U. R. Ananthamurthy Birthday : ವಿನೋಬಾ ಭಾವೆಯವರ ‘ಓಂ ಹರಿ-ನೋ ಹರಿ-ನೋ ವರಿ’ ಮಂತ್ರ

|

Updated on: Dec 21, 2021 | 3:08 PM

Gandhiji : ಗಾಂಧಿಯ ಮೊಮ್ಮಗ ರಾಮುವಿನ ತಮಾಷೆಯ ಮಾತೊಂದು ಇದೆ. ಯಾರೋ ಕೇಳುತ್ತಾರೆ: “ಮಹಾತ್ಮರ ಬ್ರಹ್ಮಚರ್ಯ ವ್ರತದ ಬಗ್ಗೆ ಏನಾದರೂ ಹೇಳಿ” ರಾಮು ಉತ್ತರ: “ಹೌದು ಹೌದು ಬ್ರಹ್ಮಚಾರಿಗಳು ಅವರು. ಆದರೆ ನನ್ನ ಪುಣ್ಯ. ನಮ್ಮ ತಂದೆ ದೇವದಾಸರು ಹುಟ್ಟುವ ತನಕ ಅವರು ಬ್ರಹ್ಮಚರ್ಯ ಪಾಲಿಸಲಿಲ್ಲ.”

U. R. Ananthamurthy Birthday : ವಿನೋಬಾ ಭಾವೆಯವರ ‘ಓಂ ಹರಿ-ನೋ ಹರಿ-ನೋ ವರಿ’ ಮಂತ್ರ
ಡಾ. ಯು. ಆರ್. ಅನಂತಮೂರ್ತಿ
Follow us on

U. R. Ananthamurthy Birthday : ಆಶ್ರಮಕ್ಕೆ ನೆಹರೂ, ಆಜಾದ್, ಕೃಪಲಾನಿ ಎಲ್ಲರೂ ಕೂಡಿ ಗಾಂಧೀಜಿಯನ್ನು ಭೇಟಿಮಾಡಲು ಬಂದ ಸಂದರ್ಭ. ಗಾಂಧಿ ಮತ್ತು ಅವರ ಸಂಗಡಿಗರು ಹೊರಬಂದು ಅತಿಥಿಗಳನ್ನು ಸ್ವಾಗತಿಸುತ್ತಾರೆ. ಒಬ್ಬ ಮಾತ್ರ ಬಂದಿರುವುದಿಲ್ಲ, ಅದು ವಿನೋಬಾ. ಅತಿಥಿಗಳು ಇದನ್ನು ಗಮನಿಸಿದ್ದನ್ನು ಕಂಡು ಗಾಂಧೀಜಿ ಮುಗುಳ್ನಗೆಯಲ್ಲಿ ‘ಇದು ವಿನೋಬಾನಿಗೆ ಚರಕದಲ್ಲಿ ನೂಲುವ ಹೊತ್ತು. ಯಾವ ಕಾರಣಕ್ಕೂ ಅದನ್ನು ತಾನು ಬಿಟ್ಟು ಬರಲೊಲ್ಲೆ ಎಂಬುದು ನಿಮಗೆ ತಿಳಿಯಲಿ ಎಂದು ಅವನು ಹೀಗೆ ಮಾಡಿದ್ದಾನೆ’ ಎಂದರಂತೆ. ಹೀಗೆ ಎಲ್ಲರದಲ್ಲೂ ವಿನೋಬಾ ಕೊಂಚ ಅತಿಯೆ. ಪರಮ ಸುಂದರಿಯಾಗಿದ್ದ ಮೀರಾ ಬೆನ್ ಗಾಂಧಿ ಆಶ್ರಮ ಸೇರಿದಾಗ ಅವಳ ಸೌಂದರ್ಯದಿಂದ ಬ್ರಹ್ಮಚಾರಿಗಳು ಮೋಹಗೊಳ್ಳದಂತೆ ಅವಳು ತನ್ನ ತಲೆ ಕೂದಲನ್ನು ಬೋಳಿಸಿಕೊಳ್ಳಬೇಕೆಂದು ಹೇಳಿದ್ದು ವಿನೋಬಾರಂತೆ. ಹಾಗೇ, ವಯಸ್ಸಾದ ಕೃಪಲಾನಿ ಕಿರಿಯಳಾದ ಸುಚೇತಾಳನ್ನು ವಿವಾಹವಾಗಲೇಕೂಡದೆಂದು ವಾದಿಸಿದ್ದವರೂ ವಿನೋಬಾರೆ. ಆದರೆ ಅವರ ನಡುವಿನ ಪ್ರೀತಿಯನ್ನು ಕಂಡು ಇಂತಹ ವಿಷಯಗಳಿಗೆ ಕಣ್ಣು ಮಿಟುಕಿಸಬಲ್ಲ ಗಾಂಧಿ ‘ನೀವು ಮದುವೆಯಾಗಿ’ ಎಂದು ಒಪ್ಪಿಗೆ ನೀಡಿದ್ದರಂತೆ. ಗಾಂಧಿಯ ‘ಲಿಟರಲಿಸ್ಟ್​’ ಅನುಯಾಯಿ ವಿನೋಬಾ ಆದರೆ ಸಂಸಾರಿಯಾಗಿದ್ದ ಗಾಂಧಿಯೇ ‘ಗಾಂಧಿಯನ್’ ಅಲ್ಲ.
(‘ಸುರಗಿ’ ಯು. ಆರ್. ಅನಂತಮೂರ್ತಿಯವರ ಆತ್ಮಕಥನದಿಂದ)

*

ವಿನೋಬಾ ಭಾವೆ ಬೌದ್ಧಿಕ ಕಸರತ್ತಿನಲ್ಲಿ ಪುಣೆಯ ಚಿತ್ಪಾವನ್ ಬ್ರಾಹ್ಮಣನೆ. ದ್ವಂದ್ವಾರ್ಥದ ಹಾಸ್ಯ ಚಟಾಕಿಗಳ ಮುಖಾಂತರ ಗಂಭೀರವಾದ್ದನ್ನೂ ಹಗುರ ಎನ್ನಿಸುವಂತೆ ಹೇಳುವ ಜಾಣ್ಮೆ ಅವರದ್ದು. ಭಾರತಕ್ಕೆ ಬಂದಿದ್ದ ಗೆಳೆಯ ಮಾರ್ಟಿನ್ ಗ್ರೀನ್ ವಿನೋಬಾರನ್ನು ನೋಡಲು ಹೋದಾಗ ಅವರು ಕ್ಷೇತ್ರ ಸನ್ಯಾಸದ ದೀಕ್ಷೆಯಲ್ಲಿದ್ದರು, ಅಂದರೆ ಇಡೀ ಭಾರತವನ್ನು ಸುತ್ತಿದವರು ಆಗ ತನ್ನ ಆಶ್ರಮದ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಉಳಿದಿದ್ದರು. ಅವರ ಕಿವಿ ಕಿವುಡಾಗಿತ್ತು, ಸದಾ ಮಲಗಿರುತ್ತಿದ್ದರು. ಮಾರ್ಟಿನ್ ತನ್ನ ಸ್ವಂತ ಜೀವನದ ದುಃಖಗಳನ್ನು ಮಾತಿನಲ್ಲಿ ಹೇಳಲಾಗದೆ ಒಂದು ನೋಟ್ ಪುಸ್ತಕದಲ್ಲಿ ಬರೆದು ವಿನೋಬಾರಿಗೆ ಕೊಟ್ಟು ಗುರುವಿನ ಉಪದೇಶಕ್ಕೆ ಕಾದರಂತೆ. ವಿನೋಬಾ ದೇವನಾಗರಿ ಅಕ್ಷರದಲ್ಲಿ ಬರೆದುಕೊಟ್ಟ ಈ ಸಾಲುಗಳನ್ನು ಮಾರ್ಟಿನ್ ನನಗೆ ತೋರಿಸಿದರು, ನಾನು ನೋಡಿ ಚಕಿತನಾದೆ.

ಆ ಸಾಲುಗಳು ಹೀಗಿದ್ದವು ‘ಓಂ ಹರಿ-ನೋ ಹರಿ-ನೋ ವರಿ’. ಈ ಮೂರು ಸಾಲುಗಳಲ್ಲಿ ಮೊದಲನೆಯದ್ದಕ್ಕೆ ದ್ವಂದ್ವಾರ್ಥವಿಲ್ಲ. ಅದು ‘ಓಂ ಹರಿ’ ಮಾತ್ರ. ಎರಡನೆಯ ಸಾಲು ‘No hurry’ ಆಗಬಹುದು ಅಥವಾ ‘Know Hari’ ಆಗಬಹುದು. ಮೂರನೆಯ ಸಾಲನ್ನು ಹೀಗೆ ಬರೆಯಬಹುದು, ‘No/know worry’. ಆಧುನಿಕ ನಾಗರಿಕತೆಯ ಒತ್ತಡಗಳಿಗೂ ಮತ್ತು/ಅಥವಾ ದೈವನಂಬಿಕೆ ಉಳ್ಳವರಿಗೂ ಏಕಕಾಲದಲ್ಲಿ ಸಲ್ಲುವ ಮಾತು ಇದು. ಇದನ್ನು ನೋಡಿ ಮಾರ್ಟಿನ್ ‘ಯಾರೋ ಒಬ್ಬ ಅಪರಿಚಿತನ ದುಃಖ ದುಮ್ಮಾನಗಳಿಗೆ ಹೀಗೆ ಕೊಂಚ ತಮಾಷೆಯಲ್ಲಿ ಸ್ಪಂದಿಸುವುದು ಅನಿವಾರ್ಯವಲ್ಲವೆ?’ ಅಂದರು.

ಈಚೆಗೆ ತಾನೆ ಗಾಂಧೀಜಿಯವರ ಮೊಮ್ಮಗ ಗೋಪಾಲ ಗಾಂಧಿಯವರು ಗಾಂಧಿ ಆಶ್ರಮದಲ್ಲಿ ನಡೆದ ಒಂದು ಘಟನೆಯನ್ನು ಹೇಳಿದರು. ಇದು ವಿನೋಬಾರ ಕಟ್ಟುನಿಟ್ಟಿನ ಅತಿರೇಕದ ಸಂತತನದ ಬಗ್ಗೆ ಅವನ ಗುರು ಗಾಂಧಿಯ ಕೊಂಚ ಕುಹಕದ ಆದರೆ ಪ್ರೀತಿಯ ಮಾತು: ಆಶ್ರಮಕ್ಕೆ ನೆಹರೂ, ಆಜಾದ್, ಕೃಪಲಾನಿ ಎಲ್ಲರೂ ಕೂಡಿ ಗಾಂಧೀಜಿಯನ್ನು ಭೇಟಿಮಾಡಲು ಬಂದ ಸಂದರ್ಭ. ಗಾಂಧಿ ಮತ್ತು ಅವರ ಸಂಗಡಿಗರು ಹೊರಬಂದು ಅತಿಥಿಗಳನ್ನು ಸ್ವಾಗತಿಸುತ್ತಾರೆ. ಒಬ್ಬ ಮಾತ್ರ ಬಂದಿರುವುದಿಲ್ಲ, ಅದು ವಿನೋಬಾ. ಅತಿಥಿಗಳು ಇದನ್ನು ಗಮನಿಸಿದ್ದನ್ನು ಕಂಡು ಗಾಂಧೀಜಿ ಮುಗುಳ್ನಗೆಯಲ್ಲಿ ‘ಇದು ವಿನೋಬಾನಿಗೆ ಚರಕದಲ್ಲಿ ನೂಲುವ ಹೊತ್ತು. ಯಾವ ಕಾರಣಕ್ಕೂ ಅದನ್ನು ತಾನು ಬಿಟ್ಟು ಬರಲೊಲ್ಲೆ ಎಂಬುದು ನಿಮಗೆ ತಿಳಿಯಲಿ ಎಂದು ಅವನು ಹೀಗೆ ಮಾಡಿದ್ದಾನೆ’ ಎಂದರಂತೆ. ಹೀಗೆ ಎಲ್ಲರದಲ್ಲೂ ವಿನೋಬಾ ಕೊಂಚ ಅತಿಯೆ. ಪರಮ ಸುಂದರಿಯಾಗಿದ್ದ ಮೀರಾ ಬೆನ್ ಗಾಂಧಿ ಆಶ್ರಮ ಸೇರಿದಾಗ ಅವಳ ಸೌಂದರ್ಯದಿಂದ ಬ್ರಹ್ಮಚಾರಿಗಳು ಮೋಹಗೊಳ್ಳದಂತೆ ಅವಳು ತನ್ನ ತಲೆ ಕೂದಲನ್ನು ಬೋಳಿಸಿಕೊಳ್ಳಬೇಕೆಂದು ಹೇಳಿದ್ದು ವಿನೋಬಾರಂತೆ. ಹಾಗೇ, ವಯಸ್ಸಾದ ಕೃಪಲಾನಿ ಕಿರಿಯಳಾದ ಸುಚೇತಾಳನ್ನು ವಿವಾಹವಾಗಲೇಕೂಡದೆಂದು ವಾದಿಸಿದ್ದವರೂ ವಿನೋಬಾರೆ. ಆದರೆ ಅವರ ನಡುವಿನ ಪ್ರೀತಿಯನ್ನು ಕಂಡು ಇಂತಹ ವಿಷಯಗಳಿಗೆ ಕಣ್ಣು ಮಿಟುಕಿಸಬಲ್ಲ ಗಾಂಧಿ ‘ನೀವು ಮದುವೆಯಾಗಿ’ ಎಂದು ಒಪ್ಪಿಗೆ ನೀಡಿದ್ದರಂತೆ. ಗಾಂಧಿಯ ‘ಲಿಟರಲಿಸ್ಟ್​’ ಅನುಯಾಯಿ ವಿನೋಬಾ ಆದರೆ ಸಂಸಾರಿಯಾಗಿದ್ದ ಗಾಂಧಿಯೇ ‘ಗಾಂಧಿಯನ್’ ಅಲ್ಲ.

ಈ ಬಗ್ಗೆ ಗಾಂಧಿಯ ಮೊಮ್ಮಗ ರಾಮುವಿನ ತಮಾಷೆಯ ಮಾತೊಂದು ಇದೆ. ಯಾರೋ ಕೇಳುತ್ತಾರೆ: “ಮಹಾತ್ಮರ ಬ್ರಹ್ಮಚರ್ಯ ವ್ರತದ ಬಗ್ಗೆ ಏನಾದರೂ ಹೇಳಿ” ರಾಮು ಉತ್ತರ: “ಹೌದು ಹೌದು ಬ್ರಹ್ಮಚಾರಿಗಳು ಅವರು. ಆದರೆ ನನ್ನ ಪುಣ್ಯ. ನಮ್ಮ ತಂದೆ ದೇವದಾಸರು ಹುಟ್ಟುವ ತನಕ ಅವರು ಬ್ರಹ್ಮಚರ್ಯ ಪಾಲಿಸಲಿಲ್ಲ.” ನೆಹರೂ ಮನೆತನದ ಪಿತೃಭಾರ ಗಾಂಧಿ ಮೊಮ್ಮಕ್ಕಳಿಗೆ ಇಲ್ಲ. ಅಣ್ಣನಾದ ರಾಮುಗಾಂಧಿ ತನ್ನ ತಮ್ಮಂದಿರಿಗೆ ಹೇಳಿಕೊಟ್ಟ ಸಮಾಧಾನದ ಮಾತು ಇದು, “ನೀವು ಗಾಂಧೀಜಿಯ ಮೊಮ್ಮಗನೆ ಎಂದು ಯಾರಾದರೂ ಕೇಳಿದರೆ ಮುಜುಗರಪಡಬೇಡಿ. ಅದನ್ನೊಂದು Fact ಮಾಡಿಬಿಡಿ: ಹೌದು ನಾನು ಗಾಂಧೀಜಿಯ ಮೊಮ್ಮಗ ಮತ್ತು ನನ್ನ ಎತ್ತರ 5 ಅಡಿ 10 ಅಂಗುಲ ಅನ್ನಿ”

ಕವಿ ಜ. ನಾ. ತೇಜಶ್ರೀ ನಿರೂಪಿಸಿದ ‘ಸುರಗಿ’ಯನ್ನು ಇಂಗ್ಲಿಷಿಗೆ ಅನುವಾದಿಸಿದವರು ಪತ್ರಕರ್ತ ಎಸ್. ಆರ್. ರಾಮಕೃಷ್ಣ

ಆದರೂ ರಾಮು ಅವರನ್ನು ಅವರ ಇಬ್ಬರು ಖ್ಯಾತ ಅಜ್ಜಂದಿರು- ಮಹಾತ್ಮ ಗಾಂಧಿ, ಸಿ.ರಾಜಗೋಪಾಲಾಚಾರಿ- ಕಾಡಿರಲೇಬೇಕು. ರಾಮು ಅವರು ಕುಡಿಯುವ ಒಂದೇ ಒಂದು ರಮ್ಮಿನ ಎದುರು ಐಐಸಿ ಬಾರಿನಲ್ಲಿ ಅವರು ಯಾವಾಗಲೂ ಕೂರುವ ಕುರ್ಚಿಯಲ್ಲಿ ಕೂತಿದ್ದಾಗ ಯಾರಾದರೊಬ್ಬ ಅಧಿಕಪ್ರಸಂಗಿ ಬಂದು ತಾವು ಮಹಾತ್ಮರ ಮೊಮ್ಮಗನಲ್ಲವೆ? ಅನ್ನುವುದಿತ್ತು. ಅಷ್ಟೇಕೆ ಅವರ ಪರಮ ಮಿತ್ರ , ತನ್ನ ಅಂಗಿ ತೋಳಲ್ಲಿ ಉಗ್ರನೈತಿಕತೆಯನ್ನು ಮಡಿಸಿ ಬಚ್ಚಿಟ್ಟ ನಿರ್ಮಲ್ ವರ್ಮಾರು ಭೋಪಾಲಿನ ‘ಭಾರತ ಭವನ್’ ಮೀಟಿಂಗಿಗೆ ಹೋದಾಗ ಒಂದು ರಾತ್ರಿ ತಮ್ಮ ಕುಡಿತದಿಂದಲೂ ನೈತಿಕತೆಯಿಂದಲೂ ಉನ್ಮತ್ತರಾಗಿ ರಾಮು ಎದುರು ನಿಂತು ಎಲ್ಲರೂ ಕೇಳುವಂತೆ ಜರಿದರು: ‘ನಿನ್ನದು ಎಂತಹ ಅರ್ಥಹೀನ ಬದುಕೆಂದು ನಾಚಿಕೆಯಾಗುವುದಿಲ್ಲವೆ? ನಾಲಾಯಕ್ಕು ಮೊಮ್ಮಗ ನೀನು” ಅಲ್ಲಿದ್ದ ನನ್ನ ಹೆಂಡತಿ ಎಸ್ತರ್ ಇದನ್ನು ಕೇಳಿಸಿಕೊಂಡಳೆಂದು ನನಗೆ ಮುಜುಗರವಾಯಿತು. ಅವಳಿಗೆ ಈ ಇಬ್ಬರು ಗೆಳೆಯರೂ ಎಷ್ಟು ದೊಡ್ಡವರೆಂದು ತಿಳಿದಿರಲಿಕ್ಕಿಲ್ಲ. ಮಾರನೆ ಬೆಳಿಗ್ಗೆ ಕಾಲು ಕೆದರಿ ಜಗಳವಾಡಿದ ಈ ಇಬ್ಬರೂ ಮತ್ತೆ ಮಿತ್ರರಾಗಿಬಿಟ್ಟಿದ್ದರು. “ನೋಡು” ಎಂದೆ ಎಸ್ತರ್‌ಗೆ.

ಆತ್ಮಕಥನದ ಪೂರ್ಣ ಓದಿಗೆ ಸಂಪರ್ಕಿಸಿ : ಮೈಲ್ಯಾಂಗ್ 

ಇದನ್ನೂ ಓದಿ : Ayyappa : ಅಭಿಜ್ಞಾನ ; ಯು. ಆರ್. ಅನಂತಮೂರ್ತಿಯವರ ‘ರಾಮು ಮತ್ತು ಅಯ್ಯಪ್ಪ ವ್ರತ’

Published On - 2:56 pm, Tue, 21 December 21