
ಮುಂಬೈ, ಸೆಪ್ಟೆಂಬರ್ 16: ಬಾಲಿವುಡ್ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ತನಿಖಾ ದಳ ದಾಖಲಿಸಿರುವ ಎಫ್ಐಆರ್ನಲ್ಲಿ ತನ್ನ ಹೆಸರು ಉಲ್ಲೇಖವಾಗಿರುವುದಕ್ಕೆ ಶಿವಸೇನಾ ಮುಖಂಡ ಆದಿತ್ಯ ಠಾಕ್ರೆ ಮೌನ ಮುರಿದಿದ್ದಾರೆ. “ನನಗೂ ದಿಶಾ ಸಾಲಿಯಾನ್ ಅವರಿಗೂ ಯಾವುದೇ ಪರಿಚಯವಿರಲಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ತಳುಕುಹಾಕಲಾಗಿದೆ. ಇದು ನನ್ನ ಚಾರಿತ್ರ್ಯವಧೆಯ ಹುನ್ನಾರ” ಎಂದು ಪ್ರತಿಕ್ರಿಯಿಸಿದ್ದಾರೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಹಾಗೂ ವೋರ್ಲಿ ಶಾಸಕರಾಗಿರುವ ಆದಿತ್ಯ ಠಾಕ್ರೆ, ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ರಾಜಕೀಯ ದುರುದ್ದೇಶದ ವಿರುದ್ಧ ಕಿಡಿಕಾರಿದ್ದಾರೆ. “ಸತ್ಯವನ್ನು ಮತ್ತೊಮ್ಮೆ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ನಾನು ದಿಶಾ ಸಾಲಿಯಾನ್ ಅವರನ್ನು ಎಂದಿಗೂ ಭೇಟಿಯಾಗಿಲ್ಲ ಅಥವಾ ಅವರ ಪರಿಚಯವೂ ನನಗಿರಲಿಲ್ಲ. ಯಾವುದೇ ಆಧಾರವಿಲ್ಲದೆ ಕಳೆದ ಸುಮಾರು 6 ವರ್ಷಗಳಿಂದ ನನ್ನ ಹೆಸರನ್ನು ಈ ದುರಂತದೊಂದಿಗೆ ಜೋಡಿಸುತ್ತಿರುವುದು ಕೆಲವು ವ್ಯಕ್ತಿಗಳ ರಾಜಕೀಯ ಮತ್ತು ವೈಯಕ್ತಿಕ ದುರುದ್ದೇಶದ ಭಾಗವಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಸುಶಾಂತ್ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವು ಪ್ರಕರಣ: ಸಿಬಿಐ ಎಫ್ಐಆರ್ನಲ್ಲಿ ಆದಿತ್ಯ ಠಾಕ್ರೆ, ದಿನೋ ಮೊರಿಯಾ ಹೆಸರು
ಸಾಕ್ಷ್ಯಾಧಾರಗಳಿಲ್ಲದೆ ನಡೆಯುತ್ತಿರುವ ಅಪಪ್ರಚಾರದ ಕುರಿತು ಬೇಸರ ವ್ಯಕ್ತಪಡಿಸಿದ ಅವರು, “ಟಿವಿ ಚರ್ಚೆಗಳು ಅಥವಾ ಮಾಧ್ಯಮ ವಿಚಾರಣೆಗಳು ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಸಿಬಿಐ ಅಧಿಕೃತ ತನಿಖೆಯು ಯಾವುದೇ ದುರುದ್ದೇಶಪೂರಿತ ಹಸ್ತಕ್ಷೇಪ ಹಾಗೂ ಚಾರಿತ್ರ್ಯವಧೆಯ ಪ್ರಯತ್ನಗಳಿಲ್ಲದೆ ಸ್ವತಂತ್ರವಾಗಿ ನಡೆಯಲಿ” ಎಂದು ಆಗ್ರಹಿಸಿದ್ದಾರೆ.
ಬಾಂಬೆ ಹೈಕೋರ್ಟ್ ಆದೇಶದಂತೆ ಸಿಬಿಐ ಸೆಪ್ಟೆಂಬರ್ 13ರಂದು ಹೊಸದಾಗಿ ಎಫ್ಐಆರ್ ದಾಖಲಿಸಿಕೊಂಡಿದೆ. ಎಫ್ಐಆರ್ನಲ್ಲಿ ಆದಿತ್ಯ ಠಾಕ್ರೆ, ನಟರಾದ ದಿನೋ ಮೊರಿಯಾ ಹಾಗೂ ರಿಯಾ ಚಕ್ರವರ್ತಿ ಸೇರಿದಂತೆ ಹಲವು ಪ್ರಮುಖ ಹೆಸರುಗಳಿದ್ದು, ಅವರ ಪಾತ್ರಗಳ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಆದರೆ, ಈ ಹಂತದಲ್ಲಿ ಯಾರನ್ನೂ ‘ಆರೋಪಿ’ ಎಂದು ಪ್ರತ್ಯೇಕವಾಗಿ ಹೆಸರಿಸಲಾಗಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೇಸ್ಗೆ ಮರುಜೀವ; ಫೆ.19ರಂದು ಮತ್ತೆ ಕೋರ್ಟ್ ವಿಚಾರಣೆ
ಕಳೆದ 6 ವರ್ಷಗಳಿಂದ ಎಫ್ಐಆರ್ ದಾಖಲಿಸದ ಮುಂಬೈ ಪೊಲೀಸರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಈ ತನಿಖೆಯು “ಉತ್ತರಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕಿದೆ” ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ, ದಿಶಾ ಸಾಲಿಯಾನ್ ಅವರ ಮರಣೋತ್ತರ ಪರೀಕ್ಷೆ ವರದಿ ಮತ್ತು ಆಕಸ್ಮಿಕ ಸಾವು ವರದಿಯ (ADR) ಪ್ರತಿಗಳನ್ನು 6 ವರ್ಷಗಳಾದರೂ ಕುಟುಂಬಕ್ಕೆ ನೀಡಿಲ್ಲ ಎಂಬುದನ್ನು ಕೋರ್ಟ್ ಎತ್ತಿತೋರಿಸಿತ್ತು.
ಏನಿದು ದಿಶಾ ಸಾಲಿಯಾನ್ ಪ್ರಕರಣ?:
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ದಿಶಾ ಸಾಲಿಯಾನ್ 2020ರ ಜೂನ್ 8ರಂದು ಮುಂಬೈನ ಅಪಾರ್ಟ್ಮೆಂಟ್ನಿಂದ ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಇದರ 6 ದಿನಗಳ ನಂತರ ಸುಶಾಂತ್ ಸಿಂಗ್ ಕೂಡ ಶವವಾಗಿ ಪತ್ತೆಯಾಗಿದ್ದರಿಂದ ಈ ಎರಡೂ ಸಾವುಗಳ ನಡುವೆ ಲಿಂಕ್ ಇದೆ ಎಂಬ ಸಂಶಯ ವ್ಯಕ್ತವಾಗಿತ್ತು. ಪೊಲೀಸರು ಆರಂಭದಲ್ಲಿ ಆಕಸ್ಮಿಕ ಸಾವು (ADR) ಎಂದು ಪ್ರಕರಣ ದಾಖಲಿಸಿ, ತನಿಖೆಯ ಬಳಿಕ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದರು. ಆದರೆ, ತನ್ನ ಮಗಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ತಂದೆ ಸತೀಶ್ ಸಾಲಿಯಾನ್ ಕಳೆದ ವರ್ಷ ಹೈಕೋರ್ಟ್ನಲ್ಲಿ ಅರ್ಜಿ ದಾಖಲಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ