ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಚಾರ್ ಧಾಮ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತ

ಉತ್ತರಾಖಂಡ ರಾಜ್ಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸುತ್ತಿದೆ. ಇದರಿಂದಾಗಿ ರಸ್ತೆಗಳು ಅತ್ಯಂತ ಅಪಾಯಕಾರಿ ಸ್ಥಿತಿ ತಲುಪಿವೆ. ಈ ಹಿನ್ನೆಲೆಯಲ್ಲಿ ಭಾರತದ ಅತಿ ದೊಡ್ಡ ವಾರ್ಷಿಕ ತೀರ್ಥಯಾತ್ರೆಗಳಲ್ಲಿ ಒಂದಾದ 'ಚಾರ್ ಧಾಮ್ ಯಾತ್ರೆ'ಯ ಭಕ್ತರ ಸುರಕ್ಷತೆಯ ಹಿತದೃಷ್ಟಿಯಿಂದ ಉತ್ತರಾಖಂಡ ಸರ್ಕಾರವು ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಯಾತ್ರಾ ಮಾರ್ಗಗಳು ಸುರಕ್ಷಿತ ಎಂದು ಘೋಷಿಸುವವರೆಗೆ ಕೇದಾರ್‌ನಾಥ, ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಕಡೆಗೆ ಭಕ್ತರು ತೆರಳದಂತೆ ಅಧಿಕಾರಿಗಳು ನಿರ್ಬಂಧಿಸಿದ್ದಾರೆ.

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಚಾರ್ ಧಾಮ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತ
Char Dham Yatra
Image Credit source: x

Updated on: Jul 20, 2026 | 10:49 PM

ಡೆಹ್ರಾಡೂನ್, ಜುಲೈ 20: ಉತ್ತರಾಖಂಡ (Uttarakhand Rains) ರಾಜ್ಯಾದ್ಯಂತ ಮುಂದುವರಿದಿರುವ ನಿರಂತರ ಮಳೆ, ಭೀಕರ ಭೂಕುಸಿತ ಮತ್ತು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಇಂದಿನಿಂದ (ಸೋಮವಾರ) ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ‘ಚಾರ್ ಧಾಮ್ ಯಾತ್ರೆ’ಯನ್ನು(Char Dham Yatra) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ ಹಲವು ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದ ಬೆನ್ನಲ್ಲೇ, ಯಾತ್ರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿರುವ ಉತ್ತರಾಖಂಡ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಪ್ರಯಾಣ ಬೆಳೆಸಿರುವ ಯಾತ್ರಿಕರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಹಾನಿಗೊಳಗಾದ ರಸ್ತೆಗಳನ್ನು ಸಂಪೂರ್ಣವಾಗಿ ದುರಸ್ತಿ ಮಾಡಿ, ಅವು ಸಂಚಾರಕ್ಕೆ ಸುರಕ್ಷಿತ ಎಂದು ಪ್ರಮಾಣೀಕರಿಸುವವರೆಗೆ ಭಕ್ತರನ್ನು ಮುಂದೆ ಸಾಗಲು ಬಿಡಬಾರದು ಎಂದು ಆದೇಶಿಸಲಾಗಿದೆ.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಟ್ರೆಕಿಂಗ್ ಹೋಗಿದ್ದ ಎಂಬಿಎ ವಿದ್ಯಾರ್ಥಿನಿ ನಾಪತ್ತೆ; ಆಗಿದ್ದೇನು?

ಚಾರ್ ಧಾಮ ಯಾತ್ರಾ ಮಾರ್ಗಗಳಲ್ಲಿ ಸರಣಿ ಭೂಕುಸಿತ ಸಂಭವಿಸುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಆಡಳಿತ ತಿಳಿಸಿದೆ. ಪರಿಸ್ಥಿತಿ ಮತ್ತು ರಸ್ತೆಗಳು ಸಂಪೂರ್ಣವಾಗಿ ಯಥಾಸ್ಥಿತಿಗೆ ಮರಳಿದೆ ಎಂದು ಅಧಿಕಾರಿಗಳು ಖಚಿತಪಡಿಸಿಕೊಂಡ ನಂತರವಷ್ಟೇ ಚಾರ್ ಧಾಮ್ ಯಾತ್ರೆಯನ್ನು ಪುನರಾರಂಭಿಸಲಾಗುವುದು.


ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಅಲಕನಂದಾ, ಮಂದಾಕಿನಿ:

ರುದ್ರಪ್ರಯಾಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ನೀರಿನ ಮಟ್ಟ ಅಪಾಯದ ಮುನ್ಸೂಚನೆಯ ಮಟ್ಟಕ್ಕೆ ಬಂದು ತಲುಪಿದೆ. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನಮಾಮಿ ಗಂಗೆ ಯೋಜನೆಯಡಿ ನಿರ್ಮಿಸಲಾಗಿದ್ದ ಪ್ರಸಿದ್ಧ ನದಿ ತೀರದ ಘಾಟ್‌ಗಳು ನೀರಿನಲ್ಲಿ ಮುಳುಗಿವೆ. ಪ್ರಸ್ತುತ ಅಲಕನಂದಾ ನದಿಯು 625 ಮೀಟರ್ ಮತ್ತು ಮಂದಾಕಿನಿ ನದಿಯು 624 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ಗಂಗಾನಗರ ಮತ್ತು ಗೌರಿಕುಂಡ್ ಭಾಗಗಳಲ್ಲೂ ನೀರಿನ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us