ಮಗ ಸತ್ತಿದ್ದಾನೆ, ಸೊಸೆಯಿಂದ ಜೀವನಾಂಶ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ; ನ್ಯಾಯಾಲಯ ಹೇಳಿದ್ದೇನು?

Dead Cop's Parents Want Daughter-In-Law To Pay Maintenance. What Court Said: ಮಗ ಸತ್ತಿದ್ದು, ಸೊಸೆಯಿಂದ ತಮಗೆ ಜೀವನಾಂಶ ಕೊಡಿಸಬೇಕೆಂದು ವೃದ್ಧ ದಂಪತಿ ಮಾಡಿಕೊಂಡ ಮನವಿಯು ಎರಡು ಕೋರ್ಟ್​​ಗಳಲ್ಲಿ ತಿರಸ್ಕೃತಗೊಂಡಿದೆ. ಉತ್ತರಪ್ರದೇಶದ ಫ್ಯಾಮಿಲಿ ಕೋರ್ಟ್ ಮತ್ತು ಅಲಹಾಬಾದ್ ಹೈಕೋರ್ಟ್ ಈ ದಂಪತಿಯ ಮನವಿಯನ್ನು ಪುರಸ್ಕರಿಸಿಲ್ಲ. ಈ ಪ್ರಕರಣದ ಬಗ್ಗೆ ಮಾಹಿತಿ ಇಲ್ಲಿದೆ.

ಮಗ ಸತ್ತಿದ್ದಾನೆ, ಸೊಸೆಯಿಂದ ಜೀವನಾಂಶ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ ವೃದ್ಧ ದಂಪತಿ; ನ್ಯಾಯಾಲಯ ಹೇಳಿದ್ದೇನು?
ಅಲಹಾಬಾದ್ ಹೈಕೋರ್ಟ್
Image Credit source: Dinamalar

Updated on: Mar 29, 2026 | 6:19 PM

ಲಕ್ನೋ, ಮಾರ್ಚ್ 29: ತಮ್ಮ ಮಗ ಸತ್ತಿದ್ದಾನೆ. ಸೊಸೆಯಿಂದ ತಮಗೆ ಜೀವನಾಂಶ (ಮೈಂಟೆನೆನ್ಸ್) ಕೊಡಿಸಿ ಎಂದು ವೃದ್ಧ ದಂಪತಿಯೊಂದು ಕೋರ್ಟ್ ಮೆಟ್ಟಿಲೇರಿದ ಘಟನೆ ಬೆಳಕಿಗೆ ಬಂದಿದೆ. ಈ ವೃದ್ಧರ ಪರವಾಗಿ ತೀರ್ಪು ಕೊಡಲು ಕೋರ್ಟ್ ನಿರಾಕರಿಸಿತು. ಇದರೊಂದಿಗೆ ಎರಡು ಕೋರ್ಟ್​ಗಳಲ್ಲಿ ವೃದ್ಧರ ಪರವಾಗಿ ತೀರ್ಪು ಬರಲಿಲ್ಲ. ಫ್ಯಾಮಿಲಿ ಕೋರ್ಟ್​ನಲ್ಲಿ ತಮ್ಮ ಮನವಿ ತಿರಸ್ಕೃತಗೊಂಡ ಬಳಿಕ ಈ ವೃದ್ಧರು ಉತ್ತರಪ್ರದೇಶದ ಅಲಾಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿಯೂ ಅವರ ಪರವಾಗಿ ತೀರ್ಪು ಬರಲಿಲ್ಲ. ನೈತಿಕ ಬಾಧ್ಯತೆಯನ್ನು ಕಾನೂನು ಬಾಧ್ಯತೆ ಎಂದು ಪರಿಗಣಿಸಲು ಆಗುವುದಿಲ್ಲ. ಸೊಸೆಯಿಂದ ಜೀವನಾಂಶ ಕೊಡಿಸುವ ಅವಕಾಶ ಇಲ್ಲ ಎಂದು ಹೈಕೋರ್ಟ್ ಪೀಠ (Allahabad High Court) ತನ್ನ ತೀರ್ಪಿನಲ್ಲಿ ತಿಳಿಸಿತು.

ಉತ್ತರಪ್ರದೇಶ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್ಟೆಬಲ್​ವೊಬ್ಬರು 2021ರಲ್ಲಿ ಮೃತಪಡುತ್ತಾರೆ. 2016ರಲ್ಲಿ ಆತನ ವಿವಾಹವಾಗಿರುತ್ತದೆ. ಆತನ ಹೆಂಡತಿ ಕೂಡ ಯುಪಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್​ಟೆಬಲ್ ಆಗಿರುತ್ತಾರೆ. ತಮ್ಮ ಸೊಸೆಗೆ ಸಾಕಷ್ಟು ಸ್ವತಂತ್ರ ಆದಾಯ ಇದೆ. ತಮ್ಮ ಮಗನ ನಿಧನದ ನಂತರ ಆಕೆಗೆ ಸರ್ವಿಸ್ ಬೆನಿಫಿಟ್ಸ್ ಕೂಡ ಸಿಕ್ಕಿದೆ. ಹೀಗಾಗಿ, ತಮಗೆ ಆಕೆಯಿಂದ ಜೀವನಾಂಶ ಕೊಡಿಸುವಂತೆ ಕೌಟುಂಬಿಕ ನ್ಯಾಯಾಲಯವೊಂದರಲ್ಲಿ ಮನವಿ ಮಾಡಿದ್ದರು. ಆದರೆ, ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಇವರ ಅರ್ಜಿಯನ್ನು ಈ ಕೆಳಗಿನ ಕೋರ್ಟ್ ತಿರಸ್ಕರಿಸಿತ್ತು.

ಇದನ್ನೂ ಓದಿ: ಚಾಕೊಲೇಟ್ ಕದ್ದಿದ್ದಾಳೆಂದು 12 ವರ್ಷದ ಮಗಳನ್ನು ದೊಣ್ಣೆಯಿಂದ ಹೊಡೆದು ಕೊಂದ ತಂದೆ

ಇದಾದ ಬಳಿಕ ಈ ವೃದ್ಧ ದಂಪತಿಯು ಅಲಹಾಬಾದ್ ಹೈಕೋರ್ಟ್​ನಲ್ಲಿ ಮೇಲ್ಮನವಿ ಮಾಡಿತು. ಅರ್ಜಿದಾರರು ವೃದ್ಧರು ಮತ್ತು ಅನಕ್ಷರಸ್ಥರಾಗಿದ್ದಾರೆ. ಮಗನ ಮೇಲೆ ಅವಲಂಬಿತರಾಗಿದ್ದರು. ಅವರ ನಿಧನದಿಂದ ಅವರ ಬದುಕು ನಿರ್ವಹಣೆ ಕಷ್ಟವಾಗಿದೆ. ಅಸಹಾಯಕ ಅತ್ತೆ ಮಾವನವರನ್ನು ಪಾಲನೆ ಮಾಡುವ ನೈತಿಕ ಹೊಣೆ ಸೊಸೆಗೆ ಇರುತ್ತದೆ. ಇದನ್ನು ಕಾನೂನು ಬಾಧ್ಯತೆಯಾಗಿ ಪರಿಗಣಿಸಬೇಕು ಎಂದು ವೃದ್ಧ ದಂಪತಿ ಪರ ವಕೀಲರು ಕೋರ್ಟ್​ನಲ್ಲಿ ವಾದಿಸದ್ದರು.

ಮಗನ ಸಾವಿನಿಂದಾಗಿ ಸೊಸೆಗೆ ಕೆಲಸ ಸಿಕ್ಕಿತು ಎಂದು ಹೇಳುವ ಯಾವ ದಾಖಲೆಯೂ ಇಲ್ಲ. ನೈತಿಕ ಬದ್ಧತೆಯನ್ನು ಕಾನೂನು ಬಾಧ್ಯತೆ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಪೀಠದಿಂದ ತೀರ್ಪು ಬಂದಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:47 pm, Sun, 29 March 26

Follow Us