1937 ರಂತೆ ಇಂದಿಗೂ ಒಡೆದು ಆಳುವ ನೀತಿ: ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂದ ಅಮಿತ್ ಶಾ

Vande Mataram: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡದಿರುವ ಕಾಂಗ್ರೆಸ್ ನಿಲುವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು 'ದೇಶವಿರೋಧಿ' ಹಾಗೂ ಕೇವಲ 'ಮತ ಬ್ಯಾಂಕ್ ರಾಜಕೀಯ' ಎಂದು ಆರೋಪಿಸಿದ್ದಾರೆ. 1937ರಲ್ಲಿದ್ದಂತೆ ಕಾಂಗ್ರೆಸ್ ಮತ್ತೊಮ್ಮೆ ದೇಶ ವಿಭಜನೆಗೆ ದಾರಿ ಮಾಡಿಕೊಡುತ್ತಿದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿದೆ ಎಂದು ಶಾ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ನೇತೃತ್ವದ ಪಕ್ಷದ ನಿರ್ಧಾರವನ್ನು ಸಚಿವರು ಕಟುವಾಗಿ ಟೀಕಿಸಿದರು.

1937 ರಂತೆ ಇಂದಿಗೂ ಒಡೆದು ಆಳುವ ನೀತಿ: ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂದ ಅಮಿತ್ ಶಾ
ಅಮಿತ್ ಶಾ

Updated on: Aug 20, 2026 | 12:49 PM

ನವದೆಹಲಿ, ಆಗಸ್ಟ್​ 20: ವಂದೇ ಮಾತರಂ(Vande Mataram) ಗೀತೆಯನ್ನು ಸಂಪೂರ್ಣವಾಗಿ ಹಾಡದಿರಲು ನಿರ್ಣಯ ಕೈಗೊಂಡಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನ ಈ ನಿರ್ಧಾರವು “ದೇಶವಿರೋಧಿ ಹಾಗೂ ಕೇವಲ ಮತ ಬ್ಯಾಂಕ್‌ಗಾಗಿ ಮಾಡುತ್ತಿರುವ ತುಷ್ಟೀಕರಣ ರಾಜಕೀಯ” ಎಂದು ಅವರು ಕಟುವಾಗಿ ಟೀಕಿಸಿದ್ದಾರೆ. ತಮಿಳುನಾಡಿನ ಚೆಂಗಲ್ಪಟ್ಟುವಿನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿಲುವನ್ನು ತೀವ್ರವಾಗಿ ಖಂಡಿಸಿದರು.

1937 ರಲ್ಲಿ ವಂದೇ ಮಾತರಂನ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಣಯವನ್ನು ಅಂಗೀಕರಿಸುವ ಮೂಲಕ ಕಾಂಗ್ರೆಸ್ ದೇಶ ವಿಭಜನೆಗೆ ಅಡಿಪಾಯ ಹಾಕಿತ್ತು. ಇಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತದೇ ತಪ್ಪನ್ನು ಮಾಡುತ್ತಿದೆ ಎಂದು ಶಾ ಕಿಡಿಕಾರಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ: ಸಂಪೂರ್ಣ ಆರು ಚರಣಗಳ ವಂದೇ ಮಾತರಂ ಗೀತೆಯನ್ನು ಹಾಡಲು ನಿರಾಕರಿಸುವ ಮೂಲಕ, ಗೀತೆ ರಚಿಸಿದ ಬಂಕಿಮ್ ಚಂದ್ರ ಚಟರ್ಜಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ತ್ಯಾಗ ಮಾಡಿದ ಲಕ್ಷಾಂತರ ವೀರರಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಆರೋಪಿಸಿದರು.

ಸಂಸತ್ತಿನ ಕಾನೂನಿಗೆ ಅಗೌರವ: ರಾಷ್ಟ್ರೀಯ ಗೀತೆಗೆ ಅಗೌರವ ತೋರುವುದನ್ನು ತಡೆಯಲು ಮತ್ತು ಅಧಿಕೃತ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಗೀತೆ ಹಾಡುವುದನ್ನು ಕಡ್ಡಾಯಗೊಳಿಸಲು ಮೋದಿ ಸರ್ಕಾರ ಕಾನೂನು ಚೌಕಟ್ಟು ತಂದಿದ್ದರೂ ಕಾಂಗ್ರೆಸ್ ಅದನ್ನು ಧಿಕ್ಕರಿಸುತ್ತಿದೆ ಎಂದಿದ್ದಾರೆ.

ಮತ್ತಷ್ಟು ಓದಿ: ಜೈಲಿಗೆ ಹಾಕಿದರೂ ಸರಿ ನಾವು ಹಾಡುವುದು ವಂದೇ ಮಾತರಂ ಗೀತೆಯ ಎರಡು ಪ್ಯಾರಾ ಮಾತ್ರ: ಬಿ.ಕೆ. ಹರಿಪ್ರಸಾದ್

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ನಿರ್ಧಾರ
ಎರಡು ಚರಣಗಳಿಗೆ ಸೀಮಿತ: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು 1937 ರ ಐತಿಹಾಸಿಕ ನಿಲುವಿಗೆ ಬದ್ಧವಾಗಿ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರವನ್ನು ಮುಂದುವರಿಸಲು ನಿರ್ಣಯ ಅಂಗೀಕರಿಸಿದೆ. ದೇಶವು ಒಮ್ಮೆ ವಂದೇ ಮಾತರಂ ಅನ್ನು ವಿಭಜಿಸಿ ಭಾರೀ ಬೆಲೆ ತೆತ್ತಿದೆ. ಇನ್ನು ಮುಂದೆ ದೇಶ ಇಂತಹ ಓಲೈಕೆಯ ರಾಜಕೀಯವನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವರು ಎಚ್ಚರಿಸಿದ್ದಾರೆ.

ಬಂಕಿಮ್ ಚಂದ್ರರ ‘ಆನಂದಮಠ’: ಬಂಕಿಮ್ ಚಂದ್ರ ಚಟರ್ಜಿ ಅವರು ರಚಿಸಿದ ‘ವಂದೇ ಮಾತರಂ’ ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಮಹಾನ್ ಪ್ರೇರಣೆಯಾಗಿತ್ತು. 1937ರಲ್ಲಿ ಮುಸ್ಲಿಂ ಲೀಗ್‌ನ ಆಕ್ಷೇಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಅಳವಡಿಸಿಕೊಂಡಿತ್ತು.

ಕಾನೂನು ಸಂರಕ್ಷಣೆ: ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಗಳ ಗೌರವ ಕಾಪಾಡಲು ಇತ್ತೀಚೆಗೆ ನಿಯಮಾವಳಿಗಳನ್ನು ಬಿಗಿಗೊಳಿಸಲಾಗಿದ್ದು, ಈ ವಿಚಾರವು ರಾಷ್ಟ್ರಮಟ್ಟದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:48 pm, Thu, 20 August 26

Loading...
Unable to load recommendations.
Follow Us