AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಮಂದಿರದ ಬೆನ್ನಲ್ಲೇ ಬದರಿನಾಥ ದೇವಾಲಯದಲ್ಲೂ ದೇಣಿಗೆ ಹಗರಣದ ಸದ್ದು, ತನಿಖೆಗೆ ಹೈಲೆವೆಲ್ ಕಮಿಟಿ ರಚನೆ

ಅಯೋಧ್ಯೆ ರಾಮ ಮಂದಿರದ ಬಳಿಕ, ಉತ್ತರಾಖಂಡದ ಬದರಿನಾಥ ದೇವಾಲಯದಲ್ಲಿ ಕಾಣಿಕೆ ಹಣ ದುರುಪಯೋಗದ ಗಂಭೀರ ಆರೋಪ ಕೇಳಿಬಂದಿದೆ. ಮುಖ್ಯಮಂತ್ರಿ ಧಾಮಿ ಆದೇಶದಂತೆ, ರಾಜ್ಯ ಸರ್ಕಾರ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. 15 ದಿನಗಳಲ್ಲಿ ವರದಿ ಸಲ್ಲಿಕೆ ಮತ್ತು ಪಾರದರ್ಶಕತೆ ಹೆಚ್ಚಿಸಲು ಸಮಿತಿಗೆ ಸೂಚಿಸಲಾಗಿದೆ. ದೇವಾಲಯದ ಖಾಸಗಿ ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಗಿದೆ. ಹಗರಣದ ತನಿಖೆ ಆರಂಭವಾಗಿದೆ.

ರಾಮ ಮಂದಿರದ ಬೆನ್ನಲ್ಲೇ ಬದರಿನಾಥ ದೇವಾಲಯದಲ್ಲೂ ದೇಣಿಗೆ ಹಗರಣದ ಸದ್ದು, ತನಿಖೆಗೆ ಹೈಲೆವೆಲ್ ಕಮಿಟಿ ರಚನೆ
ಬದರಿನಾಥ
ನಯನಾ ರಾಜೀವ್
|

Updated on:Jul 08, 2026 | 10:03 AM

Share

ಡೆಹ್ರಾಡೂನ್, ಜುಲೈ 08: ಅಯೋಧ್ಯೆಯ ರಾಮ ಮಂದಿರ(Ram Mandir)ದ ದೇಣಿಗೆ ವಿವಾದದ ಬೆನ್ನಲ್ಲೇ, ಈಗ ದೇಶದ ಮತ್ತೊಂದು ಪವಿತ್ರ ಧಾಮವಾದ ಉತ್ತರಾಖಂಡದ ಬದರಿನಾಥ ದೇವಾಲಯದಲ್ಲೂ ಕಾಣಿಕೆ ಮತ್ತು ದೇಣಿಗೆ ಹಣ ದುರುಪಯೋಗವಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಆದೇಶದ ಮೇರೆಗೆ, ರಾಜ್ಯ ಸರ್ಕಾರವು ತನಿಖೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

15 ದಿನಗಳಲ್ಲಿ ವರದಿ ಸಲ್ಲಿಕೆಗೆ ಆದೇಶ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಬ್ಯಾಲ್ ಹೊರಡಿಸಿರುವ ಆದೇಶದ ಪ್ರಕಾರ, ಈ ಉನ್ನತ ಮಟ್ಟದ ಸಮಿತಿಯು ಗರ್ವಾಲ್ ಆಯುಕ್ತ (ಕಮಿಷನರ್) ಆನಂದ್ ಸ್ವರೂಪ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ. ರಾಷ್ಟ್ರೀಯ ಆರೋಗ್ಯ ಮಿಷನ್‌ನ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ತಿವಾರಿ ಮತ್ತು ಹಣಕಾಸು ನಿರ್ದೇಶಕ ಜಗತ್ ಸಿಂಗ್ ಚೌಹಾಣ್ ಇದರ ಇತರ ಸದಸ್ಯರಾಗಿದ್ದಾರೆ.

ಈ ಸಮಿತಿಯು ದೇಣಿಗೆ ಅಕ್ರಮಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಿ, ಮುಂದಿನ 15 ದಿನಗಳ ಒಳಗಾಗಿ ತನ್ನ ವರದಿ ಹಾಗೂ ಕಠಿಣ ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ದೇವಾಲಯದ ಆಡಳಿತ ಮತ್ತು ಹಣದ ಎಣಿಕೆ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಹಾಗೂ ಫೂಲ್‌ಪ್ರೂಫ್ ಮಾಡುವ ಜವಾಬ್ದಾರಿಯನ್ನೂ ಈ ಸಮಿತಿಗೆ ನೀಡಲಾಗಿದೆ.

ದೇವಸ್ಥಾನದ ಖಾಸಗಿ ಕಾರ್ಯದರ್ಶಿ ಅಮಾನತು ಇದೇ ವೇಳೆ, ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯು ತನ್ನ ಕಚೇರಿಯಲ್ಲೇ ಆಂತರಿಕ ತನಿಖೆ ನಡೆಸಿ ದೊಡ್ಡ ಕ್ರಮ ಕೈಗೊಂಡಿದೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ, ದೇವಾಲಯ ಸಮಿತಿಯ ಖಾಸಗಿ ಕಾರ್ಯದರ್ಶಿಯಾಗಿದ್ದ ಪ್ರಮೋದ್ ನೌಟಿಯಾಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ: 45 ದಿನಗಳಲ್ಲಿ 70 ಬಾರಿ ಕಳ್ಳತನ, ಟ್ರಸ್ಟಿ ಅನಿಲ್ ಮಿಶ್ರಾ ವಿರುದ್ಧ ತನಿಖೆ

ಪ್ರಮೋದ್ ಹುದ್ದೆಯಲ್ಲೇ ಮುಂದುವರಿದರೆ ಸಿಸಿಟಿವಿ ಸಾಕ್ಷ್ಯ ಹಾಗೂ ತನಿಖೆಯನ್ನು ಹಳಿತಪ್ಪಿಸುವ ಸಾಧ್ಯತೆ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಹಗರಣ ಬೆಳಕಿಗೆ ಬಂದಿದ್ದು ಹೇಗೆ? ಬದರಿನಾಥ ಧಾಮದಲ್ಲಿ ಭಕ್ತರು ನೀಡಿದ ಕಾಣಿಕೆ ಹಣವನ್ನು ಎಣಿಕೆ ಮಾಡುವ ಸಂದರ್ಭದಲ್ಲಿ ಕೆಲವು ಸಿಬ್ಬಂದಿ ಅಕ್ರಮ ಎಸಗುತ್ತಿದ್ದಾರೆ ಎಂಬ ಆರೋಪದ ವಿಡಿಯೋಗಳು ಮತ್ತು ಪೋಸ್ಟ್‌ಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಇದಾದ ಬಳಿಕ ‘ಭೈರವ ಸೇನಾ’ ಎಂಬ ಸ್ಥಳೀಯ ಸಂಘಟನೆಯು ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಅಧಿಕೃತವಾಗಿ ದೂರು ನೀಡಿತು.

ಸಿಸಿಟಿವಿ ಕ್ಯಾಮೆರಾ ವಿವಾದಕ್ಕೆ ಸ್ಪಷ್ಟನೆ ತನಿಖೆ ಆರಂಭವಾಗುತ್ತಿದ್ದಂತೆ ದೇವಸ್ಥಾನದ ಎಣಿಕೆ ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ದಿಢೀರ್ ಬದಲಾಯಿಸಲಾಗಿದೆ ಎಂಬ ಹೊಸ ವಿವಾದ ಎದ್ದಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಕೆಟಿಸಿ ಸಿಇಒ, ಕ್ಯಾಮೆರಾಗಳನ್ನು ಬದಲಾಯಿಸುವುದು ನಿಯಮಿತ ಪ್ರಕ್ರಿಯೆಯಾಗಿದೆ. ಹಳೆಯ ಕ್ಯಾಮೆರಾಗಳಲ್ಲಿದ್ದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳ ರೆಕಾರ್ಡಿಂಗ್ ಅನ್ನು ಸುರಕ್ಷಿತವಾಗಿ ಸಂರಕ್ಷಿಸಿಡಲಾಗಿದ್ದು, ಅದನ್ನು ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:02 am, Wed, 8 July 26

Follow Us