Book Release : ಅಚ್ಚಿಗೂ ಮೊದಲು : ಕಲಾವಿದ ಪುಂಡಲೀಕ ಕಲ್ಲಿಗನೂರರ ‘ಚಾಲುಕ್ಯರ ಶಿಲ್ಪಕಲೆ’ ಕೃತಿ ಇಂದಿನಿಂದ ಲಭ್ಯ

|

Updated on: Dec 11, 2021 | 11:35 AM

Library : ‘ಅಂತರಂಗದ ಅನುರಣನ ಯಾರು ಕೇಳಬೇಕು... ನಾನೇ ಗೊಂದಲದ ಗೂಡು. ನನ್ನ ಗ್ರಂಥಾಲಯವಲ್ಲದೆ, ಬೇರೆ ಬೇರೆ ಗ್ರಂಥಾಲಯಗಳತ್ತ ನನ್ನ ಪಯಣ. ಕಬ್ಬನ್ ಪಾರ್ಕಿನಲ್ಲಿರುವ ರಾಜ್ಯಕೇಂದ್ರ ಗ್ರಂಥಾಲಯಕ್ಕೆ ಸುಮ್ಮನೆ ಹೋಗಿ ಈ ರೀತಿಯ ಗ್ರಂಥಗಳನ್ನು ನೋಡಿದೆ. ನಮ್ಮ ದೇಶದ ಗ್ರಂಥಗಳು ಕಡಿಮೆ, ಆದರೆ ಮೌಲಿಕವಾಗಿದ್ದವು. ವಿನ್ಯಾಸದ ದೃಷ್ಟಿಯಿಂದ ತುಂಬ ಕರಾರುವಾಕ್ಕಾಗಿ, ಘನ ಉದ್ದೇಶದೊಂದಿಗೆ ಹೊರಬಂದಿವೆ ಎನಿಸಿತು.’ ಪುಂಡಲೀಕ ಕಲ್ಲಿಗನೂರು

Book Release : ಅಚ್ಚಿಗೂ ಮೊದಲು : ಕಲಾವಿದ ಪುಂಡಲೀಕ ಕಲ್ಲಿಗನೂರರ ‘ಚಾಲುಕ್ಯರ ಶಿಲ್ಪಕಲೆ’ ಕೃತಿ ಇಂದಿನಿಂದ ಲಭ್ಯ
ಕಲಾವಿದ ಪುಂಡಲೀಕ ಕಲ್ಲಿಗನೂರ
Follow us on

ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ‘ಶೆಲ್ಫಿಗೇರುವ ಮುನ್ನ’ ಹೊಸ ಅಂಕಣದಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ.

ಪ್ರಕಾಶಕರು ಮತ್ತು ಬರಹಗಾರರು ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com 

ಕೃತಿ : ಚಾಲುಕ್ಯರ ಶಿಲ್ಪಕಲೆ (ಬಾದಾಮಿ ಐಹೊಳೆ ಪಟ್ಟದಕಲ್ಲು ಮತ್ತು ಮಹಾಕೂಟ)
ಲೇಖಕರು : ಪುಂಡಲೀಕ ಕಲ್ಲಿಗನೂರ
ಪುಟ : 520
ಬೆಲೆ : ರೂ. 2,400
ಛಾಯಾಚಿತ್ರಗಳು : ವಿಪಿನ್ ಬಾಳಿಗಾ, ಎಸ್. ರಾಘವೇಂದ್ರ, ಮಂಜುನಾಥ ರಾಠೋಡ
ಮುಖಪುಟ ವಿನ್ಯಾಸ : ರೂಪಶ್ರೀ ಕಲ್ಲಿಗನೂರ
ಪ್ರಕಾಶನ : ಕನ್ನಡ ಪ್ರಕಾಶನ, ಗಜೇಂದ್ರಗಡ

*

ಇಂದು ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಈ ಕೃತಿ ಲೋಕಾರ್ಪಣೆಗೊಳ್ಳುತ್ತಿರುವ ಸಂದರ್ಭದಲ್ಲಿ ಕಲಾವಿದ ಪುಂಡಲೀಕ ಕಲ್ಲಿಗನೂರು ಅವರ ಅರಿಕೆ ನಿಮ್ಮ ಓದಿಗೆ.

*

ಕನ್ನಡದ ಸಾಂಸ್ಕೃತಿಕ ಪರಂಪರೆಯ ಹಿನ್ನೋಟವನ್ನು ನೋಡುವಾಗ, ಅದರ ಇನ್ನು ಎಷ್ಟೋ ಮುಖಗಳೊಂದಿಗೆ ಮುಖಾಮುಖಿಯಾಗುವ ಮಹತ್ವಾಕಾಂಕ್ಷೆಯ ಅಪೂರ್ವ ಸಾಹಸಿಗರ ಅಗತ್ಯ ಕಾಣುತ್ತೇವೆ. ಈ ನೋಟಕ್ಕೆ ನೇರವಾಗುವಂತೆ, ಪೂರಕವಾಗಿ ನಮ್ಮ ಮುಂದೆ ಕಾಣುವ ಪುಂಡಲೀಕ ಕಲ್ಲಿಗನೂರು ಅವರ ಈ ಕೃತಿ  ಮೂಡಿಬಂದಿದೆ. ಒಳಹೊಕ್ಕಂತೆ ಕಾಣುವ ದೃಶ್ಯಾಕ್ಷರ ಲೋಕಗಳು ಆನಂದದ ಜೊತೆಗೆ, ಬೆರಗನ್ನೂ ಉಂಟುಮಾಡುತ್ತವೆ. ಕನ್ನಡ ದೃಶ್ಯಕಲಾ ಸಾಹಿತ್ಯದಲ್ಲಿ ಅಪರೂಪವಾಗಿರುವ, ಮಹತ್ವಾಕಾಂಕ್ಷೆಯ ಜೊತೆಜೊತೆಗೆ ವಿನಯವನ್ನೂ ಅವರು ಅರಗಿಸಿಕೊಂಡಿರುವುದು, ಕನ್ನಡ ದೃಶ್ಯಕಲಾ ಸಾಹಿತ್ಯಕ್ಕೆ ಗೌರವವನ್ನು ತಂದು ಕೊಡಬಲ್ಲದು. ಹಾಗಾಗಿಯೇ, ಇದೊಂದು “ದೊಡ್ಡ ಸಾಗರ ಸದೃಶ್ಯ ಕಲಾಕೀರ್ತಿಯ, ಒಂದು ಮಗ್ಗುಲಿನ ಒಂದಿಷ್ಟು ಅಳಿಲು ಪ್ರಯತ್ನ ಈ ಕೃತಿ. ಇದು ಪ್ರಾರಂಭವೂ ಅಲ್ಲ, ಅಂತ್ಯವೂ ಅಲ್ಲ…” ಎಂದೇ ತಮ್ಮ ಪುಸ್ತಕವನ್ನು, ಅವರು ನಿರಚನೆಯ ತಾತ್ವಿಕತೆಯಲ್ಲಿ ಗ್ರಹಿಸಿದ್ದಾರೆ. ಮುಖ್ಯವಾಗಿ ತಮ್ಮ ಬಹುಸಂಖ್ಯೆಯ ಅಧ್ಯಾಯಗಳಲ್ಲಿ ಅವರು, ಚಾಲುಕ್ಯರ ಕಲೆಯಲ್ಲಿ ಈಗಾಗಲೇ ಎಲ್ಲರೂ ನೋಡುತ್ತ ಬಂದಿರುವ ನೋಟಗಳನ್ನು ವಿಭಿನ್ನವಾಗಿ ಕಾಣಿಸಿರುವುದು ಗಮನಿಸುವಂತಿದೆ. ಜೊತೆಗೆ  ಶೋಧನಾತ್ಮಕ, ಕೌತುಕಮಯ ಅಧ್ಯಾಯಗಳನ್ನೂ ಅವರು ಶ್ರಮವಹಿಸಿ ರೂಪಿಸಿದ್ದಾರೆ.
ಕೆ.ವಿ. ಸುಬ್ರಹ್ಮಣ್ಯ, ದೃಶ್ಯಕಲಾ ಇತಿಹಾಸಕಾರರು

*

ಬಾಲ್ಯದಿಂದಲೂ ನಮ್ಮೂರು ಗಜೇಂದ್ರಗಡದಿಂದ ಆಗಾಗ ಬಾದಾಮಿಯ ಮೇಣಬಸದಿಗೆ ಹೋಗಿಬರುತ್ತಿದ್ದೆ. ಅದೇನು ನೋಡುತ್ತಿದ್ದೆನೋ ಅದೆಷ್ಟು ತಿಳಿಯುತ್ತಿತ್ತೋ… ಇವತ್ತಿಗೂ ನನ್ನಲ್ಲಿ ಆ ಗೊಂದಲವಿದೆ. ಬಾದಾಮಿಯೊಂದಿಗೆ ಐಹೊಳೆ ಪಟ್ಟದಕಲ್ಲು ಮಹಾಕೂಟಗಳನ್ನು ಪ್ರತಿಸಾರಿ ಕಂಡಾಗಲೆಲ್ಲ ಹೊಸದಾಗಿ ಕಂಡಿವೆ, ಮಗುವಂತೆ ನೋಡಿದ್ದೇನೆ! ನೋಡುತ್ತಿದ್ದೇನೆ ಕೂಡ. ಬಹುಶಃ ಕಲೆಯ ಹಾದಿಯಲ್ಲಿ ಅಲ್ಪಸ್ವಲ್ಪ ನಡೆದಿದ್ದರೆ ಈ ಪರಿಸರ ಕೊಟ್ಟ ಸ್ಫೂರ್ತಿಯಿಂದ ಎಂದು ಹೇಳಿದರೆ ನಿಜವನ್ನೇ ಹೇಳಿದ ಸಂತೋಷ ನನ್ನದು. ಕಲೆಯ ಒಡನಾಟ ನನ್ನನ್ನು ಇವತ್ತಿಗೂ ಸಂತೋಷವಾಗಿಟ್ಟಿದೆ, ಇದಕ್ಕೆ ನಾನು ಋಣಿ. ಬೆಟ್ಟಗುಡ್ಡಗಳನ್ನು ಹತ್ತುವುದು ಕಣಿವೆಗಳನ್ನು ಇಳಿಯುವುದು, ಕುತೂಹಲಿಯಾಗಿ ಅಲ್ಲಿರುವ ಕೌತುಕಗಳನ್ನು ಬೆರಗುಗಣ್ಣುಗಳಿಂದ ನೋಡುವುದು ಅಪ್ಯಾಯಮಾನವಾದ ಸಂಗತಿ. ಗ್ರಂಥಾಲಯ ಇಲಾಖೆಗೆ ಸೇರಿದ ಮೇಲೆ, ಅಲ್ಲಿರುವ ಗ್ರಂಥಗಳನ್ನು ನೋಡತೊಡಗಿದಮೇಲೆ, ನನ್ನ ಕುತೂಹಲದ ಕಣ್ಣುಗಳಿಗೆ ರೆಕ್ಕೆ ಬಂದಂತಾಯಿತು. ನೋಡಿದ ನೋಟಗಳು ಅರ್ಥವಾಗತೊಡಗಿದವು. ಬಾಲ್ಯದ ಕಲೆಯ ಗೀಳು ಗರಿಗೆದರಿ ಈಗ ನಿಮ್ಮೊಂದಿಗಿದ್ದೇನೆ. ನೋಡಿದ ನೋಟ ನಮಗೆ ಮಾಟವಾಗಿ ಕಾಣುವುದು ಯಾವಾಗ? ನಮಗೆ ಯೌವನ ಬಂದಾಗ ಎಂದು ಕಾಣುತ್ತದೆ, ಊಹುಂ ಇರಲಿಕ್ಕಿಲ್ಲ; ಅದರ ಮೇಲೆ ಪ್ರೀತಿ, ಅಭಿಲಾಷೆ ಮೂಡಿದಾಗ ಎಂದೆನಿಸುತ್ತದೆ. ಬಹುಶಃ ಇದೇ ಹೆಚ್ಚು ಸರಿಯಿರಬೇಕು. ಲೆಕ್ಕ ಬಿಚ್ಚಿಕೊಳ್ಳುವಂಥದಲ್ಲ!

ನನಗೆ ಈ ಕೃತಿಯ ಮೋಹ ಇಂದು ನಿನ್ನೆಯದಲ್ಲ, ಹಲವಾರು ವರುಷಗಳ ಪಯಣ. ಮೊದಲು ಜೊತೆಯಾದವರು ವಿಪಿನ್ ಬಾಳಿಗಾ, ವಿರಾಜಪೇಟೆಯವರು. ಛಾಯಾಗ್ರಾಹಕರು. ಕಾಡಿನ ಬಗೆಗೆ ಅಪಾರ ಪ್ರೀತಿಯುಳ್ಳ ಪರಿಸರ ಪ್ರೇಮಿ.  2017 ರಲ್ಲಿ ಇವರನ್ನು ಕರೆದುಕೊಂಡು ಬಾದಾಮಿಗೆ ಹೋಗಿ ನಾಲ್ಕು ದಿನ ಇದ್ದು ಆ ಪರಿಸರದ, ಬಾದಾಮಿಯನ್ನು ಒಳಗೊಂಡಂತೆ ಐಹೊಳೆ ಪಟ್ಟದಕಲ್ಲಿನ ಫೋಟೋಗಳನ್ನು ಕ್ಲಿಕ್ಕಿಸಿ ತಂದು ನನ್ನ ಕಂಪ್ಯೂಟರಿಗಿಳಿಸಿದೆ. ಸಾವಿರಾರು ಫೋಟೋಗಳು. ಗ್ರಂಥರೂಪ ಕೊಡಲು ಪುಟವಿನ್ಯಾಸಕ್ಕಿಳಿದೆ. ಯಾವುದನ್ನು ಹಾಕುವುದು, ಯಾವುದನ್ನು ಬಿಡುವುದು… ಒಂದಕ್ಕಿಂತ ಒಂದು ಚೆಂದ. ಮೋಹ ಬೆಳೆದಂತೆಲ್ಲಾ ಪುಟವಿನ್ಯಾಸ ಬದಲಿಸುತ್ತಾ ಬಂದೆ. ಮುರಿಮುರಿದು ಕಟ್ಟಿದೆ. ವಿಷಯಾವಾರು ವಿಂಗಡಿಸಿದೆ.  ವಿಷಯಾವಾರು ಪುಟಗಳನ್ನು ಸಿದ್ಧಗೊಳಿಸಿದ ಮೇಲೆ… ಎಲ್ಲೋ ಕೊರತೆ ಕಾಣತೊಡಗಿತು!

ಛಾಯಾಚಿತ್ರ : ವಿಪಿನ್ ಬಾಳಿಗಾ, ರೇಖಾಚಿತ್ರ : ಪುಂಡಲೀಕ ಕಲ್ಲಿಗನೂರು

ಮತ್ತೆ ಬೆಂಗಳೂರಿನಿಂದ ನಮ್ಮ ವಿಪಿನ್ ಅವರನ್ನು ಕಟ್ಟಿಕೊಂಡು ಬಾದಾಮಿಗೆ ಹಾರಿದೆ. ಈ ಸಲ ವಿಪಿನ್ ಗೆಳೆಯ ರಾಘವೇಂದ್ರ ಕೂಡ ಎಕ್ಸ್ಟ್ರಾ ಝೂಮ್, ಎಕ್ಸ್ಟ್ರಾ ವೈಡ್-ಲೆನ್ಸ್ ಮತ್ತು ಎಕ್ಸ್ಟ್ರಾ ಕ್ಯಾಮರಾದೊಂದಿಗೆ ನಮಗೆ ಜೊತೆಯಾದರು. ಇಬ್ಬರೂ ನಿಕಾನ್, ಕೆನಾನ್​ನ ಹೈಎಂಡ್ ಕ್ಯಾಮೆರಾ ಹೊಂದಿದ ವೀರರು. ಅವರು ಬೆನ್ನಿಗೆ ಹಾಕಿಕೊಂಡಿರುವ ಹೆಣಭಾರದ, ಇಳಿಬಿದ್ದ ಚುಂಗುಗಳ ಬ್ಯಾಗು, ಮತ್ತು ಉಟ್ಟ ಬಟ್ಟೆಗಳಲ್ಲಿ ನನಗೆ ಹಾಗೆಯೇ ಅನ್ನಿಸುತ್ತಿರುತ್ತದೆ. ಅಷ್ಟೇ ಅಲ್ಲ, ಯಾವುದೇ ಸ್ಥಳ, ಪರಿಸರ ಮತ್ತು ಪರಿಸ್ಥಿತಿಗಳಲ್ಲಿ ಸ್ವಲ್ಪವೂ ಹಿಂದೆ ಮುಂದೆ ನೋಡದೇ… ಅಡ್ಡಬಿದ್ದು ಉದ್ದಬಿದ್ದು, ಕೂತು ನಿಂತು ಅಂಗಾತ ಮಲಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಟ್ಟಿದ್ದಾರೆ.

ಅಂತರಂಗದ ಅನುರಣನ ಯಾರು ಕೇಳಬೇಕು… ನಾನೇ ಗೊಂದಲದ ಗೂಡು. ನನ್ನ ಗ್ರಂಥಾಲಯವಲ್ಲದೆ, ಬೇರೆ ಬೇರೆ ಗ್ರಂಥಾಲಯಗಳತ್ತ ನನ್ನ ಪಯಣ. ಕಬ್ಬನ್ ಪಾರ್ಕಿನಲ್ಲಿರುವ ರಾಜ್ಯಕೇಂದ್ರ ಗ್ರಂಥಾಲಯಕ್ಕೆ ಸುಮ್ಮನೆ ಹೋಗಿ ಈ ರೀತಿಯ ಗ್ರಂಥಗಳನ್ನು ನೋಡಿದೆ. ನಮ್ಮ ದೇಶದ ಗ್ರಂಥಗಳು ಕಡಿಮೆ, ಆದರೆ ಮೌಲಿಕವಾಗಿದ್ದವು. ವಿನ್ಯಾಸದ ದೃಷ್ಟಿಯಿಂದ ತುಂಬ ಕರಾರುವಾಕ್ಕಾಗಿ, ಘನ ಉದ್ದೇಶದೊಂದಿಗೆ ಹೊರಬಂದಿವೆ ಎನಿಸಿತು. ಬೇರೆ ದೇಶದ ಪುಸ್ತಕಗಳತ್ತ ಕಣ್ಣುಹಾಯಿಸಿದರೆ, ಬೆಕ್ಕಸಬೆರಗಾಗುವಷ್ಟು ಪ್ರಮಾಣದಲ್ಲಿ ಬರುತ್ತಿವೆ. ಬಹುಪಾಲು ಪ್ರವಾಸದ ಭಾಗಗಳು. ಕೆಲವು ಮಾತ್ರ ಸ್ಥಳ ಪರಿಚಯಗಳನ್ನು ಹೇಳಲು ಬಂದವುಗಳು. ಕೆಲವು ನಿಜವಾಗಿಯೂ ಚೆನ್ನಾಗಿ ಬಂದಿವೆ, ಹೋಗಿ ನೋಡಬೇಕೆಂಬ ಹಂಬಲ ಹುಟ್ಟಿಸುವಂತಿದ್ದವು.

ಕಣ್ ದಿಟ್ಟಿ ಹರಿದತ್ತ ಗ್ರಂಥಗಿರಿ ಪಂಕ್ತಿಗಳು
ನಿಂತು ಬೆರಗೀಯುತಿವೆ ಪುಸ್ತಕಾಲಯದಲ್ಲಿ
ಇವುಗಳಡಿ ನಾಧೂಳ ಕಣವಾಗಿ ನಿಲ್ಲುವೆನು

ಚಣಕಾಲ ಬಂದು ನಿಂತರೆ ಸಾಕು,
ನನ್ನ ಮತಿ ಮುದುಡಿಹೋಗುವುದಿಲ್ಲಿ
ನನ್ನಹಂಕಾರವನು ನುಚ್ಚು ನೂರಾಗಿಸುವುದಿಲ್ಲಿ
ಎನಿತು ಹಿರಿಬಾಳುಗಳ ಮೇಳ ನೆರೆದಿಹುದಿಲ್ಲಿ.

*

(ಖರೀದಿಗೆ ಸಂಪರ್ಕಿಸಿ : 8123496789)

ಇದನ್ನೂ ಓದಿ : Book Release : ಅಚ್ಚಿಗೂ ಮೊದಲು ; ಇಂದು ಧಾರವಾಡದಲ್ಲಿ ಆರಿಫ್ ರಾಜಾ ‘ಎದೆ ಹಾಲಿನ ಪಾಳಿ’ ಕವನ ಸಂಕಲನ ಬಿಡುಗಡೆ