ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕಾದಂಬರಿಕಾರ ವಿವೇಕ ಶಾನಭಾಗ

'ಸುರೇಶ ನಾಗಲಮಡಿಕೆಯವರ ಅಧ್ಯಯನಶೀಲ ಬರಹಗಳು ನನ್ನಲ್ಲಿ ವಿಶೇಷ ಉತ್ಸಾಹವನ್ನು ಹುಟ್ಟಿಸಿವೆ. ವಿವರಗಳ ನಡುವೆ ಮೇಲ್ನೋಟಕ್ಕೆ ಕಾಣದ ಸಂಬಂಧಗಳನ್ನು ಹುಡುಕುವ ಕಣ್ಣು ಅವರಿಗಿರುವುದರಿಂದ ಮತ್ತು ಅಗತ್ಯ ಕಂಡಲ್ಲಿ ರಾಜಕೀಯ ಸಮರ್ಪಕತೆಗೆ ಗಂಟು ಬೀಳದೇ ಈಗಾಗಲೇ ಸಮ್ಮತವಾದ ಜನಪ್ರಿಯ ಅಭಿಪ್ರಾಯಗಳನ್ನು ಸಕಾರಣ ವಿರೋಧಿಸುವ ಧೈರ್ಯವಿರುವುದರಿಂದ ಅವರ ಬರವಣಿಗೆಯಲ್ಲಿ ಹಲವು ಹೊಸ ಒಳನೋಟಗಳು ದೊರಕುತ್ತವೆ.' ವಿವೇಕ ಶಾನಭಾಗ.

ವರ್ಷಾಂತ್ಯ ವಿಶೇಷ 2020: 'ಓದಿನಂಗಳ’ದಲ್ಲಿ ಕಾದಂಬರಿಕಾರ ವಿವೇಕ ಶಾನಭಾಗ
ಕಥೆಗಾರ, ಕಾದಂಬರಿಕಾರ ವಿವೇಕ ಶಾನಭಾಗ
Follow us
| Updated By: ganapathi bhat

Updated on:Apr 06, 2022 | 11:06 PM

ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?

‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಕಥೆಗಾರ, ಕಾದಂಬರಿಕಾರ ವಿವೇಕ ಶಾನಭಾಗ ಅವರ ಆಯ್ಕೆಗಳು ಇಲ್ಲಿವೆ.

ಕೃ: ಹಾಡು ಕಲಿಸಿದ ಹರ ಲೇ: ಸುರೇಶ ನಾಗಲಮಡಿಕೆ ಪ್ರ: ದೀಪಂಕರ ಪುಸ್ತಕ, ಬೆಂಗಳೂರು.

ಕನ್ನಡದ ಯುವ ವಿಮರ್ಶಕರಲ್ಲಿ ಸುರೇಶ ನಾಗಲಮಡಿಕೆಯವರ ಅಧ್ಯಯನಶೀಲ ಬರಹಗಳು ನನ್ನಲ್ಲಿ ವಿಶೇಷ ಉತ್ಸಾಹವನ್ನು ಹುಟ್ಟಿಸಿವೆ. ವಿವರಗಳ ನಡುವೆ ಮೇಲ್ನೋಟಕ್ಕೆ ಕಾಣದ ಸಂಬಂಧಗಳನ್ನು ಹುಡುಕುವ ಕಣ್ಣು ಅವರಿಗಿರುವುದರಿಂದ ಮತ್ತು ಅಗತ್ಯ ಕಂಡಲ್ಲಿ ರಾಜಕೀಯ ಸಮರ್ಪಕತೆಗೆ ಗಂಟು ಬೀಳದೇ ಈಗಾಗಲೇ ಸಮ್ಮತವಾದ ಜನಪ್ರಿಯ ಅಭಿಪ್ರಾಯಗಳನ್ನು ಸಕಾರಣ ವಿರೋಧಿಸುವ ಧೈರ್ಯವಿರುವುದರಿಂದ ಅವರ ಬರವಣಿಗೆಯಲ್ಲಿ ಹಲವು ಹೊಸ ಒಳನೋಟಗಳು ದೊರಕುತ್ತವೆ.

ಪ್ರಸ್ತುತ ಪುಸ್ತಕದಲ್ಲಿ, ಆಧುನಿಕ ಸಾಹಿತ್ಯದಲ್ಲಿ ತರಬೇತಿಗೊಂಡ ಮನಸ್ಸು ಜಾನಪದ ಮಹಾಕಾವ್ಯಗಳ ಸಂಶೋಧನೆಗೆ ಒಡ್ಡಿಕೊಂಡ ಕ್ರಮವು ವಿಶೇಷವಾಗಿದೆ. ಇದು ಕನ್ನಡದ ಸೃಜನಶೀಲ ಬರಹಗಾರರಿಗೆ ಅನೇಕ ಬಗೆಯಲ್ಲಿ ವಿಚಾರಪ್ರಚೋದಕವಾಗಬಹುದು. ಇದನ್ನು ಯಾಕೆ ಹೇಳುತ್ತಿದ್ದೇನೆಂದರೆ, ಕಳೆದೊಂದು ಶತಮಾನದಲ್ಲಿ ಬೆಳೆದು ಬಂದ ಆಧುನಿಕ ಸಾಹಿತ್ಯವು ನಮ್ಮ ಅತ್ಯಂತ ಶ್ರೀಮಂತ ಜಾನಪದ ಪರಂಪರೆಯ ಜೊತೆ ಅಸಮಾನ, ಶಿಥಿಲ ಸಂಬಂಧವನ್ನು ಹೊಂದಿದೆ. ಕಾರಣಗಳ ಹಿಂದೆ ಹೋಗದೇ ಪರಿಣಾಮವನ್ನು ಮಾತ್ರ ನೋಡುವುದಾದರೆ ನಮ್ಮ ಜಾನಪದ ಪರಂಪರೆಯಲ್ಲಿರುವ ಅತ್ಯಂತ ಶ್ರೀಮಂತ ಕಲ್ಪನಾಶಕ್ತಿಯನ್ನು (ಇಮ್ಯಾಜಿನೇಶನ್), ಅದರಲ್ಲಿರುವ ತಾತ್ವಿಕ ಶೋಧನೆ ಹಾಗೂ ವಿಶೇಷ ಕಥನಕ್ರಮಗಳನ್ನು ಆಧುನಿಕ ಕನ್ನಡ ಸಾಹಿತ್ಯವು ಸಮರ್ಥವಾಗಿ, ಸಮಗ್ರವಾಗಿ ಒಳಗೊಂಡಿಲ್ಲ. ನಾಗಲಮಡಿಕೆಯವರು ಈ ಪುಸ್ತಕದ ಮೂಲಕ ಎತ್ತಿ ತೋರಿಸುವ ಅನೇಕ ವಿಷಯಗಳು ಜಾನಪದ ಮತ್ತು ಆಧುನಿಕ ಸಾಹಿತ್ಯದ ಸಂಬಂಧದ ಸಾಧ್ಯತೆಗಳನ್ನು ಚರ್ಚಿಸಲು ಉತ್ತಮ ವೇದಿಕೆಯನ್ನು ಒದಗಿಸುತ್ತವೆ.

ಕೃ: ಊರೆಂಬ ಉದರ ಲೇ: ಪ್ರಮೀಳಾ ಸ್ವಾಮಿ ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ

ಆತ್ಮಕಥೆಯೂ, ಪಾಕಪುಸ್ತಕವೂ, ಗ್ರಾಮವೃತ್ತಾಂತವೂ ಆಗಿರುವ ಈ ಪುಸ್ತಕವನ್ನು ಸುಲಭವಾಗಿ ಒಂದು ಖಾನೆಯಲ್ಲಿ ಕೂರಿಸುವುದು ಕಷ್ಟ. ನಿತ್ಯ ಜೀವನಕ್ಕೂ ಆಹಾರಕ್ಕೂ ಇರುವ ಸಂಬಂಧದ ಸೂಕ್ಷ್ಮಗಳು ಮತ್ತು ವಿಶೇಷತೆಗಳು ಸಮುದಾಯದ ಬಗೆಬಗೆಯ ಘಟನೆಗಳ ಮೂಲಕ, ಪುಟ್ಟ ಹಳ್ಳಿಯೊಂದರಲ್ಲಿ ಜರುಗುವ ಸಂತೆ, ಹಬ್ಬಗಳಂತಹ ಆಚರಣೆಗಳ ಮೂಲಕ, ಊರಿನ ವಿಶಿಷ್ಟ, ವಿಕ್ಷಿಪ್ತ ವ್ಯಕ್ತಿಗಳ ಮೂಲಕ ಇಲ್ಲಿ ಹೃದಯಂಗಮವಾಗಿ ಚಿತ್ರಿಸಲ್ಪಟ್ಟಿವೆ.

ಕುಪ್ಪಹಳ್ಳಿಯೆಂಬ ಊರನ್ನು ಎಷ್ಟು ಸಣ್ಣಸಣ್ಣ ಸೂಕ್ಷ್ಮಗಳಲ್ಲಿ ನಿಬಿಡವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಈ ಕಥನವು ಬೇರೆಲ್ಲೂ ಜರುಗಲು ಸಾಧ್ಯವೇ ಇಲ್ಲವೆನಿಸುತ್ತದೆ. ದಶಕಗಳ ಹಿಂದಿನ ಜೀವನದ ಚಿತ್ರವತ್ತಾದ ವಿವರಗಳನ್ನು ಕಂಡಾಗ ಒಂದು ಸಮಾಜವಾಗಿ ನಾವು ಕಳೆದುಕೊಂಡ ಮುಗ್ಧತೆ, ಜೀವನಪ್ರೀತಿ, ಮನುಷ್ಯರ ನಡುವಿನ ನಂಬಿಕೆಗಳು, ಪರಸ್ಪರ ಅವಲಂಬನೆಯ ಅನಿವಾರ್ಯತೆಯಿಂದ ಹುಟ್ಟುವ ಸ್ನೇಹಗಳು, ಪ್ರಕೃತಿಯೊಡನೆಯ ಸಂಬಂಧಗಳು ತೀವ್ರವಾಗಿ ಕಾಡುತ್ತವೆ. ಕೇವಲ ಘಟನೆಗಳನ್ನು ಮುನ್ನೆಲೆಗೆ ತರುತ್ತ, ತಾವು ಎಲ್ಲೂ ಢಾಳಾಗಿ ಎದ್ದು ಕಾಣದಂತೆ ಬರೆದಿರುವ ಶೈಲಿಯಿಂದ ಇಲ್ಲಿಯ ಬರವಣಿಗೆಗೆ ಸೃಜನಶೀಲ ಕೃತಿಯ ಗುಣ ಪ್ರಾಪ್ತವಾಗಿದೆ. ಕೆಲವು ಭಾಗಗಳಂತೂ ಕಾದಂಬರಿಯೊಂದರ ಸುಂದರ ಅಧ್ಯಾಯಗಳ ಹಾಗಿವೆ.

ಖಾದ್ಯಗಳ ಪಾಕಸೂಕ್ಷ್ಮಗಳನ್ನು ವಿವರಿಸುವಾಗ ಕಾಣುವ ಭಾಷೆಯ ಆತ್ಮೀಯತೆಯು ಇದೆಲ್ಲ ಅಟ್ಟುವುದಕ್ಕೆ ಮಾತ್ರ ಸೀಮಿತವಾಗದೇ, ಅದನ್ನು ಬಡಿಸಿ, ಉಂಡವರ ಸಂತೋಷವನ್ನು ಕಾಣುವವರೆಗೂ ವ್ಯಾಪಿಸಿದೆಯೆಂದು ಹೇಳುವಂತಿದೆ. ಲೇಖಕಿಯ ಪಕ್ವ ಜೀವನದೃಷ್ಟಿ, ಔದಾರ್ಯ, ಸಮುದಾಯದ ಭಾಗವಾಗಿ ಕಂಡುಂಡ ಏಳುಬೀಳುಗಳು ಪುಟಪುಟಗಳಲ್ಲಿ ವ್ಯಕ್ತವಾಗಿದೆ.

ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಕಥೆಗಾರ ಅಮರೇಶ ನುಗಡೋಣಿ

Published On - 6:38 pm, Thu, 31 December 20