Hopscotch : ಅಮಾರೈಟ್? : ಅಗಾ ಬಿಲ್ಲೆ ಎಸೆದಾಯ್ತು! ಇಂದಿನಿಂದ ಭವ್ಯಾ ನವೀನ ಅಂಕಣ ಆರಂಭ

Writing : ನಾವು ಹುಡುಗಿಯರಿದ್ದೀವಲ್ಲ, ಹೆಂಗಸರು ಅಂತಲೇ ಅಂದುಕೊಳ್ಳಿ. ನಮಗೆ ಸಾವಿರ ಕರುಳಿನ ಹಸಿವು. ಆದರೆ ಆಡುವಂತಿಲ್ಲ, ಅನುಭವಿಸುವಂತಿಲ್ಲ. ಹೇಳಿದರೆ ಏನೋ ಎಂತೋ ಅನ್ನುವ ಭಯ-ಸಂಕೋಚ ನಮ್ಮ ನೆತ್ತಿಯಿಂದ ಕಾಣದೆಯೂ ಸದಾಕಾಲ ಇಳಿಬಿಟ್ಟ ಬೈತಲೆಬೊಟ್ಟು.’ ಭವ್ಯಾ ನವೀನ

Hopscotch : ಅಮಾರೈಟ್? : ಅಗಾ ಬಿಲ್ಲೆ ಎಸೆದಾಯ್ತು! ಇಂದಿನಿಂದ ಭವ್ಯಾ ನವೀನ ಅಂಕಣ ಆರಂಭ
Follow us
|

Updated on:Jan 11, 2022 | 11:49 AM

ಅಮಾರೈಟ್ | AmaRight : ದಾಖಲಿಸುವುದು ಮತ್ತು ಪ್ರತಿಭಟಿಸುವುದು ಎರಡೂ ಬೇರೆ ಬೇರೆಯೇ ಅಂದುಕೊಂಡವಳು ನಾನು. ‘ಪ್ರತಿಭಟನೆ’ ಶಬ್ಧಗಳಲ್ಲಿ ಶಬ್ಧ ಮಾಡುವುದಾದರೆ ‘ನ್ಯಾಯ’ವೂ ಬರೇ ಸುದ್ದಿಯಾಗಿ ಮರೆತುಹೋಗುತ್ತದೆ. ಶಬ್ಧಗಳೊಳಗಿನ ನಿಶ್ಯಬ್ಧ ಆಲಿಸುವಂತೆ ದಾಖಲಿಸಿದರೆ ಅದು ಸಾರ್ವಕಾಲಿಕ ಪಠ್ಯವಾಗುತ್ತದೆ. ಓದಿದವರು, ಕೇಳಿದವರು, ನೋಡಿದವರು ಮುಂದೆ ಅದನ್ನು ಜನಪದವಾಗಿಸುವಂತೆ ಬೇಕುಗಳನ್ನು- ನೋವುಗಳನ್ನು ಅತ್ಯಂತ ಆಪ್ತವಾಗಿ ಕಟ್ಟಿ ಮಾತಿಗಿಳಿಸಬೇಕು, ನಿರಂತರ ಸಂವಹಿಸಬೇಕು. ನಮ್ಮ ನಮ್ಮ ಕಷ್ಟ-ಸುಖಗಳ ಕತೆಗಳು, ತಲೆಹರಟೆ-ತಮಾಷೆಗಳು, ಕಾಡುವ ಸಂಗತಿಗಳು ಇವೆಲ್ಲವನ್ನೂ ಹರಡಿಕೊಂಡು ಕೂರಬೇಕು, ತಣ್ಣಗೆ ‘ಹೀಗೀಗಾಯ್ತು…’ ಅಂತ ಹೇಳಿದರೇ ಸಾಕು, ನನಗೂ ಹೀಗಾಗಿತ್ತು ಅನಿಸಿದರೆ ಸಾಕಲ್ಲವಾ… ಯಾವುದು ಹೇಗಾಗಬಾರದು ಅನ್ನುವ ಎಚ್ಚರಿಕೆಯನ್ನು ನಾವು ಸುಲಭವಾಗಿ ಕಂಡುಕೊಳ್ಳುತ್ತೇವೆ. ಭವ್ಯಾ ನವೀನ, ಕವಿ ಲೇಖಕಿ

*

ಹಾಸನದಲ್ಲಿ ಪತ್ರಿಕೋದ್ಯಮ ಉಪನ್ಯಾಸಕಿಯಾಗಿದ್ದ ಭವ್ಯಾ ನವೀನ ಸದ್ಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪಿ.ಎಚ್​ಡಿ ಅಧ್ಯಯನದಲ್ಲಿ ನಿರತರಾಗಿದ್ದಾರೆ. ‘ನಾನು ನಕ್ಷತ್ರ’ ಪ್ರಕಟಿತ ಕವನ ಸಂಕಲನ. ‘ಕನ್ನಡ ಇ-ಪತ್ರಿಕೆಗಳ ಅಧ್ಯಯನ’ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ ಪಡೆದಿದ್ದಾರೆ. ಸ್ಥಳೀಯ ಪತ್ರಿಕೆಯ ಸಾಪ್ತಾಹಿಕ ಮತ್ತು ವಿಶೇಷ ಸಂಚಿಕೆ ರೂಪಿಸುವುದು ಪ್ರೀತಿಯ ಕೆಲಸ. ಇದರ ಹೊರತಾಗಿ ಒಗ್ಗಿಸಿಕೊಂಡಿರುವ ಕತೆ, ಕವಿತೆಗಳೇ ಇವರ ಪರಿಚಯ. ಇಂದಿನಿಂದ ಶುರುವಾಗುವ ‘ಅಮಾರೈಟ್’ ಅಂಕಣ ಪ್ರತೀ ಹದಿನೈದು ದಿನಕ್ಕೊಮ್ಮೆ (ಮಂಗಳವಾರ) ಪ್ರಕಟವಾಗಲಿದೆ. ಆಶಯ ನಿಮ್ಮ ಓದಿಗೆ.

*

ಎಲ್ಲವನ್ನೂ ಹೇಳುವುದು ಸರ್ವಸಮ್ಮತವಲ್ಲ. ಆದರೆ ಹೇಳಬೇಕಾದ್ದನ್ನೂ ಹೇಳದೆ ಇದ್ದರೆ ಉಳಿಗಾಲದ ಉದ್ದಕ್ಕೂ ನೆಮ್ಮದಿ ಇರುವುದಿಲ್ಲ. ಹಂಚಿಕೊಂಡು ಹಗುರಾಗುವುದು ಬೇರೆ… ಹಂಚಿಕೊಂಡು ಒಟ್ಟಾಗುವುದೂ ಮುಖ್ಯ! ಹಸಿವನ್ನು ಗೌರವಿಸುವ ಎಲ್ಲರಿಗೂ ಹಸಿವು ಒಂದೇ, ಅದು ಎಂಥರ ಹಸಿವೇ ಆಗಿರಲಿ… ‘ನನಗೆ ಹಸಿವಾಗುತ್ತಿದೆ’ ಅಂತ ಹೇಳಿದಾಗ ತೀರದ ಹಸಿವಿನಿಂದ ಕೂತಿದ್ದ ಎಷ್ಟೊಬ್ಬರಿಗೆ ಒಂದು ಅರ್ಥವಾಗದ ಸಮಾಧಾನವೂ ಭರವಸೆಯೂ ಚಿಗುರುತ್ತದೆ. ಹಸಿದವರ ಜೊತೆ ಹಸಿದು ನಿಲ್ಲುವುದೇ ಅತ್ಯಂತ ಪ್ರಾಮಾಣಿಕ ಹೋರಾಟ. ನನ್ನ ಹಸಿವಿಗೆ ನಾನು ಸಮಾಧಾನ ಹುಡುಕಿಕೊಳ್ಳುವುದು ಮುಖ್ಯವಾಗುವಷ್ಟೇ ಮಹತ್ವವೂ ಆಗುವುದು ‘ಹಸಿವು’ ಅನ್ನುವುದನ್ನು ಪರಮ ಸಾರ್ವತ್ರಿಕ ಸಂಕಟ ಅಂತ ದಾಖಲಿಸಿದಾಗಲೇ.

ನಾವು ಹುಡುಗಿಯರಿದ್ದೀವಲ್ಲ, ಹೆಂಗಸರು ಅಂತಲೇ ಅಂದುಕೊಳ್ಳಿ. ನಮಗೆ ಸಾವಿರ ಕರುಳಿನ ಹಸಿವು. ಆದರೆ ಆಡುವಂತಿಲ್ಲ, ಅನುಭವಿಸುವಂತಿಲ್ಲ. ಹೇಳಿದರೆ ಏನೋ ಎಂತೋ ಅನ್ನುವ ಭಯ-ಸಂಕೋಚ ನಮ್ಮ ನೆತ್ತಿಯಿಂದ ಕಾಣದೆಯೂ ಸದಾಕಾಲ ಇಳಿಬಿಟ್ಟ ಬೈತಲೆಬೊಟ್ಟು. ಹೇಗೆ ಹೇಳಿದರೆ ಸರಿಯೋ ಗೊತ್ತಾಗುವುದಿಲ್ಲ. ಆದರೆ ಎದುರುಗೊಂಡ ಕಣ್ಣುಗಳಲ್ಲಿ ಪ್ರೀತಿಯ, ನಂಬುಗೆಯ ಮುಖ್ಯವಾಗಿ ಗೌರವ ಕಾಣಲಿ ಅಂತ ಹಸಿದಿರುವ ಕನಿಷ್ಟ ಕ್ಷಣಗಳನ್ನೂ ನಾವು ನೇರಾನೇರ ದಾಖಲಿಸುವುದೇ ಇಲ್ಲ.

ದಾಖಲಿಸುವುದು ಮತ್ತು ಪ್ರತಿಭಟಿಸುವುದು ಎರಡೂ ಬೇರೆಬೇರೆಯೇ ಅಂದುಕೊಂಡವಳು ನಾನು. ‘ಪ್ರತಿಭಟನೆ’ ಶಬ್ಧಗಳಲ್ಲಿ ಶಬ್ಧ ಮಾಡುವುದಾದರೆ ‘ನ್ಯಾಯ’ವೂ ಬರೇ ಸುದ್ದಿಯಾಗಿ ಮರೆತುಹೋಗುತ್ತದೆ. ಶಬ್ಧಗಳೊಳಗಿನ  ನಿಶ್ಯಬ್ಧ ಆಲಿಸುವಂತೆ ದಾಖಲಿಸಿದರೆ ಅದು ಸಾರ್ವಕಾಲಿಕ ಪಠ್ಯವಾಗುತ್ತದೆ. ಓದಿದವರು, ಕೇಳಿದವರು, ನೋಡಿದವರು ಮುಂದೆ ಅದನ್ನು ಜನಪದವಾಗಿಸುವಂತೆ ಬೇಕುಗಳನ್ನು- ನೋವುಗಳನ್ನು ಅತ್ಯಂತ ಆಪ್ತವಾಗಿ ಕಟ್ಟಿ ಮಾತಿಗಿಳಿಸಬೇಕು, ನಿರಂತರ ಸಂವಹಿಸಬೇಕು. ನಮ್ಮ ನಮ್ಮ ಕಷ್ಟ-ಸುಖಗಳ ಕತೆಗಳು, ತಲೆಹರಟೆ-ತಮಾಷೆಗಳು, ಕಾಡುವ ಸಂಗತಿಗಳು ಇವೆಲ್ಲವನ್ನೂ ಹರಡಿಕೊಂಡು ಕೂರಬೇಕು, ತಣ್ಣಗೆ ‘ಹೀಗೀಗಾಯ್ತು…’ ಅಂತ ಹೇಳಿದರೇ ಸಾಕು, ನನಗೂ ಹೀಗಾಗಿತ್ತು ಅನಿಸಿದರೆ ಸಾಕಲ್ಲವಾ… ಯಾವುದು ಹೇಗಾಗಬಾರದು ಅನ್ನುವ ಎಚ್ಚರಿಕೆಯನ್ನು ನಾವು ಸುಲಭವಾಗಿ ಕಂಡುಕೊಳ್ಳುತ್ತೇವೆ.

Avithakavithe HC Bhavya Naveen

ಭವ್ಯಾ ಮೊದಲ ಕವನ ಸಂಕಲನ

ದೊಡ್ಡ ದೊಡ್ಡ ಗಾಯಗಳನ್ನು ಹೊಲೆದು ಮುಲಾಮು ಹಚ್ಚಿ ಮಾಸಿಸಿಕೊಳ್ಳಲು ಒದ್ದಾಡುವ ನಡುವೆಯೇ, ಚಳಿ-ಗಾಳಿಗೆ, ತಣ್ಣೀರಿಗೆ ಉರಿಹತ್ತುವ ಗೀರುಗಾಯಗಳಿರುತ್ತವಲ್ಲ ಅವಕ್ಕೇನು ಮಾಡುವುದು ಅಂತಲೂ ನೋಡಬೇಕಾಗುತ್ತದೆ. ಗಾಯ ತೋರಿಸಿಕೊಂಡು ‘ಅಯ್ಯಾ.. ಈ ಸಣ್ ಸಣ್ ಗಾಯ ಮತ್ ಮತ್ ಬತ್ತೀತಪ್ಪ..’ ಅಂತ ಕಷ್ಟ ಹೇಳಿಕೊಳ್ಳೊದಾದರೂ ಬೇಡವಾ? ಬರೀ ಗಾಯ ಅಂತಾನೂ ಅಲ್ಲದೇ, ಹಾದಿಯಲ್ಲಿ ಸಿಕ್ಕ ಹೂವುಗಳನ್ನು ಹೆಕ್ಕಿ ತಂದು ಪೋಣಿಸಿ ದಂಡೆಕಟ್ಟಿ ಚಂದಗಾಣಿಸಿಕೊಳ್ಳಲೂ ನಾವು ಜೊತೆಜೊತೆಗೆ ಕೂತು ಹೂವಿನ ಪಕಳೆಗಳ ಗುಣಗಾನ ಮಾಡಬೇಕು ತಾನೇ?

ನಾವು ಹುಡುಗಿಯರಿದ್ದೀವಲ್ಲ, ಹೆಂಗಸರು ಅಂತಲೇ ಅನ್ನಿ. ಎಲ್ಲೋ ಶುರುಹಚ್ಚಿ ಎಲ್ಲೋ ಮುಗಿಸುತ್ತೇವೆ. ಆದರೆ ಶುರುವಾದ್ದೂ ಮುಗಿಸುವುದೂ ಎರಡು ನಮ್ಮೊಳಗಿನ ದರ್ದೇ ಆಗಿರುತ್ತದೆ. ಇವಿಷ್ಟೇ ಸರಿ, ಇವಿಷ್ಟೇ ಇರಲಿ ಅಂತಲೂ ಅಲ್ಲ. ಒಮ್ಮೊಮ್ಮೆ ಹೀಗಲ್ಲ, ಹೀಗೆ… ಹೀಗಿತ್ತು, ಹೀಗಿರಲಿ ಅಂತ ಮಾತಾಡಿಕೊಳ್ಳಬೇಕು. ಅದಕ್ಕಂತಲೇ ನಾನು ನನ್ನ ನೆನಪಿನ ಕುಂಟೆಬಿಲ್ಲೆಮನೆಯಲ್ಲಿ ಕನಸುಗಳ ಬಿಲ್ಲೆ ಎಸೆದು ‘ಅಮಾರೈಟ್’ ಅನ್ನುತ್ತೇನೆ. ರೈಟೋ, ರಾಂಗೋ ಆಟ ಆಡಿದರೇ ತಿಳಿಯುವುದು. ತಿದ್ದಿಕೊಳ್ಳಲೂಬಹುದು… ರೈಟಾ!

ಅಗಾ… ನಾ ಬಿಲ್ಲೆ ಎಸೆದಾಯ್ತು! ಅಮಾರೈಟ್.. ಅಮಾರೈಟ್.. ಅಮಾರೈಟ್

ಭವ್ಯಾ ಕವನಗಳು : Poetry : ಅವಿತಕವಿತೆ ; ‘ಮದುವೆಗೆ ಪುರಾವೆ ಸಿಕ್ಕ ಹಾಗೆ ಸುಖಕ್ಕೆ ಖಾತ್ರಿ ಸಿಗಬಹುದಾ?’

ಇದನ್ನೂ ಓದಿ : Amazon Prime Video : ‘ನೆನಪುಗಳು ಮನಸ್ಸಿನಲ್ಲಿರಲಿ ಅಂತ ಇಟ್ಟುಕೊಳ್ಳಬೇಕು, ಯಾರನ್ನಾದರೂ ದೂಷಿಸುವುದಕ್ಕಂತ ಅಲ್ಲ’

Published On - 11:00 am, Tue, 11 January 22