ಉತ್ತರ ಪ್ರದೇಶದಲ್ಲಿ ಜ. 20ರವರೆಗೆ ಪ್ರತಿ ದಿನ ಓರ್ವ ಸಚಿವ, ಶಾಸಕ ಬಿಜೆಪಿಗೆ ರಾಜೀನಾಮೆ ನೀಡ್ತಾರೆ; ಧರಂ ಸಿಂಗ್ ಸೈನಿ ಹೊಸ ಬಾಂಬ್

| Updated By: ಸುಷ್ಮಾ ಚಕ್ರೆ

Updated on: Jan 13, 2022 | 5:06 PM

Uttar Pradesh Elections 2022: ಇಂದು ಬಿಜೆಪಿಗೆ ರಾಜೀನಾಮೆ ನೀಡಿ ಸಮಾಜವಾದಿ ಪಾರ್ಟಿ ಸೇರಿರುವ ಧರಂ ಸಿಂಗ್ ಸೈನಿ ಯೋಗಿ ಸರ್ಕಾರಕ್ಕೆ ಮತ್ತೊಂದು ಶಾಕ್ ನೀಡಿದ್ದು, ಜ. 20ರೊಳಗೆ ಪ್ರತಿದಿನ ಬಿಜೆಪಿಯ ಓರ್ವ ಸಚಿವ ಹಾಗೂ ಶಾಸಕ ರಾಜೀನಾಮೆ ನೀಡುತ್ತಾರೆ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಜ. 20ರವರೆಗೆ ಪ್ರತಿ ದಿನ ಓರ್ವ ಸಚಿವ, ಶಾಸಕ ಬಿಜೆಪಿಗೆ ರಾಜೀನಾಮೆ ನೀಡ್ತಾರೆ; ಧರಂ ಸಿಂಗ್ ಸೈನಿ ಹೊಸ ಬಾಂಬ್
ಬಿಜೆಪಿ ತೊರೆದು ಸಮಾಜವಾದಿ ಪಕ್ಷ ಸೇರಿದ ಧರಂ ಸಿಂಗ್ ಸೈನಿ
Follow us on

ನವದೆಹಲಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಒಬ್ಬೊಬ್ಬರೇ ಬಿಜೆಪಿ ಶಾಸಕರು ರಾಜೀನಾಮೆ ನೀಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರದ ಮೂವರು ಸಚಿವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಇಂದು ಬಿಜೆಪಿಗೆ ರಾಜೀನಾಮೆ ನೀಡಿರುವ ಸಚಿವ ಧರಂ ಸಿಂಗ್ ಸೈನಿ ಜನವರಿ 20ವರೆಗೆ ಪ್ರತಿ ದಿನವೂ ಯೋಗಿ ಆದಿತ್ಯನಾಥ್ ಸರ್ಕಾರದ ಒಬ್ಬರು ಸಚಿವ ಹಾಗೂ ಬಿಜೆಪಿಯ ಓರ್ವ ಶಾಸಕ ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎಂದಿದ್ದಾರೆ.

ಪಂಜಾಬ್, ಉತ್ತರಾಖಂಡ ಮತ್ತು ಗೋವಾ ವಿಧಾನಸಭೆಗಳಿಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಿಂದ ಮಾರ್ಚ್​ 7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. ಇದರ ನಡುವೆ ಕಳೆದ ಎರಡು ದಿನಗಳಲ್ಲಿ ಸಾಲು ಸಾಲಾಗಿ ಸಚಿವರು ಮತ್ತು ಶಾಸಕರು ರಾಜೀನಾಮೆ ನೀಡುತ್ತಿರುವುದರಿಂದ ಉತ್ತರ ಪ್ರದೇಶ ಬಿಜೆಪಿ ಭಾರೀ ಆಘಾತವನ್ನು ಅನುಭವಿಸಿದೆ.

ಇಂದು ಬಿಜೆಪಿಗೆ ರಾಜೀನಾಮೆ ನೀಡಿರುವ ಯೋಗಿ ಆದಿತ್ಯನಾಥ್ ಸರ್ಕಾರದ ಸಚಿವ ಧರಂ ಸಿಂಗ್ ಸೈನಿ ಸಮಾಜವಾದಿ ಪಾರ್ಟಿ ಸೇರಿದ್ದಾರೆ. ಈ ವೇಳೆ ಮತ್ತೊಂದು ಬಾಂಬ್ ಹಾಕಿರುವ ಅವರು, ಜನವರಿ 20ರವರೆಗೆ ಪ್ರತಿ ದಿನ ಉತ್ತರ ಪ್ರದೇಶದ 1 ಸಚಿವ, 1 ಬಿಜೆಪಿ ಶಾಸಕ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಹಾಗೇ, ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಉತ್ತರ ಪ್ರದೇಶದ ನಾಲ್ವರು ಬಿಜೆಪಿ ಶಾಸಕರು ಇಂದು ರಾಜೀನಾಮೆ ನೀಡಬಹುದು ಎಂದು ಹೇಳಿದ್ದಾರೆ.

ಇಂದು ರಾಜೀನಾಮೆ ನೀಡಿರುವ ಧರಂ ಸಿಂಗ್ ಸೈನಿ, ದಲಿತರು, ಹಿಂದುಳಿದವರು, ರೈತರು, ನಿರುದ್ಯೋಗಿ ಯುವಕರು ಮತ್ತು ಸಣ್ಣ ವ್ಯಾಪಾರಿಗಳ ಬಗ್ಗೆ ತೀವ್ರ ನಿರ್ಲಕ್ಷ್ಯ ತೋರುತ್ತಿರುವ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದರು.

ಬಿಜೆಪಿಯ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ 2 ದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ನಿನ್ನೆಯಷ್ಟೇ ಸಚಿವ ದಾರಾ ಸಿಂಗ್ ಚೌಹಾಣ್ ರಾಜೀನಾಮೆ ನೀಡಿದ್ದರು. ಇಂದು ಧರಂ ಸಿಂಗ್ ಸೈನಿ ರಾಜೀನಾಮೆ ನೀಡಿದ್ದಾರೆ. ಮೊದಲು ರಾಜೀನಾಮೆ ನೀಡಿದ್ದ ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಇನ್ನೂ ಕೆಲವರು ಶಾಸಕರು ರಾಜೀನಾಮೆ ನೀಡಿದ್ದರು. ಇನ್ನೂ ಹಲವು ಶಾಸಕರು ಹಾಗೂ ಸಚಿವರು ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಮೌರ್ಯ ಹೇಳಿದ್ದರು.

ಇದನ್ನೂ ಓದಿ: ಉತ್ತರ ಪ್ರದೇಶ ಸರ್ಕಾರದ ಮತ್ತೊಂದು ವಿಕೆಟ್ ಪತನ; ಬಿಜೆಪಿಗೆ ಸಚಿವ ಧರಂ ಸಿಂಗ್ ಸೈನಿ ರಾಜೀನಾಮೆ

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ಮತ್ತೊಬ್ಬ ಶಾಸಕ; ಮೂರು ದಿನಗಳಲ್ಲಿ ಕಮಲ ಪಕ್ಷ ಕಳೆದುಕೊಂಡಿದ್ದು 7, ಗಳಿಸಿದ್ದು 2 !

Published On - 5:02 pm, Thu, 13 January 22