ಸಂವಿಧಾನದ ಮೇಲಿನ ಹೀನಾಯ ದಾಳಿ; ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರಕ್ಕೆ ಸೋನಿಯಾ ಗಾಂಧಿ ಆಕ್ರೋಶ
ವಕ್ಫ್ (ತಿದ್ದುಪಡಿ) ಮಸೂದೆಯ ರಾಜಕೀಯ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಕ್ರೋಶ ಹೊರಹಾಕಿದ್ದು, ಈ ಮಸೂದೆಯು "ಸಂವಿಧಾನದ ಮೇಲಿನ ನಾಚಿಕೆಗೇಡಿನ ದಾಳಿಯಾಗಿದೆ" ಎಂದಿದ್ದಾರೆ. ಲೋಕಸಭೆಯು ವಕ್ಫ್ ಮಸೂದೆಯನ್ನು ಅಂಗೀಕರಿಸಿದ ಕೆಲವೇ ಗಂಟೆಗಳ ನಂತರ ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ತಮ್ಮ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಸಂಸತ್ತಿನ ಎರಡೂ ಸದನಗಳಲ್ಲಿ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಮತ್ತು ವಿವಿಧ ವಿಷಯಗಳ ಕುರಿತು ಚರ್ಚೆಗೆ ನಮ್ಮ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ ಎಂದು ಆರೋಪಿಸಿದರು.

ನವದೆಹಲಿ, ಏಪ್ರಿಲ್ 3: ವಕ್ಫ್ ತಿದ್ದುಪಡಿ ಮಸೂದೆಯನ್ನು (Waqf Amendment Bill) ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮಂಡಿಸಿ ಅಂಗೀಕರಿಸಲಾಗಿದೆ. ವಕ್ಫ್ ತಿದ್ದುಪಡಿ ಮಸೂದೆಯನ್ನು ವಾಸ್ತವವಾಗಿ ಬುಲ್ಡೋಜರ್ ಮೂಲಕ ರವಾನಿಸಲಾಗಿದೆ ಎಂದು ಕಾಂಗ್ರೆಸ್ ಸಂಸದೆ ಸೋನಿಯಾ ಗಾಂಧಿ (Sonia Gandhi) ಇಂದು ಆಕ್ರೋಶ ವ್ಯಕ್ತಪಡಿಸಿದರು. “ನಮ್ಮ ಪಕ್ಷದ ನಿಲುವು ಸ್ಪಷ್ಟವಾಗಿದೆ. ಈ ಮಸೂದೆ ಸಂವಿಧಾನದ ಮೇಲಿನ ನಾಚಿಕೆಗೇಡಿನ ದಾಳಿಯಾಗಿದೆ. ನಮ್ಮ ಸಮಾಜವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿಡಲು ಇದು ಬಿಜೆಪಿಯ ಉದ್ದೇಶಪೂರ್ವಕ ತಂತ್ರದ ಭಾಗವಾಗಿದೆ” ಎಂದು ಅವರು ಟೀಕಿಸಿದ್ದಾರೆ.
ಇದಾದ ಬಳಿಕ ಮಾತನಾಡಿದ ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ಗಢಿ, ಲೋಕಸಭೆಯಲ್ಲಿ ಅಂಗೀಕರಿಸಲಾದ ವಕ್ಫ್ (ತಿದ್ದುಪಡಿ) ಮಸೂದೆಯ ಹಿಂದಿನ ಸಮಯ ಮತ್ತು ಉದ್ದೇಶವನ್ನು ಟೀಕಿಸಿದರು. ಈ ಮಸೂದೆ ಅಮೆರಿಕದ ಪರಸ್ಪರ ಸುಂಕದ ಘೋಷಣೆಯಿಂದ ಗಮನವನ್ನು ಬೇರೆಡೆ ಸೆಳೆಯಲು ಆಡಳಿತ ಸರ್ಕಾರದ ತಂತ್ರವಾಗಿದೆ ಎಂದು ಹೇಳಿದರು.
“ಈ ವಕ್ಫ್ (ತಿದ್ದುಪಡಿ) ಮಸೂದೆಯು ಜನರನ್ನು ಸುಂಕದ ವಿಷಯದಿಂದ ಬೇರೆಡೆಗೆ ತಿರುಗಿಸಲು ಪೂರ್ವಯೋಜಿತವಾಗಿದೆ ಎಂಬುದನ್ನು ದೇಶ ಮತ್ತು ವಿಶೇಷವಾಗಿ ಬಿಜೆಪಿ ಮತದಾರರು ಅರ್ಥಮಾಡಿಕೊಳ್ಳಬೇಕು. ಅಮೆರಿಕ ಶೇ. 26ರಷ್ಟು ಸುಂಕಗಳನ್ನು ವಿಧಿಸಿದೆ. ಆದರೆ ಮೋದಿ ಸರ್ಕಾರ ಅದರ ಬಗ್ಗೆ ಮಾತನಾಡಲು ಸಿದ್ಧವಾಗಿಲ್ಲ. ಪ್ರಧಾನಿ ಈಗ ಥೈಲ್ಯಾಂಡ್ಗೆ ಹೋಗಿದ್ದಾರೆ ಎಂದು ನಾನು ಕೇಳಿದ್ದೇನೆ” ಎಂದು ಪ್ರತಾಪ್ಗಢಿ ಹೇಳಿದರು.
ಇದನ್ನೂ ಓದಿ: Waqf Bill: ಲೋಕಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರ, ರಾಜ್ಯಸಭೆಯಲ್ಲಿ ಇಂದು ಮಂಡನೆ
ಕಾಂಗ್ರೆಸ್ ಸಂಸದ ಸೈಯದ್ ನಸೀರ್ ಹುಸೇನ್ ಕೂಡ ಈ ಬಗ್ಗೆ ಮಾತನಾಡಿದ್ದು, ಈ ಮಸೂದೆಯು “ಅಸಂವಿಧಾನಿಕ” ಮತ್ತು “ಅನ್ಯಾಯ”ದ ಮಸೂದೆಯಾಗಿದೆ ಎಂದು ಹೇಳಿದರು. ಇಂಡಿಯಾ ಮೈತ್ರಿಕೂಟ ವಕ್ಫ್ ಮಸೂದೆಯ ವಿರುದ್ಧ ಒಗ್ಗಟ್ಟಾಗಿ ನಿಂತಿತು. ಇಂಡಿಯಾ ಮೈತ್ರಿಕೂಟ ಮತ್ತು NDA ಮತಗಳ ನಡುವೆ ದೊಡ್ಡ ವ್ಯತ್ಯಾಸವಿರಲಿಲ್ಲ. ನಮ್ಮ ಜನರು ಈ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದರು. ಏಕೆಂದರೆ ಇದು ಸಂವಿಧಾನಬಾಹಿರ, ಅನ್ಯಾಯದ ಮಸೂದೆಯಾಗಿದೆ ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ