33 ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ತಾರ್ಕಿಕ ಅಂತ್ಯ: ಕೊಲೆ ಯತ್ನ ಪ್ರಕರಣದಲ್ಲಿ 84 ವರ್ಷದ ವ್ಯಕ್ತಿ ದೋಷಿ
ಬಿಹಾರದ ವೈಶಾಲಿ ನ್ಯಾಯಾಲಯವು 33 ವರ್ಷಗಳ ಹಳೆಯ ಕೊಲೆ ಯತ್ನ ಪ್ರಕರಣದಲ್ಲಿ 84 ವರ್ಷದ ವೃದ್ಧನನ್ನು ದೋಷಿ ಎಂದು ತೀರ್ಪು ನೀಡಿದೆ. ದಶಕಗಳ ಸುದೀರ್ಘ ಕಾನೂನು ಹೋರಾಟದ ನಂತರ ಸಾಕ್ಷ್ಯಾಧಾರಗಳನ್ನು ಆಧರಿಸಿ ನ್ಯಾಯ ದೊರಕಿದೆ. ಈ ತೀರ್ಪು ಸಂತ್ರಸ್ತರಿಗೆ ಕೊನೆಗೂ ನ್ಯಾಯ ಒದಗಿಸಿದ್ದು, ದೀರ್ಘಕಾಲದ ಪ್ರಕರಣಗಳಿಗೆ ಮಹತ್ವದ ಮೈಲಿಗಲ್ಲು.

ವೈಶಾಲಿ, ಜೂನ್ 02: ಬಿಹಾರದ ವೈಶಾಲಿ ಜಿಲ್ಲೆಯ ನ್ಯಾಯಾಲಯ 33 ವರ್ಷಗಳ ಹಿಂದಿನ ಕೊಲೆ(Murder) ಯತ್ನ ಪ್ರಕರಣವೊಂದಕ್ಕೆ ತಾರ್ಕಿಕ ಅಂತ್ಯ ಹಾಡಿದ್ದು, ತನಿಖೆ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ 84 ವರ್ಷದ ವೃದ್ಧನನ್ನು ದೋಷಿ ಎಂದು ತೀರ್ಪು ನೀಡಿದೆ. ದಶಕಗಳ ಕಾಲ ನಡೆದ ಕಾನೂನು ಪ್ರಕ್ರಿಯೆಯು ಅಂತಿಮವಾಗಿ ಸಂತ್ರಸ್ಥರಿಗೆ ನ್ಯಾಯ ಒದಗಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.
ಪ್ರಕರಣದ ಹಿನ್ನೆಲೆ ನ್ಯಾಯಾಲಯದ ದಾಖಲೆಗಳ ಪ್ರಕಾರ, ಈ ಘಟನೆಯು ನವೆಂಬರ್ 10, 1992 ರಂದು ರಾಘವ್ಪುರ ಗ್ರಾಮದಲ್ಲಿ ನಡೆದಿತ್ತು. ಆರೋಪಿ ದೀಪ್ ರೈ ಮತ್ತು ಆತನ ಸಹಚರರು ಅದಾಲತ್ ರಾಯ್ ಹಾಗೂ ಅವರ ಪತ್ನಿ ರಾಮ್ಶಕಿ ದೇವಿ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ಒಡೆದ ಗಾಜಿನ ಚೂರುಗಳನ್ನು ಹಾಕುತ್ತಿದ್ದರು. ಇದನ್ನು ದಂಪತಿ ಆಕ್ಷೇಪಿಸಿದಾಗ, ಅವರ ಮೇಲೆ ಮಾರಕಾಸ್ತ್ರಗಳಿಂದ ಭೀಕರ ಹಲ್ಲೆ ನಡೆಸಲಾಗಿತ್ತು.
ದೀರ್ಘ ಕಾನೂನು ಪ್ರಕ್ರಿಯೆ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಾರ್ಚ್ 12, 1993 ರಂದು ಚಾರ್ಜ್ಶೀಟ್ ಸಲ್ಲಿಸಿದ್ದರು. ಜೂನ್ 1999 ರಲ್ಲಿ ನ್ಯಾಯಾಲಯವು ಆರೋಪಗಳನ್ನು ದಾಖಲಿಸಿಕೊಂಡು ಸುದೀರ್ಘ ವಿಚಾರಣೆ ನಡೆಸಿತ್ತು. ಈ ದೀರ್ಘಾವಧಿಯ ಕಾನೂನು ಹೋರಾಟದ ಮಧ್ಯೆ ಪ್ರಕರಣದಲ್ಲಿದ್ದ ಇತರ ನಾಲ್ವರು ಆರೋಪಿಗಳು ಈಗಾಗಲೇ ಮರಣ ಹೊಂದಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರು ರೋಡ್ ರೇಜ್: ಕಾಲೇಜು ವಿದ್ಯಾರ್ಥಿ ಮೇಲೆ ನಡುರಸ್ತೆಯಲ್ಲೇ ಚಾಕು ಇರಿತ!
ಸಾಕ್ಷ್ಯಾಧಾರಗಳ ವಿಶ್ಲೇಷಣೆ ಮತ್ತು ತೀರ್ಪು ವಿಚಾರಣೆಯ ಸಮಯದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಒಟ್ಟು ಹತ್ತು ಪ್ರಮುಖ ಸಾಕ್ಷಿಗಳನ್ನು ಕೂಲಂಕಷವಾಗಿ ವಿಚಾರಣೆಗೆ ಒಳಪಡಿಸಲಾಯಿತು. ಎಲ್ಲಾ ಸಾಕ್ಷ್ಯಗಳು ಮತ್ತು ವೈದ್ಯಕೀಯ ವರದಿಗಳನ್ನು ಪರಿಶೀಲಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯವು, ಆರೋಪಿ ದೀಪ್ ರೈ ಅಪರಾಧ ಎಸಗಿರುವುದು ಸಾಬೀತಾಗಿದೆ ಎಂದು ಸಾರಿತು.
ನ್ಯಾಯಾಲಯವು ಆತನನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 147 (ಗಲಭೆ), 148 (ಮಾರಕ ಆಯುಧಗಳೊಂದಿಗೆ ಗಲಭೆ) ಮತ್ತು ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ತಪ್ಪಿತಸ್ಥನೆಂದು ಘೋಷಿಸಿದೆ.
ವಿಡಿಯೋ
बिहार में 33 साल पुराने केस में 84 साल के बुजुर्ग को भेजा गया जेल, दो लोगों ने सहारा देकर पहुंचाया सलाखों तक। pic.twitter.com/HSlPTwqKAZ
— छपरा जिला 🇮🇳 (@ChapraZila) June 1, 2026
ಮುಂದಿನ ಕ್ರಮ: ಪ್ರಸ್ತುತ 84ವರ್ಷದವರಾಗಿರುವ ದೀಪ್ ರೈ ಅವರ ವಯಸ್ಸು ಮತ್ತು ದೈಹಿಕ ಸ್ಥಿತಿಯ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದ್ದು, ಅವರು ನಡೆಯಲು ಇತರರ ಸಹಾಯ ಅವಲಂಬಿಸಿದ್ದಾರೆ ಎಂದು ವರದಿಯಾಗಿದೆ. ಅಪರಾಧಿಗೆ ವಿಧಿಸಬೇಕಾದ ಶಿಕ್ಷೆಯ ಪ್ರಮಾಣವನ್ನು ಕಾನೂನುಬದ್ಧವಾಗಿ ನಿರ್ಧರಿಸಲು ನ್ಯಾಯಾಲಯವು ಜೂನ್ 2 ರಂದು (ಇಂದು) ಅಂತಿಮ ವಿಚಾರಣೆಯನ್ನು ನಿಗದಿಪಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




