AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಎರಡನೇ ಅಲೆ ವೇಳೆ ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಮಾಹಿತಿ ಕೇಳಿದ ಕೇಂದ್ರ

Oxygen Shortage: ಗೋವಾದಲ್ಲಿ ಮೇ ತಿಂಗಳ ಐದು ದಿನಗಳಲ್ಲಿ 80 ಕ್ಕೂ ಹೆಚ್ಚು ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಆಂಧ್ರಪ್ರದೇಶದ ತಿರುಪತಿಯಲ್ಲಿ ಆಸ್ಪತ್ರೆಯ ಐಸಿಯುಗೆ ದಾಖಲಾದ 11 ಕೊವಿಡ್ ರೋಗಿಗಳು ಆಕ್ಸಿಜನ್ ಸರಬರಾಜು ಅಸ್ತವ್ಯಸ್ತಗೊಂಡು ಪ್ರಾಣ ಕಳೆದುಕೊಂಡಿದ್ದರು.

ಕೊವಿಡ್ ಎರಡನೇ ಅಲೆ ವೇಳೆ ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಮಾಹಿತಿ ಕೇಳಿದ ಕೇಂದ್ರ
ಆಕ್ಸಿಜನ್ ಸಿಲಿಂಡರ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 27, 2021 | 6:14 PM

ದೆಹಲಿ: ಈ ವರ್ಷದ ಆರಂಭದಲ್ಲಿ ಎರಡನೇ ಕೊವಿಡ್ ಅಲೆ ವೇಳೆ ಆಮ್ಲಜನಕದ ಕೊರತೆಗೆ ಸಂಬಂಧಿಸಿದ ಸಾವುಗಳ ಬಗ್ಗೆ ಮಾಹಿತಿ ನೀಡುವಂತೆ ಭಾರತ ಸರ್ಕಾರ ರಾಜ್ಯಗಳನ್ನು ಕೇಳಿದೆ. ಆಗಸ್ಟ್ 13 ರಂದು ಮುಂಗಾರು ಅಧಿವೇಶನ ಮುಗಿಯುವ ಮೊದಲು ಈ ಮಾಹಿತಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ. ಈ ವರ್ಷದ ಆರಂಭದಲ್ಲಿ ಭಾರತದಾದ್ಯಂತ ಸೋಂಕುಗಳ ಉಲ್ಬಣವು ದೇಶದ ಆರೋಗ್ಯ ಮೂಲಸೌಕರ್ಯಗಳ ಮೇಲೆ ಭಾರೀ ಒತ್ತಡವನ್ನು ಬೀರಿತು. ಆಸ್ಪತ್ರೆಯ ಹಾಸಿಗೆಗಳು, ಔಷಧಗಳು ಮತ್ತು ಲಸಿಕೆಗಳಂತಹ ನಿರ್ಣಾಯಕ ಸರಬರಾಜುಗಳಿಗೂ ಸಮಸ್ಯೆಯುಂಟಾಯಿತು.

ಈ ಪೈಕಿ ಅತ್ಯಂತ ಗಂಭೀರಾವಾದುದು ಎಂದರೆ ವೈದ್ಯಕೀಯ ಆಮ್ಲಜನಕದ ಕೊರತೆ. ಭಾರತವು ಹಲವಾರು ದೇಶಗಳಿಂದ ತುರ್ತು ಆಧಾರದ ಮೇಲೆ ಆಮ್ಲಜನಕವನ್ನು ಆಮದು ಮಾಡಿಕೊಳ್ಳಬೇಕಾಗಿ ಬಂತು. ಹಲವಾರು ಜನರು ಆಮ್ಲಜನಕದ ಕೊರತೆಯಿಂದ ಸಾವಿಗೀಡಾದರು.

ಗೋವಾದಲ್ಲಿ ಮೇ ತಿಂಗಳ ಐದು ದಿನಗಳಲ್ಲಿ 80 ಕ್ಕೂ ಹೆಚ್ಚು ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಆಂಧ್ರಪ್ರದೇಶದ ತಿರುಪತಿಯಲ್ಲಿ ಆಸ್ಪತ್ರೆಯ ಐಸಿಯುಗೆ ದಾಖಲಾದ 11 ಕೊವಿಡ್ ರೋಗಿಗಳು ಆಕ್ಸಿಜನ್ ಸರಬರಾಜು ಅಸ್ತವ್ಯಸ್ತಗೊಂಡು ಪ್ರಾಣ ಕಳೆದುಕೊಂಡಿದ್ದರು. ಹೈದರಾಬಾದ್ ನ ಆಸ್ಪತ್ರೆಯೊಂದರಲ್ಲಿ ಏಳು ಗಂಟೆಗಳ ಆಕ್ಸಿಜನ್ ಪೂರೈಕೆಯಲ್ಲಿ ಕಡಿತದ ಸಂದರ್ಭದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ.

ಆಮ್ಲಜನಕ ಹಂಚಿಕೆ ಕುರಿತು ಹಲವಾರು ರಾಜ್ಯಗಳು ನ್ಯಾಯಾಲಯಕ್ಕೆ ಹೋದವು, ಆದರೆ ಸರ್ಕಾರವು ಸರಬರಾಜು ಖಚಿತಪಡಿಸಿಕೊಳ್ಳಲು ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲುಗಳನ್ನು ಶುರು ಮಾಡಿತು.

ಆಮ್ಲಜನಕದ ಪೂರೈಕೆಯ ಕೊರತೆಯಿಂದಾಗಿ ಸಾವನ್ನಪ್ಪಿದ ಬಗ್ಗೆ ದೆಹಲಿ ಸರ್ಕಾರ ಆದೇಶಿಸಿದ ತನಿಖೆಯನ್ನು ಕಳೆದ ತಿಂಗಳು ಕೇಂದ್ರ ವೀಟೋ ಮಾಡಿತ್ತು. ದೆಹಲಿಯ ಒಂದು ಆಸ್ಪತ್ರೆಯಲ್ಲಿ, 21 ರೋಗಿಗಳು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ್ದಾರೆ ಮತ್ತು ಈ ವಿಷಯವು ಹೈಕೋರ್ಟ್‌ನಲ್ಲಿ ಬಾಕಿ ಇದೆ.

ಆದಾಗ್ಯೂ, ಈ ಎಲ್ಲ ಘಟನೆಗಳ ಹೊರತಾಗಿಯೂ ಕೇಂದ್ರವು ಈ ತಿಂಗಳ ಆರಂಭದಲ್ಲಿ ಸಂಸತ್ ನಲ್ಲಿ “ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ನಿರ್ದಿಷ್ಟವಾಗಿ ವರದಿಯಾಗಿಲ್ಲ” ಎಂದು ಹೇಳಿತ್ತು. ಇದರ ಬೆನ್ನಲ್ಲೇ ರಾಜ್ಯಗಳು ಯಾವುದೇ ಡೇಟಾವನ್ನು ನೀಡಿಲ್ಲ ಎಂದು ಕೇಂದ್ರ ಹೇಳಿದೆ.

ಆರೋಗ್ಯವು ರಾಜ್ಯ ವಿಷಯವಾಗಿದೆ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಕೇಂದ್ರಕ್ಕೆ ಸಂಖ್ಯೆಗಳನ್ನು ವರದಿ ಮಾಡುತ್ತವೆ, ಅದು ಅವುಗಳನ್ನು ಒಟ್ಟುಗೂಡಿಸುತ್ತದೆ ಮತ್ತು ಅವುಗಳನ್ನು ದೇಶದ ಮುಂದೆ ಪ್ರಸ್ತುತಪಡಿಸುತ್ತದೆ ಎಂದು ಆರೋಗ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

“ಇದು ಕುರುಡು ಮತ್ತು ಕಾಳಜಿ ಇಲ್ಲದ ಸರ್ಕಾರ. ಆಮ್ಲಜನಕದ ಕೊರತೆಯಿಂದಾಗಿ ಅವರ ಹತ್ತಿರದ ಮತ್ತು ಆತ್ಮೀಯರು ಎಷ್ಟು ಮಂದಿ ಸಾವನ್ನಪ್ಪಿದ್ದಾರೆಂದು ಜನರು ನೋಡಿದ್ದಾರೆ” ಎಂದು ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಇದಕ್ಕೆ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ:  ಲಾಕ್‌ಡೌನ್ ಸಮಯದಲ್ಲಿ ಅನಾಥರಾದ ಮಕ್ಕಳ ಸಂಖ್ಯೆಯನ್ನು ನಾವು ನಂಬಲು ಸಿದ್ಧರಿಲ್ಲ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ

ಇದನ್ನೂ ಓದಿ: ಯಡಿಯೂರಪ್ಪಗೆ ವಯಸ್ಸಾಗಿಲ್ಲ, ಮದುವೆಯಾದ್ರೆ 2 ಮಕ್ಕಳಾಗುತ್ತೆ: ಕಾಂಗ್ರೆಸ್​ ಎಂಎಲ್​ಸಿ ಸಿ.ಎಂ ಇಬ್ರಾಹಿಂ

(Centre Asks States to provide data on deaths related to oxygen shortage during the second Covid 19 wave says Sources)