ಪಂಚಕುಲದಲ್ಲಿ ಡಿಆರ್‌ಡಿಒ ಹೈ-ಪವರ್ ಬಾಂಬ್ ಪರೀಕ್ಷೆ: ನಿವಾಸಿಗಳಿಗೆ ಮನೆಯೊಳಗೆ ಇರುವಂತೆ ಸೂಚನೆ

ಡಿಆರ್​ಡಿಒ ಹರಿಯಾಣದ ಪಂಚಕುಲದಲ್ಲಿ ಮೇ 31 ರಂದು ಅತ್ಯಂತ ಶಕ್ತಿಶಾಲಿ ಬಾಂಬ್ ಪರೀಕ್ಷೆ ನಡೆಸಲಿದೆ. ರಾಮಗಢ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳಿಗೆ ಪರೀಕ್ಷಾ ಅವಧಿಯಲ್ಲಿ ಮನೆಯೊಳಗೇ ಇರಲು ಸೂಚಿಸಲಾಗಿದೆ. 2 ಕಿಲೋಮೀಟರ್ ವ್ಯಾಪ್ತಿಯನ್ನು ಅಪಾಯಕಾರಿ ವಲಯವೆಂದು ಘೋಷಿಸಲಾಗಿದ್ದು, ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ. ಇದು ಭಾರತದ ರಕ್ಷಣಾ ವ್ಯವಸ್ಥೆಯ ಬಲವರ್ಧನೆಗಾಗಿ ನಡೆಸುವ ಯೋಜಿತ ಪರೀಕ್ಷೆಯಾಗಿದೆ.

ಪಂಚಕುಲದಲ್ಲಿ ಡಿಆರ್‌ಡಿಒ ಹೈ-ಪವರ್ ಬಾಂಬ್ ಪರೀಕ್ಷೆ: ನಿವಾಸಿಗಳಿಗೆ ಮನೆಯೊಳಗೆ ಇರುವಂತೆ  ಸೂಚನೆ
ಸಾಂದರ್ಭಿಕ ಚಿತ್ರ
Image Credit source: India TV

Updated on: May 30, 2026 | 11:47 AM

ಪಂಚಕುಲ, ಮೇ 30: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮೇ 31 ರಂದು ಹರಿಯಾಣದ ಪಂಚಕುಲ ಜಿಲ್ಲೆಯ ರಾಮಗಢದಲ್ಲಿ ಅತ್ಯಂತ ಶಕ್ತಿಶಾಲಿ ಬಾಂಬ್ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳಿಗೆ ಪರೀಕ್ಷಾ ಅವಧಿಯಲ್ಲಿ ಮನೆಯೊಳಗೇ ಇರುವಂತೆ ಸ್ಥಳೀಯ ಆಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳ ಪರೀಕ್ಷೆಯಲ್ಲಿ ಪರಿಣತಿ ಹೊಂದಿರುವ ಡಿಆರ್‌ಡಿಒದ ಪ್ರಮುಖ ಪ್ರಯೋಗಾಲಯವಾದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯ (TBRL) ಈ ಹೈ-ಪವರ್ ಬಾಂಬ್ ಪರೀಕ್ಷೆಯನ್ನು ನಡೆಸುತ್ತಿದೆ.

2 ಕಿಲೋಮೀಟರ್ ವ್ಯಾಪ್ತಿ ಅಪಾಯಕಾರಿ ವಲಯ
ಡಿಆರ್‌ಡಿಒ ವಿಜ್ಞಾನಿಗಳು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಸ್ಫೋಟವು ಎಷ್ಟು ಶಕ್ತಿಶಾಲಿಯಾಗಿರಲಿದೆ ಎಂದರೆ, ಬಾಂಬ್‌ನ ತೀಕ್ಷ್ಣ ತುಣುಕುಗಳು (Splinters) ಗಾಳಿಯಲ್ಲಿ ಬರೋಬ್ಬರಿ 1.5 ಕಿಲೋಮೀಟರ್‌ಗಳಷ್ಟು ದೂರದವರೆಗೆ ಚಿಮ್ಮುವ ಸಾಧ್ಯತೆ ಇದೆ.

ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಸ್ಫೋಟ ನಡೆಯುವ ಸ್ಥಳದ ಸುತ್ತಲಿನ 2 ಕಿಲೋಮೀಟರ್ ವ್ಯಾಪ್ತಿಯನ್ನು ಸ್ಪ್ಲಿಂಟರ್ ಅಪಾಯದ ವಲಯ ಎಂದು ಘೋಷಿಸಿದ್ದಾರೆ. ಈ ಅವಧಿಯಲ್ಲಿ ಸಾರ್ವಜನಿಕರಿಗೆ ಈ ವಲಯದೊಳಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸುರಕ್ಷತಾ ಸಲಹೆಗಳು ಮತ್ತು ಹಳ್ಳಿಗಳ ಪಟ್ಟಿ
TBRL ತಂತ್ರಜ್ಞಾನ ನಿರ್ದೇಶಕ ಸಿ. ಸರ್ಕಾರ್ ಅವರು ಪಂಚಕುಲ ಜಿಲ್ಲಾಧಿಕಾರಿಗೆ ಕಳುಹಿಸಿರುವ ಅಧಿಕೃತ ಪತ್ರದ ಪ್ರಕಾರ, ಈ ಕೆಳಗಿನ ಗ್ರಾಮಗಳ ನಿವಾಸಿಗಳು ಪರೀಕ್ಷೆಯ ಸಮಯದಲ್ಲಿ ಜಾಗರೂಕರಾಗಿರಬೇಕು ಮತ್ತು ಅನಗತ್ಯ ಓಡಾಟವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ಭಾನು ಮತ್ತು ಬಿಲ್ಲಾ ಗ್ರಾಮಗಳು, ಆಸ್ರೆವಾಲಿ, ನಗ್ಗಲ್, ಮೋಗಿನಂದ್, ಕಿಶನ್‌ಗಢ, ಟಿಎಂವಿ ಕಾಲೋನಿ ಮತ್ತು ರಾಮಗಢ ಮುನ್ಸಿಪಲ್ ವ್ಯಾಪ್ತಿಯ ಪ್ರದೇಶಗಳಿಗೆ ಸೂಚನೆ ನೀಡಲಾಗಿದೆ.

ಮತ್ತಷ್ಟು ಓದಿ: ಡಿಆರ್​​​ಡಿಒ ಅಭಿವೃದ್ಧಿಪಡಿಸುತ್ತಿರುವ ಶಸ್ತ್ರಾಸ್ತ್ರಗಳು ಮತ್ತವುಗಳ ಸಾಮರ್ಥ್ಯ; ಇಲ್ಲಿದೆ ಪಟ್ಟಿ

ವಾಯುಪಡೆ ಅಧಿಕಾರಿಗಳ ಮೇಲ್ವಿಚಾರಣೆ
ಈ ಇಡೀ ಪರೀಕ್ಷಾರ್ಥ ಪ್ರಯೋಗವನ್ನು ಕಟ್ಟುನಿಟ್ಟಾದ ಅಂತರರಾಷ್ಟ್ರೀಯ ಭದ್ರತಾ ಮಾನದಂಡಗಳ ಅಡಿಯಲ್ಲಿ ನಡೆಸಲಾಗುತ್ತಿದ್ದು, ಭಾರತೀಯ ವಾಯುಪಡೆಯ (IAF) ಹಿರಿಯ ಅಧಿಕಾರಿಗಳು ಇದರ ನೇರ ಮೇಲ್ವಿಚಾರಣೆ ವಹಿಸಲಿದ್ದಾರೆ.

ಇದು ಭಾರತೀಯ ರಕ್ಷಣಾ ವ್ಯವಸ್ಥೆಯ ಬಲವರ್ಧನೆಗಾಗಿ ನಡೆಯುವ ನಿಯಮಿತ ಮತ್ತು ಯೋಜಿತ ಪರೀಕ್ಷೆಯಾಗಿದೆ. ಹೀಗಾಗಿ ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ, ಅಧಿಕಾರಿಗಳು ನೀಡುವ ಸುರಕ್ಷತಾ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ವಿನಂತಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:46 am, Sat, 30 May 26

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us