
ಪಂಜಾಬ್, ಮಾರ್ಚ್ 18: ಇತ್ತೀಚಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿಯಿಂದಲೋ ಅಥವಾ ನೈಸರ್ಗಿಕವಾಗಿಯೋ ತಲೆ ಕೂದಲು ಉದುರುವಿಕೆ(Hair Loss) ಸಮಸ್ಯೆಯನ್ನು ಸಾಕಷ್ಟು ಮಂದಿ ಎದುರಿಸುತ್ತಿದ್ದಾರೆ. ಈ ಸಮಯದಲ್ಲಿ ಕೂದಲು ಬಂದು ಚೆಂದವಾಗಿ ಕಾಣಬೇಕೆಂದು ಯಾರು ಏನೇ ಔಷಧಿ, ಎಣ್ಣೆಗಳ ಬಗ್ಗೆ ಹೇಳಿದರೂ ಅದನ್ನು ಕೊಂಡುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಅದರಿಂದ ಯಾವ ಬಗೆಯ ಅಡ್ಡಪರಿಣಾಮಗಳಾಗಬಹುದು ಎನ್ನುವ ಆಲೋಚನೆಯನ್ನು ಕೂಡ ಮಾಡುತ್ತಿಲ್ಲ. ಅಂಥದ್ದೇ ಘಟನೆ ಪಂಜಾಬ್ನಲ್ಲಿ ನಡೆದಿದೆ. ಆಜ್ತಕ್ ಈ ಸುದ್ದಿಯನ್ನು ವರದಿ ಮಾಡಿದೆ.
ಕೂದಲು ದಟ್ಟವಾಗಿ ಬೆಳೆಯಲು ನೀಡಿದ್ದ ಔಷಧಿಯಿಂದ ಸಾಕಷ್ಟು ಮಂದಿ ತಮ್ಮ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ. ಪಂಜಾಬ್ನ ಸಂಗ್ರೂರ್ನಲ್ಲಿ ಈ ಘಟನೆ ನಡೆದಿದೆ. ಬೋಳು ತಲೆ ಇರುವವರು ಹಾಗೂ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಒಂದು ಶಿಬಿರವನ್ನು ಆಯೋಜಿಸಲಾಗಿತ್ತು. ಅಲ್ಲಿ ಸಾಕಷ್ಟು ಮಂದಿ ಬಂದು ಔಷಧವನ್ನು ಖರೀದಿಸಿದ್ದರು.
ಆದರೆ ಕೂದಲು ಬರುವುದು ಹಾಗಿರಲಿ, ಜನರು ದೃಷ್ಟಿಯನ್ನೇ ಕಳೆದುಕೊಂಡು ಕುರುಡರಾಗಿದ್ದಾರೆ. ಇದು ಮೀರತ್ನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದನ್ನು ನೆನಪಿಸಿದೆ. ಈ ಶಿಬಿರವನ್ನು ಸಂಗ್ರೂರಿನ ಕಾಳಿ ದೇವಿ ದೇವಸ್ಥಾನದಲ್ಲಿ ಆಯೋಜಿಸಲಾಗಿತ್ತು. ಇಲ್ಲಿ ನೂರಾರು ಜನರು ಭಾಗವಹಿಸಿದ್ದರು.
ಈ ಪವಾಡ ಔಷಧವು ಕೂದಲು ಉದುರುವುದನ್ನು ನಿಲ್ಲಿಸಿ ಹೊಸ ಕೂದಲ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಪ್ರಚಾರ ಮಾಡಲಾಗಿತ್ತು. ಆದರೆ ಈ ಔಷಧಿಯನ್ನು ಕೂದಲಿಗೆ ಹಚ್ಚಿದ ಬಳಿಕ ಜನರ ಕಣ್ಣಲ್ಲಿ ಉರಿ ಶುರುವಾಗಿತ್ತು. ಪರಿಸ್ಥಿತಿ ಹದಗೆಟ್ಟು 65ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಕೆಲವು ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆದರು.
ಈಗ ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಸಂಗ್ರೂರ್ ಪೊಲೀಸ್ ಠಾಣೆಯಲ್ಲಿ ಡಾ.ಅಮನ್ದೀಪ್ ಸಿಂಗ್ ಮತ್ತು ತಜಿಂದರ್ ಪಾಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಕರಣ ದಾಖಲಾದ ನಂತರ, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ ಮತ್ತು ಆಡಳಿತವು ಶಿಬಿರಗಳನ್ನು ಸ್ಥಾಪಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಹ ಸಿದ್ಧವಾಗಿದೆ.
ಮತ್ತಷ್ಟು ಓದಿ: Hair Loss: ಕೂದಲು ಉದುರಲು ಕಾರಣವೇನು? ತಡೆಗಟ್ಟಲು ಏನು ಮಾಡಬೇಕು?
ಸಿವಿಲ್ ಆಸ್ಪತ್ರೆಯ ವೈದ್ಯರು ಹೇಳುವಂತೆ ಇದುವರೆಗೆ 65 ಕ್ಕೂ ಹೆಚ್ಚು ಜನರ ಕಣ್ಣುಗಳಲ್ಲಿ ಸುಡುವ ಸಂವೇದನೆ ಮತ್ತು ಊತದ ಸಮಸ್ಸಯೆಯುಂಟಾಗಿತ್ತು ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
2024ರ ಡಿಸೆಂಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಮೀರತ್ನಲ್ಲಿ 20ರೂ,ಗೆ ತಲೆ ಕೂದಲು ಬೆಳವಣಿಗೆಗೆ ಔಷಧ ಕೊಡುತ್ತೇವೆ ಎಂದು ಹೇಳಿ ಒಂದು ಕ್ಯಾಂಪ್ ಮಾಡಲಾಗಿತ್ತು. 20ರೂ. ಬೆಲೆ ಬಾಳುವ ಔಷಧ ಹಚ್ಚಿ 300 ರೂ. ಬೆಲೆ ಬಾಳುವ ಔಷಧ ಕೊಟ್ಟು ಕಳುಹಿಸುತ್ತಿದ್ದರು. ಯಾವುದೇ ಮಾಹಿತಿ ಪೂರ್ವ ಅನುಮತಿ ಇಲ್ಲದೆ ಜನರನ್ನು ಒಟ್ಟುಗೂಡಿಸಿದ್ದಕ್ಕಾಗಿ ಪೊಲೀಸರು ಔಷಧ ವಿತರಿಸುವುದನ್ನು ತಡೆದಿದ್ದರು.
ಸೂಚನೆ: ನಿಮಗೆ ತಲೆ ಕೂದಲು ಉದುರುವ ಸಮಸ್ಯೆ ಇದ್ದರೆ ಅದಕ್ಕೆ ಸಂಬಂಧಪಟ್ಟ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಿರಿ, ಕಡಿಮೆ ಬೆಲೆಗೆ ಕೊಡುವ ಔಷಧ, ಎಣ್ಣೆಯಿಂದ ಕೂದಲು ಬರುತ್ತೆ ಎಂದು ನಂಬಿ ಇರುವ ಕೂದಲುಗಳನ್ನು ಕಳೆದುಕೊಳ್ಳಬೇಡಿ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ