
ನಮ್ಮ ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಇಲ್ಲಿ ಸ್ಥಳದಿಂದ ಸ್ಥಳಕ್ಕೆ ಆಹಾರ ಪದ್ಧತಿ, ಭಾಷೆ, ಆಚಾರ ವಿಚಾರ ಪ್ರತಿಯೊಂದರಲ್ಲೂ ಸಾಕಷ್ಟು ಭಿನ್ನತೆಗಳಿರುತ್ತವೆ. ಆದರೆ ರಾಜಕಾರಣಿಗಳ ಉಡುಗೆಯಲ್ಲಿ ಮಾತ್ರ ಯಾವುದೇ ಬದಲಾವಣೆಗಳಿಲ್ಲ. ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಬ್ಬ ರಾಜಕಾರಣಿಗಳು ಸಹ ಹೆಚ್ಚಾಗಿ ಬಿಳಿ ಬಣ್ಣದ ಉಡುಗೆಯನ್ನೇ (white clothes) ತೊಡುತ್ತಾರೆ. ಬಹುತೇಕ ರಾಜಕಾರಣಿಗಳು ಬಿಳಿ ಬಣ್ಣದ ಕುರ್ತಾ-ಪೈಜಾಮ, ಧೋತಿ ಅಥವಾ ಲುಂಗಿ, ಪ್ಯಾಂಟ್ ಶರ್ಟ್ ಧರಿಸುತ್ತಾರೆ. ಇತರ ದೇಶಗಳ ರಾಜಕಾರಣಿಗಳು ಕಪ್ಪು ಸೂಟ್ ಮತ್ತು ಬೂಟುಗಳಲ್ಲಿ ಕಾಣಿಸಿಕೊಂಡರೆ ಭಾರತೀಯ ರಾಜಕಾರಣಿಗಳು ಮಾತ್ರ ಬಿಳಿ ಬಣ್ಣದ ಉಡುಗೆಯನ್ನೇ ಧರಿಸುವುದೇಕೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದೆಯೂ ಒಂದು ಕಾರಣವಿದೆಯಂತೆ, ಅದೇನಂಬುದನ್ನು ನೋಡೋಣ ಬನ್ನಿ.
ಈ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವ ಸಂಪ್ರದಾಯ ಸ್ವಾತಂತ್ರ್ಯ ಹೋರಾಟ ಯುಗದ ನಾಯಕರಿಂದ ಪ್ರಾರಂಭವಾಯಿತು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ, ಮಹಾತ್ಮ ಗಾಂಧಿಜೀ ಸ್ವದೇಶಿ ಉತ್ಪನ್ನಗಳ ಬಳಕೆಗೆ ಘೋಷಣೆಯನ್ನು ನೀಡಿದರು. ನೂಲುವ ಚಕ್ರದ ಮೇಲೆ ಖಾದಿ ಬಟ್ಟೆಗಳನ್ನು ತಯಾರಿಸಿ ಅದನ್ನೇ ಧರಿಸಲು ತಮ್ಮ ದೇಶವಾಸಿಗಳನ್ನು ಪ್ರೋತ್ಸಾಹಿಸಿದರು. ಇವರ ಕರೆಗೆ ಓಗೊಟ್ಟ ಜನರು ವಿದೇಶಿ ಉತ್ಪನ್ನಗಳನ್ನು ಸಂಗ್ರಹಿಸಿ ದೊಡ್ಡ ಪ್ರಮಾಣದಲ್ಲಿ ಸುಟ್ಟು ಹಾಕಿದರು. ಖಾದಿಯಿಂದ ತಯಾರಿಸಿದ ಬಟ್ಟೆಗಳು ಹೆಚ್ಚಾಗಿ ಬಿಳಿ ಬಣ್ಣದ್ದಾಗಿದ್ದವು. ಆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಖಾದಿ ಬಟ್ಟೆಳನ್ನೇ ಧರಿಸಲು ಆರಂಭಿಸಿದರು. ಹೌದು ಆ ಸಮಯದಲ್ಲಿ, ಸ್ವಾತಂತ್ರ್ಯ ಹೋರಾಟಗಾರರು, ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಎಲ್ಲಾ ಭಾರತೀಯರು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದರು. ಮತ್ತು ಕಾಲಾನಂತರದಲ್ಲಿ, ಈ ಬಣ್ಣವು ನಾಯಕರ ಗುರುತಾಯಿತು. ಕ್ರಮೇಣ ಈ ಬಣ್ಣದ ಉಡುಗೆ ರಾಜಕಾರಣಿಗಳ ವಿಶಿಷ್ಟ ಲಕ್ಷಣವಾಯಿತು. ಅಂದಿನಿಂದ ಇಂದಿನವರೆಗೆ, ಭಾರತೀಯ ರಾಜಕಾರಣಿಗಳು ಹೆಚ್ಚಾಗಿ ಬಿಳಿ ಬಟ್ಟೆಗಳನ್ನೇ ಧರಿಸುತ್ತಿದ್ದಾರೆ.
ಇದನ್ನೂ ಓದಿ: ಭಾರತದಂತೆಯೇ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವ ದೇಶಗಳಿವು
ಬಣ್ಣಗಳು ಜೀವನಕ್ಕೆ ಸೌಂದರ್ಯವನ್ನು ತರುವುದಲ್ಲದೆ, ವ್ಯಕ್ತಿಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಪ್ರತಿಯೊಂದು ಬಣ್ಣವು ಒಂದು ನಿರ್ದಿಷ್ಟ ಗುಣದೊಂದಿಗೆ ಸಂಬಂಧ ಹೊಂದಿದೆ. ಬಿಳಿ ಬಣ್ಣವನ್ನು ಶಾಂತಿ, ಶುದ್ಧತೆ ಮತ್ತು ಕಲಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಬಿಳಿ ಬಣ್ಣವನ್ನು ಸತ್ಯ ಮತ್ತು ಅಹಿಂಸೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣದ ಬಟ್ಟೆ ಧರಿಸುವುದರಿಂದ ಸರಳತೆ ಹಾಗೂ ನಾಯಕತ್ವದ ಭಾವನೆಯನ್ನು ಮೂಡಿಸುತ್ತದೆ. ಈ ಬಣ್ಣ ಎಲ್ಲರೂ ಸಮಾನರು ಎಂಬ ಭಾವನೆಯನ್ನು ಮೂಡಿಸುತ್ತದೆ. ಈ ಕಾರಣಕ್ಕಾಗಿಯೇ ಭಾರತದ ರಾಜಕೀಯ ನಾಯಕರು ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ