರಧಾನ ಶಕ್ತಿ. ಈ ಗುಡಿಯಲ್ಲಿರುವ ಮೂರ್ತಿಗಳು 12ನೇ ಶತಮಾನದವು ಎಂದು ನಂಬಲಾಗಿದೆ. ಇನ್ನು ಈ ಕೆರೆಯನ್ನು ಆಳುಪ ರಾಣಿ ಜಾಕಲಿ ದೇವಿ ನಿರ್ಮಿಸಿದ್ದಾಳೆ ಎಂಬ ಐತಿಹ್ಯವಿದೆ. ಜೊತೆಗೆ ವರಂಗ ಎಂಬ ಹೆಸರು ಬರುವುದಕ್ಕೆ ಜನಾನುರಾಗಿಯಾಗಿದ್ದ ವರಂಗ ಎಂಬ ರಾಜ ಈ ಪ್ರದೇಶವನ್ನು ಆಳುತ್ತಿದ್ದುದರಿಂದ ಅವನದೇ ಹೆಸರು ಊರಿಗೆ ಇಡಲಾಗಿದೆ ಎಂದು ಹೇಳಲಾಗುತ್ತದೆ. ಇನ್ನೊಂದು ಐತಿಹ್ಯದ ಪ್ರಕಾರ, ಇಲ್ಲಿನ ನೇಮಿನಾಥ ಮೂರ್ತಿ ಕೆಲವೇ ಡಿಗ್ರಿ ವಾಲಿಕೊಂಡಿದ್ದು, ವಾರೆ ಅಂಗ ಎಂಬ ನೆಲೆಯಲ್ಲಿ ವರಂಗ ಹುಟ್ಟಿಕೊಂಡಿತು ಎಂದು ನಂಬಲಾಗಿದೆ.

ಮದುವೆಗೆ ಬರುವ ಅಡೆತಡೆ ನಿವಾರಿಸುತ್ತಾಳೆ ಪದ್ಮಾವತಿ ಅಮ್ಮ
ಸಾಮಾನ್ಯವಾಗಿ ಇಲ್ಲಿಗೆ ಮದುವೆಗಾಗಿ ಹರಕೆ ಹೇಳಿಕೊಳ್ಳಲು ಬರುವವರೇ ಹೆಚ್ಚಾಗಿರುತ್ತಾರೆ. ಅದರಲ್ಲಿಯೂ ಜಾತಕದಲ್ಲಿ ಸಮಸ್ಯೆ ಇರುವವರು, ಪದೇ ಪದೇ ಮದುವೆ ಮುರಿದು ಬಿದ್ದು ಅಪಶಕುನ ಅನುಭವಿಸುತ್ತಿರುವವರು, ಪ್ರೀತಿಸಿದರೂ ಮದುವೆಯಾಗಲೂ ಕಾಲ ಕೂಡಿ ಬರದಿರುವವರು ಹೀಗೆ ನಾನಾ ರೀತಿಯ ಸಮಸ್ಯೆಗಳಿರುವವರು ಇಲ್ಲಿಗೆ ಬರುತ್ತಾರೆ. ಆದರೆ ಇಲ್ಲಿನ ವಿಶೇಷತೆ ನೋಡಿ ಯಾವುದೇ ರೀತಿ ಮದುವೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊತ್ತು ತಂದರೂ ಕೂಡ ಇಲ್ಲಿ ಕುಳಿತಿರುವ ತಾಯಿ ನಿಮ್ಮನ್ನು ತನ್ನ ಮಕ್ಕಳಂತೆ ನೋಡಿ, ಕಷ್ಟ ಪರಿಹರಿಸಿ ನಿಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಮಾಡುತ್ತಾಳೆ. ಇಲ್ಲಿ ದೇವರ ಬಳಿ ಮದುವೆಗೆ ಸಂಬಂಧಿಸಿದಂತೆ ಪ್ರಸಾದವನ್ನು ಕೂಡ ಕೇಳಲಾಗುತ್ತದೆ. ಅದರ ಪ್ರತಿಕವಾಗಿಯೇ ಇಲ್ಲಿಗೆ ಬಂದು ಹರಕೆ ಕಟ್ಟಿದ ಮೇಲೆ ಮದುವೆಯಾದವರು ಜೋಡಿಯಾಗಿ ಬಂದು ಪೂಜೆ ಸಲ್ಲಿಸಿ ಹೋಗುವುದು ಇಲ್ಲಿನ ವಿಶೇಷ. ಮಾತ್ರವಲ್ಲ, ಇದರ ಜತೆಗೆ ಚರ್ಮ ರೋಗಗಳಿಗೆ ಹಲವರು ಹರಕೆ ಹೇಳಿಕೊಳ್ಳುತ್ತಾರೆ. ಸಮಸ್ಯೆ ಪರಿಹಾರವಾದಾಗ ಕುಡು -ಅರಿ ಅಂದರೆ ಬೆಳ್ತಿಗೆ ಅಕ್ಕಿ, ಹುರುಳಿಯನ್ನು ದೇವರಿಗೆ ಅರ್ಪಿಸುತ್ತೇವೆ ಎಂದು ಬೇಡಿಕೊಳ್ಳಲಾಗುತ್ತದೆ. ಬಳಿಕ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಕಡಿಮೆಯಾದ ಮೇಲೆ ಅಲ್ಲಿಗೆ ಹೋಗಿ ಕೆರೆಯ ಸುತ್ತ ಇರುವ ಮೀನಿಗೆ, ಅಕ್ಕಿ, ಹುರುಳಿಯನ್ನು ಹಾಕಿ ಬರಲಾಗುತ್ತದೆ.

ಈ ಬಸದಿಗೆ ಅರ್ಚಕರೇ ಅಂಬಿಗ
ಕೆರೆಯ ನಡುವೆ ಇರುವ ಈ ಬಸದಿಗೆ ಹೋಗುವುದಕ್ಕೆ ಈ ದೇವಸ್ಥಾನದ ಅರ್ಚಕರೇ ಅಂಬಿಗ. ಇಲ್ಲಿ ಮೂರು ಹೊತ್ತು ಪೂಜೆ ನಡೆಯುವುದರಿಂದ ಅವರು ಪೂಜೆಗೆ ಹೋಗುವ ಸಮಯದಲ್ಲಿ ಎಷ್ಟೇ ಜನ ಬಂದರೂ ದೋಣಿಯಲ್ಲಿ ಬಂದು ಕರೆದೊಯ್ಯುತ್ತಾರೆ. ಬಸದಿಯಲ್ಲಿ ಪೂಜೆ ಮಾಡಿ ಪ್ರಸಾದ ನೀಡುತ್ತಾರೆ. ಬಳಿಕ ಕರೆದುಕೊಂಡು ಹೋದವರನ್ನು ಮತ್ತದೇ ದಡಕ್ಕೆ ತಂದು ಬಿಡುತ್ತಾರೆ. ಸೋಮವಾರ, ಶುಕ್ರವಾರ, ಮಂಗಳವಾರ ಮತ್ತು ಪರ್ವ ದಿನಗಳಲ್ಲಿ ಇಲ್ಲಿ ಪದ್ಮಾವತಿ ದೇವಿಗೆ ವಿಶೇಷ ಪೂಜೆ ಇರುತ್ತದೆ. ಅದರಲ್ಲಿಯೂ ಸಿಂಹ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ ಎಂದು ಇಲ್ಲಿನ ಜನ ಹೇಳುತ್ತಾರೆ.
ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?
ಇಲ್ಲಿಗೆ ಹತ್ತಿರವಿರುವ ಪ್ರವಾಸಿ ತಾಣಗಳು
ವರಂಗ ಇರುವುದು ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿ.ಮೀ. ದೂರದಲ್ಲಿದೆ. ಈ ಸ್ಥಳ ಕಾರ್ಕಳದಿಂದ ಸುಮಾರು 25 ಕಿ.ಮೀ., ಉಡುಪಿಯಿಂದ 37 ಕಿ.ಮೀ. ಮಂಗಳೂರಿನಿಂದ 85 ಕಿ.ಮೀ. ದೂರವಿದೆ. ಇಲ್ಲಿಗೆ ಬಂದವರು ಕುಂದಾದ್ರಿ, ಆಗುಂಬೆ, ಕೂಡ್ಲು ಜಲಪಾತವನ್ನು ವೀಕ್ಷಿಸಬಹುದು. ಹೆಚ್ಚಿನ ಸಮಯವಿದ್ದರೆ ಇಲ್ಲೇ ಹತ್ತಿರವಿರುವ ಕೆರೆಯ ಪಕ್ಕವೇ ಇರುವ ಬೇಡ ರಾಜನ ಅರಮನೆಯ ಕುರುಹುಗಳಿರುವ ಬೆಟ್ಟವನ್ನು ಹತ್ತಿಳಿಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








