Fact Check: ಇಂದಿರಾ ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿ ಶಾಪ?; ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯ ಅಸಲಿಯತ್ತೇನು?

1966 ನವೆಂಬರ್ 7 ರಂದು ಸಂತರ, ಗೋವುಗಳ ಮೇಲೆ ಗೋಲಿಬಾರ್ ಆಗಿತ್ತು. ಆಗ ಸಂತನೊಬ್ಬ , ‘ಇವತ್ತಿನ ದಿನ ಗೋಪಾಷ್ಟಮಿ. ನಿಮ್ಮ ಸಂತತಿಯೂ ಗೋಪಾಷ್ಟಮಿ ದಿನವೇ ಅಂತ್ಯವಾಗಲಿದೆ’ ಎಂಬುದಾಗಿ ಶಾಪ ನೀಡಿದ್ದರು ಎಂದಿದ್ದಾರೆ ಅನಂತಕುಮಾರ್ ಹೆಗಡೆ. ಇಂದಿರಾ ಗಾಂಧಿ, ರಾಜೀವ್ ಮತ್ತು ಸಂಜಯ್ ಗೋಪಾಷ್ಟಮಿಯಂದೇ ಸಾವಿಗೀಡಾಗಿದ್ದರೆ? ಅನಂತಕುಮಾರ್ ಹೇಳಿಕೆಯ ಸತ್ಯಾಸತ್ಯತೆ ಇಲ್ಲಿದೆ

Fact Check: ಇಂದಿರಾ ಗಾಂಧಿ ಕುಟುಂಬಕ್ಕೆ ಗೋಪಾಷ್ಟಮಿ ಶಾಪ?; ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯ ಅಸಲಿಯತ್ತೇನು?
ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ
Follow us
|

Updated on: Jan 17, 2024 | 6:09 PM

ಬೆಂಗಳೂರು ಜನವರಿ 17: ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಉತ್ತರ ಕನ್ನಡ ಬಿಜೆಪಿ (BJP) ಸಂಸದ ಅನಂತಕುಮಾರ್ ಹೆಗಡೆ (Anantkumar Hegde), ಸಂತರ ಶಾಪದಿಂದ ಗೋಪಾಷ್ಟಮಿ ದಿನವೇ ಇಂದಿರಾ ಗಾಂಧಿ (Indira Gandhi) ಕುಟುಂಬ ಬಲಿಯಾಯಿತು ಎಂಬ ಹೇಳಿಕೆ ನೀಡಿದ್ದಾರೆ. 1966 ನವೆಂಬರ್ 7 ರಂದು ಸಂತರ, ಗೋವುಗಳ ಮೇಲೆ ಗೋಲಿಬಾರ್ ಆಗಿತ್ತು. ಗೋಹತ್ಯಾ ನಿಷೇಧಕ್ಕಾಗಿ ಸಂತರು ಪಾರ್ಲಿಮೆಂಟ್‌ಗೆ ಮುತ್ತಿಗೆ ಹಾಕಿದ್ದರು. ಆಗ ಇಂದಿರಾಗಾಂಧಿ ಗೋಲಿಬಾರ್ ಮಾಡಿಸಿದ್ದರು. ಆಗ ಸಂತರು, ಗೋವುಗಳು ಮೃತಪಟ್ಟಿದ್ದವು. ಆಗ ಸಂತನೊಬ್ಬ ಇಂದಿರಾಗಾಂಧಿಗೆ, ‘ಇವತ್ತಿನ ದಿನ ಗೋಪಾಷ್ಟಮಿ. ನಿಮ್ಮ ಸಂತತಿಯೂ ಗೋಪಾಷ್ಟಮಿ ದಿನವೇ ಅಂತ್ಯವಾಗಲಿದೆ’ ಎಂಬುದಾಗಿ ಶಾಪ ನೀಡಿದ್ದರು. ಗೋಪಾಷ್ಟಮಿ ದಿನವೇ ಸಂಜಯ ಗಾಂಧಿ, ರಾಜೀವ್ ಗಾಂಧಿ, ಇಂದಿರಾಗಾಂಧಿ ಮೃತಪಟ್ಟಿದ್ದರು. ಆದರೆ, ಇದನ್ನು ಪ್ರಗತಿಪರರು ಒಪ್ಪುವುದಿಲ್ಲ. ಸಂತರ ಶಾಪ ಅತೀ ಕೆಟ್ಟದ್ದು. ಅದಕ್ಕೆ ಇಂದಿರಾ ಕುಟುಂಬ ಬಲಿಯಾಯಿತು ಎಂದು ಅವರು ಹೇಳಿದ್ದಾರೆ.

ಅನಂತಕುಮಾರ್ ಹೆಗಡೆ ಹೇಳಿಕೆಯ ಫ್ಯಾಕ್ಟ್ ಚೆಕ್

1966 ನವೆಂಬರ್ 7 ರಂದು ಸಂತರ, ಗೋವುಗಳ ಮೇಲೆ ಗೋಲಿಬಾರ್ ಆಗಿತ್ತು. ಆಗ ಸಂತನೊಬ್ಬ , ‘ಇವತ್ತಿನ ದಿನ ಗೋಪಾಷ್ಟಮಿ. ನಿಮ್ಮ ಸಂತತಿಯೂ ಗೋಪಾಷ್ಟಮಿ ದಿನವೇ ಅಂತ್ಯವಾಗಲಿದೆ’ ಎಂಬುದಾಗಿ ಶಾಪ ನೀಡಿದ್ದರು ಎಂದಿದ್ದಾರೆ ಅನಂತಕುಮಾರ್ ಹೆಗಡೆ. ಆದರೆ 1966ರಲ್ಲಿ ಗೋಪಾಷ್ಟಮಿ ಬಂದಿರುವುದು ನವೆಂಬರ್ 20, ಭಾನುವಾರ ಎಂದು ಧೃಕ್ ಪಂಚಾಂಗ ಡಾಟ್ ಕಾಮ್ ಹೇಳುತ್ತಿದೆ. ಕಾರ್ತಿಕ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ಗೋಪಾಷ್ಟಮಿ ದಿನ ಬರುತ್ತದೆ. ಇದು ಮಥುರಾ, ವೃಂದಾವನ ಮತ್ತು ಇತರ ಬ್ರಜ್ ಪ್ರದೇಶಗಳಲ್ಲಿ ಪ್ರಸಿದ್ಧವಾದ ಹಬ್ಬವಾಗಿದೆ. ಹೀಗಿರುವಾಗ 1966 ನವೆಂಬರ್ 7ರಂದು ‘ಗೋಪಾಷ್ಟಮಿ’ ಎಂದು ಹೆಗಡೆ ಹೇಳಿರುವುದರಲ್ಲಿ ಸತ್ಯಾಂಶ ಇಲ್ಲ.

ಇನ್ನು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಗೋಪಾಷ್ಟಮಿ ದಿನವೇ ಮೃತಪಟ್ಟಿದ್ದಾರೆ ಎಂದು ಹೆಗಡೆ ಹೇಳಿದ್ದಾರೆ.ಇಂದಿರಾ ಗಾಂಧಿ ಹತ್ಯೆಯಾಗಿದ್ದು 1984 ಅಕ್ಟೋಬರ್ 31. ಇದು ಗೋಪಾಷ್ಟಮಿ ದಿನ ಹೌದು. ರಾಜೀವ್ ಹತ್ಯೆಯಾಗಿದ್ದು ಮೇ 21, 1991. 1991ನೇ ಇಸವಿಯಲ್ಲಿ ಗೋಪಾಷ್ಟಮಿ ಚೆಕ್ ಮಾಡಿದರೆ ಅದು ನವೆಂಬರ್ 14, ಗುರುವಾರ. ಹಾಗಾದರೆ ರಾಜೀವ್ ಹತ್ಯೆಯಾಗಿದ್ದು ಗೋಪಾಷ್ಟಮಿಯಂದು ಅಲ್ಲ. ಸಂಜಯ್ ಗಾಂಧಿ ಮರಣ ಹೊಂದಿದ ದಿನಾಂಕ ಜೂನ್ 23, 1980. ಆ ವರ್ಷ ಗೋಪಾಷ್ಟಮಿ ಬಂದಿದ್ದು ನವೆಂಬರ್ 16ರಂದು.

ಹೀಗಿರುವಾಗ ಇಂದಿರಾಗಾಂಧಿ ಒಬ್ಬರನ್ನು ಬಿಟ್ಟರೆ ರಾಜೀವ್ ಮತ್ತು ಸಂಜಯ್ ಸಾವಿಗೀಡಾಗಿದ್ದು ಗೋಪಾಷ್ಟಮಿಯಂದು ಅಲ್ಲ ಎಂಬುದು ಸ್ಪಷ್ಟ.

ನವೆಂಬರ್ 7, 1966ರಂದು ಏನು ನಡೆದಿತ್ತು?

ಗೋಸಂರಕ್ಷಣೆ ಮತ್ತು ಗೋಹತ್ಯೆ ನಿಷೇಧ ಹಲವು ಹಿಂದೂ ಗುಂಪುಗಳ ಬಹುಕಾಲದ ಬೇಡಿಕೆಯಾಗಿದೆ. ನವೆಂಬರ್ 7, 1966 ರಂದು ಈ ಚಳುವಳಿಯ ಉತ್ತುಂಗದಲ್ಲಿ, ಸರ್ವದಲೀಯ ಗೋರಕ್ಷಾ ಮಹಾಭಿಯಾನ್ ಸಮಿತಿಯು ನವದೆಹಲಿಯಲ್ಲಿ ಸತ್ಯಾಗ್ರಹವನ್ನು ಘೋಷಿಸಿತು. ಜನಸಂಘವು ಚಳವಳಿಗೆ ಬೆಂಬಲವನ್ನು ನೀಡುವುದರೊಂದಿಗೆ ಅದರಲ್ಲಿ ಭಾಗವಹಿಸಿದವರ ಸಂಖ್ಯೆಯೂ ಹೆಚ್ಚಾಗಿತ್ತು. ಭಾಗವಹಿಸುವವರ ಸಂಖ್ಯೆ ಒಂದು ಲಕ್ಷ ಮೀರಿತ್ತು. ಸ್ವಾಮಿ ಕರ್ಪಾತ್ರಿ ಮತ್ತು ಲೋಕಸಭಾ ಸಂಸದ ಸ್ವಾಮಿ ರಾಮೇಶ್ವರಾನಂದರಂತಹ ನಾಯಕರ ಭಾಷಣಗಳನ್ನು ಅನುಸರಿಸಿ, ಪ್ರತಿಭಟನಾಕಾರರು ಸಂಸತ್ತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು, ಇದು ಪೊಲೀಸರೊಂದಿಗೆ ಘರ್ಷಣೆಗೆ ಕಾರಣವಾಯಿತು.

ದೆಹಲಿಯಾದ್ಯಂತ ಗುಂಪು ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಇದನ್ನು ನಿಯಂತ್ರಣಕ್ಕೆ ತರಲು ಸರ್ಕಾರವು ಮಿಲಿಟರಿಯನ್ನು ನಿಯೋಜಿಸಿತು. ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ತಮ್ಮ “ಇಂಡಿಯಾ ಆಫ್ಟರ್ ಗಾಂಧಿ” ಪುಸ್ತಕದಲ್ಲಿ ಈ ಘಟನೆಯನ್ನು ವಿವರಿಸಿದ್ದಾರೆ.

ಹಿಂಸಾಚಾರ ಮತ್ತು ನಂತರದ ಪೊಲೀಸ್ ಕ್ರಮವನ್ನು ಜಗತ್ತಿನಾದ್ಯಂತ ಪತ್ರಿಕೆಗಳು ವರದಿ ಮಾಡಿವೆ. ಇದು ಯುನೈಟೆಡ್ ಸ್ಟೇಟ್ಸ್ ನ ದಿನಪತ್ರಿಕೆ”ದಿ ರೆಕಾರ್ಡ್” ಕೂಡಾ ಇದನ್ನು ವರದಿ ಮಾಡಿತ್ತು. “ದಿ ರೆಕಾರ್ಡ್” ಏಳು ಜನರು ಸಾವು ಕನಿಷ್ಠ 500 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರೆ, ನವೆಂಬರ್ 8 ರಂದು “ದಿ ಟೈಮ್ಸ್” ಮತ್ತು “ದಿ ಗಾರ್ಡಿಯನ್” ಕನಿಷ್ಠ ಐದು ಜನರು ಸಾವಿಗೀಡಾಗಿದ್ದಾರೆ ಎಂದು ವರದಿ ಮಾಡಿದೆ.

ಇದನ್ನೂ ಓದಿ: ಸಂತರ ಶಾಪದಿಂದ ಗೋಪಾಷ್ಟಮಿ ದಿನವೇ ಇಂದಿರಾ ಕುಟುಂಬ ಬಲಿಯಾಯಿತು: ಅನಂತಕುಮಾರ್ ಹೆಗಡೆ

ಚಿಕಿತ್ಸೆ ಪಡೆಯುತ್ತಿರುವ ಜನರು ಸಾವಿಗೀಡಾಗಿದ್ದಾರೆಯೇ ಎಂದು ಇಂಡಿಯಾ ಟುಡೇಯ Anti Fake News War Room ಪರಿಶೀಲಿಸಿದಾಗ ಘಟನೆಗೆ ಸಂಬಂಧಿಸಿದಂತೆ ಆಗಿನ ಜನಸಂಘದ ಅಧ್ಯಕ್ಷ ಬಲರಾಜ್ ಮಧೋಕ್ ಅವರ ಬಂಧನವನ್ನು ವರದಿ ಮಾಡಿದ ಆಸ್ಟ್ರೇಲಿಯಾದ ಪತ್ರಿಕೆ “ದಿ ಏಜ್” ನವೆಂಬರ್ 9 ರಂದು ಸಾವಿನ ಸಂಖ್ಯೆಯನ್ನು ಎಂಟು ಎಂದು ಉಲ್ಲೇಖಿಸಿದೆ.

ಸರ್ಕಾರಿ ದಾಖಲೆಗಳು ಏನು ಹೇಳುತ್ತಿವೆ? ಪ್ರಾಣ ಕಳೆದುಕೊಂಡವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆ ಕಾಲದ ಸಂಸತ್ತಿನ ಚರ್ಚೆಗಳ ದಾಖಲೆಗಳನ್ನು AFWA ಹುಡುಕಿದೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಈ ದಾಖಲೆಗಳ ಪ್ರಕಾರ, ನವೆಂಬರ್ 8, 1966 ರಂದು ಸದನದಲ್ಲಿ ಮಂಡಿಸಲಾದ ನೋಟಿಸ್‌ನಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 184 ಜನರು ಗಾಯಗೊಂಡಿದ್ದಾರೆ ಎಂದು ಇದೆ. ನವೆಂಬರ್ 9 ರ ದಾಖಲೆಗಳಲ್ಲಿ, ಮರಣ ಹೊಂದಿದ ಐದು ವ್ಯಕ್ತಿಗಳ ಹೆಸರನ್ನು ಸರ್ಕಾರವು ಸದನಕ್ಕೆ ನೀಡಿದೆ ಎಂದು ಕಂಡುಬಂದಿದೆ. ಮೂರು ಮೃತದೇಹಗಳನ್ನು ಗುರುತಿಸಲು ಸಾಧ್ಯವಾಗಿಲ್ಲ.

ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ