
ನವದೆಹಲಿ, ಸೆಪ್ಟೆಂಬರ್ 18: ದೆಹಲಿಯಲ್ಲಿ 16 ವರ್ಷದ ಬಾಲಕಿ ಮೇಲೆ ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಅಷ್ಟೇ ಅಲ್ಲದೆ ಆಕೆಯನ್ನು ಚಾಕುವಿನಿಂದ ಇರಿದು ಕೊಂದು ನಿರ್ಜನ ಬಯಲಿನಲ್ಲಿ ಬಿಸಾಡಿ ಹೋಗಿದ್ದು, ಕೊಳೆತ ಸ್ಥಿತಿಯಲ್ಲಿದ್ದ ಆಕೆಯ ದೇಹವನ್ನು ಬೀದಿ ನಾಯಿಗಳು ಕಚ್ಚಿ ತಿಂದಿರುವ ಘಟನೆ ವರದಿಯಾಗಿದೆ. ವಾಯುವ್ಯ ದೆಹಲಿಯ ಸ್ವರೂಪ್ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಕೊಳೆತ ಶವದ ಅಂಗಾಗಗಳನ್ನು ಕಿತ್ತು ತಿನ್ನುತ್ತಿದ್ದಾಗ ಜನರ ಕಣ್ಣಿಗೆ ಬಿದ್ದಿದೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಸೆಪ್ಟೆಂಬರ್ 13 ರಂದು ಕುಶಾಕ್ ರಸ್ತೆಯ ಜೈಪಾಲ್ ರಾಣಾ ಅವರ ಹೊಲದ ಬಳಿ ನಾಯಿಗಳು ಶವವನ್ನು ತಿನ್ನುತ್ತಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಶವ ಸಂಪೂರ್ಣ ಕೊಳೆತು ವಿರೂಪಗೊಂಡಿದ್ದರಿಂದ ಆರಂಭದಲ್ಲಿ ಲಿಂಗ ಪತ್ತೆಹಚ್ಚುವುದೇ ಕಷ್ಟವಾಗಿತ್ತು; ಬಾಲಕಿಯ ಒಂದು ಕೈ ದೇಹದಿಂದ ಬೇರ್ಪಟ್ಟಿತ್ತು ಹಾಗೂ ದೇಹದ ಮೇಲೆ ಹಲವು ಇರಿತದ ಗಾಯಗಳಿದ್ದವು.
ಬಾಲಕಿಗೆ ಪರಿಚಯಸ್ಥರೇ ಆಗಿದ್ದ ಆರೋಪಿಗಳು, ಆಕೆಯೊಂದಿಗೆ ಟೆಂಪೋದಲ್ಲಿ ಮದ್ಯ ಸೇವಿಸಿದ್ದಾರೆ. ಬಳಿಕ ಸೆಪ್ಟೆಂಬರ್ 11 ರ ಶುಕ್ರವಾರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಗುರುತು ಸಿಗದಂತೆ ಮುಖ ಮತ್ತು ದೇಹಕ್ಕೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿ ಹೊಲದಲ್ಲಿ ಎಸೆದು ಪರಾರಿಯಾಗಿದ್ದರು. ಯಾವುದೇ ಪ್ರತ್ಯಕ್ಷದರ್ಶಿಗಳಿಲ್ಲದ ಈ ಪ್ರಕರಣವನ್ನು ಭೇದಿಸಲು ಪೊಲೀಸರು 50ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಶಂಕಿತ ಟೆಂಪೋವೊಂದರ ಚಲನವಲನವನ್ನು ಪತ್ತೆಹಚ್ಚಿದ ತನಿಖಾ ತಂಡ, ಸೆಪ್ಟೆಂಬರ್ 15-16ರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ವಾಹನ ಹಾಗೂ ಅದರ ಚಾಲಕನನ್ನು ವಶಕ್ಕೆ ಪಡೆಯಿತು.
ಮತ್ತಷ್ಟು ಓದಿ: ಜನರ ಗೋಳು ಕೇಳದ ಅಧಿಕಾರಿಗಳಿಗೆ ವಿಶಿಷ್ಟ ಪಾಠ: ನಾಸಿಕ್ ಪಾಲಿಕೆ ಅಧಿಕಾರಿ ಕಚೇರಿಯೊಳಗೆ ನಾಯಿಗಳ ಬಿಟ್ಟ ಯುವಸೇನಾ ಕಾರ್ಯಕರ್ತರು
ನಾಲ್ವರ ಬಂಧನ, ಮಾರಕಾಸ್ತ್ರ ಜಪ್ತಿ: ಮುಖ್ಯ ಆರೋಪಿ ಖಡ್ಡಾ ಕಾಲೋನಿಯ ಶಿವಂ ಅಲಿಯಾಸ್ ಸುದಾಮ ಎಂಬಾತನೊಂದಿಗೆ 16 ಮತ್ತು 17 ವರ್ಷ ವಯಸ್ಸಿನ ಮೂವರು ಬಾಲಾಪರಾಧಿಗಳನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಟೆಂಪೋ, ಎರಡು ಚಾಕುಗಳು ಮತ್ತು ರಕ್ತಸಿಕ್ತ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 70 (ಸಾಮೂಹಿಕ ಅತ್ಯಾಚಾರ), ಸೆಕ್ಷನ್ 103(ಕೊಲೆ) ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಮೂವರು ಆರೋಪಿಗಳು ಅಪ್ರಾಪ್ತರಾಗಿರುವುದರಿಂದ (16 ರಿಂದ 17 ವರ್ಷ), ಜುವೆನೈಲ್ ಜಸ್ಟಿಸ್ ಕಾಯ್ದೆಯ ಅಡಿಯಲ್ಲಿ ಇವರನ್ನು ವಯಸ್ಕರೆಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡುವ ಸಾಧ್ಯತೆಯಿದೆ.
ಸಂತ್ರಸ್ತ ಬಾಲಕಿ ಆಗಾಗ ಮನೆ ಬಿಟ್ಟು ಹೋಗಿ ಕೆಲ ದಿನಗಳ ನಂತರ ಮರಳುತ್ತಿದ್ದ ಕಾರಣ, ಕುಟುಂಬಸ್ಥರು ಆರಂಭದಲ್ಲಿ ಆಕೆ ಕಾಣೆಯಾಗಿರುವ ಬಗ್ಗೆ ಯಾವುದೇ ಪೊಲೀಸ್ ದೂರು ನೀಡಿರಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ನಡೆದಿರುವುದು ಅಧಿಕೃತವಾಗಿ ದೃಢಪಟ್ಟಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ