ಮದ್ಯ ನಿಷೇಧ ನೀತಿ ಬಗ್ಗೆ ಪ್ರಶ್ನಿಸಿದ ಬಿಜೆಪಿ; ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಸಿಡಿಮಿಡಿ

ಕಳ್ಳಭಟ್ಟಿ ದುರಂತ ಬಗ್ಗೆ ವಿಧಾನಸಭೆಯಲ್ಲಿ ಬಾರೀ ಕೋಲಾಹಲವೆಬ್ಬಿದ್ದು ಮದ್ಯ ನಿಷೇಧದಲ್ಲಿ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಅದೇ ವೇಳೆ ಈ ನಿರ್ಬಂಧ ಬಗ್ಗೆ ಪುನರಾವಲೋಕನ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಮದ್ಯ ನಿಷೇಧ ನೀತಿ ಬಗ್ಗೆ ಪ್ರಶ್ನಿಸಿದ ಬಿಜೆಪಿ; ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಸಿಡಿಮಿಡಿ
ಬಿಹಾರ ಸಿಎಂ ನಿತೀಶ್ ಕುಮಾರ್
Edited By:

Updated on: Dec 14, 2022 | 4:12 PM

ಬಿಹಾರ (Bihar) ಸರ್ಕಾರದ ಮದ್ಯ ನಿಷೇಧ ನೀತಿ (liquor ban)ಬಗ್ಗೆ ವಿಧಾನಸಭೆಯಲ್ಲಿ ವಿಪಕ್ಷಗಳು ಪ್ರಶ್ನಿಸಿದಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಸಿಡಿಮಿಡಿಗೊಂಡಿದ್ದಾರೆ. ಬುಧವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ವಿಜಯ್ ಕುಮಾರ್ ಸಿನ್ಹಾ ಅವರು ಸರಾನ್ ಜಿಲ್ಲೆಯಲ್ಲಿ ನಡೆದ ಮದ್ಯ ದುರಂತದಲ್ಲಿ ಜನರು ಸಾವಿಗೀಡಾದ ಘಟನೆ ಉಲ್ಲೇಖಿಸಿ ಸರ್ಕಾರದ ಮದ್ಯ ನಿಷೇಧ ನೀತಿಯನ್ನು ಪ್ರಶ್ನಿಸಿದ್ದಾರೆ. ಮಂಗಳವಾರ ಸಂಜೆ ಮಥುರಾ ಉಪ ವಿಭಾಗದ ಮಸ್ರಾಖ್ ಎಂಬಲ್ಲಿ ವಿಷ ಮದ್ಯ ಸೇವನೆ ಮಾಡಿ 6 ಮಂದಿ ಸಾವಿಗೀಡಾಗಿದ್ದು ಹಲವರು ಆಸ್ಪತ್ರೆಗೆ ದಾಖಲಾಗಿದ್ದರು. ಡೋಯ್ಲಾ ಗ್ರಾಮದಲ್ಲಿ ಸುಮಾರು 15 ಮಂದಿ ಕಳ್ಳಭಟ್ಟಿ ಸೇವಿಸಿದ್ದರು ಎಂದು ಸಾವಿಗೀಡಾದವರ ಕುಟುಂಬದವರು ಆರೋಪಿಸಿದ್ದಾರೆ. ಈ ಮದ್ಯ ಸೇವಿಸಿದ ಕೂಡಲೇ ತಲೆ ಸುತ್ತುವುದು, ತಲೆ ನೋವು ಮತ್ತು ಉಸಿರುಗಟ್ಟುವುದು ಅನುಭವಕ್ಕೆ ಬಂದಿದ್ದು, ಕುಟುಂಬದ ಸದಸ್ಯರೇ ಮದ್ಯ ಸೇವನೆ ಮಾಡಿದವರನ್ನು ಅಸ್ಪತ್ರೆಗೆ ದಾಖಲಿಸಿದ್ದರು. ಈ ಕಳ್ಳಭಟ್ಟಿ ದುರಂತ ಬಗ್ಗೆ ವಿಧಾನಸಭೆಯಲ್ಲಿ ಬಾರೀ ಕೋಲಾಹಲವೆಬ್ಬಿದ್ದು ಮದ್ಯ ನಿಷೇಧದಲ್ಲಿ ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಅದೇ ವೇಳೆ ಈ ನಿರ್ಬಂಧ ಬಗ್ಗೆ ಪುನರಾವಲೋಕನ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.


ವಿಧಾನಸಭೆಯಲ್ಲಿ ಸಿನ್ಹಾ ಅವರು ಪ್ರಶ್ನೆಯನ್ನೆತ್ತಿದಾಗ ನಿತೀಶ್ ಕುಮಾರ್ ಸಿಟ್ಟಿನಿಂದ ಅರೇ, ತುಮ್ ಬೋಲ್ ರಹೇ ಹೋ ( ಓಹ್, ನೀನು ಹೇಳುತ್ತಿದ್ದೀಯಾ) ಎಂದು ಕೇಳಿದ್ದಾರೆ.

ಬಿಹಾರದ ಮಾಜಿ ಸಚಿವ ಮತ್ತು ಆರ್​​ಜೆಡಿ ಶಾಸಕ ಸುಧಾಕರ್ ಸಿಂಗ್ ಕೂಡಾ ಮದ್ಯ ನಿಷೇಧವನ್ನು ವಿರೋಧಿಸಿದ್ದು, ಸೇವನೆ ಮಾಡುವ ಯಾವುದೇ ವಸ್ತು ಅಥವಾ ಮದ್ಯವನ್ನು ನಿಷೇಧಿಸುವುದು ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ ಎಂದಿದ್ದಾರೆ. ನೀವು ನಿಷೇಧಿಸಲು ಸಾಧ್ಯವಿಲ್ಲ. ಎಚ್ಚರಿಕೆ ಮತ್ತು ಕೌನ್ಸಿಲಿಂಗ್ ಮೂಲಕ ನೀವು ಮದ್ಯ ಆರೋಗ್ಯಕ್ಕೆ ಹಾನಿಕಾರಕ ಎಂದು ಜಾಗೃತಿ ಮೂಡಿಸಬೇಕು ಎಂದು ಸುಧಾಕರ್ ಸಿಂಗ್ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಇದನ್ನೂ ಓದಿ:Delhi Acid Attack: ದೆಹಲಿಯಲ್ಲಿ 17ರ ಹರೆಯದ ಶಾಲಾ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ

ನಮ್ಮ ಇಲಾಖೆಯಲ್ಲಿ ಕಳ್ಳರೇ ಇರುವುದು, ನಾನು ಕಳ್ಳರ ನಾಯಕನಂತೆ ಭಾಸವಾಗುತ್ತಿದೆ ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದ ಸುಧಾಕರ್ ಸಿಂಗ್ ಅಕ್ಟೋಬರ್ ತಿಂಗಳಲ್ಲಿ ಬಿಹಾರ ಕೃಷಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.