Fact Check: ಉದಯಪುರ ಫೈಲ್ಸ್ ಸಿನಿಮಾ ನಟನ ಮನೆಗೆ ಬೆಂಕಿ ಹಂಚಿದ ಮುಸ್ಲಿಮರು?: ವೈರಲ್ ವಿಡಿಯೋದ ಸತ್ಯ ಇಲ್ಲಿದೆ ನೋಡಿ
Udaipur Files Movie Fact Check: ಜನರ ಗುಂಪೊಂದು ಮನೆಗೆ ಬೆಂಕಿ ಹಚ್ಚುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉದಯಪುರ ಫೈಲ್ಸ್ ಚಿತ್ರದಲ್ಲಿ ಭಾಗಿಯಾಗಿರುವ ಕಲಾವಿದನ ಮನೆಯನ್ನು ಮುಸ್ಲಿಮರು ಸುಟ್ಟುಹಾಕಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ.

ಬೆಂಗಳೂರು (ಜು. 21): 2022 ರಲ್ಲಿ ಉದಯಪುರದ ದರ್ಜಿ ಕನ್ಹಯ್ಯಾ ಲಾಲ್ ಅವರ ಹತ್ಯೆಯನ್ನು ಆಧರಿಸಿದ ಉದಯಪುರ ಫೈಲ್ಸ್ (Udaipur Files) ಎಂಬ ಹೆಸರಿನ ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಆದರೆ ದೆಹಲಿ ಹೈಕೋರ್ಟ್ ಜುಲೈ 10, 2025 ರಂದು ಈ ಸಿನಿಮಾವನ್ನು ತಡೆಹಿಡಿದಿದೆ. ವರದಿಗಳ ಪ್ರಕಾರ, ಜಮಿಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ಈ ಚಿತ್ರವು ದ್ವೇಷ ಭಾಷಣವನ್ನು ಉತ್ತೇಜಿಸುತ್ತದೆ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುತ್ತದೆ ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಬಹುದು ಎಂದು ವಾದಿಸಿ ಅದರ ಬಿಡುಗಡೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಅರ್ಜಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ, ಜನರ ಗುಂಪೊಂದು ಮನೆಗೆ ಬೆಂಕಿ ಹಚ್ಚುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉದಯಪುರ ಫೈಲ್ಸ್ ಚಿತ್ರದಲ್ಲಿ ಭಾಗಿಯಾಗಿರುವ ಕಲಾವಿದನ ಮನೆಯನ್ನು ಮುಸ್ಲಿಮರು ಸುಟ್ಟುಹಾಕಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೀವು ಕೆಳಗೆ ನೋಡಬಹುದು.
ವೈರಲ್ ವಿಡಿಯೋದ ಸತ್ಯ ಏನು?
ವೈರಲ್ ವಿಡಿಯೋದ ಸತ್ಯವನ್ನು ಕಂಡುಹಿಡಿಯಲು, ನಾವು ಗೂಗಲ್ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಸಂದರ್ಭ ಜುಲೈ 05, 2025 ರಂದು soyelsilencioso ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾದ ಅದೇ ವಿಡಿಯೋ ನಮಗೆ ಕಂಡುಬಂತು. ಸ್ಪ್ಯಾನಿಷ್ ಶೀರ್ಷಿಕೆಯು ವಿಡಿಯೋದಲ್ಲಿ ಕೊಲಂಬಿಯಾದ ನಜರೆತ್ನಲ್ಲಿ ಪೊಲೀಸರು ತಪ್ಪಾಗಿ ಗುಂಡು ಹಾರಿಸಿ ಯುಲ್ಬರ್ಟ್ ಬಾರ್ಬೋಜಾ ಅವರನ್ನು ಕೊಂದ ನಂತರ ಸ್ಥಳೀಯರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತಿರುವುದನ್ನು ತೋರಿಸುತ್ತದೆ ಎಂಬ ಮಾಹಿತಿ ಇದರಲ್ಲಿದೆ.
View this post on Instagram
ಹೆಚ್ಚುವರಿ ಹುಡುಕಾಟ ನಡೆಸಿದಾಗ, ಕೊಲಂಬಿಯಾದ ಇತರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿರುವ ಬೇರೆ ಕೋನದಿಂದ ಅದೇ ಘಟನೆ ನಮಗೆ ಸಿಕ್ಕಿತು. ದೃಶ್ಯಗಳು ವೈರಲ್ ವಿಡಿಯೋಗೆ ನಿಕಟವಾಗಿ ಹೊಂದಿಕೆಯಾಗುತ್ತವೆ. ಶೀರ್ಷಿಕೆಯು ಈ ಘಟನೆ ಕೊಲಂಬಿಯಾದ ನಜರೆತ್ನಲ್ಲಿ ನಡೆದಿದೆ ಎಂದು ಖಚಿತಪಡಿಸುತ್ತದೆ.
ಈ ಎಲ್ಲ ಮಾಹಿತಿಯ ಆಧಾರದ ಮೇಲೆ ಮತ್ತಷ್ಟು ಹುಡುಕಿದಾಗ, ಕೊಲಂಬಿಯಾದ ಹಲವಾರು ಸ್ಥಳೀಯ ಮಾಧ್ಯಮಗಳಿಂದ ಬಂದ ವರದಿಗಳು ನಮಗೆ ದೊರೆತವು. ಈ ವರದಿಗಳ ಪ್ರಕಾರ, ಜುಲೈ 04, 2025 ರಂದು, ಯುಲ್ಬರ್ಟ್ ಫೆರ್ನಾಂಡಿಸ್ ಬಾರ್ಬೋಸಾ ಅವರನ್ನು ಲಾ ಗುವಾಜಿರಾದ ನಜರೆತ್ನಲ್ಲಿ ಪೊಲೀಸರು ಗುಂಡಿಕ್ಕಿ ಕೊಂದರು. ಪೊಲೀಸ್ ಠಾಣೆಯ ಮೇಲೆ ಈ ಹಿಂದೆ ನಡೆದ ದಾಳಿಯಲ್ಲಿ ಬಳಸಲಾದ ವಾಹನ ಎಂದು ಅವರು ತಪ್ಪಾಗಿ ಭಾವಿಸಿದ್ದರು. ಅವರ ಸಾವು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು, ಸ್ಥಳೀಯರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ನ್ಯಾಯಕ್ಕಾಗಿ ಒತ್ತಾಯಿಸಿದರು. ಗಲ್ಫ್ ಕ್ಲಾನ್ ಮತ್ತು ಕಾಂಕ್ವಿಸ್ಟಾಡೋರಸ್ ಡೆ ಲಾ ಸಿಯೆರಾ ನೆವಾಡಾ (ACSN) ನಂತಹ ಸಶಸ್ತ್ರ ಗುಂಪುಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳಿಂದಾಗಿ ಈ ಪ್ರದೇಶದಲ್ಲಿ ಅಶಾಂತಿ ಸೃಷ್ಟಿಯಾಗಿ ಈ ಘಟನೆ ಸಂಭವಿಸಿದೆ ಎಂಬ ಮಾಹಿತಿ ಇದರಲ್ಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕೊಲಂಬಿಯಾದ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿರುವ ವಿಡಿಯೋವನ್ನು, ಉದಯಪುರ ಫೈಲ್ಸ್ನ ಕಲಾವಿದನ ಮನೆಯನ್ನು ಮುಸ್ಲಿಮರು ಸುಟ್ಟುಹಾಕುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:41 am, Mon, 21 July 25








