ಆಪ್ ಮತ್ತೆ ಅಧಿಕಾರಕ್ಕೆ ಬಂದರೆ ಮನೀಶ್ ಸಿಸೋಡಿಯಾ ಡಿಸಿಎಂ ಆಗ್ತಾರೆ: ಅರವಿಂದ್ ಕೇಜ್ರಿವಾಲ್

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಭರ್ಜರಿ ಪ್ರಚಾರ ನಡೆಯುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರು ಮನೀಶ್ ಸಿಸೋಡಿಯಾ ಅವರನ್ನು ಮತ್ತೆ ಉಪ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿರುವ ಕೇಜ್ರಿವಾಲ್, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.

ಆಪ್ ಮತ್ತೆ ಅಧಿಕಾರಕ್ಕೆ ಬಂದರೆ ಮನೀಶ್ ಸಿಸೋಡಿಯಾ ಡಿಸಿಎಂ ಆಗ್ತಾರೆ: ಅರವಿಂದ್ ಕೇಜ್ರಿವಾಲ್
ಆಪ್ ಮತ್ತೆ ಅಧಿಕಾರಕ್ಕೆ ಬಂದರೆ ಮನೀಶ್ ಸಿಸೋಡಿಯಾ ಡಿಸಿಎಂ ಆಗ್ತಾರೆ: ಅರವಿಂದ್ ಕೇಜ್ರಿವಾಲ್

Updated on: Jan 26, 2025 | 10:14 PM

ದೆಹಲಿ, ಜನವರಿ 26: ದೆಹಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ನಿರತವಾಗಿವೆ. ಈ ಮಧ್ಯೆ ಆಪ್ ಅಧಿಕಾರಕ್ಕೆ ಬಂದರೆ ಮನೀಶ್ ಸಿಸೋಡಿಯಾರನ್ನು (Manish Sisodia) ಮತ್ತೆ ಡಿಸಿಎಂ ಆಗಿ ಮಾಡುತ್ತೇವೆ ಎಂದು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಘೋಷಣೆ ಮಾಡಿದ್ದಾರೆ.

ಸಿಸೋಡಿಯಾ ಪರವಾಗಿ ಅರವಿಂದ್ ಕೇಜ್ರಿವಾಲ್ ಜಂಗ್ಪುರದಲ್ಲಿ ಪ್ರಚಾರ ಮಾಡಿದ್ದಾರೆ. ಈ ವೇಳೆ ಸಾರ್ವಜನಿಕ ರ್‍ಯಾಲಿಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ದೆಹಲಿಯಲ್ಲಿ ಆಪ್​​ ಸರ್ಕಾರ ರಚಿಸುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಹಾಗಾಗಿ ನಮ್ಮ ಮುಂದಿನ ಸರ್ಕಾರದಲ್ಲೂ ಮನೀಶ್ ಸಿಸೋಡಿಯಾ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ದೆಹಲಿ ಚುನಾವಣೆಗೆ ಬಿಜೆಪಿಯಿಂದ ಸಂಕಲ್ಪ ಪತ್ರ ಬಿಡುಗಡೆ; ಪ್ರಮುಖ ಭರವಸೆಗಳು ಹೀಗಿವೆ

ಸಿಸೋಡಿಯಾ ಅವರನ್ನು ತಮ್ಮ ಕಮಾಂಡರ್ ಮತ್ತು ಕಿರಿಯ ಸಹೋದರ ಎಂದು ಉಲ್ಲೇಖಿಸಿರುವ ಕೇಜ್ರಿವಾಲ್, ರಾಷ್ಟ್ರ ರಾಜಧಾನಿಯಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳನ್ನು ಪರಿವರ್ತಿಸುವುದರೊಂದಿಗೆ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡುವ ಭರವಸೆ ಮಾಡಿದ್ದಾರೆ. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಶಾಲೆಗಳನ್ನು ಮುಚ್ಚಲಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇನ್ನು ಈ ವೇಳೆ ಮತದಾರರು ಬುದ್ಧಿವಂತಿಕೆಯಿಂದ ಆಯ್ಕೆ ಮಾಡುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಕಳೆದ ಬಾರಿ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದರು. ಆದರೂ ಯಾವುದೇ ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಅವರು ಯಾವುದೇ ಕೆಲಸ ಮಾಡಿಲ್ಲ. ನೀವು ತಪ್ಪಾಗಿ ಬಿಜೆಪಿಗೆ ಮತ ಹಾಕಿದರೆ, ಎಲ್ಲವೂ ಹಾಳಾಗುತ್ತದೆ ಎಂದು ಕೇಜ್ರಿವಾಲ್​ ಕಿಡಿಕಾರಿದ್ದಾರೆ.

ಪ್ರತಿಯೊಬ್ಬರು ಉಪ ಮುಖ್ಯಮಂತ್ರಿನೇ: ಮನೀಶ್ ಸಿಸೋಡಿಯಾ

ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಮನೀಶ್ ಸಿಸೋಡಿಯಾ, ನಾನು ಗೆದ್ದರೆ, ನಾನು ಮಾತ್ರವಲ್ಲ, ಜಂಗ್ಪುರದ ಪ್ರತಿಯೊಬ್ಬ ಸಹೋದರ ಮತ್ತು ಸಹೋದರಿಯೂ ಉಪ ಮುಖ್ಯಮಂತ್ರಿಯಾಗುತ್ತಾರೆ. ಯಾವುದೇ ಸರ್ಕಾರಿ ಕಚೇರಿ ಕೆಲಸ ಮಾಡಲು ಇಲ್ಲಿ ಯಾರಿಗಾದರೂ ಒಂದು ಕರೆ ಮಾಡಿದರೂ ಸಾಕು, ಉಪ ಕ್ಷೇತ್ರದ ಕರೆಯನ್ನು ನಿರ್ಲಕ್ಷಿಸುವ ಧೈರ್ಯ ಯಾವ ಅಧಿಕಾರಿಯೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us