ಕೇತನ್ ಅಗರ್ವಾಲ್ ಸಾವಿನ ಬಗ್ಗೆ ಅವಹೇಳನಕಾರಿ ಪೋಸ್ಟ್: ದಂತ ವೈದ್ಯೆ ಡಾ. ಮುಸ್ಕಾನ್ ಸೋನಿ 5 ವರ್ಷ ಅಮಾನತು

ಉದ್ಯಮಿ ಕೇತನ್ ಅಗರ್ವಾಲ್ ಸಾವಿನ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ದಂತ ವೈದ್ಯೆ ಡಾ. ಮುಸ್ಕಾನ್ ಸೋನಿ ಅವರನ್ನು ಎಐಡಿಎಸ್ಎ (AIDSA) ಸಂಘಟನೆಯು ಐದು ವರ್ಷಗಳ ಕಾಲ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಇನ್‌ಸ್ಟಾಗ್ರಾಂನಲ್ಲಿ ಅಪಹಾಸ್ಯ ಮಾಡಿದ್ದ ವಿಡಿಯೊ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬಳಿಕ, ಮಧ್ಯಪ್ರದೇಶ ಮೂಲದ ದಂತ ವೈದ್ಯೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಕೇತನ್ ಅಗರ್ವಾಲ್ ಸಾವಿನ ಬಗ್ಗೆ ಅವಹೇಳನಕಾರಿ ಪೋಸ್ಟ್: ದಂತ ವೈದ್ಯೆ ಡಾ. ಮುಸ್ಕಾನ್ ಸೋನಿ 5 ವರ್ಷ ಅಮಾನತು
ಡಾ. ಮುಸ್ಕಾನ್ ಸೋನಿ
Image Credit source: Muskan Soni Instagram

Updated on: Jul 01, 2026 | 1:51 PM

ಮುಖ್ಯಾಂಶಗಳು

  • ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವಹೇಳನಕಾರಿ ಪೋಸ್ಟ್​​
  • ದಂತ ವೈದ್ಯೆ ಡಾ. ಮುಸ್ಕಾನ್ ಸೋನಿ 5 ವರ್ಷ ಅಮಾನತು ಮಾಡಿ ಆದೇಶ
  • ಪೋಸ್ಟ್​ ಬಗ್ಗೆ ಆಕ್ರೋಶ ಹೆಚ್ಚಿದ ಬೆನ್ನಲ್ಲೇ ಬಹಿರಂಗ ಕ್ಷಮೆ ಕೇಳಿದ ವೈದ್ಯೆ

ನವದೆಹಲಿ, ಜುಲೈ 01: ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಡೆಂಟಲ್ ಸ್ಟುಡೆಂಟ್ಸ್ ಅಂಡ್ ಸರ್ಜನ್ಸ್ ಅಸೋಸಿಯೇಷನ್ (AIDSA) ದಂತ ವೈದ್ಯೆ ಡಾ. ಮುಸ್ಕಾನ್ ಸೋನಿ ಅವರನ್ನು ಐದು ವರ್ಷಗಳ ಕಾಲ ಅಮಾನತುಗೊಳಿಸಿ ಆದೇಶಿಸಿದೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕೇತನ್ ಅಗರ್ವಾಲ್ ಅವರ ಸಾವನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಅಮಾನತು ಆದೇಶದ ಪ್ರಕಾರ, ಡಾ. ಮುಸ್ಕಾನ್ ಸೋನಿ ಅವರು ಎಐಡಿಎಸ್ಎ ಸಂವಿಧಾನ, ನಡವಳಿಕೆ ಸಂಹಿತೆ ಮತ್ತು ನೈತಿಕ ಮೌಲ್ಯಗಳನ್ನು ಉಲ್ಲಂಘಿಸಿ, ಮೃತ ಕೇತನ್ ಅಗರ್ವಾಲ್ ಕುರಿತು ಅನುಚಿತ, ಆಕ್ಷೇಪಾರ್ಹ ಹಾಗೂ ಅಗೌರವದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸಂಘಟನೆಯಲ್ಲಿನ ಎಲ್ಲ ಹುದ್ದೆಗಳು, ಜವಾಬ್ದಾರಿಗಳು, ಸಮಿತಿಗಳು ಹಾಗೂ ಸದಸ್ಯತ್ವದಿಂದ ಐದು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ. ಈ ಅವಧಿಯಲ್ಲಿ ಅವರು ಸಂಘಟನೆಯನ್ನು ಪ್ರತಿನಿಧಿಸಲು, ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸಲು ಅಥವಾ ಯಾವುದೇ ಹುದ್ದೆಗೆ ಸ್ಪರ್ಧಿಸಲು ಅಥವಾ ನೇಮಕಗೊಳ್ಳಲು ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ:  ನ್ಯಾಯಾಲಯದಲ್ಲಿ ಹೈಡ್ರಾಮಾ; ಸಿಯಾ ಗೋಯಲ್ ಸಹೋದರನಿಗೆ ವಕೀಲರಿಂದ 10 ಕೋಟಿ ರೂ. ಮಾನನಷ್ಟ ನೋಟಿಸ್ ಜಾರಿ!

ದಂತ ವೈದ್ಯೆ ಪೋಸ್ಟ್​​ನಲ್ಲಿ ಏನಿತ್ತು?

ಕೇತನ್ ಅಗರ್ವಾಲ್ ಹತ್ಯೆ ಕುರಿತು ಡಾ. ಮುಸ್ಕಾನ್ ಸೋನಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿದ್ದು, ಆ ವಿಡಿಯೊದಲ್ಲಿ ಅವರು ಆ ಪುಣೆಯ ಹುಡುಗನಿಗೆ ಕೂದಲೇ ಇರಲಿಲ್ಲ. ಇಂತಹ ಸುಳ್ಳು ಹೇಳಿದರೆ ಸಾಯುವುದು ಖಚಿತ. ಹೀಗಾಗಿಯೇ ಐ ಹೇಟ್​​ ಮೆನ್​​ ಎಂದು ಅವರು ಬರೆದುಕೊಂಡಿದ್ದರು.

ಆಕ್ರೋಶದ ಬೆನ್ನಲ್ಲೇ ಕ್ಷಮೆ

ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಕುರಿತು ಇನ್‌ಸ್ಟಾಗ್ರಾಂನಲ್ಲಿ ಅಪಹಾಸ್ಯ ಮಾಡಿದ್ದ ವಿಡಿಯೊ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾದ ಬಳಿಕ, ಮಧ್ಯಪ್ರದೇಶ ಮೂಲದ ದಂತ ವೈದ್ಯೆ ಡಾ. ಮುಸ್ಕಾನ್ ಸೋನಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ನಾನು ಬಳಸಿದ ಪದಗಳಿಗಾಗಿ ನನಗೆ ತುಂಬಾ, ತುಂಬಾ ವಿಷಾದವಾಗಿದೆ. ನಾನು ಹೃತ್ಪೂರ್ವಕವಾಗಿ ಕ್ಷಮೆ ಕೇಳುತ್ತೇನೆ ಎಂದವರು ಹೇಳಿದ್ದಾರೆ. ಇದೇ ವೇಳೆ, “#IHateMen” ಎಂಬ ಪದಪ್ರಯೋಗವನ್ನು ಬಳಸಿದ್ದನ್ನು ಸಮರ್ಥಿಸಿಕೊಂಡಿರುವ ಅವರು, ನನ್ನ ಹಿಂದಿನ ಜೀವನದ ಕೆಲವು ವೈಯಕ್ತಿಕ ಅನುಭವಗಳಿಂದಾಗಿ ನಾನು ಈ ಪದವನ್ನು ಬಳಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:43 pm, Wed, 1 July 26

Follow Us