Coal Crisis: ‘ಕಲ್ಲಿದ್ದಲು ಅಭಾವ..ವಿದ್ಯುತ್​ ಪೂರೈಕೆ ವ್ಯತ್ಯಯಗಳೆಲ್ಲ ತಪ್ಪು ಕಲ್ಪನೆ, ಆತಂಕ ಬೇಡ’-ಕೇಂದ್ರ ಸರ್ಕಾರ

| Updated By: Lakshmi Hegde

Updated on: Oct 10, 2021 | 4:15 PM

ದೇಶದಲ್ಲಿ ಕಲ್ಲಿದ್ದಲು ಅಭಾವ ಉಂಟಾಗುತ್ತಿದೆ ಎಂದು ಅನಗತ್ಯವಾಗಿ ಸುದ್ದಿ ಹಬ್ಬಿಸಿ, ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಎಂದು ವಿದ್ಯುತ್​ ಸಚಿವಾಲಯದ ಸಚಿವ ಆರ್​.ಕೆ.ಸಿಂಗ್​ ಹೇಳಿದ್ದಾರೆ.

Coal Crisis: ‘ಕಲ್ಲಿದ್ದಲು ಅಭಾವ..ವಿದ್ಯುತ್​ ಪೂರೈಕೆ ವ್ಯತ್ಯಯಗಳೆಲ್ಲ ತಪ್ಪು ಕಲ್ಪನೆ, ಆತಂಕ ಬೇಡ’-ಕೇಂದ್ರ ಸರ್ಕಾರ
ಸಾಂಕೇತಿಕ ಚಿತ್ರ
Follow us on

ದೆಹಲಿ: ಚೀನಾ ಮತ್ತು ಯುರೋಪ್​​​ಗಳಲ್ಲಿ ಶುರುವಾಗಿರುವ ಕಲ್ಲಿದ್ದಲು ಅಭಾವದ ಬಿಕ್ಕಟ್ಟು (Coal Crisis) ಭಾರತದಲ್ಲೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಈಗಾಗಲೇ ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಅಭಯ ನೀಡಿದೆ. ಕಲ್ಲಿದ್ದಲು ಕೊರತೆ ಶುರುವಾಗಿದೆ..ಇದರಿಂದ ದೇಶದಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ ಎಂಬ ಆತಂಕ ಯಾರಿಗೂ ಬೇಡ. ಇದೊಂದು ಸಂಪೂರ್ಣ ತಪ್ಪಾದ ಕಲ್ಪನೆ. ಎಲ್ಲ ಬೇಡಿಕೆಗಳನ್ನೂ ಪೂರೈಸಲು ಅಗತ್ಯವಿರುವಷ್ಟು ಖನಿಜ ಸಂಪತ್ತು ನಮ್ಮಲ್ಲಿದೆ ಎಂದು ಹೇಳಿದೆ. 

ಕೇಂದ್ರ ಕಲ್ಲಿದ್ದಲು ಸಚಿವಾಲಯ ಒಂದು ಹೇಳಿಕೆಯಲ್ಲಿ, 72 ಲಕ್ಷ ಟನ್​ಗಳಷ್ಟು ಕಲ್ಲಿದ್ದಲು ಸಂಗ್ರಹ ಇದೆ. ಇದು ನಾಲ್ಕು ದಿನಗಳಿಗೆ ಸಾಕು ಎಂದು ಹೇಳಿತ್ತು. ಹಾಗೇ, ಕಲ್ಲಿದ್ದಲು ಇಂಡಿಯಾ ಲಿಮಿಟೆಡ್​ (CIL) ಬಳಿ 400 ಲಕ್ಷ ಟನ್​​​ಗಳಿಗೂ ಅಧಿಕ ಕಲ್ಲಿದ್ದಲು ಸಂಗ್ರಹವಿದ್ದು, ವಿದ್ಯುತ್ ಸ್ಥಾವರಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಇನ್ನು ಈ ಬಗ್ಗೆ ಕೇಂದ್ರ ಕಲ್ಲಿದ್ದಲು ಇಲಾಖೆ ಸಚಿವ ಪ್ರಲ್ಹಾದ್​ ಜೋಶಿ, ಕಲ್ಲಿದ್ದಲು ಇಂಡಿಯಾ ಲಿಮಿಟೆಡ್​ ಬಳಿ 43 ಮಿಲಿಯನ್​ ಟನ್​​ಗಳಷ್ಟು ಕಲ್ಲಿದ್ದಲು ಸಂಗ್ರಹವಿದೆ. ಮುಂದಿನ 24 ದಿನಗಳಿಗೆ ಇದನ್ನು ಪೂರೈಕೆ ಮಾಡಬಹುದು ಎಂದಿದ್ದರು.

ಹಾಗೇ, ಇಂದು ಸುದ್ದಿಗೋಷ್ಠಿ ನಡೆಸಿದ ವಿದ್ಯುತ್​ ಸಚಿವಾಲಯದ ಆರ್​.ಕೆ.ಸಿಂಗ್​,  ದೇಶದಲ್ಲಿ ಕಲ್ಲಿದ್ದಲು ಅಭಾವ ಉಂಟಾಗುತ್ತಿದೆ ಎಂದು ಅನಗತ್ಯವಾಗಿ ಸುದ್ದಿ ಹಬ್ಬಿಸಿ, ಜನರಲ್ಲಿ ಗೊಂದಲ ಮೂಡಿಸಲಾಗುತ್ತಿದೆ ಎಂದಿದ್ದಾರೆ. ದೇಶದಲ್ಲಿ ಸಾಕಷ್ಟು ವಿದ್ಯುತ್​ ಲಭ್ಯವಿದೆ. ಇಡೀ ದೇಶಕ್ಕೆ ಅಗತ್ಯವಿರುವಷ್ಟು ವಿದ್ಯುತ್​ನ್ನು ನೀಡುತ್ತಿದ್ದೇವೆ.  ಯಾರಲ್ಲಿ ವಿದ್ಯುತ್​ ಕೊರತೆ ಉಂಟಾಗಿದೆಯೋ ಅವರು ನನಗೆ ಮನವಿ ಸಲ್ಲಿಸಿ, ನಾನು ಪೂರೈಕೆ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಸುಖಾಸುಮ್ಮನೆ ಜನರಲ್ಲಿ ಗಾಬರಿ ಸೃಷ್ಟಿ ಮಾಡಲಾಗುತ್ತಿದೆ. ದೆಹಲಿಯಲ್ಲೂ ವಿದ್ಯುತ್ ಪೂರೈಕೆ ಮುಂದುವರಿಯಲಿದೆ ಮತ್ತು ಅಲ್ಲಿ ಯಾವುದೇ ಲೋಡ್​ ಶೆಡ್ಡಿಂಗ್​ ಇರುವುದಿಲ್ಲ. ದೇಶೀಯ ಅಥವಾ ಆಮದು ಮಾಡಿಕೊಂಡ ಕಲ್ಲಿದ್ದಲಿನ ಶುಲ್ಕವನ್ನು ಲೆಕ್ಕಿಸದೆ, ಪೂರೈಕೆಯನ್ನು ಮುಂದುವರಿಸಲಾಗುವುದು. ಹಾಗೇ, ಅನಿಲ ಪೂರೈಕೆಯಲ್ಲೂ ಯಾವುದೇ ಕೊರತೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಮಧ್ಯೆ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವನ್ನೂ ಬರೆದಿದ್ದಾರೆ. ಇನ್ನೆರಡು ದಿನಗಳಲ್ಲಿ ಸೂಕ್ತ ಪ್ರಮಾಣದಲ್ಲಿ ವಿದ್ಯುತ್​ ಪೂರೈಕೆ ಮಾಡದೆ ಇದ್ದರೆ ದೆಹಲಿ ಕತ್ತಲಲ್ಲಿಯೇ ಇರಬೇಕಾಗುತ್ತದೆ. ಆದಷ್ಟು ಶೀಘ್ರದಲ್ಲಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯೇ? ವಿರೋಧಿಗಳಿಗೆ ಅಮಿತ್ ಶಾ ಕೊಟ್ಟ ಉತ್ತರ ಹೀಗಿತ್ತು

Coal Crisis: ‘ಕಲ್ಲಿದ್ದಲು ಕೊರತೆಯಾಗಿಲ್ಲ’ ಎಂದು ಅಚ್ಚರಿಯ ಹೇಳಿಕೆ ನೀಡಿದ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್!