
ದುಬೈ, ಜುಲೈ 06: ಯುಎಇಯಲ್ಲಿರುವ ಭಾರತೀಯ ಉದ್ಯಮಿ ಮತ್ತು ವಿಪಿಎಸ್ ಹೆಲ್ತ್ಕೇರ್ ಸಂಸ್ಥೆಯ ಸಂಸ್ಥಾಪಕ ಡಾ. ಶಮ್ಶೀರ್ ವಯಲಿಲ್ ಅವರು ದುಬೈ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಘೋಷಿಸಿದ್ದ 2.6 ಕೋಟಿ ರೂ. ಆರ್ಥಿಕ ನೆರವು ಅಂತಿಮವಾಗಿ ಸಂತ್ರಸ್ತರ ಕೈಸೇರಿದೆ. ಡಾ. ಶಮ್ಶೀರ್ ಅವರ ಪ್ರತಿನಿಧಿಗಳು ತೆಲಂಗಾಣ ಮತ್ತು ಉತ್ತರ ಪ್ರದೇಶದ ಹಳ್ಳಿಗಳಿಗೆ ಖುದ್ದಾಗಿ ಭೇಟಿ ನೀಡಿ, ತಲಾ 26 ಲಕ್ಷ ರೂ. ಹಣದ ನೆರವು ನೀಡಿದ್ದಾರೆ. ಭಾರತದ ಕಾರ್ಮಿಕರಲ್ಲದೆ, ಶ್ರೀಲಂಕಾದ ಒಬ್ಬರು ಹಾಗೂ ಗಾಯಗೊಂಡ ನೇಪಾಳದ ಕಾರ್ಮಿಕರಿಗೂ ಈ ಪ್ಯಾಕೇಜ್ ಮೂಲಕ ಸಹಾಯ ಹಸ್ತ ಚಾಚಲಾಗಿದೆ.
ಈ ಅಪಘಾತ ಕೇವಲ ಅಂಕಿ-ಅಂಶಗಳಲ್ಲ, ಇದರ ಹಿಂದೆ ಬಡತನ ಗೆದ್ದು ಕುಟುಂಬವನ್ನು ಸಾಕಲು ಮರುಭೂಮಿಗೆ ಹೋದ ನತದೃಷ್ಟರ ಕಣ್ಣೀರಿನ ಕಥೆಗಳಿವೆ.
ಕೊನೆಯ ಪ್ರಯಾಣ ಎಂದಿದ್ದ ಅಬ್ದುಲ್: ಉತ್ತರ ಪ್ರದೇಶದ ಅಬ್ದುಲ್ ರಶೀದ್ ದುಬೈಗೆ ಹೊರಡುವಾಗ, ಇದೇ ನನ್ನ ಕೊನೆಯ ವಿದೇಶ ಪ್ರಯಾಣ, ಮರಳಿ ಬಂದ ಮೇಲೆ ಮತ್ತೆ ಹೋಗಲ್ಲ ಎಂದು ಹೆಂಡತಿ, ಮೂವರು ಹೆಣ್ಣುಮಕ್ಕಳಿಗೆ ಮಾತು ಕೊಟ್ಟು ಹೋಗಿದ್ದರು. ಆದರೆ ಕೇವಲ 2 ತಿಂಗಳಲ್ಲೇ ಅವರು ಶವವಾಗಿ ಮರಳಿದ್ದಾರೆ.
ಮೂರನೇ ಮಗನನ್ನೂ ಕಳೆದುಕೊಂಡ ತಂದೆ: ತೆಲಂಗಾಣದ ಅಬ್ದುಲ್ ರಫೀಕ್ ಅವರ ತಂದೆ ತತ್ತರಿಸಿಹೋಗಿದ್ದಾರೆ. 2015 ರಲ್ಲಿ ಹಳ್ಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲೇ ಅವರ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದರು. ಈಗ ದುಬೈ ಅಪಘಾತದಲ್ಲಿ ಕೊನೆಯ ಆಸರೆಯಾಗಿದ್ದ ರಫೀಕ್ ಕೂಡ ದೂರವಾಗಿದ್ದಾರೆ.
ಮಗಳ ಮದುವೆ, ಮಗನ ಕಾಯಿಲೆ: ತೆಲಂಗಾಣದ 51 ವರ್ಷದ ಸಲೀಂ ಸಯ್ಯದ್ ಕೇವಲ ಎರಡುವರೆ ತಿಂಗಳ ಹಿಂದಷ್ಟೇ ದುಬೈಗೆ ಹೋಗಿದ್ದರು. ಮಗಳ ಮದುವೆ ಮಾಡಬೇಕು, ಅನಾರೋಗ್ಯ ಪೀಡಿತ ಮಗನಿಗೆ ಚಿಕಿತ್ಸೆ ಕೊಡಿಸಬೇಕು ಎಂಬ ಅವರ ಕನಸುಗಳು ಅರ್ಧಕ್ಕೇ ನಿಂತಿವೆ.
ಈ ಕರುಣಾಜನಕ ಘಟನೆಯ ನಡುವೆ ಒಂದು ಭರವಸೆಯ ಕಿರಣ ಮೂಡಿದೆ. ಉತ್ತರ ಪ್ರದೇಶದ ಮೌ ಜಿಲ್ಲೆಯ ಮಾರ್ಕಂಡೇಯ ಚೌಹಾಣ್ ಎಂಬುವವರೂ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ 17 ವರ್ಷದ ಮಗಳು ಅಂಕಿತಾ ಇತ್ತೀಚೆಗಷ್ಟೇ 12ನೇ ತರಗತಿ ಮುಗಿಸಿದ್ದಾಳೆ.
ಭೇಟಿಯ ವೇಳೆ ಡಾ. ಶಮ್ಶೀರ್ ಅವರು ವಿಡಿಯೋ ಕಾಲ್ ಮೂಲಕ ಅಂಕಿತಾಳೊಂದಿಗೆ ಮಾತನಾಡಿದರು. ತನಗೆ ಬಿಎಸ್ಸಿ ನರ್ಸಿಂಗ್ (B.Sc Nursing) ಓದುವ ಆಸೆಯಿದೆ ಎಂದು ಅಂಕಿತಾ ಕಣ್ಣೀರು ಹಾಕಿದಾಗ, ಡಾ. ಶಮ್ಶೀರ್ ಆಕೆಗೆ ಧೈರ್ಯ ತುಂಬಿದ್ದಾರೆ.
ನೀನು ಹಣದ ಚಿಂತೆ ಮಾಡದೆ ಧೈರ್ಯವಾಗಿ ಓದು. ನಿನ್ನ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ನಾವೇ ಭರಿಸುತ್ತೇವೆ. ಓದು ಮುಗಿದ ನಂತರ ನಿನಗೆ ಯುಎಇನಲ್ಲೇ ಕೆಲಸದ ಅವಕಾಶವನ್ನೂ ಮಾಡಿಕೊಡುತ್ತೇವೆ. ನಿನ್ನ ಸಾಧನೆಯ ಮೂಲಕ ನಿಮ್ಮ ತಂದೆ ಪ್ರತಿದಿನ ಬದುಕಿರುತ್ತಾರೆ ಎಂದು ಶಮ್ಶೀರ್ ಧೈರ್ಯ ತುಂಬಿದ್ದಾರೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ 9 ಕಾರ್ಮಿಕರಿಗೂ (8 ಭಾರತೀಯರು, 1 ನೇಪಾಳಿ) ಗಾಯದ ತೀವ್ರತೆಗೆ ಅನುಗುಣವಾಗಿ ಆರ್ಥಿಕ ನೆರವು ನೀಡಲಾಗಿದೆ. ಕೆಲವರಿಗೆ ಯುಎಇನಲ್ಲೇ ನಗದು ನೀಡಲಾಗಿದ್ದರೆ, ಭಾರತಕ್ಕೆ ಮರಳಿರುವವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ. ಹಣದಿಂದ ಕಳೆದುಹೋದ ಜೀವವನ್ನು ಮರಳಿ ತರಲು ಸಾಧ್ಯವಿಲ್ಲದಿದ್ದರೂ, ಅನಾಥವಾದ ಬಡ ಕುಟುಂಬಗಳಿಗೆ ಈ ಮಾನವೀಯ ನೆರವು ಒಂದು ದೊಡ್ಡ ಆಸರೆಯಾಗಬಹುದು ಎಂದು ಅವರ ಅಭಿಪ್ರಾಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ