
ಅಯೋಧ್ಯೆ, ಜುಲೈ 09: ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರ(Ram Mandir)ದ ಕಾಣಿಕೆ ಕಳ್ಳತನದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಈಗ ಇದರಲ್ಲಿ ಮತ್ತೊಂದು ಆಘಾತಕಾರಿ ಮಹಾವಂಚನೆ ಬಯಲಾಗಿದೆ. ದೇವಸ್ಥಾನದ ಕೌಂಟರ್ಗಳಿಂದ ಹಣ ಕದಿಯುತ್ತಿದ್ದ ಸಿಬ್ಬಂದಿ, ನೇರವಾಗಿ ಭಕ್ತರನ್ನೇ ವಂಚಿಸಲು ನಕಲಿ ದೇಣಿಗೆ ರಶೀದಿ ಜಾಲವನ್ನು ನಡೆಸುತ್ತಿದ್ದರು ಎಂಬ ಕರಾಳ ಸತ್ಯವನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಭಕ್ತರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡ ಸಿಬ್ಬಂದಿ
ವಿಚಾರಣೆಯ ವೇಳೆ ಬಂಧಿತ ಆರೋಪಿಗಳು ನೀಡಿರುವ ಹೇಳಿಕೆಗಳು ಪೊಲೀಸರನ್ನೇ ಬೆಚ್ಚಿಬೀಳಿಸಿವೆ. ಭಕ್ತರು ರಾಮ ಮಂದಿರಕ್ಕೆ ದೊಡ್ಡ ಪ್ರಮಾಣದ ದೇಣಿಗೆ ನೀಡಲು ಮುಂದೆ ಬಂದಾಗ, ಆರೋಪಿಗಳು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೆಸರಿನಲ್ಲೇ ಇದ್ದ ನಕಲಿ ರಶೀದಿ ಪುಸ್ತಕಗಳನ್ನು ಬಳಸಿ ಹಣ ವಸೂಲಿ ಮಾಡುತ್ತಿದ್ದರು. ಭಕ್ತರಿಗೆ ಅದು ಅಸಲಿ ರಶೀದಿ ಎಂದೇ ಅನಿಸುತ್ತಿತ್ತು, ಆದರೆ ಆ ಹಣ ಟ್ರಸ್ಟ್ ಖಾತೆಗೆ ಹೋಗುವ ಬದಲು ನೇರವಾಗಿ ಆರೋಪಿಗಳ ಜೇಬು ಸೇರುತ್ತಿತ್ತು.
ಪೊಲೀಸರು ಈಗ ಆರೋಪಿಗಳ ಬಳಿಯಿದ್ದ ಹಳೆಯ ಆವೃತ್ತಿಯ ನಕಲಿ ರಶೀದಿ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದು, ಇದುವರೆಗೆ ಎಷ್ಟು ಕೋಟಿ ರೂಪಾಯಿ ವಂಚನೆ ನಡೆದಿದೆ ಎಂಬುದನ್ನು ಲೆಕ್ಕ ಹಾಕುತ್ತಿದ್ದಾರೆ.
ಮತ್ತಷ್ಟು ಓದಿ: ರಾಮ ಮಂದಿರದ ಬೆನ್ನಲ್ಲೇ ಮಧ್ಯಪ್ರದೇಶದ ಬಾಗಲಾಮುಖಿ ದೇವಸ್ಥಾನದಲ್ಲೂ ಭುಗಿಲೆದ್ದ ದೇಣಿಗೆ ಕಳ್ಳತನ ವಿವಾದ
ಕದ್ದ ಹಣದಲ್ಲಿ ಸೈಟು, ಐಷಾರಾಮಿ ಕಾರು ಖರೀದಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತಿನ್ನು ಯಾದವ್, ಲವ್ ಕುಶ್ ಮಿಶ್ರಾ, ಕರುಣೇಶ್ ಪಾಂಡೆ ಮತ್ತು ಅನುಕಲ್ಪ್ ಮಿಶ್ರಾ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಇದೀಗ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದು, ಕದ್ದ ಹಣ ಏನಾಯಿತು ಎಂದು ಜಾಲಾಡುತ್ತಿದ್ದಾರೆ.
ಕಳ್ಳತನ ಮತ್ತು ವಂಚನೆಯ ಹಣದಿಂದ ಆರೋಪಿಗಳು ಅಯೋಧ್ಯೆ ಸುತ್ತಮುತ್ತ ಬೆಲೆಬಾಳುವ ಜಮೀನು, ಐಷಾರಾಮಿ ವಾಹನಗಳು ಮತ್ತು ಮನೆಗಳನ್ನು ಖರೀದಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಮುಖ್ಯ ಆರೋಪಿ ಅನುಕಲ್ಪ್ ಮಿಶ್ರಾ ಇತ್ತೀಚೆಗೆ ಖರೀದಿಸಿರುವ ಹೊಸ ಮನೆ ಮತ್ತು ಕಾರಿನ ಬ್ಯಾಂಕ್ ವಹಿವಾಟುಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಇವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ.
ಸಿಸಿಟಿವಿ ಸಾಕ್ಷ್ಯ ಹಾಗೂ ಹೆಚ್ಚುವರಿ ಮಾಹಿತಿ
ರಾಮ ಮಂದಿರದ ಗರ್ಭಗುಡಿಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಕಾಣಿಕೆ ಎಣಿಕೆ ಮಾಡುವ ಸಿಬ್ಬಂದಿಯೇ ತಮ್ಮ ಪ್ಯಾಂಟ್ ಮತ್ತು ಸಾಕ್ಸ್ಗಳ ಒಳಗೆ ನೋಟುಗಳ ಕಟ್ಟುಗಳನ್ನು ಬಚ್ಚಿಟ್ಟುಕೊಳ್ಳುತ್ತಿದ್ದ ದೃಶ್ಯಗಳು ಪತ್ತೆಯಾಗಿದ್ದವು. ಕೇವಲ 45 ದಿನಗಳಲ್ಲಿ 70 ಕ್ಕೂ ಹೆಚ್ಚು ಬಾರಿ ಹಣ ಕದಿಯಲಾಗಿತ್ತು, ಈ ವಿಷಯ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಈಗ ನಕಲಿ ರಶೀದಿ ದಂಧೆಯೂ ಬಯಲಿಗೆ ಬಂದಿರುವುದರಿಂದ, ರಾಮ ಮಂದಿರ ಟ್ರಸ್ಟ್ ತನ್ನ ಭದ್ರತೆ ಮತ್ತು ಆಡಿಟಿಂಗ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಡಿಜಿಟಲ್ ಹಾಗೂ ಕಠಿಣಗೊಳಿಸಲು ನಿರ್ಧರಿಸಿದೆ. ಇನ್ಮುಂದೆ ಕೇವಲ ಕ್ಯೂಆರ್ ಕೋಡ್ ಮತ್ತು ಬ್ಯಾಂಕ್ ವರ್ಗಾವಣೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಭಕ್ತರಲ್ಲಿ ಮನವಿ ಮಾಡಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:43 am, Thu, 9 July 26