ರಾಮ ಮಂದಿರದ ಬೆನ್ನಲ್ಲೇ ಮಧ್ಯಪ್ರದೇಶದ ಬಾಗಲಾಮುಖಿ ದೇವಸ್ಥಾನದಲ್ಲೂ ಭುಗಿಲೆದ್ದ ದೇಣಿಗೆ ಕಳ್ಳತನ ವಿವಾದ
ಕೆಲವು ದಿನಗಳಿಂದ ಅಯೋಧ್ಯೆಯ ರಾಮ ಮಂದಿರದ ದೇಣಿಗೆ ವಿವಾದ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಮಧ್ಯಪ್ರದೇಶದ ನಾಗ್ಪುರದ ಪೀತಾಂಬರ ಪೀಠದ ಅಡಿಯಲ್ಲಿ ಬರುವ ಪ್ರಸಿದ್ಧ ಮಾ ಬಾಗಲಾಮುಖಿ ದೇವಸ್ಥಾನ ಕೂಡ ತೀವ್ರ ವಿವಾದಕ್ಕೆ ಸಿಲುಕಿದೆ. ಈ ದೇವಸ್ಥಾನಕ್ಕೆ ನೀಡಲಾದ ದೇಣಿಗೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಬರುವ ಭಾರಿ ಪ್ರಮಾಣದ ದೇಣಿಗೆ ಮತ್ತು ಆಸ್ತಿಯ ಉಸ್ತುವಾರಿಗೆ ಸಂಬಂಧಿಸಿದಂತೆ ಟ್ರಸ್ಟಿಗಳ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ತಲೆದೋರಿವೆ ಎನ್ನಲಾಗಿದೆ. ಹಣಕಾಸಿನ ಪಾರದರ್ಶಕತೆಯ ಕೊರತೆ ಮತ್ತು ನಿಧಿಯ ದುರುಪಯೋಗ ನಡೆದಿದೆ ಎಂಬ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ.

ಮುಖ್ಯಾಂಶಗಳು
- ಅಯೋಧ್ಯೆ ಬಳಿಕ ಮಧ್ಯಪ್ರದೇಶದಲ್ಲೂ ದೇಣಿಗೆ ವಿವಾದ
- ಬಾಗಲಾಮುಖಿ ದೇವಸ್ಥಾನಕ್ಕೆ ನೀಡಿದ ದೇಣಿಗೆ ಕಳ್ಳತನವಾಗಿದೆ ಎಂಬ ಆರೋಪ
- ತನಿಖೆಗೆ ಜಿಲ್ಲಾಡಳಿತ ಆದೇಶ
ಭೋಪಾಲ್, ಜುಲೈ 8: ಅಯೋಧ್ಯೆಯ ರಾಮ ಮಂದಿರದ ದೇಣಿಗೆಗೆ (Ram Mandir Donation Theft Row) ಸಂಬಂಧಿಸಿದಂತೆ ಇತ್ತೀಚೆಗೆ ಭಾರೀ ವಿವಾದ ಭುಗಿಲೆದ್ದಿದೆ. ಭಕ್ತರಿಂದ ಸಂಗ್ರಹಿಸಲಾಗಿದ್ದ ಎದ್ದಿದ್ದ ವಿವಾದದ ಬೆನ್ನಲ್ಲೇ, ಈಗ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ನಲ್ಖೇಡಾ ಬಳಿಯ ಪ್ರಸಿದ್ಧ ‘ಮಾ ಬಾಗಲಾಮುಖಿ’ ದೇವಸ್ಥಾನದಲ್ಲೂ ದೇಣಿಗೆ ದುರುಪಯೋಗದ ಬಗ್ಗೆ ಹೊಸ ವಿವಾದ ಭುಗಿಲೆದ್ದಿದೆ. ಈ ದೇವಸ್ಥಾನಕ್ಕೆ ದೇಶದ ನಾನಾ ರಾಜ್ಯಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ಈ ಭಕ್ತರು ದೇವಸ್ಥಾನಕ್ಕೆ ನೀಡಿರುವ ಕಾಣಿಕೆ ಮತ್ತು ದೇಣಿಗೆ ನಿರ್ವಹಣೆಯಲ್ಲಿ ಭಾರಿ ಹಣಕಾಸು ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದಿದೆ.
ಈ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಈ ಪ್ರಕರಣದ ತನಿಖೆಗಾಗಿ 3 ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಅಗರ್ ಮಾಲ್ವಾ ಜಿಲ್ಲಾಧಿಕಾರಿ ಪ್ರೀತಿ ಯಾದವ್ ಹೊರಡಿಸಿರುವ ಆದೇಶದ ಪ್ರಕಾರ, ಬಾಗಲಾಮುಖಿ ದೇವಸ್ಥಾನದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಸಮಿತಿಯೊಂದು ಸರ್ಕಾರಿ ಸ್ವಾಮ್ಯದ ಅಧಿಕೃತ ದೇವಸ್ಥಾನ ನಿರ್ವಹಣಾ ಸಮಿತಿಯ ಬದಲು ಭಕ್ತರಿಂದ ನಗದು ಹಣ, ಚಿನ್ನ ಮತ್ತು ಬೆಳ್ಳಿ ಕಾಣಿಕೆಗಳನ್ನು ಸಂಗ್ರಹಿಸುತ್ತಿದೆ ಎಂದು ಜಿಲ್ಲಾಡಳಿತಕ್ಕೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಲಾಗಿದೆ.
ಇದನ್ನೂ ಓದಿ: ರಾಮ ಮಂದಿರದ ಬೆನ್ನಲ್ಲೇ ಬದರಿನಾಥ ದೇವಾಲಯದಲ್ಲೂ ದೇಣಿಗೆ ಹಗರಣದ ಸದ್ದು, ತನಿಖೆಗೆ ಹೈಲೆವೆಲ್ ಕಮಿಟಿ ರಚನೆ
ಈ ದೇವಸ್ಥಾನಕ್ಕೆ ಭಕ್ತರು ನೀಡುವ ದೇಣಿಗೆಯನ್ನು ನಿರ್ವಹಿಸಲು ಈ ಖಾಸಗಿ ಸಮಿತಿಯು ತನ್ನದೇ ಆದ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದು, ದೇವಸ್ಥಾನದ ನಿಧಿಯ ದುರುಪಯೋಗ ಮಾಡಿಕೊಳ್ಳುತ್ತಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಗಂಭೀರ ಆರೋಪಗಳನ್ನು ಪರಿಗಣಿಸಿದ ಜಿಲ್ಲಾಧಿಕಾರಿಗಳು, ಸತ್ಯವನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಿದ್ದಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (CEO) ಬಿ.ಎಸ್. ಸೋಲಂಕಿ ನೇತೃತ್ವದಲ್ಲಿ 3 ಸದಸ್ಯರ ತನಿಖಾ ಸಮಿತಿಯನ್ನು ನೇಮಿಸಿದೆ. ಜಿಲ್ಲಾ ಖಜಾನೆ ಅಧಿಕಾರಿ ಮನೀಶ್ ಸೋಲಂಕಿ ಮತ್ತು ನಲ್ಖೇಡಾ ನಗರ ಪರಿಷತ್ತಿನ ಮುಖ್ಯ ಮುನ್ಸಿಪಲ್ ಅಧಿಕಾರಿ ಮಿನ್ನಿ ಅಗರ್ವಾಲ್ ಅವರನ್ನು ಈ ಸಮಿತಿಯ ಸದಸ್ಯರನ್ನಾಗಿ ಮಾಡಲಾಗಿದೆ. ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ 7 ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಈ ತನಿಖೆಯ ಭಾಗವಾಗಿ ಸಮಿತಿಯು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಈ ಅಕ್ರಮದಲ್ಲಿ ದೇವಸ್ಥಾನದ ಯಾವುದಾದರೂ ಅಧಿಕಾರಿ, ಉದ್ಯೋಗಿ, ನಿರ್ವಹಣಾ ಸಮಿತಿಯ ಪ್ರತಿನಿಧಿಯ ಪಾತ್ರವಿದೆಯೇ ಎಂಬುದನ್ನು ತನಿಖೆ ಮಾಡಲಾಗುತ್ತದೆ. ನಿಗದಿತ ಅವಧಿಯಲ್ಲಿ ಎಲ್ಲಾ ಪುರಾವೆಗಳನ್ನು ಸಂಗ್ರಹಿಸಿ, ಶಿಫಾರಸುಗಳೊಂದಿಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸಮಿತಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ರಾಮ ಮಂದಿರ ದೇಣಿಗೆ ಹಗರಣ: 45 ದಿನಗಳಲ್ಲಿ 70 ಬಾರಿ ಕಳ್ಳತನ, ಟ್ರಸ್ಟಿ ಅನಿಲ್ ಮಿಶ್ರಾ ವಿರುದ್ಧ ತನಿಖೆ
ಬಾಗಲಾಮುಖಿ ದೇವಾಲಯದ ಹಿನ್ನೆಲೆ:
ನಲ್ಖೇಡಾದಲ್ಲಿರುವ ಮಾ ಬಾಗಲಾಮುಖಿ ದೇವಸ್ಥಾನವು ದೇಶದ ಅತ್ಯಂತ ಪವಿತ್ರ ಮತ್ತು ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿದೆ. ಇಲ್ಲಿಗೆ ವರ್ಷಪೂರ್ತಿ ಸಾವಿರಾರು ಭಕ್ತರು ಮತ್ತು ಗಣ್ಯರು ಭೇಟಿ ನೀಡುತ್ತಾರೆ. ದೇವಸ್ಥಾನಕ್ಕೆ ಭಾರಿ ಪ್ರಮಾಣದ ಕಾಣಿಕೆ ಹರಿದುಬರುವುದರಿಂದ, ದೇಣಿಗೆ ನಿರ್ವಹಣೆಗೆ ಸಂಬಂಧಿಸಿದ ಆರೋಪಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




