Manipur Assembly Polls: ಮಣಿಪುರದ 9 ಮತಗಟ್ಟೆಗಳಲ್ಲಿ ಮರು ಮತದಾನ; ಆದೇಶ ಹೊರಡಿಸಿದ ಚುನಾವಣಾ ಆಯೋಗ

| Updated By: Lakshmi Hegde

Updated on: Mar 02, 2022 | 10:17 AM

ಚುರ್​ಚಾಂದ್​ ಜಿಲ್ಲೆಯ ತಿಪೈಮುಖ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ರಾಜ್ಯ ಪೊಲೀಸ್ ಸಿಬ್ಬಂದಿ ನವೋರೆಮ್ ಇಬೋಚೌಬಾ ಎಂಬುವರು ಗುಂಡೇಟಿನಿಂದ ಮೃತಪಟ್ಟಿದ್ದರು.

Manipur Assembly Polls: ಮಣಿಪುರದ 9 ಮತಗಟ್ಟೆಗಳಲ್ಲಿ ಮರು ಮತದಾನ; ಆದೇಶ ಹೊರಡಿಸಿದ ಚುನಾವಣಾ ಆಯೋಗ
ಸಾಂದರ್ಭಿಕ ಚಿತ್ರ
Follow us on

ಮಣಿಪುರದಲ್ಲಿ ಫೆ.28ರಂದು ವಿಧಾನಸಭೆ ಚುನಾವಣೆ (Manipur Assembly Election) ಮೊದಲ ಹಂತದ ಮತದಾನ ನಡೆದಿದ್ದ 9 ಮತಕೇಂದ್ರಗಳಲ್ಲಿ ಮರುಮತದಾನ ನಡೆಸಲು ಚುನಾವಣಾ ಆಯೋಗ ಆದೇಶ ನೀಡಿದೆ. ಈ 9 ಮತಕೇಂದ್ರಗಳೂ ಚುರ್​ಚಾಂದ್​ಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಇದ್ದು, ಫೆ.28ರಂದು ಇಲ್ಲೆಲ್ಲ ಗಲಾಟೆ ನಡೆದಿತ್ತು. ಹೀಗಾಗಿ ಮತ್ತೆ ಮತದಾನ ನಡೆಯಲಿದೆ.  ಸಾಂಗ್ಸಾಂಗ್ ಮಿಷನ್ ಶಾಲೆ, ಮೈಟೆ ಮಿ ಶಾಲೆ, ಥಾನ್ಲಾನ್ (ST) ವಿಧಾನಸಭಾ ಕ್ಷೇತ್ರದ ಟಿನ್ಸುಂಗ್ ಮಿ ಶಾಲೆ, ಹೆಂಗ್ಲೆಪ್ (ST) ವಿಧಾನಸಭಾ ಕ್ಷೇತ್ರದಲ್ಲಿ ಮಜುರಾನ್ ಕುಕಿ, ಖೊಯಿರೆಂಟಾಕ್, ಮೊಲ್ಸಾಂಗ್, ಲೀನೊಮ್, ಮತ್ತು ಸಿಂಘತ್ (ST) ವಿಧಾನಸಭಾ ಕ್ಷೇತ್ರದ ಟೀಕೋಟ್ ಮತ್ತು ಮೌಕೋಟ್ ಮತಕೇಂದ್ರಗಳಲ್ಲಿ ಮತ್ತೊಮ್ಮೆ ಮತದಾನ ನಡೆಯಲಿದೆ.

ಮಣಿಪುರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಾಗಲೇ ವಿವಿಧ ಹಿಂಸಾಚಾರದ ಪ್ರಕರಣಗಳು ವರದಿಯಾಗಿದ್ದವು. ಫೆ.28ರಂದು ಮೊದಲ ಹಂತದ ಮತದಾನ ನಡೆಯುವಾಗಲೂ ಕೂಡ ರಾಜ್ಯದ ಹಲವೆಡೆ ಗಲಾಟೆ, ಸಂಘರ್ಷ ಉಂಟಾಗಿದೆ. ಸುಮಾರು ಏಳು ಮತಗಟ್ಟೆಗಳಲ್ಲಿ ಇವಿಎಂಗಳಿಗೂ ಹಾನಿಯಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೇಶ್​ ಅಗರ್​​ವಾಲ್​ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಚುರ್​ಚಾಂದ್​ ಜಿಲ್ಲೆಯ ತಿಪೈಮುಖ್ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ರಾಜ್ಯ ಪೊಲೀಸ್ ಸಿಬ್ಬಂದಿ ನವೋರೆಮ್ ಇಬೋಚೌಬಾ ಎಂಬುವರು ಗುಂಡೇಟಿನಿಂದ ಮೃತಪಟ್ಟಿದ್ದರು. ಇವರು   ತಾವು ಕೈಯಲ್ಲಿ ಹಿಡಿದಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ತಮಗೇ ಫೈರಿಂಗ್​ ಮಾಡಿಕೊಂಡು  ಮೃತಪಟ್ಟಿದ್ದಾಗಿ ತಿಳಿದುಬಂದಿತ್ತು. ಅಂದು ಹೆಚ್ಚಾಗಿ ಗಲಾಟೆಗಳೆಲ್ಲ ನಡೆದಿದ್ದು ಚುರ್​ಚಾಂದ್​ಪುರ್​ ಜಿಲ್ಲೆಯಲ್ಲಿಯೇ ಆಗಿತ್ತು. ಕಾಕ್ವಾ ಪ್ರದೇಶದಲ್ಲಿರುವ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಗಲಾಟೆ ನಡೆಸಿದ್ದರು.  ಇದರಲ್ಲಿ ಯಾರಿಗೂ ಗಾಯವಾಗಿರಲಿಲ್ಲ. ಕೀರಾವೋ ವಿಧಾನಸಭೆ ಕ್ಷೇತ್ರದಲ್ಲಿ ನ್ಯಾಷನಲ್​ ಪೀಪಲ್ಸ್ ಪಾರ್ಟಿ ಅಭ್ಯರ್ಥಿಯ ವಾಹನವೊಂದಕ್ಕೆ ಹಾನಿಯಾಗಿತ್ತು. ಎಲ್ಲ ಪ್ರಕರಣಗಳ ಸಂಬಂಧ ಪೊಲೀಸರು ಎಫ್​ಐಆರ್ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Video: ರಷ್ಯಾದ ಯುದ್ಧ ಟ್ಯಾಂಕ್​​ಗಳಿಗೆ ಜೋತು ಬೀಳುತ್ತಿರುವ ಉಕ್ರೇನ್​ ನಾಗರಿಕರು; ಸೇನೆಯನ್ನು ತಡೆಯಲು ಇನ್ನಿಲ್ಲದ ಪ್ರಯತ್ನ

Published On - 9:51 am, Wed, 2 March 22